i
ವರ್ಗಾವಣೆಗೆ ರೇಟ್ ಫಿಕ್ಸ್ ಮಾಡಿದ ಸಚಿವರು, ಸಚಿವರು ಹಣ ಪಡೆದಿಲ್ಲ ಎಂದು ದುಗ್ಗಮ್ಮ ದೇವಿ ಬಳಿ ಗಂಟೆ ಹೊಡೆಯಲಿ…
ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಕೆಲ ಸಚಿವರು ಸಹಕಾರ ಕೊಡುತ್ತಿಲ್ಲ, ಅನುದಾನಕ್ಕಾಗಿ ಮೂರನೇ ವ್ಯಕ್ತಿಯಿಂದ ಕಮಿಷನ್ ಕೇಳುತ್ತಿದ್ದಾರೆ ಎಂಬ ಆರೋಪ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಆಡಳಿತದಲ್ಲಿ ಸಂಪೂರ್ಣ ವೈಫಲ್ಯವಾಗಿದೆ. ಕಾಂಗ್ರೆಸ್ ನೈತಿಕ ಯೋಜನೆ ಮುಂದಿಟ್ಟುಕೊಂಡು ಅವರು ಅಧಿಕಾರಕ್ಕೆ ಬಂದಿಲ್ಲ. ಹಾಗಾಗಿ ಇವರಿಗೆ ಜನರ ಶಾಪ ತಟ್ಟುತ್ತದೆ. ಕೂಡಲೇ ಸರ್ಕಾರಬಿದ್ದು ಹೋಗುವುದರಲ್ಲಿ ಎರಡು ಮಾತಿಲ್ಲ ಎಂದರು.
ಇನ್ನು ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಅವರು ನನಗೆ ಸಿಎಂ ಮಾಡೋದು ಗೊತ್ತು, ಇಳಿಸೋದು ಗೊತ್ತು ಎನ್ನುವ ಮಾತು ಹೇಳುತ್ತಿದ್ದಾರೆ ಎಂದರೆ ಈ ಸರ್ಕಾರದ ಭವಿಷ್ಯ ಇನ್ನು ಕೆಲವೇ ದಿನಗಳು ಮಾತ್ರ ಎನ್ನುವುದು ಗೊತ್ತಾಗುತ್ತದೆ. ಇನ್ನು ಸರ್ಕಾರಿ ಅಧಿಕಾರಿಗಳ ವರ್ಗಾವಣೆಗೆ ಪ್ರತಿ ಮಂತ್ರಿ ಕೂಡ ಒಬ್ಬೊಬ್ಬ ಸಹಾಯಕರನ್ನು ನೇಮಕ ಮಾಡಿಕೊಂಡಿದ್ದಾರೆ. ಪಾಲಿಕೆ ಆಯುಕ್ತರು, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ಇಷ್ಟು, ಈ ತರ ಎಲ್ಲ ರೇಟು ಬೋರ್ಡ್ ಫಿಕ್ಸ್ ಮಾಡಿದ್ದಾರೆ. ಶಾಸಕರ ಯಾವ ಮಾತಿಗೂ ಬೆಲೆ ಇಲ್ಲ. ತಮ್ಮ ಕೆಲಸವಾಗದ 33 ಶಾಸಕರು ಮಂತ್ರಿಗಳ ವಿರುದ್ಧ ದೂರು ನೀಡಿದ್ದಾರೆ. ಹಾಗಾಗಿ ಈ ಸರ್ಕಾರ ಇನ್ನು ಕೆಲವೇ ದಿನಗಳಲ್ಲಿ ಅಂತ್ಯವಾಗಲಿದೆ ಎಂದರು.
5 ಗ್ಯಾರಂಟಿ ಘೋಷಣೆ ಮಾಡಿ, ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳ ಮೂಲಕ ಜನರಿಗೆ ಮೋಸ ಮಾಡುತ್ತಿದೆ. ಅವರ ಸುಳ್ಳು ಆಶ್ವಾಸನೆಗಳು ಒಂದೊಂದಾಗಿ ಬಿಡುಗಡೆಯಾಗುತ್ತಿವೆ. ಆಸ್ತಿ ನೋಂದಣಿ ಶುಲ್ಕ ಹೆಚ್ಚಳ, ಹಾಲಿನ ದರ ಹೆಚ್ಚಳ, ಮದ್ಯದ ದರ ಹೆಚ್ಚಳದ ಮೂಲಕ ಜನರನ್ನು ಸುಲಿಗೆ ಮಾಡಿ ಮತ್ತೆ ಜನರಿಗೆ ಕೊಡುವ ಮೂಲಕ ಮೋಸ ಮಾಡುತ್ತಿದೆ. ಇಂಥಹ ಸರ್ಕಾರ ತೊಲಗಬೇಕೆಂದು ಜನ ಶಾಪ ಹಾಕುತ್ತಿದ್ದಾರೆ ಎಂದರು.
ಆಟೋ ಮತ್ತು ಖಾಸಗಿ ಬಸ್ ಮಾಲಿಕರು ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ಬಂದಿದ್ದೇವೆ ಎಂದು ಹೇಳುತ್ತಿದ್ದಾರೆ. ಕೇವಲ ಹಾಲು ಮಾತ್ರವಲ್ಲ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿವೆ. ಜನ ಸಾಮಾನ್ಯರ ಬದುಕು ದುಸ್ತರವಾಗುತ್ತಿದೆ. ಈ ಎಲ್ಲ ಜನರ ಶಾಪ ತಟ್ಟಿ ರಾಜ್ಯ ಸರ್ಕಾರ ಇನ್ನು ಕೆಲವೇ ದಿನಗಳಲ್ಲಿ ಬಿದ್ದು ಹೋಗಲಿದೆ ಎಂದರು.
ಕಾಂಗ್ರೆಸ್ ನ ಜಿಲ್ಲಾ ಪ್ರದಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ ಭ್ರಷ್ಟಾಚಾರ ಸಂಬಂಧ ನಗರ ದೇವತೆ ದುಗ್ಗಮ್ಮ ದೇವಸ್ಥಾನಕ್ಕೆ ಬಂದು ಗಂಟೆ ಹೊಡೆಯಲಿ ಎಂದು ಸವಾಲು ಹಾಕಿದ್ದರು. ಆ ಸವಾಲನ್ನು ನಾನು ಸ್ವೀಕರಿಸಿದ್ದು, ಕಾಂಗ್ರೆಸ್ ನವರು ಇನ್ನು ಘಂಟೆ ಹೊಡೆಯಲು ಬಂದಿಲ್ಲ ಎಂದು ಕಾಂಗ್ರೆಸ್ ನವರಿಗೆ ಬಿಜೆಪಿ ಮುಖಂಡ ಯಶವಂತರಾವ್ ಜಾಧವ್ ಸವಾಲು ಹಾಕಿದ್ದಾರೆ.