i
ಭೀಕರ ಗಾಳಿ ಮಳೆಗೆ ಅಪಾರ ಪ್ರಮಾಣ ನಷ್ಟ, ಸ್ಥಳದಲ್ಲೇ ವೈಯಕ್ತಿಕ ಸಹಾಯ ಮಾಡಿದ ಶಾಸಕ ಸುಧಾಕರ್…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕಳೆದ ಎರಡು ದಿನಗಳಿಂದ ಹಿರಿಯೂರು ತಾಲೂಕಿನಾದ್ಯಂತ ಬೀಸುತ್ತಿರುವ ಭೀಕರ ಗಾಳಿಗೆ ಮತ್ತು ಸಾಧಾರಣ ಮಟ್ಟದಲ್ಲಿ ಬೀಳುತ್ತಿರುವ ಮಳೆಗೆ ಅಪಾರ ಪ್ರಮಾಣ ಅಡಿಕೆ, ತೆಂಗು, ಬಾಳೆ, ಮಾವು, ಪಪ್ಪಾಯಿ ಸೇರಿದಂತೆ ಮತ್ತಿತರ ಫಸಲಿಗೆ ನಷ್ಟವಾಗಿದ್ದು ಶಾಸಕ ಡಿ.ಸುಧಾಕರ್ ಅವರು ಹಾನಿ ಸ್ಥಳಗಳಿಗೆ ಸೋಮವಾರ ಭೇಟಿ ನೀಡಿ ಪರಿಶೀಲನೆ ಮಾಡಿದ ನಂತರ ಸ್ಥಳದಲ್ಲೇ ವೈಯಕ್ತಿಕವಾಗಿ ಆರ್ಥಿಕ ಸಹಾಯ ಮಾಡಿದ್ದಾರೆ.
ತೋಟಗಾರಿಕೆ ಇಲಾಖೆ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಬೆಳೆ ಹಾನಿ ನಷ್ಟದ ವರದಿ ಕಳುಹಿಸಿ ಹೆಚ್ಚಿನ ಬೆಳೆ ಹಾನಿ ಪರಿಹಾರವನ್ನು ರೈತರಿಗೆ ಕೊಡಿಸಲಾಗುತ್ತದೆ ಎಂದು ಶಾಸಕ ಸುಧಾಕರ್ ಭರವಸೆ ನೀಡಿದರು. ಗಾಳಿ, ಮಳೆ ಇತರೆ ಪ್ರಕೃತಿ ವಿಕೋಪಗಳಿಂದ ಬೆಳೆ ಹಾನಿಯಾದರೆ ಯಾವೊಬ್ಬ ರೈತರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ, ಈ ಕ್ಷೇತ್ರದ ಶಾಸಕರು ಮತ್ತು ಸರ್ಕಾರ ಸದಾ ರೈತರ ಜೊತೆಗೆ ಇದ್ದು ಕೆಲಸ ಮಾಡಲಿದೆ ಎಂದು ಶಾಸಕ ಡಿ ಸುಧಾಕರ್ ಧೈರ್ಯ ತುಂಬಿದರು.
ಮಳೆ ಗಾಳಿ ಸೇರಿದಂತೆ ಮತ್ತಿತರ ಪ್ರಕೃತಿ ವಿಕೋಪ ಆಗುವುದನ್ನು ಯಾರು ತಡೆಯಲಾರದು. ಸರ್ಕಾರದಿಂದ ಬರುವ ಪರಿಹಾರವನ್ನು ಕೊಡಿಸುವುದಾಗಿ ಶಾಸಕರು ಭರವಸೆ ನೀಡಿದರು.
ತಾಲೂಕಿನ ಬಬ್ಬೂರು, ಪುಟ್ಟಯ್ಯನ ಕಟ್ಟೆ, ಭೀಮನ ಬಂಡೆ, ಯಳನಾಡು, ಕೆ ಆರ್ ಹಳ್ಳಿ ಸೇರಿದಂತೆ ಮತ್ತಿತರ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕರು ಗಾಳಿ ಮಳೆಗೆ ಹಾನಿಯಾದ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು.
ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸೇರಿದಂತೆ ಇತರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ರೈತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಕೆಲಸ ಮಾಡಬೇಕು, ರೈತರ ಸಮಸ್ಯೆಗಳನ್ನು ಆಲಿಸಿ ಸರ್ಕಾರಕ್ಕೆ ಸೂಕ್ತ ವರದಿ ಮಾಡಬೇಕು ಎಂದು ಸುಧಾಕರ್ ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಕೆ.ಪ್ರಶಾಂತ್ ಪಾಟೀಲ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಗುರುಸಿದ್ದಪ್ಪ, ಕಂದಾಯಾಧಿಕಾರಿಗಳು, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಕಂದಿಕೆರೆ ಸುರೇಶ್ ಬಾಬು, ಕಂದಿಕೆರೆ ಜಗದೀಶ್, ಪುಟ್ಟಯ್ಯನ ಕಟ್ಟೆ ಹೇಮಂತ್ ರಾಜ್, ನಗರಸಭೆ ಸದಸ್ಯ ವಿಠ್ಠಲ್, ಜಗದೀಶ್, ಮಸ್ಕಲ್ ಶ್ರೀನಿವಾಸ್, ಈ ಮಂಜುನಾಥ್ ಸೇರಿದಂತೆ ಬೆಳೆ ಹಾನಿಯಾದ ಸಂತ್ರಸ್ತ ರೈತರು, ಗ್ರಾಮಸ್ಥರು ಇದ್ದರು.