i
ವಾಣಿ ವಿಲಾಸ ಸಕ್ಕರೆ ಕಾರ್ಖಾನೆ ಮಾರಾಟವೋ ಅಥವಾ ಪುನಶ್ಚೇತನವೋ?..
ವರದಿ-ಹೆಚ್.ಸಿ.ಗಿರೀಶ್, ಹರಿಯಬ್ಬೆ.
ಎಂ.ಎಲ್.ಗಿರಿಧರ, ಮಲ್ಲಪ್ಪನಹಳ್ಳಿ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಎತ್ತು ಎರೆಗೆ ಎಳೆದರೆ ಕೋಣೆ ನೀರಿಗೆ ಎಳೆಯಿತು ಎನ್ನುವ ಗಾದೆ ಮಾತು ಹಿರಿಯೂರು ವಾಣಿ ವಿಲಾಸ ಸಕ್ಕರೆ ಕಾರ್ಖಾನೆಗೆ ಸರಿಯಾಗಿ ಹೊಲಿಕೆ ಆಗಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗೆಲ್ಲ ಕಾರ್ಖಾನೆ ರೋಗಗ್ರಸ್ತದ ನೆಪ ಹೇಳಿ ಮಾರಾಟಕ್ಕೆ ಹುನ್ನಾರ ನಡೆಯುತ್ತಿತ್ತು.
ಪ್ರಸಕ್ತ ಅವಧಿ ಅಂದರೆ 2023-2028ರ ಅವಧಿಯಲ್ಲಿ ವಾಣಿ ವಿಲಾಸ ಸಕ್ಕರೆ ಕಾರ್ಖಾನೆ ಮಾರಾಟ ವಾಗುತ್ತೋ ಅಥವಾ ಪುನಶ್ಚೇತನವಾಗುತ್ತೋ ಎನ್ನುವುದನ್ನು ಕಾದು ನೋಡಬೇಕಿದೆ.
ರಾಜ್ಯದ ಇತಿಹಾಸವನ್ನು ಒಮ್ಮೆ ಅವಲೋಕನ ಮಾಡಿ ನೋಡಿದರೆ ಜೆಡಿಎಸ್ ಅಧಿಕಾರಕ್ಕೆ ಬಂದಾಗ ಪುನಶ್ಚೇತನಗೊಂಡಿರುವ ಅಂಶ ಬೆಳಕಿಗೆ ಬಂದಿದೆ. ಆದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಹಿರಿಯೂರು ವಾಣಿ ಸಕ್ಕರೆ ಕಾರ್ಖಾನೆ ಸ್ಥಗಿತ ಆಗುವುದರ ಜೊತೆಯಲ್ಲಿ ಮಾರಾಟಕ್ಕೂ ಹುನ್ನಾರ ನಡೆದಿತ್ತು ಎನ್ನುವುದು ಹಳೆಯ ವಿಷಯವಾಗಿದೆ.
ಹಿರಿಯೂರು ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆದ್ದು ಶಾಸಕ ಮತ್ತು ಸಚಿವರಾಗಿ ಈ ಹಿಂದೆ ಅಧಿಕಾರ ನಡೆಸಿದಾಗಲೆಲ್ಲಾ ಹಿರಿಯೂರಿನ ವಾಣಿ ವಿಲಾಸ ಸಕ್ಕರೆ ಕಾರ್ಖಾನೆ ಸ್ಥಗಿತಗೊಂಡಿರುವುದು ದಾಖಲೆಗಳಿಂದ ಗೋಚರಿಸುತ್ತಿದೆ. ರಾಜ್ಯದಲ್ಲಿ ಸದ್ಯ ಕಾಂಗ್ರೆಸ್ ಆಡಳಿತದ ಸರ್ಕಾರ ಇದ್ದು ಹಿಂದಿನ ಸಂಪ್ರದಾಯ ಈಗ ಪುನಾರಾವರ್ತಿ ಆಗಿದಿದ್ದರೆ ಹಿರಿಯೂರು ಸೇರಿದಂತೆ ಜಿಲ್ಲೆಯ ಜನರ ಪುಣ್ಯವಾಗಿದೆ.
1971-72ರಲ್ಲಿ ಪಕ್ಷತೀತವಾಗಿ ಎಲ್ಲರೂ ಒಗ್ಗೂಡಿ ವಾಣಿ ವಿಲಾಸ ಸಕ್ಕರೆ ಕಾರ್ಖಾನೆ ಆರಂಭಿಸಲಾಗಿತ್ತಾದರೂ ಕಾರ್ಖಾನೆಯ ಸ್ಥಗಿತ ಮತ್ತು ರೋಗಗ್ರಸ್ತ ಹಾಗೂ ಪುನಶ್ಚೇತನ ಅವಧಿ ಕಾರ್ಯ ಮಾತ್ರ ಕಾಂಗ್ರೆಸ್-ಜೆಡಿಎಸ್ ಮಧ್ಯ ತಳಕು ಹಾಕಿಕೊಂಡಿದೆ.
1982ರಲ್ಲಿ ತೀವ್ರ ಬರದಿಂದಾಗಿ ವಾಣಿ ವಿಲಾಸ ಸಾಗರದಲ್ಲಿ ನೀರಿನ ಅಲಭ್ಯತೆ, ಆಡಳಿತ ಮಂಡಳಿಯ ವೈಫಲ್ಯ ಮತ್ತಿತರ ಕಾರಣಗಳಿಂದ ಕಾರ್ಖಾನೆ ಸ್ಥಗಿತಗೊಂಡಿತು. ಆಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿತ್ತು. ವೀರೇಂದ್ರ ಪಾಟೀಲ್ ಮುಖ್ಯಮಂತ್ರಿಯಾಗಿದ್ದ ಸಂಪುಟದಲ್ಲಿ ಹಿರಿಯೂರು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಕೆ.ಎಚ್.ರಂಗನಾಥ್ ಸಚಿವರಾಗಿದ್ದರು. ಆದರೆ ಅವರು ಕಾರ್ಖಾನೆ ಪುನಶ್ಚೇತನಕ್ಕೆ ಅಷ್ಟಾಗಿ ಒತ್ತು ನೀಡಲಿಲ್ಲ ಎನ್ನುವ ಆರೋಪ ಕೇಳಿ ಬಂದಿತ್ತು.
1994 ರಲ್ಲಿ ಅಧಿಕಾರಕ್ಕೆ ಬಂದ ಜೆಡಿಎಸ್(ಜನತಾ ಪರಿವಾರ) ವಾಣಿ ವಿಲಾಸ ಸಕ್ಕರೆ ಕಾರ್ಖಾನೆಯನ್ನು ಪುನರಾರಂಭ ಮಾಡಲು ಅಂದಿನ ಜೆಡಿಎಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಡಿ.ಮಂಜುನಾಥ್ ಬರಬೇಕಾಯಿತು. ಅಂದು ರಾಜ್ಯದ ಚುಕ್ಕಾಣಿ ಹಿಡಿದಿದ್ದ ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿಯಾಗಿದ್ದರು. ಆಗ ಹಿರಿಯೂರಿನಲ್ಲಿ ಜೆಡಿಎಸ್ ನಿಂದ ಡಿ. ಮಂಜುನಾಥ್ ಆಯ್ಕೆಯಾಗಿ ಸಚಿವರಾಗಿದ್ದುಕೊಂಡು ಕಾರ್ಖಾನೆ ಪುನರಾರಂಭ ಮಾಡಿಸಿದರು.
ಮತ್ತೆ 2002ರಲ್ಲಿ ವಾಣಿ ವಿಲಾಸ ಸಕ್ಕರೆ ಕಾರ್ಖಾನೆಯ ಕಬ್ಬು ಅರೆಯುವ ಕಾರ್ಯ ಸ್ಥಗಿತಗೊಂಡಿತು. 1-8-2002 ರಿಂದ ಕಾರ್ಖಾನೆಯನ್ನು ಸಂಪೂರ್ಣವಾಗಿ ಸಮಾಪನಗೊಳಿಸಲಾಯಿತು. ಆಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಎಸ್. ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದರು. ಅವರ ಸಂಪುಟದಲ್ಲಿ ಕೆ.ಎಚ್. ರಂಗನಾಥ್ ಮಂತ್ರಿಯೂ ಆಗಿದ್ದರು. ಆ ಸಮಯದಲ್ಲಿ ಕಾರ್ಖಾನೆ ಸಂಪೂರ್ಣ ಸ್ಥಗಿತಗೊಂಡು ಬೀಗ ಹಾಕಿದ್ದು ಬಿಟ್ಟರೆ ಮತ್ತೆ ಆರಂಭದ ಕನಸು ಕಾಣಲಿಲ್ಲ ಎನ್ನುವುದು ಜಿಲ್ಲೆಯ ಬಹುದೊಡ್ಡ ದುರಂತ ಎಂದರೆ ತಪ್ಪಾಗಲಾರದು.
ಅಂದು ಕಾರ್ಖಾನೆ ಸ್ಥಗಿತಕ್ಕೆ ಬರಗಾಲ, ಕಬ್ಬು ಬೆಳೆಯುವ ಪ್ರಮಾಣ ಕುಸಿತ, ವಾಣಿ ವಿಲಾಸ ಸಾಗರದಲ್ಲಿ ನೀರಿಲ್ಲ ಎನ್ನುವ ಕಾರಣ ನೀಡಲಾಯಿತು. ಆದರೆ, ಕಾರ್ಖಾನೆಯ ಜೊತೆಯಲ್ಲೇ? ಆರಂಭಿಸಿದ ಡಿಸ್ಟಿಲರಿಯನ್ನು ಅಕ್ರಮವಾಗಿ ಗುತ್ತಿಗೆ ನೀಡಿದ್ದರಿಂದ ಕಾರ್ಖಾನೆಗೆ ಡಿಸ್ಟಿಲರಿಯಿಂದ ಬರುವ ಆದಾಯಕ್ಕೆ ಕತ್ತರಿ ಬಿದ್ದಿತು. ಜನಪ್ರತಿನಿಧಿಗಳು ಸೂತ್ರಧಾರರಾದರೆ ಆಡಳಿತ ಮಂಡಳಿಯವರು ಪಾತ್ರಧಾರಿಗಳಾಗಿದ್ದರಿಂದ ಕಾರ್ಖಾನೆ ಸಂಪೂರ್ಣ ಸ್ಥಗಿತವಾಗಲು ಜನಪ್ರತಿನಿಧಿಗಳು, ಆಡಳಿತ ಮಂಡಳಿ ಕೆಲ ಅಧಿಕಾರಿಗಳು ಕಾರಣ ಎಂದು ಕಾರ್ಮಿಕ ಸಂಘದ ಮುಖಂಡರು ಈಗಲೂ ಆರೋಪಿಸುತ್ತಾರೆ.
2002ರಲ್ಲಿ ಡಿಸ್ಟಲರಿಯನ್ನು ಅಕ್ರಮವಾಗಿ 15 ವರ್ಷಗಳಿಗೆ ಗುತ್ತಿಗೆ ನೀಡಿದ ನಂತರ ಗುತ್ತಿಗೆ ರದ್ದು ಮಾಡುವಂತೆ ಕಾರ್ಮಿಕ ಸಂಘಟನೆಗಳು, ರೈತರು ಸಾಕಷ್ಟು ಪ್ರತಿಭಟನೆ ಮಾಡಿದರೂ ಏನು ಪ್ರಯೋಜನವಾಗಲಿಲ್ಲ. ಅಲ್ಲದೆ ಗುತ್ತಿಗೆ ನೀಡಿದ ಕಂಪನಿ ನೀಡಬೇಕಿದ್ದ ಬಾಕಿ ಹಣವನ್ನು ನೀಡಲಿಲ್ಲ. ಆ ಸಂದರ್ಭದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಮುಖಂಡರ, ನಾಯಕರ ಕೈಯಲ್ಲಿ ಕಾರ್ಖಾನೆ ಹಿಡಿತವಿತ್ತು, ಆಡಳಿತ ಮಂಡಳಿಯವರು ಕೇವಲ ಪಾತ್ರಧಾರಿಗಳಾಗಿದ್ದರು. ಕಾರ್ಖಾನೆ ಸ್ಥಗಿತಗೊಳ್ಳಲು ಇದು ಮೂಲ ಕಾರಣವಾಯಿತು ಎಂದು ಕಾರ್ಮಿಕ ಮುಖಂಡರು ಹಳೆಯ ದಿನಗಳನ್ನು ಸ್ಮರಿಸಿಕೊಳ್ಳುತ್ತಾರೆ.
ವಿಚಿತ್ರವಾದರೂ ಮಾರಾಟ ವಿಷಯ ಸತ್ಯ-
2013ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಚಿತ್ರದುರ್ಗಕ್ಕೆ ಮತಯಾಚನೆ ಮಾಡಲು ಆಗಮಿಸಿದ್ದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬರ ಪೀಡಿತ ಜಿಲ್ಲೆಗೆ ಭದ್ರಾ ನೀರು ನೀಡುವುದರ ಜೊತೆಯಲ್ಲಿ ರೋಗಗ್ರಸ್ತ ವಾಣಿ ಸಕ್ಕರೆ ಕಾರ್ಖಾನೆ ಪುನಶ್ಚೇತನ ಮಾಡುವ ಭರವಸೆ ನೀಡಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಆಂಜನೇಯ, ಹಿರಿಯೂರು ಕ್ಷೇತ್ರದ ಶಾಸಕ ಡಿ.ಸುಧಾಕರ್ ಕಾರ್ಖಾನೆ ಮಾರಾಟ ಮಾಡದೇ ಪುನಶ್ಚೇತನಗೊಳಿಸುವ ಬಗ್ಗೆ ಸಾಕಷ್ಟು ಸಲ ಹೇಳಿದ ನಂತರವೂ ಅಂದು ಕಾರ್ಖಾನೆ ಮಾರಾಟದ ಆದೇಶ ಹೊರಬಿದ್ದಿದ್ದನ್ನು ನಾವು ಸ್ಮರಿಸಬಹುದಾಗಿದೆ.
2023ರಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿದ್ದಾರೆ. ಸುಧಾಕರ್ ಅವರು ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ.
ಇಂತಹ ಸಂದರ್ಭದಲ್ಲಿ ಸಚಿವ ಡಿ.ಸುಧಾಕರ್ ಅವರು ವಾಣಿ ವಿಲಾಸ ಸಕ್ಕರೆ ಕಾರ್ಖಾನೆಯನ್ನು ಮಾರಾಟ ಮಾಡುತ್ತಾರೋ ಅಥವಾ ಪುನಶ್ಚೇತನ ಮಾಡುತ್ತಾರೋ ಕಾದು ನೋಡಬೇಕಿದೆ.
ನಿಕಟಪೂರ್ವ ಶಾಸಕರಾದ ಕೆ.ಪೂರ್ಣಿಮಾ ಶ್ರೀನಿವಾಸ್ ಅವರು ಸಚಿವರಲ್ಲದಿದ್ದರೂ ಶಾಸಕರಾಗಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿ ಗಮನ ಸೆಳೆದಿದ್ದರು. ಈಗ ಶಾಸಕರಾಗಿ ಡಿ.ಸುಧಾಕರ್ ಆಯ್ಕೆಯಾಗಿದ್ದಾರೆ. ಜೊತೆಯಲ್ಲಿ ಸಂಪುಟ ದರ್ಜೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಈಗ ಸಚಿವರ ಕೈಯಲ್ಲಿ ಎಲ್ಲ ರೀತಿಯ ಅಧಿಕಾರ ಇದೆ. ಈ ಅಧಿಕಾರ ಬಳಸಿಕೊಂಡು ವಾಣಿ ವಿಲಾಸ ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನ ಮಾಡಿದರೆ ನೂರಾರು ಯುವಕರಿಗೆ ಉದ್ಯೋಗ ದೊರೆಯಲಿದೆ.
ಇತಿಹಾಸದಲ್ಲಿ 2ನೇ ಬಾರಿಗೆ ವಾಣಿ ವಿಲಾಸ ಸಾಗರ ಡ್ಯಾಂ ಭರ್ತಿಯಾಗಿದೆ. ಡ್ಯಾಂನಲ್ಲಿ ಇಂದು ಕೂಡಾ 125 ಅಡಿಗಿಂತ ಹೆಚ್ಚಿನ ನೀರು ಇದೆ. ಜೊತೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಅಡಿ ವಿವಿ ಸಾಗರ ಡ್ಯಾಂಗೆ ಪ್ರತಿ ವರ್ಷ 2 ಟಿಎಂಸಿ ನೀರು ಹರಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ವಾಣಿ ವಿಲಾಸ ಸಕ್ಕರೆ ಕಾರ್ಖಾನೆ ಪುನಶ್ಚೇನ ಮಾಡಿದರೆ ಪ್ರತ್ಯಕ್ಷ-ಪರೋಕ್ಷವಾಗಿ ಸಾವಿರಾರು ಬಡ ಕುಟುಂಬಗಳಿಗೆ ಅನುಕೂಲವಾಗಲಿದೆ.
ವಿವಿ ಕಾರ್ಖಾನೆ ಆಸ್ತಿ- ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ಮಧ್ಯ ಭಾಗದ ರಾಷ್ಟ್ರೀಯ ಹೆದ್ದಾರಿ-48 ಮತ್ತು ರಾಷ್ಟ್ರೀಯ ಹೆದ್ದಾರಿ-19ಕ್ಕೆ ಹೊಂದಿಕೊಂಡಂತೆ 270 ಎಕರೆ ಜಾಗದಲ್ಲಿ ವಿವಿ ಸಕ್ಕರೆ ಕಾರ್ಖಾನೆಯನ್ನು ಇದ್ದು ನೂರಾರು ಕೋಟಿ ರೂ. ಮೌಲ್ಯ ಹೊಂದಿದೆ. ಜಿಲ್ಲೆಯಲ್ಲಿ ಐಐಎಸ್ಸಿ, ಡಿಆರ್ಡಿಓ, ಬಾರ್ಕ್ ನಂತ ಪ್ರತಿಷ್ಟಿತ ಸಂಸ್ಥೆಗಳು ನೆಲೆಗೊಂಡಿವೆ. ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲ್ವೆ ಮಾರ್ಗ ಅನುಷ್ಠಾನ ಹಂತದಲ್ಲಿದೆ. ಚೆನ್ನೈ-ಚಿತ್ರದುರ್ಗ, ಬೆಂಗಳೂರು ಮುಂಬೈ ಇಂಡಸ್ಟ್ರೀಯಲ್ ಕಾರಿಡಾರ್ ಯೋಜನೆಗಳು ಬರುವ ಹಂತದಲ್ಲಿದೆ. ಈಗಾಗಲೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಮೇಟಿಕುರ್ಕೆ ಗ್ರಾಮದ ಬಳಿಯ 1500 ಎಕರೆ ಜಾಗದಲ್ಲಿ ಕೈಗಾರಿಕಾ ಹಬ್ ನಿರ್ಮಾಣ ಮಾಡಲು ಭೂ ಸ್ವಾಧೀನ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ. ಈ ಸಂದರ್ಭದಲ್ಲಿ ವಾಣಿ ವಿಲಾಸ ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಿದರೆ ಚಿತ್ರದುರ್ಗ ಜಿಲ್ಲೆಯ ಅಭಿವೃದ್ಧಿ ಪಥವೇ ಬದಲಾಗಲಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಜಿಲ್ಲೆಯ ಎಲ್ಲ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಸಕ್ಕರೆ ಕಾರ್ಖಾನೆ ಪುನಶ್ಚೇತನ ಮಾಡಲು ಮುಂದಾಗಬೇಕಿದೆ.