i
ಮುರುಘಾಮಠದ ಆಡಳಿತಾಧಿಕಾರಿ ನೇಮಕ ರದ್ದು ಮಾಡಿದ ಹೈಕೋರ್ಟ್…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮುರುಘಾಮಠಕ್ಕೆ ಆಡಳಿತಾಧಿಕಾರಿ ನೇಮಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಚಿತ್ರದುರ್ಗದ ಮುರುಘಾಮಠಕ್ಕೆ ವೀರಶೈವ ಮುಖಂಡರು, ಸಮಾಜದ ಪ್ರಮುಖರು ಆಡಳಿತ ನಡೆಸಬಹುದಾಗಿದೆ. 4 ವಾರ ಮಾತ್ರ ಆಡಳಿತಾಧಿಕಾರಿ ಮುಂದುವರೆಯಬಹುದು. 4 ವಾರಗಳ ನಂತರ ಆಡಳಿತಾಧಿಕಾರಿಗೆ ಅಧಿಕಾರ ಇಲ್ಲ ಎಂದು ನ್ಯಾ.ಕೃಷ್ಣ ದೀಕ್ಷೀತ್ ಅವರಿದ್ದ ಹೈಕೋರ್ಟ್ ಏಕ ಸದಸ್ಯ ಪೀಠ ತೀರ್ಪು ನೀಡಿದೆ.
ಆಡಳಿತಾಧಿಕಾರಿ ನೇಮಿಸುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಡಾ. ಶಿವಮೂರ್ತಿ ಮುರುಘಾಶ್ರೀ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಸೋಮವಾರ ವಿಚಾರಣೆ ನಡೆಸಿದ ಹೈಕೋರ್ಟ್ ನ ಏಕಸದಸ್ಯ ನ್ಯಾಯಪೀಠ, ಸರ್ಕಾರಕ್ಕೆ ಮುರುಘಾಮಠಕ್ಕೆ ಆಡಳಿತಾಧಿಕಾರಿ ನೇಮಿಸುವ ಅಧಿಕಾರ ಇಲ್ಲ ಎಂದು ಹೇಳಿದೆ.
ಹೈಕೋರ್ಟ್ ತೀರ್ಪು ಆಧರಿಸಿ ಚಿತ್ರದುರ್ಗದ ಮುರುಘಾ ಮಠದಲ್ಲಿ ಲಿಂಗಾಯಿತ ಸಮಾಜದ ಮುಖಂಡ ಜೀತೇಂದ್ರ ಹುಲಿಕುಂಟೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮುರುಘಾ ಮಠಕ್ಕೆ ಆಡಳಿತ ಅಧಿಕಾರಿಯನ್ನು ಸರ್ಕಾರ ನೇಮಕ ಮಾಡಿತ್ತು. ಮಠದ ಬಸವಪ್ರಭು ಸ್ವಾಮೀಜಿ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದರು.
ಸುದೀರ್ಘ ವಿಚಾರಣೆ ಬಳಿಕ ಹೈಕೋರ್ಟ್ ಆಡಳಿತಾಧಿಕಾರಿ ನೇಮಕ ರದ್ದು ಮಾಡಿದೆ ಎಂದು ತಿಳಿಸಿದರು.
ಇತ್ತೀಚಿನ ಬೆಳವಣಿಗೆಗೆ ಸಿಕ್ಕ ನಮ್ಮ ಮೊದಲ ಜಯ ಇದಾಗಿದೆ. ಚಿತ್ರದುರ್ಗ ನ್ಯಾಯಾಲಯ ಫೋಕ್ಸೋ ಕೇಸ್ ನಲ್ಲಿ ಮಠದ ವ್ಯವಸ್ಥೆಯಲ್ಲಿ ಯಾವುದೇ ಹಸ್ತಕ್ಷೇಪ ಮಾಡಬಾರದು ಎಂದಿತ್ತು. ಈ ಪ್ರಕರಣವನ್ನು ಕೂಡಾ ಹೈಕೋರ್ಟ್ ವಜಾ ಮಾಡಿದೆ. ನಾವು ಸಲ್ಲಿಕೆ ಮಾಡಿದ ಎರಡೂ ಅರ್ಜಿಗಳಲ್ಲಿ ಜಯ ಸಿಕ್ಕಿದೆ.
ಹೈಕೋರ್ಟ್ ನಿರ್ದೇಶನದಂತೆ ಸಲಹಾ ಸಮಿತಿಗೆ ಸಂಪೂರ್ಣ ಅಧಿಕಾರ ನೀಡಿದ್ದಾರೆ ಎಂದು ಅವರು ತಿಳಿಸಿದರು.
ಆಡಳಿತಾಧಿಕಾರಿ ನೇಮಿಸಿಕೊಂಡು ಮುರುಘಾ ಮಠದ ಆಸ್ತಿ ಒಡೆಯಬೇಕು ಎಂದಿದ್ದವರಿಗೆ ದೊಡ್ಡ ಹಿನ್ನಡೆಯಾಗಿದೆ. ಬಸವಪ್ರಭು ಸ್ವಾಮೀಜಿಗಳ ಹೋರಾಟದಿಂದ ನಮಗೆ ಜಯ ಸಿಕ್ಕಿದೆ. ಈ ಮಠದ ಧಾರ್ಮಿಕ ಕೈಂಕರ್ಯ ನಡೆಸಲು ಮುರುಘೇಶನ ಆಶಿರ್ವಾದ ಸಿಕ್ಕಿದೆ ಎಂದು ಅವರು ತಿಳಿಸಿದ್ದಾರೆ. ಮುರುಘಾಮಠದ ಬಸವಪ್ರಭ ಸ್ವಾಮೀಜಿ ಹೇಳಿಕೆ ನೀಡಿ, ಮುರುಘಾ ಮಠಕ್ಕೆ ನೇಮಿಸಿದ ಆಡಳಿತಾಧಿಕಾರಿಯನ್ನು ಹೈಕೋರ್ಟ್ ರದ್ದು ಮಾಡಿದೆ ಈ ಆದೇಶ ಮಠದ ಭಕ್ತರ ಪರವಾಗಿದ್ದು ಸ್ವಾಗತಿಸುತ್ತೇನೆ. ಸತ್ಯಕ್ಕೆ ಗೆಲುವು ಸಿಗುತ್ತದೆ ಎಂಬ ವಿಶ್ವಾಸವಿತ್ತು. ಮಾನ್ಯ ನ್ಯಾಯಾಲಯ ಇಂದು ನಮಗೆ ನ್ಯಾಯ ನೀಡಿದೆ. ಗೆಲುವು ಎಂಬುದು ಮುರುಘೇಶನ ಆಶಿರ್ವಾದದಿಂದ ಸಿಕ್ಕೆ ಸಿಗುತ್ತದೆ ಎಂದು ಅವರು ತಿಳಿಸಿದರು.