i
ಜನಸಾಮಾನ್ಯರ ಹಕ್ಕುಗಳನ್ನು ಕಾಪಾಡುವುದೇ ಸರ್ಕಾರದ ಕೆಲಸವಾಗಬೇಕೆ ವಿನಃ ಹೆದರಿಸಿ ದೌರ್ಜನ್ಯವೆಸಗುವುದಲ್ಲ-ದೀಪಕ್ ತಿಮ್ಮಯ್ಯ..
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜನಸಾಮಾನ್ಯರ ಹಕ್ಕುಗಳನ್ನು ಕಾಪಾಡುವುದೇ ಸರ್ಕಾರದ ಪರಮೋಚ್ಚ ಕೆಲಸವಾಗಬೇಕೆ ವಿನಃ ಹೆದರಿಸಿ ದೌರ್ಜನ್ಯವೆಸಗುವುದಲ್ಲ ಎಂದು ಹಿರಿಯ ಪತ್ರಕರ್ತ, ರಾಜಕೀಯ ವಿಶ್ಲೇಷಕ ದೀಪಕ್ ತಿಮ್ಮಯ್ಯ ಹೇಳಿದರು.
ಅಮೃತ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸಮೂಹ ಶಕ್ತಿ ಸಹಯೋಗದೊಂದಿದೆ ವೈದ್ಯರ ದಿನಾಚರಣೆ ಪ್ರಯುಕ್ತ ಶನಿವಾರ ಹಮ್ಮಿಕೊಳ್ಳಲಾಗಿದ್ದ ನಾಗರೀಕ ಜವಾಬ್ದಾರಿ ಎಂಬ ವಿಷಯ ಕುರಿತ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು.
ದೇಶ, ಸರ್ಕಾರ, ಸಂವಿಧಾನ, ಪ್ರಜಾಪ್ರಭುತ್ವ, ಗಣರಾಜ್ಯ ಎಂದರೆ ಬಹಳಷ್ಟು ಮಂದಿಗೆ ಏನು ಎನ್ನುವುದು ಇನ್ನು ಗೊತ್ತಿಲ್ಲ. ಸರ್ಕಾರವೆಂದರೆ ಪೊಲೀಸ್ ಅಷ್ಟೆ ಎಂದು ತಿಳಿದುಕೊಂಡಿರುವುದರಿಂದ ಜನ ಸಾಮಾನ್ಯರಲ್ಲಿ ಇನ್ನು ಭಯವಿದೆ. ಚುನಾವಣೆಯಲ್ಲಿ ನಿಂತು ಬಡವರು ಯಾರು ಗೆಲ್ಲುವಂತ ವಾತಾವರಣವಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ. ಪೊಲೀಸ್ ಠಾಣೆಗಳಲ್ಲಿ ರಕ್ಷಣೆಯಿಲ್ಲ. ನ್ಯಾಯಾಲಯಗಳಲ್ಲಿ ನ್ಯಾಯ ಸಿಗುತ್ತಿಲ್ಲ. ಓಡಾಡಲು ಸರಿಯಾದ ರಸ್ತೆಗಳಿಲ್ಲ ಎಂದು ಕೊರಗುವ ಬದಲು ಪ್ರಶ್ನಿಸುವ ಧೈರ್ಯ ಬೆಳೆಸಿಕೊಳ್ಳಬೇಕು. ಆಗಲೆ ಪ್ರಜಾಪ್ರಭುತ್ವ, ಗಣರಾಜ್ಯಕ್ಕೊಂದು ಅರ್ಥ ಬರುವುದು ಎಂದು ಯುವ ಸಮೂಹವನ್ನು ಎಚ್ಚರಿಸಿದರು.
ಭಾರತದಲ್ಲಿ ಸಂವಿಧಾನ ಬದಲಾವಣೆ ಮಾಡುವುದಾಗಿ ಕೆಲವರು ಹೇಳುತ್ತಿದ್ದಾರೆ. ಸಂವಿಧಾನವನ್ನು ರಕ್ಷಿಸಿದರೆ ಅದು ದೇಶವನ್ನು ರಕ್ಷಿಸುತ್ತದೆ. ಪ್ರತಿಯೊಬ್ಬ ನಾಗರೀಕನ ಗೌರವ, ಘನತೆ, ಹಕ್ಕು, ಸ್ವಾತಂತ್ರ್ಯವನ್ನು ಕಾಪಾಡುವುದೇ ಸಂವಿಧಾನದ ಮೂಲ ಆಶಯ. ಬೇರೆ ರಾಷ್ಟ್ರಗಳು ಅನುಕರಣೆ ಮಾಡುವಂತ ಸಂವಿಧಾನ ಜಗತ್ತಿನಲ್ಲಿ ಯಾವುದಾದರೂ ಇದ್ದರೆ ಅದು ಭಾರತದ ಸಂವಿಧಾನ. ನಮ್ಮ ದೇಶದ ಸಂವಿಧಾನ ಅಷ್ಟೊಂದು ಶಕ್ತಿಶಾಲಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಣವಿಲ್ಲದಿರುವುದು ನಿಜವಾಗಿಯೂ ಬಡತನವಲ್ಲ. ಮೌಲ್ಯ, ಜ್ಞಾನ, ಮಾನವೀಯತೆ ಯಾರಲ್ಲಿ ಇರುವುದಿಲ್ಲವೋ ಅವರೆ ಬಡವರು. ದೇಶದಲ್ಲಿ ಜನಸಂಖ್ಯೆ ಜಾಸ್ತಿಯಾಗುತ್ತಿದ್ದು, ಧಾರ್ಮಿಕ ಭಾವನೆ ಕೆರಳುತ್ತಿರುವುದರಿಂದ ಉದ್ವೇಗಕ್ಕೊಳಗಾಗುತ್ತಿದ್ದೇವೆ. ಸರಿ ತಪ್ಪನ್ನು ಕೇಳುವ ಗುಣವನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು. ಪ್ರಪಂಚದಲ್ಲಿ ಮಾತನಾಡುವುದೆಲ್ಲಾ ಮುಗಿದಿದೆ. ಕೆಲಸ ಮಾಡುವುದಷ್ಟೆ ಬಾಕಿ ಉಳಿದಿರುವುದು. ಸಮಾಜದಲ್ಲಿ ಜವಾಬ್ದಾರಿಯುತ ವ್ಯಕ್ತಿಗಳೆನಿಸಿಕೊಂಡವರು ಜನರಿಂದ ಯಾವುದೇ ಪ್ರತಿಫಲವನ್ನು ಬಯಸದೆ ಸಮಾಜ ಸೇವೆ ಮಾಡಬೇಕು. ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಘೋಷಿಸಿದ ಐದು ಉಚಿತ ಗ್ಯಾರೆಂಟಿಗಳನ್ನು ಕೊಡುವುದಕ್ಕೂ ವಿರೋಧ ಪಕ್ಷದವರು ಅಡ್ಡಿಪಡಿಸುತ್ತಿರುವುದು ಎಷ್ಟು ಸರಿ. ಅದಾನಿ, ಅಂಬಾನಿ ಎಷ್ಟು ಮುಖ್ಯವೋ ಅದೇ ರೀತಿ ಕಟ್ಟ ಕಡೆಯ ಬಡವನು ಕೂಡ ಸಮಾಜಕ್ಕೆ ಬೇಕು. ದುಡಿಯುವ ವರ್ಗವಿದ್ದರೇನೆ ಸಿರಿವಂತ ಐಷಾರಾಮಿಯಾಗಿ ಬದುಕುವುದು ಎಂದರು.
ಸೆಲ್ಕೋ ಸೋಲಾರ್ ಸಂಸ್ಥೆ ಏರಿಯಾ ಮ್ಯಾನೇಜರ್ ಮಂಜುನಾಥ ಭಾಗವತ್, ಸಮೂಹ ಶಕ್ತಿ ರಾಜ್ಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಕೆ.ಇ.ರವಿ, ಅಮೃತ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ವೀರೇಶ್ ವೇದಿಕೆಯಲ್ಲಿದ್ದರು.
ಆಯುರ್ವೇದಿಕ್ ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಸಿಬ್ಬಂದಿಯವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.