i
ಶಾಸಕ ಟಿ.ಬಿ.ಜಯಚಂದ್ರ ಅವರಿಗೆ ಕೂಡಲೇ ಸಚಿವ ಸ್ಥಾನ ನೀಡಿ-ಕುಂಚಿಟಿಗ ಒಕ್ಕಲಿಗ ಸಂಘ ಆಗ್ರಹ…
ಚಂದ್ರವಳ್ಳಿ ನ್ಯೂಸ್, ತುಮಕೂರು:
ತುಮಕೂರು ಜಿಲ್ಲೆಯ ಕುಂಚಿಟಿಗ ಜನಾಂಗದ ಶಾಸಕರಾದ ಟಿ.ಬಿ.ಜಯಚಂದ್ರ ರವರಿಗೆ ಸಚಿವ ಸ್ಥಾನ ನೀಡಿ ಆಗಿರುವ ಅನ್ಯಾಯ ಸರಿಪಡಿಸುವಂತೆ ತುಮಕೂರು ಕುಂಚಿಟಿಗ ಒಕ್ಕಲಿಗರ ವಿದ್ಯಾ ಅಭಿವೃದ್ಧಿ ಸಂಘದ ಅಧ್ಯಕ್ಷ ಶ್ರೀಧರ್ ನೇತಾಜಿ ಆಗ್ರಹ ಮಾಡಿದ್ದಾರೆ.
ಇಲ್ಲಿನ ಕೋತಿ ತೋಪು ಸಮೀಪ ಇರುವ ಸಂಘದ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷ ಕುಂಚಿಟಿಗ ಸಮುದಾಯವನ್ನು ಸಂಪೂರ್ಣ ಕಡೆಗಣಿಸಿದೆ. ಇಡೀ ರಾಜ್ಯದಲ್ಲಿ ಕುಂಚಿಟಿಗ ಸಮುದಾಯದಿಂದ ಏಕೈಕ ವ್ಯಕ್ತಿ ಜಯಚಂದ್ರ ಅವರು ಆಯ್ಕೆಯಾಗಿದ್ದು ಅವರಿಗೆ ಸಚಿವ ಸ್ಥಾನ ನೀಡದಿರುವುದು ರಾಜ್ಯದ ಎಲ್ಲಾ ಕುಂಚಿಟಿಗ ಸಮುದಾಯದವರಿಗೆ ಮಾಡಿರುವ ಅನ್ಯಾಯವಾಗಿದೆ. ಈ ಕಾರಣಕ್ಕಾಗಿ ಇಡೀ ಕುಂಚಿಟಿಗ ಸಮಾಜ ಕಾಂಗ್ರೆಸ್ ವಿರುದ್ಧ ಬೇಸರ ವ್ಯಕ್ತಪಡಿಸಿದೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ.
ಟಿ.ಬಿ.ಜಯಚಂದ್ರ ಅವರು ತಮ್ಮ ಅಧಿಕಾರಾವಧಿಗಳಲ್ಲಿ ಶಿರಾ ತಾಲೂಕಿನ ಅಭಿವೃದ್ಧಿಯ ಹರಿಕಾರಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅಷ್ಟೇ ಅಲ್ಲ ಕೃಷಿ ಸಚಿವರಾಗಿ ಕೃಷಿ ಇಲಾಖೆಗೆ ಕ್ರಾಂತಿಕಾರ ಬದಲಾವಣೆ ತರುವ ಮೂಲಕ ಹೋಬಳಿಗೊಂದು ರೈತ ಸಂಪರ್ಕ ಕೇಂದ್ರ ಆರಂಭಿಸಿದ ರೂವಾರಿ ಜಯಚಂದ್ರ ಎನ್ನುವುದನ್ನು ಮರೆಯುವಂತಿಲ್ಲ. 2013-2018ರಲ್ಲಿ ಸಣ್ಣ ನೀರಾವರಿ ಸಚಿವರಾಗಿ ಅತ್ಯುತ್ತಮ ಕಾರ್ಯಗಳನ್ನು ಮಾಡಿದ್ದಾರೆ. ಅಷ್ಟೇ ಅಲ್ಲದೆ ನೂರಾರು ಬ್ಯಾರೇಜ್ ಕಂ ಚೆಕ್ ಡ್ಯಾಂಗಳನ್ನು ನಿರ್ಮಿಸುವ ಮೂಲಕ ಅಂತರ್ಜಲ ಹೆಚ್ಚಳಕ್ಕೆ ಕಾರಣರಾಗಿದ್ದಾರೆ. ಶಿರಾ, ತುಮಕೂರು ಜಿಲ್ಲೆ ಸೇರಿದಂತೆ ಹಲವು ಜಿಲ್ಲೆಗಳಿಗೆ ಭದ್ರಾ ಮತ್ತು ಎತ್ತಿನಹೊಳೆ ಯೋಜನೆಗಳನ್ನು ಅನುಷ್ಠಾನ ಮಾಡಲು ಪ್ರಮಾಣಿಕ ಪ್ರಯತ್ನ ಮಾಡಿದವರಲ್ಲಿ ಜಯಚಂದ್ರ ಕೂಡಾ ಒಬ್ಬರು ಎನ್ನುವುದು ಬಹಳ ಮುಖ್ಯವಾಗಿದೆ. ಜಯಚಂದ್ರ ಅವರಿಗೆ ಸಚಿವ ಸ್ಥಾನ ಕೈ ತಪ್ಪಲು ಯಾರು ಕಾರಣ, ಇದಕ್ಕೆ ಷಡ್ಯಂತ್ರ ರೂಪಿಸಿದವರು ಯಾರು, ಅವರ ಅಧಿಕಾರಾವಧಿಯಲ್ಲಿ ಕೈ ಬಾಯಿ ಸ್ವಚ್ಚವಾಗಿಟ್ಟುಕೊಂಡಿದ್ದರು. ಯಾವುದೇ ಕಪ್ಪು ಚುಕ್ಕು ಅವರ ಮೇಲಿರಲಿಲ್ಲ ಆದರೂ ಸಚಿವ ಸ್ಥಾನ ನೀಡದೆ ಕುಂಚಿಟಿಗ ಸಮಾಜಕ್ಕೆ ಅನ್ಯಾಯ ಮಾಡಲಾಗಿದೆ. ಆದ್ದರಿಂದ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಕುಂಚಿಟಿಗ ಒಕ್ಕಲಿಗರ ವಿದ್ಯಾ ಅಭಿವೃದ್ಧಿ ಸಂಘದ ಅಧ್ಯಕ್ಷ ಶ್ರೀಧರ್ ನೇತಾಜಿ, ಸಂಘದ ಕಾರ್ಯಾಧ್ಯಕ್ಷ ಆರ್.ಕಾಮರಾಜು, ಉಪಾಧ್ಯಕ್ಷ ಕೆ ಆರ್ ಅಶೋಕ್ ಕುಮಾರ್, ಕಾರ್ಯದರ್ಶಿ ರಾಜಕುಮಾರ್, ಜಂಟಿ ಕಾರ್ಯದರ್ಶಿ ಬಸವರಾಜು, ಖಜಾಂಚಿ ಎಸ್ ಸತೀಶ್ ಆಗ್ರಹಿಸಿದ್ದಾರೆ.