i
ಹಿರಿಯೂರು ತಹಶೀಲ್ದಾರ್ ವರ್ಗ ನಿಟ್ಟುಸಿರು ಬಿಟ್ಟ ಜನತೆ, ನೂತನ ತಹಶೀಲ್ದಾರ್ ರಾಜೇಶ್ ಕುಮಾರ್ ಅಧಿಕಾರ ಸ್ವೀಕಾರ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಹಶೀಲ್ದಾರ್ ಪಾಟೀಲ್ ಅವರು ವರ್ಗಾವಣೆ ಆಗಿದ್ದು ಹಿರಿಯೂರು ತಾಲೂಕಿನ ಜನರು ಮತ್ತು ಕಂದಾಯ ಇಲಾಖೆ ಅಧೀನ ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ನಿಕಟಪೂರ್ವ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರ ಆಡಳಿತಾವಧಿಯಲ್ಲಿ ಪಾಟೀಲ್ ಅವರು ಬೆಂಗಳೂರಿನಿಂದ ಹಿರಿಯೂರು ತಹಶೀಲ್ದಾರ್ ಆಗಿ ಆಗಮಿಸಿದ್ದರು. ಈಗ ಅವರ ವರ್ಗಾವಣೆಯಾಗಿದ್ದು ಅವರ ಸ್ಥಳಕ್ಕೆ ಮತ್ತೊಬ್ಬ ತಹಶೀಲ್ದಾರ್ ಆಗಮಿಸಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.
ಶಾಸಕ ಡಿ.ಸುಧಾಕರ್ ಆಯ್ಕೆಯಾಗಿ ಜಿಲ್ಲಾ ಉಸ್ತುವಾರಿ ಸಚಿವರಾಗುತ್ತಿದ್ದಂತೆ ಹಿಂದಿನ ತಹಶೀಲ್ದಾರ್ ಪಾಟೀಲ್ ಅವರನ್ನು ವರ್ಗಾವಣೆ ಮಾಡಿಸಿದ್ದರು. ಈಗ ಹಿರಿಯೂರು ತಹಶೀಲ್ದಾರರು ಹಾಗೂ ದಂಡಾಧಿಕಾರಿಗಳಾಗಿ ಸಿ.ರಾಜೇಶ್ ಕುಮಾರ್ ಸೋಮವಾರ ಅಧಿಕಾರ ಸ್ವೀಕರಿಸಿದರು. ನಗರದ ದಕ್ಷಿಣ ಕಾಶಿ, ಶ್ರೀ ತೇರುಮಲೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ, ನಂತರ ತಾಲೂಕು ಕಚೇರಿಗೆ ಆಗಮಿಸಿ ಅಧಿಕಾರ ವಹಿಸಿಕೊಂಡರು. ಇದಕ್ಕೂ ಮೊದಲು ರಾಜೇಶ್ ಕುಮಾರ್ ಅವರು ಚಿತ್ರದುರ್ಗದ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದರು.
ಈ ಸಂದರ್ಭದಲ್ಲಿ ತಾಲೂಕು ಕಚೇರಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು ನೂತನ ತಹಶೀಲ್ದಾರ್ ರಾಜೇಶ್ ಕುಮಾರ್ ರವರಿಗೆ ಹೂಗುಚ್ಛ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು.