i
ಸ್ವಾಭಾವಿಕ ಮಳೆಯಾಗಬೇಕಾದರೆ ಹೆಚ್ಚು ಗಿಡ ಮರ ಬೆಳೆಸಿ-ಸಿಇಒ ಪ್ರಭು…
ಚಂದ್ರವಳ್ಳಿ ನ್ಯೂಸ್, ತುಮಕೂರು:
ಸ್ವಾಭಾವಿಕ ಮಳೆಯಾಗಬೇಕಾದರೆ ಹೆಚ್ಚು ಗಿಡ ಮರಗಳನ್ನು ಬೆಳೆಸುವುದರ ಜೊತೆಗೆ ಪರಿಸರವನ್ನು ಉಳಿಸಬೇಕು ಜೊತೆಗೆ ಅಂತರ್ಜಲವನ್ನು ಕಾಪಾಡಿಕೊಳ್ಳಬೇಕು. ಅಂತರ್ಜಲ ಸಂರಕ್ಷಣೆ ಬೇರೆಯಲ್ಲ ಮತ್ತು ಪರಿಸರ ಸಂರಕ್ಷಣೆ ಬೇರೆಯಲ್ಲ. ಆದರೆ ಇಂದು ಅಭಿವೃದ್ಧಿ ಹೆಸರಿನಲ್ಲಿ ಗಿಡ ಮರಗಳನ್ನು ನಾಶ ಮಾಡಲಾಗುತ್ತಿದ್ದು ಇದು ಆತಂಕಕಾರಿ ಬೆಳವಣಿಗೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಜಿ.ಪ್ರಭು ಅಭಿಪ್ರಾಯ ವ್ಯಕ್ತಪಡಿಸಿದರು.
ಕೇಂದ್ರೀಯ ಅಂತರ್ಜಲ ಮಂಡಳಿ, ನೈಋತ್ಯ ಪ್ರದೇಶ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಜಲಧರಗಳ ನಕಾಶಿಕೆ ಮತ್ತು ಅಂತರ್ಜಲ ಸಂರಕ್ಷಣೆ ಕುರಿತು ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಾ, ಭಾರತ ತನ್ನ ಸಾಂಪ್ರದಾಯಿಕ ಜೀವನ ಪದ್ದತಿ, ನೀರಿನ ಮಿತಬಳಕೆ ಮತ್ತು ಸಂರಕ್ಷಣಾ ಮೌಲ್ಯಗಳ ಮೂಲಕ ಸ್ವಸ್ಥ ಮತ್ತು ಸುಸ್ಥಿರ ಜೀವನಶೈಲಿಯನ್ನು ಪ್ರಚುರಗೊಳಿಸುವಲ್ಲಿ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.
ಕೋವಿಡ್ ಸಮಯದಲ್ಲಿ ಎಷ್ಟೇ ಹಣ ಕೊಟ್ಟರೂ ಸಕಾಲದಲ್ಲಿ ಆಕ್ಸಿಜನ್ ಲಭ್ಯವಾಗುತ್ತಿರಲಿಲ್ಲ. ಆದ್ದರಿಂದ ಮನೆಯ ಅಂಗಳದಲ್ಲಿ ಸಾಧ್ಯವಾದಷ್ಟು ಗಿಡಗಳನ್ನು ಬೆಳಸಿ ಎಂದರಲ್ಲದೇ, ತಮ್ಮ ವ್ಯಾಪ್ತಿಯಲ್ಲಿ ಹಸಿರೀಕರಣ ಮಾಡಬೇಕೆಂದು ತಿಳಿಸಿದರು.
ಸಾಮಾಜಿಕ ಅರಣ್ಯ ಇಲಾಖೆ ಹಾಗೂ ಪ್ರಾದೇಶಿಕ ಅರಣ್ಯ ಇಲಾಖೆಯು ಪ್ರತಿ ವರ್ಷ ಲಕ್ಷಾಂತರ ಸಸಿಗಳನ್ನು ನೆಡುತ್ತಿದ್ದಾರೆ. ಮೂರು ವರ್ಷ ಸಸಿಗಳನ್ನು ನೆಟ್ಟ ನಂತರ ಸಂರಕ್ಷಣೆ ಮಾಡಿದರೆ ನೆಟ್ಟ ಶೇಕಡಾ ೯೦ ರಷ್ಟು ಸಸಿಗಳು ಉಳಿಯುತ್ತವೆ ಎಂದು ಹೇಳಿದರು.
ಮಳೆನೀರನ್ನು ಸಂರಕ್ಷಣೆ ಮಾಡುವುದಕ್ಕಾಗಿ ಮಳೆನೀರು ಸಂಗ್ರಹಣಾ ವಿಧಾನಗಳನ್ನು ಬಳಸಿಕೊಂಡು ನೀರನ್ನು ಶೇಖರಿಸಿಕೊಂಡು ಆ ನೀರನ್ನು ಅಗತ್ಯ ಚಟುವಟಿಕೆಗಳಿಗೆ ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು. ಕೇಂದ್ರೀಯ ಅಂತರ್ಜಲ ಮಂಡಳಿಯ ಹಿರಿಯ ವಿಜ್ಞಾನಿ ಹೆಚ್.ಪಿ. ಜಯಪ್ರಕಾಶ್ ಪ್ರತಿಜ್ಞಾ ವಿಧಿ ಬೋಧಿಸಿದರು ಹಾಗೂ ವೀಣಾ ಆರ್ ಅಚ್ಯುತ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು, ಎನ್ಜಿಒ, ಸ್ವ ಸಹಾಯ ಸಂಘಗಳ ಪ್ರತಿನಿಧಿಗಳು ಹಾಗೂ ಪ್ರಗತಿಪರ ರೈತರು ಹಾಜರಿದ್ದರು.