i
ಪ್ರಜಾವಾಣಿ ಎಂಬ ವಿಶ್ವಾಸಾರ್ಹ ಪತ್ರಿಕೆ ಸ್ವಲ್ಪಮಟ್ಟಿಗೆ ಬೇಜವಾಬ್ದಾರಿ ಅಥವಾ ನಿರ್ಲಕ್ಷ್ಯ ತೋರಿದೆ!…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಇತಿಹಾಸದ ಬಗ್ಗೆ ಒಂದು ಸ್ಪಷ್ಟನೆ……
ನಿನ್ನೆಯ ( 12/06/2023 ) ರಾಜ್ಯದ ಪ್ರಮುಖ ಪತ್ರಿಕೆ ಪ್ರಜಾವಾಣಿಯಲ್ಲಿ ಖ್ಯಾತ ಶಿಕ್ಷಣ ತಜ್ಞರು, ವಾಗ್ಮಿಗಳು, ಅಂಕಣಕಾರರು, ಚಿಂತಕರಾದ ಡಾಕ್ಟರ್ ಗುರುರಾಜ ಕರ್ಜಗಿ ಅವರು ಶಾಲಾ ಪಠ್ಯಪುಸ್ತಕ ಸರ್ಕಾರ ಬದಲಾದಂತೆ ಬದಲಾಗುವ ವಿಷಯ ಕುರಿತು ಬರೆದಿದ್ದಾರೆ. ಆ ಲೇಖನದಲ್ಲಿ ದುರಾದೃಷ್ಟವಶಾತ್ ಇತಿಹಾಸ ಎಂಬ ಸಮಾಜ ವಿಜ್ಞಾನವನ್ನು ಅತ್ಯಂತ ಬಾಲಿಶವಾಗಿ ವರ್ಣಿಸಿ ಅದು ಒಂದು ಕಲೆ ಮತ್ತು ಭಾವನಾತ್ಮಕ ಎಂದು ತಪ್ಪಾಗಿ ಹೇಳಿದ್ದಾರೆ ಹಾಗು ಅದನ್ನು ಪ್ರಕಟಿಸಿದ ಪ್ರಜಾವಾಣಿ ಪತ್ರಿಕೆ ಸಹ ಸ್ವಲ್ಪಮಟ್ಟಿಗೆ ಬೇಜವಾಬ್ದಾರಿ ಅಥವಾ ನಿರ್ಲಕ್ಷ್ಯ ತೋರಿದೆ.
ರಾಜಕೀಯ ಕಾರಣದಿಂದ ಇತಿಹಾಸ ಬದಲಾಗುವುದಿಲ್ಲ. ವಿದ್ಯಾರ್ಥಿಗಳಲ್ಲಿ ಗೊಂದಲ ಮೂಡಿಸಬೇಡಿ ಎಂಬ ಅಂತಿಮ ಸಂದೇಶ ರವಾನಿಸಿದರು ವಿವರಣೆಯಲ್ಲಿ ಇತಿಹಾಸವನ್ನು ಅವರ ಎಂದಿನ ಶೈಲಿಯಲ್ಲಿ ಹಗುರಾವಾಗಿಸಿ ಭಾವನಾತ್ಮಕ ಎಂದಿದ್ದಾರೆ.
ಇತಿಹಾಸ ಕಲೆಯೂ ಅಲ್ಲ ಭಾವನಾತ್ಮಕವೂ ಅಲ್ಲ. ಅದು ಅತ್ಯಂತ ವೈಜ್ಞಾನಿಕ ಅಧ್ಯಯನ. ಗೊಂದಲಗಳನ್ನು ಸಹ ಸ್ಪಷ್ಟವಾಗಿ ಗುರುತಿಸಿ ಸಾಧ್ಯತೆಗಳ ಬಗ್ಗೆಯೂ ವೈದ್ಯಕೀಯ ವಿಜ್ಞಾನದಂತೆ ಪ್ರತಿಪಾದಿಸುತ್ತದೆ.
ಯಾರೋ ಬರೆದ ಯಾವುದೋ ಪುಸ್ತಕ ಅಥವಾ ಅಭಿಪ್ರಾಯ ಅಥವಾ ಆತ್ಮಕಥನ ಅಥವಾ ಕಥೆ ಅಥವಾ ಹಾಡು ಅಥವಾ ಕೆತ್ತನೆ ಅಥವಾ ಜನಪದ ಅಥವಾ ಉತ್ಖನವೇ ಇತಿಹಾಸವಲ್ಲ. ಇತಿಹಾಸ ಎಂದು ದಾಖಲಾಗಲು ಒಂದು ಘಟನೆ ಅಥವಾ ವಿಷಯ ಅನೇಕ ಮಾನದಂಡಗಳನ್ನು ಹಾದು ಬರಬೇಕಾಗುತ್ತದೆ. ಟಿಪ್ಪು ಗಾಂಧಿ ನೆಹರು ಅವರ ಬಗ್ಗೆ ಕರ್ಜಗಿಯವರು ಪ್ರಸ್ತಾಪಿಸಿದ್ದಾರೆ. ಅವರುಗಳ ಬಗ್ಗೆ ಸಾವಿರಾರು ಅಭಿಪ್ರಾಯ ಇರಬಹುದು. ಆದರೆ ಇತಿಹಾಸ ಮಾತ್ರ ಒಂದೇ….
ಅಧೀಕೃತ ಇತಿಹಾಸ ಹೇಗೆ ದಾಖಲಾಗುತ್ತದೆ ???????
ಇತಿಹಾಸ ಮತ್ತು ಪುರಾಣಗಳ ನಡುವಿನ ವ್ಯತ್ಯಾಸ ಏನು ???????
ರಾಮ ಲಕ್ಷಣ ಸೀತೆ ರಾವಣ ಕೃಷ್ಣ ಪಾಂಡವರು ಕೌರವರು, ಯುದ್ಧಗಳು, ಹರಪ್ಪ ಮಹೆಂಜೊದಾರೋ, ಶಿಲಾಯುಗ, ವೇದ ಉಪನಿಷತ್ತು, ಸ್ಮೃತಿಗಳು, ಬುದ್ಧ ಮಹಾವೀರ, ಮೌರ್ಯ ಸಾಮ್ರಾಜ್ಯ ಅಲೆಗ್ಸಾಂಡರ್ ದಾಳಿ, ಘೋರಿ ಘಜ್ನಿ ಆಕ್ರಮಣ, ಭಕ್ತಿ ಪಂಥಗಳು, ಪರಕೀಯರ ದಾಳಿ, ಸ್ವಾತಂತ್ರ್ಯ ಹೋರಾಟ, ಆಗಿನ ಯುದ್ದಗಳು ಹೀಗೆ ಹಿಂದೆ ಗತಿಸಿದ ಅನೇಕ ಘಟನೆಗಳು ಹೇಗೆ ದಾಖಲಾಗಿವೆ, ಅದರ ನಿಖರತೆಗಳು ಏನು ?????
ಇತ್ತೀಚಿನ ವರ್ಷಗಳಲ್ಲಿ ಎಲ್ಲರೂ ಇತಿಹಾಸಕಾರರಂತೆ ಹಿಂದಿನ ಘಟನೆ, ವ್ಯಕ್ತಿ, ಸಿದ್ದಾಂತಗಳ ಬಗ್ಗೆ ಮಾತನಾಡುತ್ತಾರೆ. ಇತಿಹಾಸ ಮತ್ತು ಪುರಾಣಗಳನ್ನು ಒಂದಕ್ಕೊಂದು ಬೆಸೆಯುತ್ತಾರೆ. ಅದರಿಂದಾಗಿಯೇ ಬಹಳಷ್ಟು ಗೊಂದಲಗಳು ಏರ್ಪಡುತ್ತಿವೆ. ಅನೇಕರು ಕೇಳುತ್ತಾರೆ. ಯಾವುದು ಸರಿ – ಯಾವುದು ತಪ್ಪು ಅವರು ಹಾಗೆ ಹೇಳುತ್ತಾರೆ, ಇವರು ಹೀಗೆ ಹೇಳುತ್ತಾರೆ ಆ ಪುಸ್ತಕದಲ್ಲಿ ಹಾಗೆ ಇದೆ, ಈ ಪುಸ್ತಕದಲ್ಲಿ ಬೇರೆ ರೀತಿಯಲ್ಲಿ ಇದೆ ಎಂದು ಗಲಿಬಿಲಿಗೆ ಒಳಗಾಗಿದ್ದಾರೆ.
ಭಾರತದ ಮಟ್ಟಿಗೆ ಹೇಳುವುದಾದರೆ…..
ಭಾರತದ ಅಧೀಕೃತ ಇತಿಹಾಸ ದಾಖಲು ಮಾಡಲು ಪ್ರಾರಂಭಿಸಿದ್ದು ಬ್ರಿಟೀಷರು, ಆರ್ಕಿಯಾಜಿಕಲ್ ಸರ್ವೆ ಆಫ್ ಇಂಡಿಯಾ ಮೂಲಕ ಸುಮಾರು 1800 ರ ಆಸುಪಾಸಿನಲ್ಲಿ.
ಅಲ್ಲಿಯವರೆಗೆ ದೊರೆತ ಶಿಲಾಶಾಸನಗಳು, ಕೆತ್ತನೆಗಳು, ಅಕ್ಷರ ಮತ್ತು ಚಿತ್ರ ರೂಪದ ಎಲ್ಲಾ ಪ್ರಕಾರದ ಬರಹಗಳು, ಸ್ಮಾರಕಗಳು, ಹಾಡುಗಳ ರೂಪದ ಜಾನಪದೀಯ ಕಥನ ಕಾವ್ಯಗಳು, ವಿದೇಶೀ ಪ್ರವಾಸಿಗರ ಬರಹಗಳು, ಆಗಿನ ಜಾಗತಿಕ ವಿದ್ಯಮಾನಗಳು ಸೇರಿ ಇತಿಹಾಸದ ಬಗ್ಗೆ ಮಾಹಿತಿ ಸಿಗಬಹುದಾದ ಎಲ್ಲಾ ದಾಖಲೆಗಳನ್ನು ದೇಶದ ಮೂಲೆ ಮೂಲೆಗಳಿಂದ ಸಂಗ್ರಹಿಸಲಾಗುತ್ತದೆ. ವಿಶ್ವದ ಮಾನವ ನಾಗರಿಕತೆ ಹೆಚ್ಚು ಕಡಿಮೆ ನದಿ ತೀರದ ಪ್ರದೇಶಗಳಲ್ಲಿಯೇ ಬೆಳೆದುಬಂದಿದೆ. ಆದ್ದರಿಂದ ಮೇಲಿನ ದಾಖಲೆಗಳ ಆಧಾರದ ಮೇಲೆ ಇನ್ನಷ್ಟು ವಿಷಯಗಳನ್ನು ಖಚಿತಪಡಿಸಿಕೊಳ್ಳಲು ಅವಶ್ಯಕತೆ ಇರುವ ಸ್ಥಳಗಳಲ್ಲಿ ಉತ್ಖನನ ( ಭೂ ಅಗೆತ ) ಸಹ ಮಾಡಲಾಗುತ್ತದೆ.
ಈ ಎಲ್ಲಾ ದಾಖಲೆಗಳನ್ನು ಒಟ್ಟು ಮಾಡಿ ಅಧ್ಯಯನ – ಸಂಶೋಧನೆ ಮಾಡಲಾಗುತ್ತದೆ.
ದಿನಾಂಕಗಳು, ಮಾಸಗಳು, ವರ್ಷಗಳು, ಘಟನೆಗಳು, ರಾಜ ವಂಶಗಳು, ಹೆಸರುಗಳು, ಆಡಳಿತದ ಅವಧಿ, ಸೋಲು ಗೆಲುವು, ಪ್ರದೇಶಗಳ ವಿಸ್ತಾರ, ಭಾಷೆ, ಧರ್ಮ, ದೇವರು, ಆಚರಣೆಗಳು, ಆಗಿನ ಸಾಮಾಜಿಕ ಆರ್ಥಿಕ ಪರಿಸ್ಥಿತಿ ಸೇರಿ ಒಟ್ಟು ವ್ಯವಸ್ಥೆ, ಬರಹಗಳಲ್ಲಿ ಇರುವ ಹೊಗಳಿಕೆ, ತೆಗಳಿಕೆ, ಸಾಂಕೇತಿಕತೆ, ಕಾಲ್ಪನಿಕತೆ, ವಿರೋಧಾಭಾಸ, ಜಯದ ಸಂಭ್ರಮ, ಸೋಲಿನ ಕಹಿ,ತಂತ್ರಗಳು ಕುತಂತ್ರಗಳು ಮುಂತಾದ ಎಲ್ಲವನ್ನೂ ವಿಮರ್ಶೆಗೆ ಒಳಪಡಿಸಲಾಗುತ್ತದೆ.
ಕೆಲವೊಮ್ಮೆ ಮಧ್ಯದ ದಾಖಲೆಗಳು ದೊರೆಯುವುದಿಲ್ಲ. ಪೂರಕ ಅಂಶಗಳು ಸಿಗುವುದಿಲ್ಲ, ಎರಡು ವಿರುದ್ಧ ದಿಕ್ಕಿನ ಘಟನೆಗಳ ಮಾಹಿತಿ ದೊರೆಯುತ್ತದೆ. ಹಾಗೆಲ್ಲಾ ಇರುವ ದಾಖಲೆಗಳ ಪ್ರಕಾರ ವಾಸ್ತವಕ್ಕೆ ಹತ್ತಿರದ ಊಹಾತ್ಮಕ ನಿರ್ಧಾರ ಮತ್ತು ಸಾಂದರ್ಭಿಕ ಸತ್ಯದ ತೀರ್ಮಾನ ಮಾಡುವುದು ಅನಿವಾರ್ಯವಾಗುತ್ತದೆ.
ಇವುಗಳನ್ನೆಲ್ಲ ಒಟ್ಟು ಮಾಡಿ ವಿವಿಧ ತಂಡಗಳು ಇತಿಹಾಸವನ್ನು ದಾಖಲು ಮಾಡುತ್ತವೆ. ಆ ತಂಡದಲ್ಲಿ ಕೇವಲ ಇತಿಹಾಸಕಾರರು ಮಾತ್ರವಲ್ಲದೆ, ಮಾನವ ಶಾಸ್ತ್ರಜ್ಞರು, ಪುರಾತತ್ವ ಮತ್ತು ಪ್ರಾಚ್ಯ ವಸ್ತು ಇಲಾಖೆಯವರು, ಭೂಗರ್ಭ ತಜ್ಞರು, ವಿಜ್ಞಾನಿಗಳು, ರಾಜಕೀಯ ಪಂಡಿತರು, ಭಾಷಾ ತಜ್ಞರು ಮುಂತಾದ ಎಲ್ಲರೂ ಇರುತ್ತಾರೆ. ಇವರೆಲ್ಲರ ಒಟ್ಟು ಸಹಮತದ ಅಭಿಪ್ರಾಯ ಇತಿಹಾಸವಾಗಿ ದಾಖಲಾಗುತ್ತದೆ ಮತ್ತು ಅದು ಕಾಲಾನುಕ್ರಮದಲ್ಲಿ ಇರುತ್ತದೆ. ಇದನ್ನು ಸರ್ಕಾರದ ಅಧೀಕೃತ ಇತಿಹಾಸ ಎಂದು ಕರೆಯಲಾಗುತ್ತದೆ. ಇದರ ಆಧಾರದ ಮೇಲೆ ಪಠ್ಯ ಪುಸ್ತಕ ಅಧ್ಯಯನ ಮತ್ತು ಸಂಶೋಧನಾ ಶಿಕ್ಷಣವನ್ನು ರೂಪಿಸಲಾಗುತ್ತದೆ.
ಹಾಗಾದರೆ ಇದು ಮಾತ್ರ ಸತ್ಯವೇ ಅಥವಾ ಅಂತಿಮವೇ ? ಇದಕ್ಕೆ ಬೇರೆ ಆಯಾಮ ಇರುವುದಿಲ್ಲವೇ ಎಂಬ ಪ್ರಶ್ನೆ ಉದ್ಬವವಾಗಬಹುದು. ಇದು ಅಂತಿಮ ಸತ್ಯ ಅಲ್ಲದಿರಬಹುದು. ಆದರೆ ಸದ್ಯದ ಅಧೀಕೃತತೆ ಇದು ಮಾತ್ರ ಆಗಿರುತ್ತದೆ.
ಇಲ್ಲಿಯೂ ಕೆಲವು ಉತ್ತರಿಸಲಾಗದ ಗೊಂದಲಗಳು ಹಾಗೆಯೇ ಉಳಿಯುತ್ತದೆ. ಬುದ್ದನ ವೈಯಕ್ತಿಕ ಬದುಕು, ವೇದ ಉಪನಿಷತ್ತುಗಳ ರಚನಾಕಾರರ ಅಧೀಕೃತತೆ, ಎಲ್ಲೂ ದಾಖಲಾಗದ ಹತ್ಯಾಕಾಂಡಗಳು, ತ್ಯಾಗ ಬಲಿದಾನಗಳು ಇತ್ಯಾದಿ ಅನೇಕಾನೇಕ ಸೂಕ್ಷ್ಮ ಅಂಶಗಳು ಕಾಲ ಗರ್ಭದಲ್ಲಿ ಪ್ರಶ್ನೆಗಳಾಗಿಯೇ ಅಡಗಿ ಹೋಗಿರುತ್ತವೆ.
ಈ ಎಲ್ಲಾ ಆಧಾರದ ಮೇಲೆ ರಾಮಾಯಣ ಮತ್ತು ಮಹಾಭಾರತ ಪೌರಾಣಿಕ ಎಂತಲೂ, ಹರಪ್ಪ ಸಂಸ್ಕೃತಿಯಿಂದ ಇಲ್ಲಿಯವರೆಗೂ ಇತಿಹಾಸ ಎಂತಲೂ ಕರೆಯಲಾಗಿದೆ.
ಕೆಲವು ಭೌಗೋಳಿಕ ಮತ್ತು ಸಾಂಧರ್ಭಿಕ ದಾಖಲೆಗಳು ರಾಮಾಯಣ ಮಹಾಭಾರತ ನಿಜವಾಗಿ ನಡೆದ ಘಟನೆಗಳು ಎಂಬುದನ್ನು ಸೂಚಿಸುತ್ತದೆ ಎಂದು ಒಂದಷ್ಟು ಆಧ್ಯಾತ್ಮ ಪಂಡಿತರು ಖಚಿತಪಡಿಸುತ್ತಾರೆ. ಆದರೆ ಇತಿಹಾಸ ಎನ್ನಲು ಬೇಕಾದ ಮಾನದಂಡಗಳನ್ನು ರಾಮಾಯಣ ಮಹಾಭಾರತ ಸಂಪೂರ್ಣ ಪೂರೈಸುವುದಿಲ್ಲ. ಅತಿಮಾನುಷ ಶಕ್ತಿ, ನೈಸರ್ಗಿಕವಾಗಿ ಅಸಾಧ್ಯವಾದ ಘಟನೆಗಳು, ಪುನರ್ಜನ್ಮ ಮುಂತಾದ ಊಹಾತ್ಮಕ ಅಂಶಗಳನ್ನು ಪರಿಗಣಿಸಿ ಅದನ್ನು ಇತಿಹಾಸ ಎನ್ನಲಾಗುವುದು. ಇತಿಹಾಸ ಸಾರ್ವತ್ರಿಕ ಸತ್ಯದ ಆಧಾರದ ಮೇಲೆ ರಚಿತವಾಗುತ್ತದೆ.
ಆದ್ದರಿಂದ ಯಾರೋ ಭಾಷಣದಲ್ಲೋ, ಅಂಕಣದಲ್ಲೋ, ಹರಿಕಥೆಯಲ್ಲೋ ಇದೇ ಇತಿಹಾಸ ಎಂದು ಬಾಯಿಗೆ ಬಂದಂತೆ ಮಾತನಾಡಿ, ಎಲ್ಲವನ್ನೂ ತಮ್ಮ ಅನುಕೂಲಕ್ಕೆ ತಕ್ಕಂತೆ ತಿರುಚಿದರೆ ದಯವಿಟ್ಟು ಅದನ್ನು ಪ್ರಶ್ನಿಸದೆ ಒಪ್ಪಿಕೊಳ್ಳಬೇಡಿ. ಸರ್ಕಾರದ ಅಧಿಕೃತ ದಾಖಲೆಗಳಲ್ಲಿ ಇರುವುದು ಮಾತ್ರ ಒಪ್ಪಬಹುದಾದ ಇತಿಹಾಸ. ಇನ್ನೆಲ್ಲವೂ ಅವರವರ ಭಾವಕ್ಕೆ ತಕ್ಕಂತೆ ಮೂಡಿದ ಅಭಿಪ್ರಾಯಗಳು ಮಾತ್ರ. ಇತಿಹಾಸ ದಾಖಲಿಸುವಾಗ ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇರಲಿಲ್ಲ. ಯಾವುದೇ ರಾಜಕೀಯ ಪಕ್ಷಗಳು ಅಸ್ತಿತ್ವದಲ್ಲಿ ಇರಲಿಲ್ಲ. ಎಡಬಲ ಪಂಥಗಳು ಇಷ್ಟೊಂದು ವ್ಯಾಪಕತೆ ಪಡೆದಿರಲಿಲ್ಲ. ಸೈದ್ದಾಂತಿಕ ಗುಲಾಮಿತನ ಇರಲಿಲ್ಲ. ಅಸಲಿಗೆ ಅಕ್ಷರಸ್ಥರೇ ತುಂಬಾ ಕಡಿಮೆ ಪ್ರಮಾಣದಲ್ಲಿದ್ದರು. ಅಂತಹ ಸಂದರ್ಭದಲ್ಲಿ ಇತಿಹಾಸವನ್ನು ದಾಖಲಿಸುವಾಗ ಪಕ್ಷಪಾತ ಅಥವಾ ತಿರುಚಿರುವಿಕೆಯ ಸಾಧ್ಯತೆ ತುಂಬಾ ಕಡಿಮೆ. ಇದನ್ನು ಸಹ ಗಮನಿಸಬೇಕು.
ಇದೊಂದು ಸರಳ ನಿರೂಪಣೆ. ಆಳದಲ್ಲಿ ಇದನ್ನೂ ಮೀರಿದ ಇನ್ನಷ್ಟು ಆಯಾಮಗಳು ಇತಿಹಾಸಕ್ಕೆ ಇದೆ……………
ಪ್ರಜಾವಾಣಿ ಎಂಬ ವಿಶ್ವಾಸಾರ್ಹ ಪತ್ರಿಕೆ ಮತ್ತು ಗುರುರಾಜ ಕರ್ಜಗಿಯವರಂತ ಶಿಕ್ಷಣ ತಜ್ಞರು ಇತಿಹಾಸ ಹೆಚ್ಚು ಭಾವನಾತ್ಮಕ ಎಂದು ಹೇಳಿದ ಕಾರಣ ಸಾಮಾನ್ಯ ಜನರಲ್ಲಿ ಅದು ಗೊಂದಲ ಮೂಡದಿರಲಿ ಎಂಬ ಕಾರಣದಿಂದಾಗಿ ಈ ಪ್ರತಿಕ್ರಿಯೆ. ಕರ್ನಾಟಕದ ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ಇತಿಹಾಸ ಸಂಶೋಧನಾ ಕೇಂದ್ರಗಳಿವೆ ಮತ್ತು ಇತಿಹಾಸಕಾರರು ಇದ್ದಾರೆ. ಅವರು ಇನ್ನಷ್ಟು ಸ್ಪಷ್ಟನೆ ನೀಡಬಹುದು…..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ಲೇಖನ-ವಿವೇಕಾನಂದ ಎಚ್.ಕೆ.
9844013068…..