i
ಮೇಟಿಕುರ್ಕೆ ಕೈಗಾರಿಕಾ ವಲಯಕ್ಕೆ ಗ್ರಹಣ, ಉಸ್ತುವಾರಿ ಸಚಿವ ಸುಧಾಕರ್ ಅಡ್ಡಿ!?…
ವರದಿ-ಹೆಚ್.ಸಿ.ಗಿರೀಶ್, ಹರಿಯಬ್ಬೆ
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲೆಯ ಅತ್ಯಂತ ಹಿಂದುಳಿದ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ರಾಜ್ಯ ಸರ್ಕಾರ ಸ್ಥಾಪಿಸಲು ಉದ್ದೇಶಿಸಿದ್ದ ಮೇಟಿಕುರ್ಕೆ ಕೈಗಾರಿಕಾ ಕಾರಿಡಾರ್ ಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಹಿರಿಯೂರು ವಿಧಾನಸಭಾ ಕ್ಷೇತ್ರದ ಶಾಸಕ ಡಿ.ಸುಧಾಕರ್ ಅವರೇ ಅಡ್ಡಿಯಾಗಿದ್ದಾರೆ ಎನ್ನಲಾಗುತ್ತಿದೆ.
ಸುಧಾಕರ್ ಅವರು ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರಾಗುತ್ತಿದ್ದಂತೆ ಅಂದರೆ 2023ರ ಜೂನ್-5 ರಂದು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಪತ್ರ ಬರೆದು ಮೇಟಿಕುರ್ಕೆ ಕೈಗಾರಿಕಾ ವಲಯ ಸ್ಥಾಪನೆ ಉದ್ದೇಶವನ್ನು ಕೂಡಲೇ ಕೈಬಿಡಬೇಕಾಗಿ ತಮ್ಮಲ್ಲಿ ವಿನಯ ಪೂರ್ವಕವಾಗಿ ಕೋರುತ್ತೇನೆಂದು ಬರೆದಿರುವ ಪತ್ರ ಚಂದ್ರವಳ್ಳಿ ಪತ್ರಿಕೆ ಲಭ್ಯವಾಗಿದೆ.
ಸ್ಥಗಿತಕ್ಕೆ ಕಾರಣ-
ಮೇಟಿಕುರ್ಕೆ ಗ್ರಾಮದ ಸುತ್ತಮುತ್ತಲ ಪ್ರದೇಶದಲ್ಲಿ ಕೈಗಾರಿಕಾ ವಲಯ ಸ್ಥಾಪನೆ ಮಾಡಲು ಸರ್ಕಾರ ಭೂ ಸ್ವಾಧೀನ ಮಾಡಿಕೊಳ್ಳಲು ಇಚ್ಚಿಸಿರುವ 1170 ರಿಂದ 1200 ಎಕರೆ ಜಮೀನು ಸಂಪೂರ್ಣ ಕಪ್ಪು ಜೇಡಿಮಣ್ಣಿನಿಂದ ಕೂಡಿದ್ದು ಈ ಜಮೀನು ಬೆಳೆ ಬೆಳೆಯಲು ಮಾತ್ರ ಯೋಗ್ಯವಾಗಿದ್ದು ಕೈಗಾರಿಕಾ ವಸಾಹತು ನಿರ್ಮಾಣ ಮಾಡಲು ಸೂಕ್ತವಾದ ಜಮೀನಾಗಿಲ್ಲ. ಈ ಭಾಗದಲ್ಲಿ ಕೈಗಾರಿಕಾ ವಲಯ ಸ್ಥಾಪನೆ ಮಾಡಿದರೆ ಕೈಗಾರಿಕಾ ಕಂಪನಿಗಳ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಿರುವುದಿಲ್ಲ ಎನ್ನುವ ಕಾರಣಗಳನ್ನು ಸಚಿವ ಸುಧಾಕರ್ ತಮ್ಮ ಲಿಖಿತ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.
ಅಷ್ಟೇ ಅಲ್ಲ ಅವರು ಮುಂದುವರೆದು, ಭೂ ಸ್ವಾಧೀನಕ್ಕೆ ಒಳಪಡುವ 1200 ಎಕರೆ ಜಮೀನು ರಾಷ್ಟ್ರೀಯ ಹೆದ್ದಾರಿ-48ಕ್ಕೆ ಹೊಂದಿಕೊಂಡಿದೆ. ಹೆದ್ದಾರಿ ಪಕ್ಕದಲ್ಲಿರುವ ಈ ಜಮೀನುಗಳ ಮೌಲ್ಯ 45 ಲಕ್ಷಕ್ಕೂ ಅಧಿಕವಾಗಿರುತ್ತದೆ. ಈ ವಿಷಯ ತಿಳಿದಿರುವ ಕೆಲವು ರಿಯಲ್ ಎಸ್ಟೇಟ್ ದಲ್ಲಾಳಿಗಳು ಈ ಭಾಗದ ರೈತರಿಗೆ ಕೇವಲ 10-15 ಲಕ್ಷ ರೂ.ಗಳನ್ನು ನೀಡಿ ಜಿಪಿಎ ಅಥವಾ ನೋಂದಾಯಿತ ಅಗ್ರಿಮೆಂಟೆ ಮಾಡಿಸಿಕೊಂಡು ಸರ್ಕಾರಕ್ಕೆ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿರುವುದು ನನ್ನ ಗಮನಕ್ಕೆಬಂದಿರುತ್ತದೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದ್ದು ಈ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಸುಮಾರು 150-200 ಕೋಟಿ ರೂ.ಗಳ ಅವ್ಯವಹಾರ ನಡೆದಿರುತ್ತದೆ ಎಂದು ಸರ್ಕಾರಕ್ಕೆ ಲಿಖಿತ ಪತ್ರವನ್ನು ನೀಡಿ ದೂರಿದ್ದಾರೆ.
ಹಿರಿಯೂರು ವಿಧಾನಸಭಾ ಕ್ಷೇತ್ರದ ಜನತೆ ಇವರನ್ನು 2008, 2013 ಮತ್ತು 2023ರಲ್ಲಿ ಅಂದರೆ ಮೂರು ಬಾರಿ ಗೆಲ್ಲಿಸಿದ್ದಾರೆ. ಇಂತಹ ಜರ ಋಣ ತೀರಿಸಬೇಕಾದ ಶಾಸಕ ಸುಧಾಕರ್ ಹೀಗೇಕೆ ಸರ್ಕಾರಕ್ಕೆ ಪತ್ರ ನೀಡಿದರು ಎನ್ನುವ ಯಕ್ಷ ಪ್ರಶ್ನೆ ಕ್ಷೇತ್ರದ ಮತದಾರರನ್ನು ಕಾಡುತ್ತಿದೆ.
ಮೂಲತಃ ಚಳ್ಳಕೆರೆ ನಿವಾಸಿಯಾದ ಸುಧಾಕರ್ ಅವರು ಕೈಗಾರಿಕಾ ವಲಯ ಯೋಜನೆಯನ್ನು ಚಳ್ಳಕೆರೆಗೆ ತೆಗೆದುಕೊಂಡು ಹೋಗುತ್ತಾರೋ ಅಥವಾ ಹಿರಿಯೂರು ಕ್ಷೇತ್ರದ ಬೇರೆ ಜಾಗದಲ್ಲೇ ಮಾಡುತ್ತಾರೋ ಎನ್ನುವುದನ್ನು ಅವರು ಗುಟ್ಟು ಬಿಟ್ಟುಕೊಟ್ಟಿಲ್ಲ. ಹಿರಿಯೂರು ಕ್ಷೇತ್ರವನ್ನು ಅವರು ಮಲತಾಯಿ ಧೋರಣೆಯಿಂದ ನೋಡುತ್ತಿದ್ದಾರೋ ಅದೂ ತಿಳಿಯುತ್ತಿಲ್ಲ. ಸಾವಿರಾರು ಕೈಗಾರಿಕೆಗಳು ಈ ಜಾಗದಲ್ಲಿ ತಲೆ ಎತ್ತಿ ಹತ್ತಾರು ಸಾವಿರ ಜನರಿಗೆ ಉದ್ಯೋಗ ದೊರೆಯಬಹುದಾದ ಈ ಮಹತ್ವಾಕಾಂಕ್ಷೆಯ ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವರು ಏಕೆ ಅಡ್ಡಿ ಮಾಡುತ್ತಿದ್ದಾರೆ ಎನ್ನುವುದು ಮಾತ್ರ ನಿಗೂಢವಾಗಿದೆ.
ಐಮಂಗಲ ಹೋಬಳಿ ವ್ಯಾಪ್ತಿಗೆ ಒಳಪಡುವ ಈ ಪ್ರದೇಶದ ಜಮೀನುಗಳ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇದೆ. ಈ ಹೋಬಳಿಯ ಮತದಾರರೇ ಚುನಾವಣೆಯಲ್ಲಿ ಸುಧಾಕರ್ ಅವರಿಗೆ ಅತಿ ಹೆಚ್ಚಿನ ಲೀಡ್ ನೀಡಿದ್ದಾರೆ. ಆದರೂ ಏಕೆ ಹೀಗೆ ಎನ್ನುವ ಪ್ರಶ್ನೆ ಮಾತ್ರ ಮತದಾರರನ್ನು ಕಾಡುತ್ತಿದೆ.
ಇಲ್ಲಿ ಏನೇನು ಆಗಿದೆ-
ರಾಜ್ಯ ಸರ್ಕಾರ ಸ್ಥಾಪನೆ ಮಾಡಲು ಉದ್ದೇಶಿಸಿರುವ ಚಿತ್ರದುರ್ಗ-ಹಿರಿಯೂರು ಮಧ್ಯ ಭಾಗದ ಮೇಟಿಕುರ್ಕೆ ಗ್ರಾಮದಲ್ಲಿ 783 ಎಕರೆ ಮತ್ತು ಕರಿಯೋಬೇನಹಳ್ಳಿ ಗ್ರಾಮದಲ್ಲಿ 373 ಎಕರೆ ಭೂಸ್ವಾಧೀನ ಮಾಡಲು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿ(ಕೆಐಎಡಿಬಿ) ಜಾಗ ಗುರುತಿಸಿ ಭೂ ಸ್ವಾಧೀನ ಪ್ರಕ್ರಿಯೆ ಆರಂಭಿಸಲು ಅಧಿಸೂಚನೆ ಹೊರಡಿಸಿದೆ.
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎನ್.ಕುಮಾರ್ ಅವರು ರಾಜ್ಯಪಾಲರ ಆದೇಶಾನುಸಾರ ದಿನಾಂಕ-14-೦6-2022 ರಂದು 1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ ಕಲಂ3(1)ರ ಅಧಿಸೂಚನೆ ಹೊರಡಿಸಿದ್ದಾರೆ.
ಅಷ್ಟೇ ಅಲ್ಲ ಮೇಟಿಕುರ್ಕೆ ಗ್ರಾಮದ ಸರ್ವೆ ನಂಬರ್ 73/1 ರಿಂದ ಆರಂಭಿಸಿ 134/1 ತನಕ ಹಾಗೂ ಸರ್ವೆ ನಂಬರ್ 259 ಸೇರಿದಂತೆ ಸುಮಾರು 783 ಎಕರೆ ಮತ್ತು ಹಿರಿಯೂರು ತಾಲೂಕಿನ ಕರಿಯೋಬೇನಹಳ್ಳಿಯ ಸರ್ವೆ ನಂಬರ್ 54/1 ರಿಂದ ಆರಂಭಿಸಿ 73/4ರ ತನಕ ಒಟ್ಟು 373 ಎಕರೆ ಜಮೀನುಗಳನ್ನು ಕೈಗಾರಿಕಾ ಪ್ರದೇಶವೆಂದು ಪ್ರಸ್ತುತ ಕಾಯ್ದೆಯ ಅನ್ವಯ ಘೋಷಣೆ ಮಾಡಲಾಗಿದೆ. ಹೆದ್ದಾರಿ ರಸ್ತೆಗೆ ಹೊಂದಿಕೊಂಡಿರುವ ಜಮೀನುಗಳಿಗೆ 45 ಲಕ್ಷ, ಅದರ ಹಿಂದಿನ ಜಮೀನುಗಳಿಗೆ 35 ಲಕ್ಷ ರೂ.ಗಳ ಪರಿಹಾರವನ್ನು ಜಿಲ್ಲಾಧಿಕಾರಿಗಳು ನಿಗದಿ ಮಾಡಿದ್ದು ಕೈಗಾರಿಕಾ ಪ್ರದೇಶಾಭಿವೃದ್ಧಿ ಸಲಹಾ ಮಂಡಳಿ ತನ್ನ 384ನೇ ಸಭೆಯಲ್ಲಿ ಈ ದರವನ್ನು ಅನುಮೋದಿಸಿದೆ. ಅದರ ಜೊತೆಯಲ್ಲಿ ಈಗಾಗಲೇ ಆ ಜಾಗದಲ್ಲಿ ರಸ್ತೆ, ಚರಂಡಿ ಇತರೆ ಅಭಿವೃದ್ಧಿ ಕಾರ್ಯ ಮಾಡಲು ಮೂರು ಟೆಂಡರ್ ಗಳನ್ನು ಕರೆಯಲಾಗಿದ್ದು ಆಗಸ್ಟ್-8ಕ್ಕೆ ಟೆಂಡರ್ ಹಾಕಲು ಕೊನೆ ದಿನ.
ಮೊದಲ ಕಂತಿನ ಭೂ ಸ್ವಾಧೀನದ ಹಣ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ದಿನಾಂಕ-07-07-2023ರಂದು ಬಿಡುಗಡೆ ಕೆಐಎಡಿಬಿ ಮೂಲಕ ಪರಿಹಾರ ನೀಡಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಹಂತದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರು ಪತ್ರ ಬರೆದಿರುವುದರಿಂದ ಯಾವುದೇ ರೈತರಿಗೆ ಪರಿಹಾರದ ಹಣವನ್ನು ಬಿಡುಗಡೆ ಮಾಡಿಲ್ಲ. ಹಾಗಾಗಿ ಮೇಟಿಕುರ್ಕೆ ಕೈಗಾರಿಕಾ ಕಾರಿಡಾರ್ ಗೆ ಗ್ರಹಣ ಹಿಡಿದಿದ್ದು ಆ ಗ್ರಾಹಣವನ್ನು ಕ್ಷೇತ್ರದ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್ ಅವರೇ ಬಿಡಿಸಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕೈಜೋಡಿಸಬೇಕಾಗಿದೆ ಎನ್ನುವುದು ಇಡೀ ಹಿರಿಯೂರು ವಿಧಾನಸಭಾ ಕ್ಷೇತ್ರದ ಜನರ ಆಶಯವಾಗಿದೆ. ಈ ಕುರಿತು ಸುಧಾಕರ್ ಅವರ ಪ್ರತಿಕ್ರಿಯೆಗಾಗಿ ಮೊಬೈಲ್ ಗೆ ಕರೆ ಮಾಡಿದಾಗ ಅವರು ಕರೆಯನ್ನು ಸ್ವೀಕರಿಸಿ ಮಾತನಾಡಿಲ್ಲ.