i
ಉಜ್ಜನಪ್ಪನವರ ಕೃತಿ ಕಾನೂರು ಹೆಗ್ಗಡತಿ ಕಾದಂಬರಿ ರೀತಿ ಮೂಡಿ ಬಂದಿದೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಗೌನಹಳ್ಳಿಯಂತಹ ಕುಗ್ರಾಮ ಕಾಲಾಂತರದಲ್ಲಿ ಎಲ್ಲಾ ಜಾತಿ ಧರ್ಮದವರನ್ನು ಒಳಗೊಳ್ಳುತ್ತ ಶಾಂತಿ ಸೌಹಾರ್ದತೆಯ ಸರ್ವಜನಾಂಗದ ಶಾಂತಿಯ ತೋಟ ಆಯಿತು ಎಂಬ ಚಿತ್ರಣ ಬಹಳ ಸುಂದರವಾಗಿ ಜಿ.ಎಸ್. ಉಜ್ಜನಪ್ಪ ಅವರ ‘ಹಬ್ಬಿದಾ ಮೇಲೆ ಮಧ್ಯದೊಳಗೆ‘ ಕೃತಿಯಲ್ಲಿ ಚಿತ್ರಿಸಿದ್ದಾರೆ ಎಂದು ಶಿಕ್ಷಣ ತಜ್ಞ, ನಾಡೋಜ, ಗಾಂಧಿ ಪ್ರತಿಷ್ಠಾನದ ಅಧ್ಯಕ್ಷ ಡಾ.ವೂಡೇ ಪಿ. ಕೃಷ್ಣ ಹೇಳಿದರು.
ಚಿತ್ರದುರ್ಗ ನಗರದ ರೋಟರಿ ಬಾಲಭವನದಲ್ಲಿ ಬೆಂಗಳೂರು ಸಿವಿಜಿ ಪಬ್ಲಿಕೇಷನ್ಸ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಜಿ. ಎಸ್ ಉಜ್ಜನಪ್ಪ ಅವರ ಹಬ್ಬಿದಾ ಮಲೆ ಮಧ್ಯದೊಳಗೆ (ಕಾದಂಬರಿ) ಹಾಗೂ ಖ್ಯಾತ ಕವಿ ಚಂದ್ರಶೇಖರ ತಾಳ್ಯ ಅವರ ( ಕವನ ಸಂಕಲನ) ಪುಸ್ತಕಗಳ ಬಿಡುಗಡೆ ಮಾಡಿ ಮಾತನಾಡಿದರು.
ಕುಂಚಿಗರು ಶೈವ ಪರಂಪರೆಯ ಪ್ರಭಾವಕ್ಕೆ ಒಳಗಾಗಿ ಕುಂಚಿಟಿಗ ಲಿಂಗಾಯತರಾದುದು ಹಾಗೂ ಒಟ್ಟಾರೆ ವಿವಿಧ ಪ್ರಭಾವಗಳಿಗೆ ಒಳಗಾದ ಗ್ರಾಮಗಳು ವಿಘಟನೆಗೊಂಡವು ಎಂಬ ವಾಸ್ತವ ಸಂಗತಿ ಕೂಡ ಇಲ್ಲಿ ಅನಾವರಣಗೊಂಡಿದೆ ಎಂದು ತಿಳಿಸಿದರು.
ಅವರು ೩ ಕೃತಿಗಳ ಬಗ್ಗೆ ಅವರ ನೋಟವನ್ನು ಹಂಚಿಕೊಳ್ಳತ್ತಾ ಉಜ್ಜನಪ್ಪನವರ 60 ವರ್ಷಗಳ ನಂತರ ಆರಂಭವಾದ ಹಾಗೂ ಈ 20 ವರ್ಷಗಳಿಂದ ಮುಂದುವರೆಯುತ್ತಿರುವ ಸಾಹಿತ್ಯದ ಸೇವೆಯು ಆದರ್ಶನೀಯ ಹಾಗೂ ಪ್ರಶಂಸನೀಯ ಎಂದು ಹೇಳಿದರು.
ಅಗ್ರಹಾರ ಕೃಷ್ಣಮೂರ್ತಿ ಉರಿಯ ಗಿರಿಯನೇರಿ ಕೃತಿ ಕುರಿತು ಮಾತನಾಡಿ, ನವ್ಯ ಕಾವ್ಯದ ಇತಿಹಾಸ ಹುಟ್ಟು ಶೈಲಿಯನ್ನು ಹಂಚಿಕೊಳ್ಳತ್ತಾ ಚಂದ್ರಶೇಖರ ತಾಳ್ಯ ಅವರ ಕವಿಗಾರಿಕೆಯನ್ನು ಪ್ರಶಂಸಿದರು.
ಪುಸ್ತದಲ್ಲಿನ ಕೊನೆಯ ಹಾಡು ಹಾಗು ಒಂದಾನೊಂದು ಕಾಲದಲ್ಲಿ ಕವಿತೆಗಳನ್ನು ಓದಿ ಹೇಳಿದರು. ತಾಳ್ಯ ಅವರ ಕಾವ್ಯಗಳು ಸರಳ ಹಾಗೂ ಓದುಗರಿಗೆ ಬೇಕಾಗುವ ಸಂದಿಗ್ದತೆಯನ್ನು ಹೊಂದಿವೆ ಎಂದು ಹೇಳಿದರು.
ಮುಂದುವರೆದು ಮಾತನಾಡಿದ ಅಗ್ರಹಾರ ಕೃಷ್ಣಮೂರ್ತಿ, ಸಾಂಸ್ಕೃತಿಕ ಸಾಹಿತ್ಯಕ್ಕೆ ತೊಡಗಿಸಿಕೊಳ್ಳುವ ಕಾರ್ಯ ಕಷ್ಟದ್ದು. ಧ್ಯಾನ ಏಕಾಗ್ರತೆ ರೂಪದಲ್ಲಿ ತಾಳ್ಯ ಕೆಲಸ ಮಾಡಿದ್ದಾರೆ. ಪ್ರವಾಹದ ರೂಪದಲ್ಲಿ ನವೋದಯ ಸಾಹಿತ್ಯಕ್ಕೆ ಸಾಕಷ್ಟು ಕೊಡುಗೆ ನೀಡಿದ ತಾಳ್ಯ ಅವರು ಕಾವ್ಯ ರಚನಗೆ ಬೇಕಾದ ಶಿಸ್ತು ಭಾಷೆಯ ಪ್ರೌಢಿಮೆ ಅವರಲ್ಲಿದೆ. ಕಾವ್ಯದ ಶೈಲಿಯ ಬದಲಾವಣೆ ಮುಖ್ಯ. ಆದರೆ ಅಪಾಯ ಕೂಡಾ ಇದೆ. ಜ್ಞಾನ ಸಂಪತ್ತು ಬಹಳ ಮುಖ್ಯ. ಹೊಸ ಸೃಜನಶೀಲತೆಗೆ ಬಳಸಿಕೊಂಡು ಉತ್ಕೃಷ್ಟ ಕಾವ್ಯ ಬರೆಯಬಹುದು. ನವ್ಯ ಸಾಹಿತ್ಯ ರಚನೆಕಾರರ ಪೈಕಿ ಇವರು ತಾಳ್ಯ ಒಬ್ಬರು. ಕಾವ್ಯಕ್ಕೆ ಸಂದಿಗ್ಧತೆ ಬಹಳ ಮುಖ್ಯ. ಕಾವ್ಯದ ಲಕ್ಷಣಗಳೇ ಕೃತಿಯ ಜೀವಾಳ. ಕನ್ನಡದ ಬಹಳ ಮುಖ್ಯ ಕವಿಗಳಲ್ಲಿ ತಾಳ್ಯ ಒಬ್ಬರು.
ತತ್ವಶಾಸ್ತ್ರಜ್ಞರಾದ ಕವಿ ತಾಳ್ಯ ಅವರು ಆದರ್ಶಗಳಿಗೆ ಬಹಳ ಮೌಲ್ಯ ನೀಡಿದ್ದಾರೆ. ದಾರ್ಶನಿಕ ಕವಿಯಾಗಿರುವ ಕವಿಗಳು ತಮ್ಮ ಹೊಣೆಗಾರಿಕೆ ನಿರ್ವಹಿಸಿದ್ದಾರೆ ಎಂದು ತಿಳಿಸಿದರು.
ಜಾನಪದ ವಿದ್ವಾಂಸರಾದ ಮೀರಾಸಾಬಿಹಳ್ಳಿ ಶಿವಣ್ಣ ಆಶಯ ನುಡಿಗಳನ್ನಾಡಿ, ಗುಡ್ಡ ಬೆಟ್ಟಗಳ ಮಧ್ಯೆ ಉದಸಿರುವ ಗೌನಹಳ್ಳಿಯಲ್ಲಿ ಹುಟ್ಟಿದ ಜಿ.ಎಸ್.ಉಜ್ಜನಪ್ಪನವರಿಗೆ ಉತ್ತಮ ಆಂಗ್ಲ ಭಾಷೆಯ ಹಿಡಿತ ಇದೆ. ಯತ್ತಪ್ಪ ಕೃತಿಯನ್ನು ಆಂಗ್ಲ ಭಾಷೆಗೆ ಅನುವಾದ ಮಾಡಿದ್ದಾರೆ. ಹೃದಯ ಸ್ಪರ್ಶಿಸಿಯಾದ ಬರವಣಿಗೆ ಇದೆ. 18 ಕೃತಿಗಳನ್ನು ಸಮಾಜಕ್ಕೆ ಕೊಡುಗೆ ನೀಡಿದ್ದಾರೆ.
ಹಬ್ಬಿದಾ ಮಲೆ ಮಧ್ಯದೊಳಗೆ ಮುನ್ನೂರ ನಲವತ್ತೊಂದು ಪುಟಗಳ ಕೃತಿ. ಇದು ಗ್ರಾಮ ಸಂಸ್ಕೃತಿ ಸಂಕಥನ. ಈ ಸಂಕಥನವನ್ನು ನಿಖರವಾಗಿ ನಿರೂಪಿಸುವಾಗ ಯಾವುದೇ ಕಸರತ್ತು ನಡೆಸಿಲ್ಲ. ತುಂಬಾ ಲವಲವಿಕೆಯಿಂದ ಲೀಲಾಜಾಲವಾಗಿ ಮಸ್ತಕದಲ್ಲಿ ಇದ್ದುದನ್ನು ಪುಸ್ತಕಕ್ಕೆ ಇಳಿಸಿದ್ದೀರಿ. ಎದೆಯ ಗೂಡಿನಲ್ಲಿ ಅವಿತಿದ್ದ ಅಲಿಖಿತ ಗೌನಹಳ್ಳಿಯ ಚರಿತ್ರೆ ಸಹಜ ಹೆರಿಗೆಯಂತೆ ಸಲೀಸಾಗಿ ಬರೆಯಲ್ಪಟ್ಟಿದೆ. ಈ ಕೃತಿ ಸೇರಿದಂತೆ ಉಜ್ಜನಪ್ಪನವರ ಇತರೆ ಕೃತಿಗಳನ್ನು ಓದುತ್ತಿದ್ದರೆ ಅವರೊಳಗೊಬ್ಬ ಬಯಲುಸೀಮೆಯ ಕುವೆಂಪು ಅಡಗಿರಬಹುದೆ? ಎನಿಸುತ್ತದೆ. ಬರಹ, ಬರಹದ ಹೂರಣ, ಬರಹದ ತೋರಣ ಎಲ್ಲವೂ ವಿದ್ವತ್ತಿನಿಂದ ಕೂಡಿದೆ.
ಸುದೀರ್ಘ ಬದುಕಿನಲ್ಲಿ ಕಂಡ ಕೇಳಿದ ಅನುಭವಿಸಿದ ಅನುಭಾವಿಸಿದ ಕಳೆದ ನೂರಿನ್ನೂರು ವರ್ಷಗಳ ಗೌನಹಳ್ಳಿಯ ಬದುಕನ್ನು ಸೊಗಸಾದ ಭಾಷೆಯಲ್ಲಿ ನಿರೂಪಣೆ ಮಾಡಿದ್ದಾರೆ ಎಂದು ತಿಳಿಸಿದರು.
ಕಾಲಕಾಲಕ್ಕೆ ಆಗುವ ಸಾಮಾಜಿಕ ಮತ್ತು ಧಾರ್ಮಿಕ ಪ್ರಕ್ರಿಯೆ, ಸ್ಥಿತ್ಯಂತರ, ಬದಲಾವಣೆಯನ್ನು ತಡೆಯಲಾಗದು. ಒಟ್ಟಾರೆ ಉಜ್ಜನಪ್ಪನವರ ಕೃತಿ ಮಲೆನಾಡಿನ ಕಾನೂರು ಹೆಗ್ಗಡತಿ ಕಾದಂಬರಿಯ ರೀತಿಯಲ್ಲಿ ಬಯಲುಸೀಮೆಯ ಕಾದಂಬರಿಯಂತೆ ಓದುಗರನ್ನು ಸೆಳೆದು ಅಪ್ಪಿಕೊಳ್ಳುತ್ತದೆ. ಅಸಾದ್ ಅವರ ರೇಖಾಚಿತ್ರಗಳು ಸಹ ಕೃತಿಗೆ ಪೂರಕವಾಗಿ ಮೂಡಿಬಂದಿವೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಮಾಜಿ ಸಂಸದ ಎಚ್.ಹನುಮಂತಪ್ಪನವರ ಅಧ್ಯಕ್ಷತೆಯಲ್ಲಿ ಕೃತಿಗಳು ಬಿಡುಗಡೆಯಾದವು.
ಕಾರ್ಯಕ್ರಮವು ಬಿ.ಎಂ.ಶ್ರೀ ಯವರ ಕರುಣಾಳು ಬಾ ಬೆಳಕೆ ಎಂಬ ಹಾಡಿನಿಂದ ಪ್ರಾರಂಭಗೊಂಡಿತು.
ಮೀರಾಸಾಬೆಹಳ್ಳಿ ಶಿವಣ್ಣ ಅವರು ಪ್ರಾಸ್ತಾವಿಕ ನುಡಿಗಳ ಮೂಲಕ ಎಲ್ಲ ಪ್ರಸ್ತುತ ಗಣ್ಯರ ಹಾಗು ಸಾಹಿತಿಗಳ ಪರಿಚಯ ಮಾಡಿಸಿದರು ಹಾಗೆ ಉಜ್ಜನಪ್ಪನವರ ಪ್ರಾರಂಭದ ಸಾಹಿತ್ಯದ ಹಾದಿಯನ್ನು ಹಂಚಿಕೊಳ್ಳುತ್ತಾ ಅವರೊಂದಿಗೆ ಒತ್ತಾಸೆಯಾಗಿ ಜೊತೆಗೆ ನಿಂತದ್ದನ್ನು ಹೇಳಿದರು.
ಡಾ. ಲೋಕೆಶ್ ಆಗೆಸನಕಟ್ಟೆ ಅವರು ಜಿ.ಎಸ್.ಉಜ್ಜನಪ್ಪನವರ ಕಾದಂಬರಿ ಕುರಿತು ಮಾತನಾಡಿ ಉಜ್ಜನಪ್ಪವರ ಕೃತಿ ಗಾಮ ಮತ್ತು ಭಾರತದ ಜೀವನವನ್ನು ಪರಿಚಯಿಸುವ ಪುಸ್ತಕವಾಗಿದೆ ಹಾಗೂ ಕಥೆಯಲ್ಲಿನ ಜೀವನ ಶೈಲಿ, ಉಪಯೋಗಿಸಿರುವ ಭಾಷೆಯು ವಿಶಿಷ್ಟವಾಗಿದೆ. ಈ ಕೃತಿಯು ಕಾದಂಬರಿಗಿಂತ ಮಹಾಕಥೆಯಾಗಿ ಸೂಕ್ಷ್ಮವಾದ ವಿವರಗಳನ್ನು ಒಳಗೊಂಡಿದೆ. ಕಾದಂಬರಿಯಲ್ಲಿನ ಗೌನಹಳ್ಳಿಯು ಯುಟೋಪಿಯವಾಗಿದೆ ಎ೦ದು ಹೇಳಿದರು. ಈ ಕೃತಿಯ ಕೊನೆಯಲ್ಲಿ ನೀಡಿರುವ ಟಿಪ್ಪಣಿ ಮತ್ತು ತಾಮ್ರದ ಪತ್ರಗಳು ತುಂಬಾ ಸಹಕಾರಿಯಾಗಿವೆ ಎಂದು ಹೇಳಿದರು.
ಕೃತಿಕಾರರಾದ ಜಿ.ಎಸ್.ಉಜ್ಜನಪ್ಪ, ಚಂದ್ರಶೇಖರ್ ತಾಳ್ಯ, ಸಿವಿಜಿ ಚಂದ್ರು, ಬಿ.ಎ.ಲಿಂಗಾರೆಡ್ಡಿ, ಜಿ.ಎಂ.ಜಯಕುಮಾರ್, ಕೆ.ಎಂ.ಶಿವಸ್ವಾಮಿ, ದಿನೇಶ್ ಗೌಡಗೆರೆ ಮತ್ತಿತರರು ಇದ್ದರು.