i
ಕೆನಡಾದಿಂದ ಆಗಮಿಸಿ ಕರ್ನಾಟಕದ ಶಾಸಕರೊಬ್ಬರನ್ನು ಅಭಿನಂದಿಸಿದ ಕೆನಡಾ ಸಂಸದರು…
ವಿಶೇಷ ವರದಿ-
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಭಾಷೆ, ಕರ್ನಾಟಕ ಜನರ ಬಗ್ಗೆ ಸದಾ ಪ್ರೀತಿ ಗೌರವ ಇಟ್ಟುಕೊಂಡಿರುವ ಅದರಲ್ಲೂ ಕೆನಡಾ ದೇಶದ ಸಂಸತ್ ನಲ್ಲಿ ತನ್ನ ಮಾತೃ ಭಾಷೆ ಕನ್ನಡದಲ್ಲಿ ಮಾತನಾಡುವ ಮೂಲಕ ಜಗತ್ತಿಗೆ ಮಾದರಿಯಾದ ಕೆನಡಾ ದೇಶದ ಸಂಸದ ಶ್ರೀಚಂದ್ರ ಆರ್ಯ ಅವರು ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಶಿರಾ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ಬಿ.ಜಯಚಂದ್ರರವರನ್ನು ಬೆಂಗಳೂರಿನ ನಿವಾಸದಲ್ಲಿ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿ ಶುಭ ಕೋರಿದರು.
ಇದಕ್ಕೆ ಪ್ರತಿಯಾಗಿ ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಶಿರಾ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ಬಿ.ಜಯಚಂದ್ರರವರು ಕೆನಡಾ ದೇಶದ ಸಂಸದರು, ಹೆಮ್ಮೆಯ ಕನ್ನಡಿಗರು,ಶಿರಾ ತಾಲೂಕಿನ ದ್ವಾರಳು ಗ್ರಾಮದ ಶ್ರೀ ಚಂದ್ರ ಆರ್ಯರವರನ್ನು ಆತ್ಮೀಯವಾಗಿ ಸನ್ಮಾನಿ ಗೌರವಿಸಿದರು.
ಕೆನಡಾ ದೇಶದ ಸಂಸದ ಶ್ರೀಚಂದ್ರ ಆರ್ಯ ಅವರು ಸದ್ಯ ಭಾರತ ಪ್ರವಾಸದಲ್ಲಿದ್ದಾರೆ. ತನ್ನ ದೇಶ, ರಾಜ್ಯ, ಮಾತೃ ಭಾಷೆ ಎಂದು ಪ್ರಾಣ ಕೊಡುವ ಆರ್ಯ ಅವರು ತನ್ನ ಹುಟ್ಟೂರಿಗೂ ಆಗಮಿಸಿ ಸ್ನೇಹಿತರು, ಬಂಧು, ಬಳಗದವರೊಂದಿಗೆ ಆತ್ಮೀಯವಾಗಿ ಕಾಲ ಕಳೆಯುವ ಸಂದರ್ಭವನ್ನು ಎಂದೂ ಕಳೆದುಕೊಳ್ಳುವುದಿಲ್ಲ.
ಟಿ.ಬಿ.ಜಯಚಂದ್ರ ಅವರನ್ನು ಸನ್ಮಾನಿಸಿದ ಈ ಸಂದರ್ಭದಲ್ಲಿ ದ್ವಾರಳು ಗ್ರಾಮದ ಕಾಂತರಾಜು, ಬಡಮಾರನಹಳ್ಳಿ ಮಹೇಶ್, ಬೋರೇಗೌಡ, ಜಗನ್ನಾಥ್, ವಿಶ್ರಾಂತ ಕಾರ್ಯಪಾಲಕ ಅಭಿಯಂತರ ಗೋಪಿಕುಂಟೆ ಈಶ್ವರಯ್ಯ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಚಂದ್ರ ಆರ್ಯ ಯಾರು?…
ಜಾತಿ, ಮತ, ಪಂಥ, ಧರ್ಮಗಳ ಕಟ್ಟುಪಾಡುಗಳನ್ನು ಮೀರಿದ, ಮಾತೃ ಭಾಷಾ ಬಂಧನಕ್ಕೆ ಒಳಗಾದ ಹೆಮ್ಮೆಯ ಕನ್ನಡಿಗ, ಕೆನಡಾ ದೇಶದ ಸಂಸದ ಚಂದ್ರ ಆರ್ಯ ಅವರು.ಚಂದ್ರ ಆರ್ಯರಿಗೆ ಇರುವ ಕನ್ನಡ ಭಾಷೆಯ ಮೇಲಿನ ಪ್ರೀತಿಯಿಂದಾಗಿ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಗೆ ಭೇಟಿ ನೀಡಿ, ಕನ್ನಡಿಗರ ಅಸ್ಮಿತೆಯ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಪಡೆದುಕೊಂಡರು. ಅವರ ಜೊತೆಯಲ್ಲೇ ಅವರ ಪತ್ನಿ ಸಂಗೀತಾ ಗಾಯತ್ರಿ, ಸಹೋದರ ಶ್ರೀನಿವಾಸ್ ಸಹ ಸದಸ್ಯತ್ವ ಪಡೆದುಕೊಂಡು ಗಮನ ಸೆಳೆದಿದ್ದರು.
ಇದಕ್ಕಿಂತ ಮುಖ್ಯವಾಗಿ ಚಂದ್ರ ಆರ್ಯ ಅವರು ರಾಷ್ಟ್ರಕವಿ ಕುವೆಂಪು ಅವರು ಸದಾ ಹೇಳುತ್ತಿದ್ದ ಮಾತಿನಂತೆ ಎಲ್ಲಾದರೂ ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು’ ಅನ್ನೋ ಮಾತಿನಂತೆ ಅವರ ಸದಾ ಕನ್ನಡಿಗರಾಗಿದ್ದಾರೆ. ಮಾತೃಭಾಷೆಯ ಮೇಲೆ ಅಪಾರ ಅಭಿಮಾನ, ಪ್ರೀತಿ ಇದೆ. ಉಳ್ಳವರು ಎಲ್ಲೇ ಹೋದರೂ ಮಾತೃ ಭಾಷೆ ಕನ್ನಡದ ಹಿರಿಮೆ ಸಾರುತ್ತಿರುತ್ತಾರೆ. ವಿಶೇಷವಾಗಿ ಕೆನಡಾ ದೇಶದ ಪಾರ್ಲಿಮೆಂಟ್ನಲ್ಲಿ ಕನ್ನಡಿಗರೊಬ್ಬರು ಮಾತೃ ಭಾಷೆ ಕನ್ನಡವನ್ನು ಮಾತನಾಡುವ ಮೂಲಕ ಕನ್ನಡ ಭಾಷೆಯ ಕಂಪನ್ನು ಹೊರಜಗತ್ತಿನಲ್ಲಿ ಪಸರಿಸಿ ಸಮಸ್ತ ಕನ್ನಡಿಗರ ಹೃದಯ ಗೆದ್ದಿದ್ದಾರೆ.ಕೆನಡಾ ದೇಶದ ಪಾರ್ಲಿಮೆಂಟ್ ಸಂಸದರಾಗಿರುವ ಚಂದ್ರ ಆರ್ಯ ಅವರು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ದ್ವಾರಾಳು ಗ್ರಾಮದವರು ಎನ್ನುವುದು ವಿಶೇಷ.
ಕೆನಡಾ ದೇಶದ ಸಂಸತ್ ನಲ್ಲಿ ಆರ್ಯ ಏನು ಮಾತನಾಡಿದರು?..
ಮಾನ್ಯ ಸಭಾಪತಿ ಅವರೇ, ನನ್ನ ಮಾತೃ ಭಾಷೆ ಕನ್ನಡದಲ್ಲಿ ಕೆನಡಾ ದೇಶದ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ಸಿಕ್ಕಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ. ಭಾರತ ದೇಶದ ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಸಿರಾ ತಾಲೂಕಿನ ದ್ವಾರಾಳು ಗ್ರಾಮದ ವ್ಯಕ್ತಿಯೊಬ್ಬ ಕೆನಡಾ ಸಂಸತ್ ಸದಸ್ಯನಾಗಿ ಆಯ್ಕೆಯಾಗಿ ಕನ್ನಡದಲ್ಲಿ ಮಾತನಾಡುವುದು ಸುಮಾರು 5 ಕೋಟಿ ಕನ್ನಡಿಗರಿಗೆ ಹೆಮ್ಮೆಯ ವಿಚಾರವಾಗಿದೆ. ಕೆನಡಾ ದೇಶದ ಕನ್ನಡಿಗರು 2018ನೇ ಇಸವಿಯಲ್ಲಿ ಕೆನಡಾದ ಈ ಸಂಸತ್ನಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿದರು. ರಾಷ್ಟ್ರಕವಿ ಕುವೆಂಪು ಬರೆದಿರುವ ಮತ್ತು ನಟಸಾರ್ವಭೌಮ ಡಾ.ರಾಜ್ಕುಮಾರ್ ಹಾಡಿರುವ ಭಾವಗೀತೆಯ ಕೆಲವು ಪದಗಳೊಂದಿಗೆ ನನ್ನ ಹೇಳಿಕೆಯನ್ನು ಮುಗಿಸುತ್ತಿದ್ದೇನೆ. ಎಲ್ಲಾದರೂ ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು. ಧನ್ಯವಾದಗಳು ಸಭಾಪತಿ ಎಂದು ಕನ್ನಡದಲ್ಲಿ ಭಾಷಣ ಮಾಡಿ ಇಡೀ ಕನ್ನಡಿಗರು ಮತ್ತು ಕನ್ನಡ ಭಾಷೆಯ ಹಿರಿಮೆಯನ್ನು ಹೆಚ್ಚಿಸಿದ ಅತ್ಯಂತ ಸರಳ, ಸ್ನೇಹ ಜೀವ ಚಂದ್ರ ಆರ್ಯ.
ಎಷ್ಟನೇ ಬಾರಿ ಆಯ್ಕೆಯಾದ ಚಂದ್ರ ಆರ್ಯ..ಕೆನಡಾ ದೇಶದ ಲಿಬರಲ್ ಪಾರ್ಟಿಯ ರಾಜಕಾರಣಿಯಾದ ಚಂದ್ರ ಆರ್ಯ ಅವರು 2015ರ ಫೆಡರಲ್ ಚುನಾವಣೆಯಲ್ಲಿ ಹೌಸ್ ಆಫ್ ಕಾಮನ್ಸ್ನಲ್ಲಿ ನೇಪಿಯನ್ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದರು. 2019ರಲ್ಲಿ ಪುನರಾಯ್ಕೆಯಾದ ಅವರು ಪ್ರಸ್ತುತ ಅಂತರಾಷ್ಟ್ರೀಯ ಸ್ಥಾಯಿ ಸಮಿತಿಯ ಸದಸ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಅವಕಾಶ ಸಿಕ್ಕಾಗಲೆಲ್ಲ ದೂರದ ಕೆನಡಾದಿಂದ ಹುಟ್ಟೂರಿಗೆ ಆಗಮಿಸಿ ಸ್ನೇಹಿತರು, ಕುಟುಂಬದರೆಂದು ಸಂತೋಷದ ಕ್ಷಣಗಳನ್ನು ಕಳೆಯುವುದು ಎಂದರೆ ಅವರಿಗೆ ಅಲ್ಲಿಲ್ಲದ ಪ್ರೀತಿ. ಈಗ ಅವರು ಸ್ವಂತ ಕ್ಷೇತ್ರದ ಶಿರಾ ಶಾಸಕ ಟಿ.ಬಿ.ಜಯಚಂದ್ರ ಅವರನ್ನ ಅಭಿನಂದಿಸಲು ದೂರದ ಕೆನಡಾದಿಂದ ಆಗಮಿಸಿ ಅಭಿನಂದಿಸಿರುವುದು ವಿಶೇಷವಾಗಿದೆ.