i
ನೀಟ್ ಪರೀಕ್ಷೆ ಬಂದ ಮೇಲೆ ಕನ್ನಡಿಗ ಪ್ರತಿಭೆ ಆಯ್ಕೆ ಕುಗ್ಗಿದೆ- ಸಿದ್ದರಾಮ ಸ್ವಾಮೀಜಿ ಆತಂಕ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಫ್ರೀಡಂ ಪಾರ್ಕಿನಲ್ಲಿ ಸಮಾವೇಶ ನೆರವೇರಿತ್ತು. ಈ ಸಮಾವೇಶದಲ್ಲಿ ಕನ್ನಡ ಪರ ಸಂಘಟನೆಗಳು, ಸಾಹಿತಿಗಳು, ಸ್ವಾಮೀಜಿಗಳು, ಚಿಂತಕರು ಭಾಗವಹಿಸಿದ್ದರು. ಸ್ವಾಭಿಮಾನ ಕನ್ನಡಿಗರ ಸಮಾವೇಶವು ಅದ್ಧೂರಿಯಾಗಿ ಜರುಗಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭಾ ಸದಸ್ಯ ಎಲ್. ಹನುಮಂತಯ್ಯ, ಕೈಗಾರಿಕೆ ಸೇರಿದಂತೆ ಅನೇಕ ವಿಚಾರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಬೆಂಗಳೂರಿನಲ್ಲಿ ವಿವಿಧ ಭಾಷೆಯ ಜನರು ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ. ಆದರೆ ಮಹಾನಗರವಾದ ಬೆಂಗಳೂರಿನಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕನ್ನಡ ನಾಡನ್ನು ಜಾತ್ಯತೀತ ರಾಷ್ಟ್ರವನ್ನಾಗಿಸುವ ಪ್ರತಿಜ್ಞೆ ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ರಾಜಕಾರಣ ಮಾಡುವ ಉದ್ದೇಶದಿಂದ ತಿನ್ನುವ ಆಹಾರ, ಬಟ್ಟೆ, ಆಚರಣೆಗಳು ಇಂತಹ ಸಣ್ಣ ವಿಚಾರಗಳಿಗೆ ವಿರೋಧ ವ್ಯಕ್ತಪಡಿಸುವುದು ನಾಗರಿಕ ಸಮಾಜ ತಲೆತಗ್ಗಿಸುವ ವಿಚಾರವಾಗಿದೆ. ಹಾಗಾಗಿ ನಾವೆಲ್ಲರೂ ಎಚ್ಚೆತ್ತುಕೊಂಡು ನಾಗರಿಕ ಸಮಾಜ ಕಟ್ಟುವ ಅನಿವಾರ್ಯತೆ ಇದೆ ಎಂದರು.
ಮತದಾರರು ಅತ್ಯಂತ ಎಚ್ಚರಿಕೆ, ಪ್ರಜ್ಞಾವಂತಿಕೆಯಿಂದ ಮತ ಚಲಾಯಿಸಿದ್ದಾರೆ. ಪ್ರಜ್ಞಾವಂತರ ಮತದಾನದಿಂದ ಆಡಳಿತ ಹಿಡಿದಿರುವ ನಾವು ಅತ್ಯಂತ ಉತ್ತಮ ಆಡಳಿತ ನೀಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.
ಪುರೋಹಿತ ಶಾಹಿ ತಾಂಡವ ರೂಪವನ್ನು ಎದುರಿಸುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ಉತ್ತಮ ಕೆಲಸಗಳ ಬಗ್ಗೆ ಕನ್ನಡಿಗರನ್ನು ಬಡಿದೆಬ್ಬಿಸಬೇಕು. ಅಸ್ಪೃಶ್ಯತೆ ಮುಕ್ತ ಕರ್ನಾಟಕವಾಗಬೇಕು ಎಂದು ಹೇಳಿದ ಅವರು, ನಮ್ಮ ಸಂಘಟನೆಯ ಹೋರಾಟದ ಫಲವಾಗಿ ಪಠ್ಯ ಪರಿಷ್ಕರಣೆ ನಿರ್ಧಾರವನ್ನು ಕೈಗೊಂಡಿರುವ ಸರ್ಕಾರಕ್ಕೆ ಅಭಿನಂದನೆಗಳು ಎಂದರು.
ಹೋರಾಟ ಸಮಿತಿಯ ಸಂಚಾಲಕ, ನಾಟಕಕಾರ ಎಲ್.ಎನ್. ಮುಕುಂದರಾಜ್ ಮಾತನಾಡಿ, ವಿಶ್ವಮಾನವ ಮಹಾ ಕವಿ ಕುವೆಂಪು ಅವರ ವಿಚಾರಧಾರೆಗಳನ್ನು ಅಧ್ಯಯನ ಮಾಡದವರು ಕುವೆಂಪು ಅವರನ್ನು ಅವಹೇಳನ ಮಾಡುವ ಮೂಲಕ ಪ್ರಗತಿಪರರ ಆತ್ಮ ಚೈತನ್ಯ ಕಳೆಯುವ ಕೆಲಸಗಳನ್ನು ಮಾಡುತ್ತಿರುವುದು ದುರದೃಷ್ಟಕರ. ನಾಡಿಗೆ ಅವರ ಸೇವೆ ಮಹತ್ವದ್ದು ಎಂದು ಪ್ರತಿಪಾದಿಸಿದರು. ಪಂಪ, ಬಸವಣ್ಣ, ಕನಕದಾಸರ ಸಾಲುಗಳನ್ನು ಪ್ರಸ್ಥಾಪಿಸಿದರು.
ಮಾಜಿ ಮುಖ್ಯಮಂತ್ರಿಯೊಬ್ಬರು ವಿಧಾನಸೌಧದಲ್ಲಿ ಯಜ್ಞ, ಯಾಗಗಳನ್ನು ಮಾಡಿಸಿ ಜೈಲಿಗೆ ಹೋದರು. ಪ್ರಾದೇಶಿಕ ಪಕ್ಷದ ನಾಯಕರೊಬ್ಬರು ಪಕ್ಷದ ಕಚೇರಿಯನ್ನು ಕಳೆದುಕೊಳ್ಳುವಂತಾಯಿತು. ಅಂದರೆ ಯಜ್ಞಗಳನ್ನ ಮಾಡುವುದರಿಂದ ಕಳಂಕ ಬರುತ್ತದೆ ಎಂದು ಪಂಪ ಹೇಳಿರುವ ಸಾಲುಗಳನ್ನು ಉಲ್ಲೇಖಿಸಿದರು.
ಕನ್ನಡ ನಾಡು ನುಡಿ ಎಲ್ಲೆಡೆಯೂ ಪಸರಿಸುವಂತಹ ವಾತಾವರಣವನ್ನ ನಿರ್ಮಾಣ ಮಾಡಬೇಕಿದೆ. ಈ ಹಿಂದಿನ ಸರ್ಕಾರ ಸಂಸ್ಕೃತ ವಿಶ್ವವಿದ್ಯಾನಿಲಯಕ್ಕೆ 300 ಕೋಟಿಯನ್ನ ನೀಡಿ ಕನ್ನಡ ವಿಶ್ವವಿದ್ಯಾಲಯಕ್ಕೆ ಕೇವಲ ಮೂರು ಕೋಟಿ ಅನುದಾನವನ್ನು ನೀಡಿದ್ದು ಕನ್ನಡಿಗರನ್ನು ಅಣಕ ಮಾಡಿದಂತೆ ಎಂದು ಬೇಸರ ವ್ಯಕ್ತಪಡಿಸಿದರು.
ಧರ್ಮ ಎಂಬುದು ಮಾತಿನಿಂದ ಬರುವುದಂತಹದಲ್ಲ ನಡವಳಿಕೆಯಿಂದ ಬರಬೇಕು ಎಂಬುದನ್ನು ಬಿಜೆಪಿ ಅರಿಯಬೇಕಿದೆ ಎಂದು ಹರಿಹಾಯ್ದ ಅವರು, ಅತಿ ಹೆಚ್ಚು ತೆರಿಗೆ ಕಟ್ಟುತ್ತಿರುವ ಕರ್ನಾಟಕದ ಬಡವರಿಗೆ ಹಸಿವು ತಣಿಸಲು ಅಕ್ಕಿ ನೀಡಲು ಸಹಕರಿಸದ ಕೇಂದ್ರದ ನಿಲುವು ಸಮಾಜಸವಲ್ಲ ಎಂದು ಹೇಳಿದರು. ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಸ್ಟಿಸ್ ಬಿ. ಗೋಪಾಲಗೌಡರು, ಕೋಮುವಾದವನ್ನು ವಿರೋಧಿಸುತ್ತೇವೆ ಎಂದು ಹೇಳುತ್ತಲೇ ಕೋಮುದ್ವೇಷ ಹರಡುತ್ತಿರುವ ಪಕ್ಷಕ್ಕೆ ಚುನಾವಣೆಯಲ್ಲಿ ಮತದಾರರು ತಕ್ಕ ಉತ್ತರ ನೀಡಿದ್ದಾರೆ. ನಮ್ಮ ರಾಜ್ಯದಲ್ಲಿ ಇಂದಿಗೂ ಬಡತನ ಇರುವುದರಿಂದಲೇ ಕಾಂಗ್ರೆಸ್ ಪಕ್ಷವು ಐದು ಗ್ಯಾರಂಟಿ ಭರವಸೆಗಳನ್ನು ನೀಡುವ ಮೂಲಕ ಅಧಿಕಾರಕ್ಕೆ ಬಂದಿದೆ. ಪಕ್ಷ ಅಧಿಕಾರಕ್ಕೆ ಬಂದಾಗ ಅಹಂಕಾರವನ್ನು ತೋರದೆ, ಜನಪರ ಧೋರಣೆಗಳನ್ನು ಇಟ್ಟುಕೊಂಡು, ಸಮಾಜಮುಖಿ ಕೆಲಸಗಳನ್ನು ಮಾಡಬೇಕು ಎಂದು ಸಲಹೆ ನೀಡಿದರು.
ಸಿದ್ದರಾಮ ಚೈತನ್ಯ ಸ್ವಾಮೀಜಿ ಮಾತನಾಡಿ, ನೀಟ್ ಪರೀಕ್ಷೆ ಬಂದ ಮೇಲೆ ಕನ್ನಡಿಗರ ಆಯ್ಕೆ ಕಡಿಮೆಯಾಗುತ್ತಿದೆ. ಇದರಿಂದ ಕರ್ನಾಟಕದ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಮತೀಯವಾದ ಇಂದು ಹೆಚ್ಚುತ್ತಿದೆ. ಈ ಬಗ್ಗೆ ಸರ್ಕಾರ ಗಮನಹರಿಸುವ ಅಗತ್ಯವಿದೆ ಎಂದು ಹೇಳಿದರು.
*ಪ್ರಧಾನ ಕಾರ್ಯದರ್ಶಿ ಆಡಿಟರ್ ನಾಗರಾಜ್ ಯಲಚವಾಡಿ ಅವರು ಗಣ್ಯರನ್ನು ಸ್ವಾಗತಿಸಿ ಮಾತನಾಡಿ ರಾಷ್ಟ್ರ ಮಟ್ಟದಲ್ಲಿ ಬೆಳಕು ಚೆಲ್ಲುವ ಶಕ್ತಿಗಳಾಗಿ ಪ್ರಜ್ವಲಿಸಿ ನಮ್ಮ ಜನತೆಗೆ ಶಕ್ತಿ ಶಾಲಿಯಾಗಿ ತುಂಬಿದೆ ಎಂದು ತಿಳಿಸಿದರು.
ಕುವೆಂಪು ಹೋರಾಟ ಸಮಿತಿಯ ಅಧ್ಯಕ್ಷ ಜಿ ಬಿ ಪಾಟೀಲ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಸಂಘಟನಾ ಕಾರ್ಯದರ್ಶಿ ಪ್ರಭಾ ಬೆಳವಂಗಲ ನಿರೂಪಿಸಿದರು. ಡಾ. ಕೆ.ಎನ್. ನಾಗೇಶ್, ಕೆ. ಎಸ್. ಮಂಜುನಾಥ್ ಕುವೆಂಪು ಗೀತೆಗಳು ಹಾಡಿದರು. ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ, ಹ.ರಾ. ಮಹೇಶ್, ಗೌಡತಿಯರ ಸೇನೆಯ ರಾಜ್ಯಾಧ್ಯಕ್ಷೆ ರೇಣುಕಮ್ಮ, ಸಿ.ಕೆ. ರಾಮೇಗೌಡ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.
ಚಂದ್ರಶೇಖರ ಸ್ವಾಮೀಜಿ, ಕೋಡಿಹಳ್ಳಿ ರಾಮಣ್ಣ, ಗುರುಶಾಂತ್, ರವೀಂದ್ರನಾಥ್ ಸಿರಿವರ, ರವಿಚಂದ್ರ, ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ನಗರ ಘಟಕದ ಅಧ್ಯಕ್ಷರಾದ ಪ್ರಕಾಶ್ ಮೂರ್ತಿ, ರಾಜಪ್ಪ ದಳವಾಯಿ, ಪಾಲನೆತ್ರ, ತಲಕಾಡು ಚಿಕ್ಕರಂಗೇಗೌಡ, ಬಿ.ಸಿ. ಬಸವರಾಜು, ಎಂ.ಎಸ್. ಮುತ್ತುರಾಜು ಪ್ರಕಾಶಕರಾದ ವಿಷಕಂಠೇಗೌಡ, ನಾಗೇಶ್ ಅರಳಕುಪ್ಪೆ, ನೀಲಕಂಠೇಗೌಡ, ಕೆ.ಬಿ. ಮಹದೇವಪ್ಪ, ಜಗದೀಶ್ ಜಾಣಜಾಣೆಯರು, ಬೈರೇಗೌಡ, ಬೆಟ್ಟೆಗೌಡ ಮುಂತಾದವರು ಉಪಸ್ಥಿತರಿದ್ದರು.