i
ಕಾಸು ಉಳಿದರೆ ಪುರುಷರು ಬಾರ್ಗೆ ಹೋದರೆ ಮಹಿಳೆಯರು ಮನೆಗೆ ಉಪ್ಪು, ಹುಳಿ, ತರಕಾರಿ ಖರೀದಿಸುತ್ತಾರೆ-ಗೀತಾ…
ಚಂದ್ರವಳ್ಳಿ ನ್ಯೂಸ್, ಕೋಲಾರ:
ಮಹಿಳೆಯರಿಗೆ ಸಾರಿಗೆ ಬಸ್ ನಲ್ಲಿ ಉಚಿತ ಪ್ರಯಾಣ ಕಲ್ಪಿಸಿರುವುದು ಉತ್ತಮ ಬೆಳವಣಿಗೆ ಮತ್ತು ಬದಲಾವಣೆ. ಕೋಲಾರದಿಂದ ಬೆಂಗಳೂರಿಗೆ, ಬೆಂಗಳೂರಿನಿಂದ ಕೋಲಾರಕ್ಕೆ ಉಚಿತ ಪ್ರಯಾಣದಿಂದ ಉಳಿಯುವ ಹಣದಲ್ಲಿ ಮಹಿಳೆಯರು ಮನೆಗೆ ಉಪ್ಪು, ಹುಳಿ, ತರಕಾರಿ ತೆಗೆದುಕೊಂಡು ಹೋಗುತ್ತಾರೆ ಎಂದು ಜನವಾದಿ ಮಹಿಳಾ ಸಂಘಟನೆ ರಾಜ್ಯ ಮುಖಂಡರಾದ ವಿ.ಗೀತಾ ಹೇಳಿದರು.
ಕೋಲಾರ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಸಂಘಟನೆಯ ಜಿಲ್ಲಾ ಸಮಿತಿಯಿಂದ ಸೋಮವಾರ ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾ, ಬಡ್ಡಿ ರಹಿತ 1ಲಕ್ಷ ದವರೆಗೆ ಸಾಲ ನೀಡುವಂತೆ ಒತ್ತಾಯಿಸಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿ, ಆದರೆ ಅದೇ ಕಾಸು ಉಳಿದರೆ ಪುರುಷರು ಏನು ಮಾಡುತ್ತಾರೆ? ಬಾರ್ಗೆ ಹೋಗುತ್ತಾರೆ. ಹಾಗಂತ ಎಲ್ಲಾ ಪುರುಷರು ಕೆಟ್ಟವರಲ್ಲ. ಬಸ್ಸಿನಲ್ಲಿ ಉಚಿತ ಪ್ರಯಾಣ ಶುರುವಾದ ಮೇಲೆ ಪತ್ನಿ ತನ್ನ ಕೈಗೆ ಸಿಗುತ್ತಿಲ್ಲವೆಂದು ವ್ಯಕ್ತಿಯೊಬ್ಬರು ಹೇಳುತ್ತಿದ್ದರು. ದೇಶದಲ್ಲಿ ಶೇ 80 ಕುಟುಂಬಗಳು ಮಹಿಳೆಯರಿಂದಲೇ ನಡೆಯುತ್ತಿವೆ ಎಂಬುದನ್ನು ಅಂಥವರು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಎಚ್ಚರಿಸಿದರು.
ದೇಶದ ಶೇ 80ರಷ್ಟು ಮಂದಿ ಪುರುಷರು ಬಾರ್ಗೆ ಹೋಗುತ್ತಾರೆ. ಅದನ್ನು ಮಾಧ್ಯಮಗಳು ತೋರಿಸುತ್ತಿವೆಯೇ? ಆದರೆ, ಮಹಿಳೆಯರಿಗೆ ಬಸ್ಸಿನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಸಿಕ್ಕಿರುವುದನ್ನು ಗೇಲಿ ಮಾಡಿ ತೋರಿಸಲಾಗುತ್ತಿದೆ. ದಿನ ಬಸ್ಸಿಗೆ ಹೋಗುತ್ತಿದ್ದಾರೆ ಎಂಬುದನ್ನು ತೋರಿಸುತ್ತಿದ್ದಾರೆ ಎಂದು ವಿ.ಗೀತಾ ಬೇಸರ ವ್ಯಕ್ತಪಡಿಸಿದರು.
ಯಾವುದೇ ಮನೆಯಲ್ಲಿ ಕೆಲಸ ಆರಂಭವಾಗುವುದೇ ಮಹಿಳೆಯರಿಂದ, ಬೆಳಿಗ್ಗೆ ಎದ್ದು ಸಗಣಿ ಬಳಿಯುವುದು, ಕಸ ಗುಡಿಸುವುದು, ಹಸು, ಕುರಿ ಮೇಯಿಸುವುದು ಮಹಿಳೆಯರು. ಈ ಸಮಾವೇಶಕ್ಕೆ ಬಂದಿರುವ ಶೇ 80 ಮಹಿಳೆಯರು ಮನೆಯ ಎಲ್ಲಾ ಕೆಲಸ ಮುಗಿಸಿ ಬಂದಿದ್ದಾರೆ. ಮತ್ತೆ ಕಾರ್ಯಕ್ರಮ ಮುಗಿಸಿ ಹೋಗಿ ಮನೆ ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದರು.
ಸಮಾವೇಶದಲ್ಲಿ ಜನವಾದಿ ಮಹಿಳಾ ಸಂಘಟನೆಯ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.