i
ಗೊಲ್ಲರ ಹಟ್ಟಿ ಪ್ರಕರಣದಲ್ಲಿ ಪತಿ ಮತ್ತು ತಂದೆ ವಿರುದ್ಧ ಎಫ್ಐಆರ್ ದಾಖಲು…
ಚಂದ್ರವಳ್ಳಿ ನ್ಯೂಸ್, ತುಮಕೂರು:
ತುಮಕೂರು ಜಿಲ್ಲೆಯ ಬೆಳ್ಳಾವಿ ಹೋಬಳಿಯ ಮಲ್ಲೇನಹಳ್ಳಿ ಸಮೀಪದ ಗೊಲ್ಲರಹಟ್ಟಿಯಲ್ಲಿ ಮೌಢ್ಯಚಾರಣೆ ಕಾರಣದಿಂದ ಬಾಣಂತಿ ಮತ್ತು ಹಸುಗೂಸನ್ನು ಮನೆಯಿಂದ ಹೊರಗಿಟ್ಟು ಮಗು ಸಾವನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಪತಿ ಹಾಗೂ ಆಕೆಯ ತಂದೆ ವಿರುದ್ದ ಕರ್ನಾಟಕ ಅಮಾನವೀಯ ದುಷ್ಟ ಪದ್ಧತಿಗಳು ಹಾಗೂ ವಾಮಾಚಾರ ಇವುಗಳ ಪ್ರತಿಬಂಧ ಮತ್ತು ನಿರ್ಮೂಲನೆ ಕಾಯಿದೆ – 2017 ಹಾಗೂ ಐಪಿಸಿ ಸೆಕ್ಷನ್ 304, 34ರಡಿ ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಲ್ಲೇನಹಳ್ಳಿ ಗ್ರಾಮದ ಹೊರಗಿನ ಜಮೀನಿನಲ್ಲಿ ತಾತ್ಕಾಲಿಕ ಗುಡಿಸಲಿನಲ್ಲಿಟ್ಟ ಕಾರಣ ಸೂಕ್ತ ಆರೈಕೆ ಸಿಗದೆ ಜು.23 ರಂದು ನವಜಾತ ಶಿಶು ಮೃತಪಟ್ಟಿತ್ತು. ಈ ಪ್ರಕರಣ ರಾಜ್ಯಾದ್ಯಂತ ಟೀಕೆ ಚರ್ಚೆಗೊಳಗಾಗಿದ್ದು, ಮಗು ಸಾವಿನ ಘಟನೆಗೆ ಪತಿ ಸಿದ್ದೇಶ್ ಹಾಗೂ ಆಕೆಯ ತಂದೆ ಚಿಕ್ಕಹುಲಿಗೆಪ್ಪ ಕಾರಣವೆಂದು ತುಮಕೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಮೇಲ್ವಿಚಾರಕಿ ರಾಜೇಶ್ವರಿ ಅವರು ಗೊಲ್ಲರಹಟ್ಟಿಗೆ ಭೇಟಿ ನೀಡಿ ಜು.27ರಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ .
ಈ ಸಂಬಂಧ ಪ್ರಕರಣ ದಾಖಲಿಸುವಂತೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ನೂರುನ್ನೀಸ್ ರವರ ಸೂಚನೆ ಬಳಿಕ ಪ್ರಕರಣ ಸಂಬಂಧ ಪ್ರಥಮ ವರ್ತಮಾನ ವರದಿ ದಾಖಲಾಗಿದೆ.
ಕಾನೂನು ಅರಿವು:
ಜಿಲ್ಲೆಯ ತಂಬಾಗನ್ನ ಹಟ್ಟಿಯಲ್ಲಿ ಭೇಟಿ ನೀಡಿದ ಹಿರಿಯ ಸಿವಿಲ್ ನ್ಯಾಯಾಧೀಶರಾದ ನೂರುನ್ನೀಸ್ ರವರು ಕಾನೂನು ಅರಿವು ಮೂಲಕ ನಾಗರೀಕರಣ ಅಭಿಯಾನವನ್ನು ಹಮ್ಮಿಕೊಂಡು, ಪೋಕ್ಸೋ ಕಾಯ್ದೆ ಹಾಗೂ ಕರ್ನಾಟಕ ಅಮಾನವೀಯ ಕೆಟ್ಟ ಪದ್ಧತಿ ಪ್ರತಿಬಂಧ ಮತು ನಿರ್ಮೂಲನೆ ಅಧಿನಿಯಮ –2017 ಮೊದಲಾದ ಕಾನೂನು ಗಳ ಬಗ್ಗೆ ಗ್ರಾಮಸ್ಥರಲ್ಲಿ ಅರಿವು ಮೂಡಿಸಿದರು.
ತಂಬಾಗನ್ನ ಹಟ್ಟಿಯ ಮನೆಗಳಿಗೆ ಭೇಟಿ ನೀಡಿದ ನ್ಯಾಯಾಧೀಶರು ಬಾಣಂತಿ ಹಾಗೂ ಹಸುಗೂಸನ್ನು ಮನೆಯಲ್ಲಿನ ಪ್ರತ್ಯೇಕ ಕೊಠಡಿಯಲ್ಲಿರುವುದು ಕಂಡು ಮಾತನಾಡಿಸಿ ಹರ್ಷ ವ್ಯಕ್ತಪಡಿಸಿ, ಇದೆ ರೀತಿ ಜನರಲ್ಲಿ ಮಾನವೀಯತೆಯ ಹಾಗೂ ಮೌಢ್ಯಚಾರಣೆ ವಿರುದ್ಧದ ಅರಿವು ಮೂಡಬೇಕು ಎಂದರು.
ಈ ಸಂದರ್ಭದಲ್ಲಿ ಗೊಲ್ಲ ಸಮುದಾಯದ ರಾಜ್ಯ ಅದ್ಯಕ್ಷರು, ಜಿಲ್ಲಾ ಅಧ್ಯಕ್ಷ, ಸಮುದಾಯದ ಚಲನ ಚಿತ್ರ ಸಂಗೀತಗಾರ ಮೋಹನ್, ತಹಶೀಲ್ದಾರ್, ಸ್ಥಳೀಯ ಜನ ಪ್ರತಿನಿಧಿಗಳು, ಪಂಚಾಯತ್ ಸದಸ್ಯರು ಹಾಗೂ ಊರಿನ ಮುಖಂಡರು, ಮತ್ತಿತರರು ಹಾಜರಿದ್ದರು.