i
ಸಹಕಾರ ಬ್ಯಾಂಕ್ ಅವ್ಯವಹಾರ ಸಿ.ಬಿ.ಐ ವಹಿಸಲು ಕ್ರಮ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ನಗರದ ಬಸವನಗುಡಿಯಲ್ಲಿರುವ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ನ ಅವ್ಯವಹಾರದ ಕುರಿತು ಬ್ಯಾಂಕಿಗೆ ಸಂಬಂಧಿಸಿದ ದಾಖಲೆಗಳನ್ನು ಆಂಗ್ಲ ಭಾಷೆಗೆ ಅನುವಾದಿಸಲು ಭಾಷಾಂತರಕಾರರಿಗೆ ನೀಡಲಾಗಿದೆ. 500 ಪುಟಗಳ ದಾಖಲೆಗಳು ಆಂಗ್ಲ ಭಾಷೆಗೆ ತರ್ಜುಮೆಗೊಂಡ ನಂತರ ಅಗತ್ಯ ಕ್ರಮ ಕೈಗೊಂಡು ಸಿ.ಬಿ.ಐ ಗೆ ವಹಿಸಲಾಗುವುದು ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ತಿಳಿಸಿದರು.
ವಿಧಾನಪರಿಷತ್ತಿನ ಕಲಾಪದ ವೇಳೆ ವಿಧಾನ ಪರಿಷತ್ತಿನ ಸದಸ್ಯರಾದ ಯು.ಬಿ. ವೆಂಕಟೇಶ್ ಅವರು ನಿಯಮ 72ರಡಿ ಮಂಡಿಸಿದ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಸಚಿವರು, ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ನ ಅವ್ಯವಯಹಾರದ ಪ್ರಮಾಣವು ಅಗಾಧವಾಗಿದ್ದು ಬ್ಯಾಂಕಿನ ಪದಾಧಿಕಾರಿಗಳು, ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿಯವರು ಸಾರ್ವಜನಿಕರಿಂದ ಅಪಾರ ಪ್ರಮಾಣದಲ್ಲಿ ಹಣವನ್ನು ಠೇವಣಿ ರೂಪದಲ್ಲಿ ಸಂಗ್ರಹಿಸಿ ವಾಪಸ್ಸು ನೀಡದೇ ವಂಚನೆ ಎಸಗಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುವ ಅಗತ್ಯತೆ ಇರುವುದರಿಂದ ಈ ಪ್ರಕರಣದ ವಿಚಾರಣೆಯನ್ನು ಸಿ.ಬಿ.ಐ ಗೆ ವಹಿಸುವ ಬಗ್ಗೆ 17-01-2023 ರಂದು ಮಾನ್ಯ ಸಹಕಾರ ಸಚಿವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ನಿರ್ಣಯಿಸಲಾಯಿತು.
ಈ ಸಂಬಂಧ ನಿಬಂಧಕರಿಂದ ದಿನಾಂಕ: 09-02-2023ರಂದು ಸ್ವೀಕೃತವಾಗಿದ್ದ ಪ್ರಸ್ತಾವನೆಯನ್ನು ಪರಿಶೀಲಿಸಿ ಒಳಾಡಳಿತ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಒಳಾಡಳಿತ ಇಲಾಖೆಯು ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ / ದಾಖಲೆಗಳನ್ನು ಆಂಗ್ಲ ಭಾಷೆಯಲ್ಲಿ ಸಲ್ಲಿಸುವಂತೆ ಸೂಚಿಸಿದ್ದರ ಹಿನ್ನೆಲೆಯಲ್ಲಿ ದಿನಾಂಕ: 04-05-2023 ರಂದು ಸಂಪೂರ್ಣ ದಾಖಲೆಗಳನ್ನು ಆಂಗ್ಲ ಭಾಷೆಗೆ ಅನುವಾದಿಸಿಕೊಡುವಂತೆ ಭಾಷಾಂತರ ಇಲಾಖೆಯ ನಿರ್ದೇಶಕರಿಗೆ ನಿಬಂಧಕರ ಹಂತದಲ್ಲಿ ಪತ್ರ ಬರೆಯಲಾಗಿತ್ತು. ಭಾಷಾಂತರ ಇಲಾಖೆ ನಿರ್ದೇಶಕರು ಭಾಷಾಂತರಕ್ಕೆ ನೀಡಿರುವ ದಾಖಲೆಗಳು ಆಗಾಧವಾಗಿದ್ದು ಮಾನವ ಸಂಪನ್ಮೂಲದ ಕೊರತೆ ಇರುವುದರಿಂದ, ಕರ್ನಾಟಕ ಸರ್ಕಾರ ಅಧಿಸೂಚಿಸಿರುವ ಭಾಷಾಂತರಕಾರರನ್ನು ಸಂಪರ್ಕಿಸಿ, ಭಾಷಾಂತರಕ್ಕೆ ತಗಲುವ ಖರ್ಚುವೆಚ್ಚಗಳನ್ನು ತಮ್ಮ ಇಲಾಖೆಯೇ ಭರಿಸಿ ಅನುವಾದ ಕಾರ್ಯ ಮಾಡಿಕೊಳ್ಳಬೇಕೆಂದು ಹಿಂಬರಹ ನೀಡಿರುತ್ತಾರೆ. ದಾಖಲೆಗಳು ಆಂಗ್ಲ ಭಾಷೆಗೆ ಅನುವಾದ ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.