![](https://www.chandravallinews.com/wp-content/uploads/2023/06/GNM2.jpeg)
i
ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪನವರ ಅಮೃತ ಭಾರತ ಕೃತಿ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೂ ಬಲು ಪ್ರಯೋಜನಕಾರಿ ಪುಸ್ತಕ!
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಅಮೃತಭಾರತದ ಅವಲೋಕಿತ ಹೆಜ್ಜೆಗಳು
ಕೃತಿ- ಅಮೃತ ಭಾರತ
ಕರ್ತೃ- ಡಾ. ಜಿ ಎನ್ ಮಲ್ಲಿಕಾರ್ಜುನಪ್ಪ-9449077003
ಮೊದಲ ಮುದ್ರಣ- ೨೦೨೩
ಪುಟಗಳು- ೨೬+೫೮೨
ಪ್ರಕಾಶನ- ಅಕ್ಷರ ಮಂಟಪ, ಹಂಪಿ ನಗರ, ಬೆಂಗಳೂರು.
ಡಾ. ಜಿ ಎನ್ ಮಲ್ಲಿಕಾರ್ಜುನಪ್ಪನವರು ಉಪನ್ಯಾಸಕ, ಪ್ರಾಚಾರ್ಯ, ಆಡಳಿತಾಧಿಕಾರಿ, ಸಾಹಿತಿ ಮಾತ್ರವಲ್ಲದೆ ಅವರೊಬ್ಬ ಶಿಕ್ಷಣ ತಜ್ಞರೂ ಹೌದು, ಆರ್ಥಿಕ ತಜ್ಞರೂ ಹೌದು. ಜಾಗೃತ ಮನದ ಸಾಮಾಜಿಕ ಚಿಂತಕರೂ ಹೌದು. ನಾಡಿನ ಹಲವಾರು ಪತ್ರಿಕೆಗಳಲ್ಲಿ, ಬಾನುಲಿಗಳಲ್ಲಿ ತಮ್ಮ ವಿಚಾರಗಳನ್ನು ಆಗಾಗ್ಗೆ ದಾಖಲಿಸುತ್ತಲೇ ನಾಗರಿಕರನ್ನು ಪ್ರಜ್ಞಾ ಪಾತಳಿಗೆ ತಂದವರು.
ಪ್ರಸ್ತುತ ‘ಅಮೃತ ಭಾರತ‘ ಕೃತಿಯಲ್ಲಿ ಸ್ವಾತಂತ್ರ್ಯ ಭಾರತದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ- ಗತಿಗಳನ್ನು, ಪ್ರಾಚೀನ ಕಾಲದಿಂದ ವರ್ತಮಾನದವರೆಗೂ ನಂಬಲರ್ಹವಾದ ಅಂಕಿ ಅಂಶಗಳ ಸಮೇತ ಹನ್ನೊಂದು ಭಾಗಗಳಲ್ಲಿ ಕಟ್ಟಿಕೊಟ್ಟಿದ್ದಾರೆ.
ಅಭಿವೃದ್ಧಿಯ ವ್ಯಾಖ್ಯೆಯನ್ನು ಬಂಡವಾಳಶಾಹಿ ದೃಷ್ಟಿಯಿಂದ, ಸಂವಿಧಾನಾತ್ಮಕ ಪ್ರಜಾಪ್ರಭುತ್ವದ ದೃಷ್ಟಿಯಿಂದ, ವಸಾಹತು ಶಾಹಿಗಳ ದೃಷ್ಟಿಯಿಂದ ಮತ್ತು ಸಾಂಸ್ಕ್ರತಿಕ ಹಾಗೂ ಮಾನವೀಯತೆಯ ದೃಷ್ಟಿಯಿಂದ ವ್ಯಾಖ್ಯಾನಿಸುವ ಲೇಖಕರು ವಿಷಯದ ಅಗಾಧ ವ್ಯಾಪ್ತಿಯನ್ನು ಓದುಗರ ಮುಂದಿಡುತ್ತಾರೆ.
ಪರಿಸರ, ಶಿಕ್ಷಣ, ಉದ್ಯೋಗ ಮತ್ತು ಅಭಿವೃದ್ಧಿಗಳಿಗಿರುವ ಪರಸ್ಪರ ಸಂಬಂಧಗಳನ್ನಿಲ್ಲಿ ವಿವರಿಸಿದ್ದಾರೆ.
ಏರುತ್ತಿರುವ ಜನಸಂಖ್ಯೆ ಮತ್ತು ಅಭಿವೃದ್ಧಿಯ ತಂತ್ರಜ್ಞಾನದೊಂದಿಗೆ ತಳಕು ಹಾಕಿಕೊಂಡಿರುವ ಹಸಿರು ಕ್ರಾಂತಿ, ನೀರಾವರಿ ಯೋಜನೆಗಳು, ಕೃಷಿ ಕಾಯ್ದೆಗಳು, ಭೂ ಸುಧಾರಣೆ ಕಾಯ್ದೆ, ರೈತರ ಆತ್ಮಹತ್ಯೆಗಳು, ಬ್ಯಾಂಕ್ ಸಾಲಗಳು, ಹಣದುಬ್ಬರ, ನಿರುದ್ಯೋಗ, ಕೈಗಾರಿಕೀಕರಣ, ನಿಸರ್ಗ ವಿರೋಧಿ ಅಭಿವೃದ್ಧಿ ಕಾರ್ಯಗಳು, ಮುಂಗಡ ಪತ್ರಗಳ ಅವಲೋಕನ,ರೂಪಾಯಿ ಅಮಾನ್ಯೀಕರಣ, ಆರ್ಥಿಕ ನೀತಿಗಳು,
ಜಿ ಎಸ್ ಟಿ, ಬದಲಾಗುತಿರುವ ಜೀವನ ಶೈಲಿ, ಕೊರೋನಾ ಕಾಲದ ಸಂಕಷ್ಟಗಳು, ಆಳರಸರ ಹೊಣೆಗಾರಿಕೆ ಮತ್ತು ಇಚ್ಛಾಶಕ್ತಿಗಳ ಬಗೆಗೆ ಪ್ರಾಮಾಣಿಕ ಹಾಗೂ ದೂರದೃಷ್ಟಿಯ ಅಧ್ಯಯನವಿಲ್ಲಿದೆ.
ಗೌತಮ ಬುದ್ಧ, ಬಸವಣ್ಣ, ಪ್ಲೇಟೋ, ಆಡಮ್ ಸ್ಮಿಥ್, ಕಾರ್ಲ್ ಮಾರ್ಕ್ಸ್, ಏಂಗೆಲ್ಸ್, ದಾದಾಭಾಯ್ ನವರೋಜಿ, ಗಾಂಧೀಜಿ, ವಿನೋಬಾ ಭಾವೆ, ವಿಶ್ವೇಶ್ವರಯ್ಯ, ಜಯಪ್ರಕಾಶ್ ನಾರಾಯಣ್, ಕಿಶನ್ ಪಾಟ್ನಾಯಕ್, ಅಮರ್ತ್ಯ ಸೇನ್, ಲೋಹಿಯಾ, ಸ್ವಾಮಿನಾಥನ್, ಅಹ್ಲುವಾಲಿಯ, ಮನಮೋಹನ್ ಸಿಂಗ್, ಅಣ್ಣಾಹಜಾರೆ ಮುಂತಾದವರ ಅರಿವಿನ ಅರ್ಥಶಾಸ್ತ್ರದ ಚಿಂತನೆಗಳ ವಿಶ್ಲೇಷಣೆಗಳಿಲ್ಲಿವೆ.
ಪಿಎಚ್ ಡಿ ಪ್ರಬಂಧದ ರೀತಿಯಲ್ಲಿ ಗಂಭೀರ ವಸ್ತುವಿನ ಕ್ರಮಬದ್ಧವಾದ ನಿರೂಪಣೆ ಇರುವುದಾದರೂ, ಪುಸ್ತಕದ ಓದು ಒಣ ಮರಳುಗಾಡಿನ ನಡಿಗೆಯಾಗದೆ ಅಲ್ಲಲ್ಲಿ ಓಯಸಿಸ್ಸುಗಳು ಕಾಣಿಸುತ್ತವೆ.
ಶರಣರ ವಚನಗಳು, ಸರ್ವಜ್ಞನ ತ್ರಿಪದಿಗಳ ಸೂಕ್ತ ಬಳಕೆ, ಷೇಕ್ಸ್ಪಿಯರ್ನ ‘ಮರ್ಚೆಂಟ್ ಆಫ಼್ ವೆನಿಸ್‘ ನಾಟಕ, ದ. ರಾ. ಬೇಂದ್ರೆಯವರ ಕಿರು ನಾಟಕ ‘ಜಾತ್ರೆ‘ ಯ ಪ್ರಸ್ತಾಪ ಖಂಡಿತಾ ಓದುಗರ ಮನಸ್ಸನ್ನು ಕೊಂಚವಾದರೂ ಪರಿವರ್ತಿಸುವಲ್ಲಿ ಸಹಕಾರಿಯಾಗುತ್ತದೆ.
ರಾಮಾಯಣ ಮತ್ತು ಮಹಾಭಾರತದಿಂದಲೂ ಉದಾಹರಣೆಗಳನ್ನು ಲೇಖಕರು ಎತ್ತಿ ಹಿಡಿಯುತ್ತಾರೆ. ಸತ್ವಯುತ ಭಾಷೆ ಪುಸ್ತಕದ ಮೌಲ್ಯವನ್ನು ಹೆಚ್ಚಿಸಿದೆ. ಗಾದೆ, ನುಡಿಗಟ್ಟು, ಪುಟ್ಟ ಕಥೆಗಳನ್ನು ಅಭಿವೃದ್ಧಿ ಕಥನದಲ್ಲಿ ಪ್ರಯೋಗಿಸಿ ಸಾಮಾನ್ಯ ಜನತೆಗೂ ಲೇಖಕರು ತಲುಪುತ್ತಾರೆ.
ಡಾ. ಜಿ ಎನ್ ಮಲ್ಲಿಕಾರ್ಜುನಪ್ಪನವರ ಅಪಾರ ಅಧ್ಯಯನಶೀಲತೆ, ಪರಿಶ್ರಮ, ಗ್ರಾಫ಼್ ಮತ್ತು ಕೋಷ್ಟಕಗಳ ಸಹಿತ ಕ್ರಮಬದ್ಧ ಮಂಡನೆಗಳು ಸ್ತುತ್ಯಾರ್ಹ.
ವಿಷಯದ ಹರಹು ಬಲು ದೊಡ್ಡದಾದರೂ ಲೇಖಕರ ಸದಾಶಯದ ಪ್ರಯತ್ನವಂತೂ ವಂದನಾರ್ಹ.
ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೂ ಬಲು ಪ್ರಯೋಜನಕಾರಿ ಪುಸ್ತಕ!
ಸಾವಧಾನ ಚಿತ್ತದಿಂದ ನೀವೂ ಓದಿ.
ಕೃತಿ ಕುರಿತ ಅಭಿಪ್ರಾಯ ಲೇಖನ:ಸಿ ಬಿ ಶೈಲಾ ಜಯಕುಮಾರ್.
ಚಿತ್ರದುರ್ಗ.