i
40 ವರ್ಷ ಸೇವೆಗೈದ ಅಂಚೆ ಮಾಸ್ಟರ್ ಮಲ್ಲೇಶ್ ಸಾಧನೆ ಪ್ರಶಂಸನಿಯ…
ಚಂದ್ರವಳ್ಳಿ ನ್ಯೂಸ್, ತುಮಕೂರು:
ಕಳೆದ 40 ವರ್ಷಗಳಿಂದ ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದ ಅಂಚೆ
ಮಾಸ್ಟರ್ ಮಲ್ಲೇಶ್ರವರ ಸಾಧನೆ ಪ್ರಶಂಸನಿಯ ಎಂದು ವಾಣಿಜ್ಯೋದ್ಯಮಿ ಆರ್.ಸಿ. ಆದಿರಾಜು ನುಡಿದರು.
ಅವರು ತುಮಕೂರು ನಗರದ ಟೌನ್ಹಾಲ್ ಸರ್ಕಲ್ ಬಳಿ ಇರುವ ಸಂಪಿಗೆ ಕಂಫರ್ಟ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಸರಳ ವ್ಯಕ್ತಿತ್ವದ ಮಲ್ಲೇಶ್ರವರು ಅಂಚೆ ಮಾಸ್ಟರ್ ಆಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾದ ಹಿನ್ನೆಲೆಯಲ್ಲಿ ಅಭಿನಂದಿಸಿ ಮಾತನಾಡುತ್ತಾ, ಸ್ನೇಹಜೀವಿಯಾದ ಮಲ್ಲೇಶ್ ಅವರ ಸ್ವಭಾವ ಹಾಗೂ ಸಲಹೆಗಳನ್ನು ಕೊಂಡಾ ಡಿದ ಆರ್ಸಿ ಆದಿರಾಜು, ನಿವೃತ್ತಿ ಜೀವನ ಸಂತೋಷವಾಗಿರಲಿ ಎಂದು ಶುಭ ಹಾರೈಸಿದರು. ಅಭಿನಂದನೆ ಮತ್ತು ಔತಣಕೂಟದ ವ್ಯವಸ್ಥೆ ಮಾಡಿದ್ದ ಬೆಸ್ಕಾಂ ಇಲಾಖೆಯ ನಿವೃತ್ತ ಅಧಿಕಾರಿ ಪಿ.ಎಂ. ಪ್ರಸನ್ನ ಕುಮಾರ್ ಮಾತನಾಡಿ ವಾಕಿಂಗ್ ಸ್ನೇಹಿತರ ಗುಂಪಿನಲ್ಲಿ ಕ್ರಿಯಾಶೀಲರಾಗಿದ್ದ ಮಲ್ಲೇಶ್ ರವರು ಸದಾ ಹಸನ್ಮುಖಿ ಜೊತೆಗೆ ಎಲ್ಲರೊಂದಿಗೆ ಬೆರೆತು ನಗಿಸುತ್ತಿದ್ದು ಬೆಲೆಕಟ್ಟಲಾಗದ ಕ್ಷಣಗಳು ಎಂದು ಮೆಲುಕು ಹಾಕಿದರು.
ಹಿರಿಯ ವಕೀಲರಾದ ರಘುನಾಥ್ ತಮ್ಮ ಅನಿಸಿಕೆಗಳನ್ನು ತಿಳಿಸುತ್ತಾ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಪ್ರಾಮಾಣಿಕವಾಗಿ ಗ್ರಾಹಕರಿಗೆ ಅತಿ ಶೀಘ್ರವಾಗಿ ಸೇವಾ ಮನೋಭಾವದಿಂದ ಕೆಲಸ ಮಾಡಿದ ದಿನಗಳನ್ನು ನಾನು ಹತ್ತಿರದಿಂದ ಬಲವನಾಗಿದ್ದೇನೆ ಎಂದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಮಧುಗಿರಿ ಟೈಮ್ಸ್ ಪತ್ರಿಕೆ ಸಂಪಾದಕ ಪಿ.ಎಂ ಉಮೇಶ್ ಮಾತನಾಡಿ ಮಲ್ಲೇಶ್ ರವರು ನಗುಮುಖದಿಂದಲೇ ಎಲ್ಲರನ್ನು ಆಕರ್ಷಿಸಿ ಎಲ್ಲರ ಮನಸ್ಸು ಗೆದ್ದಿದ್ದು ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ. ಮಲ್ಲೇಶ್ರವರ ನಿವೃತ್ತ ಜೀವನ ಮುಂದಿನ ದಿನಗಳಲ್ಲಿ ಉಜ್ವಲವಾಗಿರಲಿ ಎಂದು ಶುಭ ಹಾರೈಸಿದರು.
ಉಪಸ್ಥಿತರಿದ್ದ ಸತ್ಯನಾರಾಯಣ,ರಂಗೇಗೌಡ, ಪ್ರಕಾಶ್, ವಿಶ್ವಣ್ಣ, ದ್ವಾರಕನಾಥಶೆಟ್ಟಿ, ಗೋವಿಂದ್ ರೆಡ್ಡಿ, ಶ್ರೀನಿವಾಸ್, ಉದಯ್, ಮಹೇಶ್, ಪ್ರಭಾಕರ್, ನಿವೃತ್ತರಾದ ಮಲ್ಲೇಶ್ಯ್ಯನವರ ಒಡನಾಟ ಇಷ್ಟು ದಿನಗಳ ಸಂಬಂಧ ಅವರ ನಡವಳಿಕೆ ಎಲ್ಲವನ್ನು ಎಳೆ ಎಳೆಯಾಗಿ ಸಭೆಗೆ ತಿಳಿಸಿದರು.
ನಿವೃತ್ತ ಅಂಚೆ ಮಾಸ್ಟರ್ ಮಲ್ಲೇಶ್ರವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.
ಅಭಿನಂದನಾ ಸಮಾರಂಭ ಅತ್ಯಂತ ಸಂಭ್ರಮ ಸಡಗರದಿಂದ ಯಶಸ್ವಿಯಾಗಿ ನಡೆದು ಎಲ್ಲರ ಮನಸ್ಸಿಗೆ ಮುದನೀಡಿತು.
ನಂತರ ವಾಕಿಂಗ್ ಫ್ರೆಂಡ್ಸ್ ಬಳಗದ ಎಲ್ಲರಿಗೂ ಭೋಜನ ಕೂಟದ ವ್ಯವಸ್ಥೆ ಮಾಡಲಾಗಿತ್ತು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮಲ್ಲೇಶ್ರವರು ತಾವು ತೋರಿಸಿದ ಪ್ರೀತಿಗೆ ಕೃತಜ್ಞತೆಗಳನ್ನು ಸಲ್ಲಿಸಿ ಮುಂದಿನ ದಿನಗಳಲ್ಲಿ ಎಲ್ಲರ ಪ್ರೀತಿ ಸ್ನೇಹಕ್ಕೆ ಬೆಲೆ ಕೊಟ್ಟು ಎಲ್ಲರೂ ಸಂತೋಷವಾಗಿರುವಂತೆ ನಡೆದುಕೊಳ್ಳುವುದಾಗಿ ತಿಳಿಸಿದರು.
ನನ್ನ ವೃತ್ತಿ ಜೀವನದಲ್ಲಿ ಇಲಾಖೆ ಮತ್ತು ಸಾರ್ವಜನಿಕರಿಗೆ ಯಾವುದೇ ರೀತಿಯ ಕಳಂಕ ತರದಂತೆ ಕರ್ತವ್ಯ ನಿರ್ವಹಿಸಿ ಎಲ್ಲರ ಪ್ರೀತಿಗೆ ಪಾತ್ರರಾಗಿ ನಿವೃತ್ತನಾಗಿರುವುದು ನನಗೆ ತುಂಬಾ ಸಂತೋಷ ತಂದಿದೆ.
ಸಾರ್ವಜನಿಕ ಜೀವನದಲ್ಲಿ ಸರ್ಕಾರದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವುದರ ಮೂಲಕ ಇಲಾಖೆ ಮತ್ತು ಸಾರ್ವಜನಿಕರ ಮೆಚ್ಚುಗೆ ಗಳಿಸಿದ್ದು ಸರಿ ಅಷ್ಟೇ. ಸ್ನೇಹಿತರ ವಿಶ್ವಾಸವು ಮುಂದಿನ ದಿನಗಳಲ್ಲಿ ನಮ್ಮ ಕುಟುಂಬದವರ ಮೇಲೆ ಇರಲಿ ಎಂದು ಆಶಿಸಿದರು.
ಇಷ್ಟೊಂದು ಆಸಕ್ತಿಯಿಂದ ಅಭಿನಂದನಾ ಸಮಾರಂಭ ಮಾಡಿದ ಸ್ನೇಹಿತರಿಗೆ ವಿಶೇಷವಾದ ಧನ್ಯವಾದಗಳು ಎಂದು ಮಲ್ಲೇಶ್ ರವರು ತಮ್ಮ ಭಾವುಕ ಮಾತುಗಳನ್ನಾಡಿ ಕೃತಜ್ಞತೆ ಸಲ್ಲಿಸಿದರು.