i
ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಕೆಂಚಪ್ಪಗೌಡ ಅವಿರೋಧ ಆಯ್ಕೆ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಬಿ.ಕೆಂಚಪ್ಪ ಗೌಡ ಸೇರಿದಂತೆ ಅವರ ಗುಂಪಿನ ಆರು ಮಂದಿ ಪದಾಧಿಕಾರಿಗಳು ಅವಿರೋಧ ಆಯ್ಕೆ ಆಗುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ರವಾನೆ ಮಾಡಿದ್ದಾರೆ.
ನಗರದ ರಾಜ್ಯ ಒಕ್ಕಲಿಗರ ಸಂಘದ ಸಭಾಂಗಣದಲ್ಲಿ ಶನಿವಾರ ನಡೆದ ಚುನಾವಣೆಯಲ್ಲಿ ಬೆಂಗಳೂರು ಜಯನಗರದ ಬಿ.ಕೆಂಚಪ್ಪಗೌಡ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಎಲ್.ಶ್ರೀನಿವಾಸ್ ಹಾಗೂ ಸಿ. ದೇವರಾಜು, ಪ್ರಧಾನ ಕಾರ್ಯದರ್ಶಿಯಾಗಿ ಎಚ್.ಸಿ. ಜಯಮುತ್ತು, ಸಹಾಯಕ ಕಾರ್ಯದರ್ಶಿಯಾಗಿ ಸಿ.ಜೆ. ಗಂಗಾಧರ, ಖಜಾಂಚಿಯಾಗಿ ಸಿ.ಎಂ. ಮಾರೇಗೌಡ ಇವರುಗಳು ಅವಿರೋಧ ಆಯ್ಕೆಯಾಗಿದ್ದಾರೆ. ಆಯ್ಕೆ ಇವರುಗಳು ತಮ್ಮದೇ ಅಧಿಕೃತ ಆಡಳಿತ ಮಂಡಳಿ ಎಂದು ಇವರು ಘೋಷಿಸಿಕೊಂಡಿದ್ದಾರೆ.
ನಿಕಟಪೂರ್ವ ಅಧ್ಯಕ್ಷ ಸಿ.ಎನ್.ಬಾಲಕೃಷ್ಣ ಮತ್ತು ಅವರ ಬೆಂಬಲಿಗರ ತಂಡವನ್ನು ಕಾರ್ಯಕಾರಿ ಸಮಿತಿಯಿಂದ ಪದಚ್ಯುತಗೊಳಿಸಿ ಬಿ. ಕೆಂಚಪ್ಪಗೌಡ ಗುಂಪಿನ ಆರು ಮಂದಿ ಅವಿರೋಧವಾಗಿ ಆಯ್ಕೆಯಾಗಿರುವುದು ವಿಶೇಷವಾಗಿದೆ. ಕೆಲ ತಿಂಗಳಿಂದ ಒಕ್ಕಲಿಗರ ಸಂಘದಲ್ಲಿ ಬಾಲಕೃಷ್ಣ ನೇತೃತ್ವದ ಕಾರ್ಯಕಾರಿ ಸಮಿತಿ ವಿರುದ್ಧ ಈ ಗುಂಪು ಬಂಡಾಯ ಎದ್ದಿತ್ತು.
‘ವಿ.ವಿ ಪುರಂ ಕೃಷ್ಣರಾಜ ರಸ್ತೆಯ ರಾಜ್ಯ ಒಕ್ಕಲಿಗರ ಸಂಘದ ಹೆಸರಿನಲ್ಲಿ ನೂತನ ಪದಾಧಿಕಾರಿಗಳ ಆಯ್ಕೆಗೆ ಸಭೆ ಕರೆಯಲಾಗಿದೆ‘ ಎಂದು ಹಂಗಾಮಿ ಪ್ರಧಾನ ಕಾರ್ಯದರ್ಶಿ ಎಂ. ಪುಟ್ಟಸ್ವಾಮಿ ಹೆಸರಿನಲ್ಲಿ ಪ್ರಕಟಣೆ ಹೊರಡಿಸಲಾಗಿತ್ತು. ಇದರ ವಿರುದ್ಧ ಬಾಲಕೃಷ್ಣ ನೇತೃತ್ವದ ಗುಂಪು ಈಚೆಗೆ ಸಿಟಿ ಸಿವಿಲ್ ಹಾಗೂ ಸೆಷನ್ಸ್ ನ್ಯಾಯಾಲಯದ ಮೊರೆ ಹೋಗಿದ್ದು ಸದರಿ ನ್ಯಾಯಾಲಯವು ಈ ಅರ್ಜಿ ವಿಚಾರಣೆಯನ್ನು ಆಗಸ್ಟ್ 28ಕ್ಕೆ ಮುಂದೂಡಿದ್ದರಿಂದ ಶನಿವಾರ ಚುನಾವಣೆ ನಡೆದಿದೆ. ತಮ್ಮ ಗುಂಪಿಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಯ್ಕೆಯಾಗಿರುವ ಬಹುತೇಕ ನಿರ್ದೇಶಕರ ಬೆಂಬಲ ಇದೆ. ಯಾವುದೇ ಗೊಂದಲ ಇಲ್ಲ ಎಂದು ನೂತನ ಸಮಿತಿ ಮಾಧ್ಯಮಗಳಿಗೆ ತಿಳಿಸಿದೆ.