i
ಡಿಆರ್ಡಿಒ ಸಿದ್ಧಪಡಿಸಿದ್ದ ಪೈಲಟ್ ರಹಿತ ತಪಸ್ ವಿಮಾನ ಪತನ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪೈಲಟ್ ರಹಿತ ತಪಸ್ ವಿಮಾನ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ವದ್ದಿಕೆರೆ ಗ್ರಾಮದ ಸಿದ್ದಪ್ಪ ಎನ್ನುವ ರೈತರ ಜಮೀನಲ್ಲಿ ಬಿದ್ದು ಪತನಗೊಂಡಿದೆ. ಚಳ್ಳಕೆರೆ ತಾಲೂಕಿನ ಕುದಾಪುರ ಬಳಿಯಿರುವ ಡಿಆರ್ಡಿಒ ಸಿದ್ಧಪಡಿಸಿದ್ದ ಪೈಲಟ್ ರಹಿತ ವಿಮಾನ ಪತನಗೊಂಡಿದ್ದು ಇದು ಜಿಲ್ಲೆಯಲ್ಲಿ 2ನೇ ಘಟನೆ ಆಗಿದೆ.
ಪರೀಕ್ಷಾರ್ಥ ಹಾರಾಟ ನಡೆಸುತ್ತಿದ್ದ ಡ್ರೋನ್ ಮಾದರಿಯ ತಪಸ್ ವಿಮಾನ ನಿಯಂತ್ರಣ ತಪ್ಪಿ ವದ್ದಿಕೆರೆ ಬಳಿಯ ಜಮೀನಿನಲ್ಲಿ ಬಿದ್ದಿದೆ. ರೆಕ್ಕೆ ಕಳಚಿ ಛಿದ್ರ ಛಿದ್ರವಾಗಿ ಜಮೀನಿನಲ್ಲಿ ಬಿದ್ದಿದ್ದು ಪತನಗೊಂಡ ತಪಸ್ ವಿಮಾನ ನೋಡಲು ಜನ ಸಾಗರ ಸೇರಿದ್ದರು.
2016 ರಿಂದ ‘ತಪಸ್‘ ಉತ್ಪಾದನೆಯನ್ನು ಪ್ರಾರಂಭಿಸಲಾಗಿದ್ದು ಕಣ್ಗಾವಲು ಇಡಲು ಮತ್ತು ಪ್ರಾಸಂಗಿಕ ದಾಳಿ ನಡೆಸಲು ಈ ಡ್ರೋನ್ ಸಮರ್ಥವಾಗಿದೆ. ಶೀಘ್ರದಲ್ಲೇ ಈ ಡ್ರೋನ್ ಅನ್ನು ಎಲ್ಲಾ ಮೂರು ಸೇನಾದಳಗಳಲ್ಲಿ ಸಮಾವೇಶಗೊಳಿಸುವುದರಲ್ಲಿದ್ದು, ಅದಕ್ಕಾಗಿ ಅದರ ಪ್ರಯೋಗಗಳು ನಡೆಯುತ್ತಿವೆ. ಈ ಡ್ರೋನ್ 224 ಕಿಮೀ ವೇಗದಲ್ಲಿ ಸುಮಾರು 1 ಸಾವಿರ ಕಿಮೀ ದೂರದವರೆಗೆ ಹಾರಬಲ್ಲದು. ಇದು 24 ಗಂಟೆಗಳ ಕಾಲ ತಡೆರಹಿತವಾಗಿ ಹಾರುವ ಸಾಮರ್ಥ್ಯ ಹೊಂದಿದ್ದು, ನೆಲದಿಂದ ಗರಿಷ್ಠ 35 ಸಾವಿರ ಅಡಿ ಎತ್ತರದಲ್ಲಿ ಹಾರವ ಸಾಮರ್ಥ್ಯ ಹೊಂದಿದೆ.
ಚಳ್ಳಕೆರೆಯ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ ಚಾಲಕ ರಹಿತ ತಪಸ್ ವಿಮಾನವನ್ನು ಸಿದ್ಧ ಪಡಿಸಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವದ್ದಿಕೆರೆ ಗ್ರಾಮದ ಬಳಿ 2023ರ ಆಗಸ್ಟ್-20 ರಂದು ಭಾನುವಾರ ಬೆಳಗ್ಗೆ ಪ್ರಾಯೋಗಿಕ ಹಾರಾಟದ ವೇಳೆ ತಪಸ್ 07A-14 ವಿಮಾನವು ಜಮೀನಿನಲ್ಲಿ ಪತನಗೊಂಡಿದೆ. ಈ ವಿಮಾನವು ಹಾಸನಕ್ಕೆ ಹೋಗಿ ವಾಪಸ್ ಬರುವಾಗ ವದ್ದೀಕೆರೆ ಗ್ರಾಮದ ಸಿದ್ದಪ್ಪ ಎಂಬುವರ ಜಮೀನಿನಲ್ಲಿ ಲಘು ವಿಮಾನ ಪತನಗೊಂಡಿದ್ದು, ವಿಮಾನ ಪತನವಾಗಲು ಇದುವರೆಗೆ ನಿಖರ ಕಾರಣ ತಿಳಿದುಬಂದಿಲ್ಲ. ರೆಕ್ಕೆ ಕಳಚಿಕೊಂಡು ಛಿದ್ರ ಛಿದ್ರವಾಗಿ ಬಿದ್ದಿರುವ ವಿಮಾನ ನೋಡಲು ಜನ ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.
ವಿಮಾನ ಪತನವಾದ ಸ್ಥಳಕ್ಕೆ ಡಿಆರ್ಡಿಒ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದು ತಾಂತ್ರಿಕ ದೋಷದಿಂದ ವಿಮಾನ ಪತನಗೊಂಡಿರಬಹುದು ಎಂಬ ಶಂಕೆಯನ್ನು ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ. ವಿಮಾನ ಪತನವಾಗುತ್ತಲೇ ಬೆಂಕಿ ಹೊತ್ತಿಕೊಳ್ಳದ ಕಾರಣ ಯಾವುದೇ ಅಪಾಯ ಎದುರಾಗಿಲ್ಲ. ಪ್ರಕರಣದ ಕುರಿತು ತನಿಖೆಗೆ ಆದೇಶಿಸಲಾಗಿದೆ. ವಿಮಾನದ ಎಲ್ಲ ಅವಶೇಷಗಳನ್ನು ಚಳ್ಳಕೆರೆ ಡಿಆರ್ಡಿಒ ಅಧಿಕಾರಿಗಳು ಕೊಂಡೊಯ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಎರಡನೇ ವಿಮಾನ ಪತನ-
ಚಿತ್ರದುರ್ಗ ಜಿಲ್ಲೆಯಲ್ಲಿ ಡಿಆರ್ಡಿಒ ತನ್ನ ಕಾರ್ಯಚಟುವಟಿಕೆ ಆರಂಭಿಸಿದ ಮೇಲೆ ಚಾಲತಕ ರಹಿತ ವಿಮಾನ ಪತನವಾಗುತ್ತಿರುವುದು ಎರಡನೇ ಬಾರಿ ಆಗಿದೆ. 2019ರ ಸೆಪ್ಟೆಂಬರ್ನಲ್ಲಿ ಡಿಆರ್ಡಿಒದ ರುಸ್ತುಂ 2 ಎಂಬ ಮಾನವ ರಹಿತ ಲಘು ವಿಮಾನ ಚಳ್ಳಕೆರೆ ತಾಲೂಕಿನ ಚಿಕ್ಕೇನಹಳ್ಳಿಯಲ್ಲಿ ಪತನಗೊಂಡಿತ್ತು. ವದ್ದೀಕೆರೆಯಲ್ಲಿ ಪತನವಾಗಿರುವ ಲಘು ವಿಮಾನ ಇದು ಜಿಲ್ಲೆಯ 2ನೇ ಘಟನೆಯಾಗಿದೆ. ಎರಡು ವಿಮಾನಗಳು ಪತನವಾದ ಸಂದರ್ಭದಲ್ಲಿ ಯಾವುದೇ ಪ್ರಾಣಹಾನಿ ಆಗಿರುವುದಿಲ್ಲ.
ಬೆಳೆ ಹಾನಿ-ವದ್ದೀಕೆರೆ ಸಿದ್ದಪ್ಪ ಎನ್ನುವವರ ಜಮೀನಿನಲ್ಲಿ ಲಘು ವಿಮಾನ ಪತನವಾಗುತ್ತಿದ್ದಂತೆ ಸುತ್ತ ಮುತ್ತಲ ಜನರು ಸಾಗರೋಪಾದಿಯಲ್ಲಿ ಆಗಮಿಸಿ ಜಮೀನಿನಲ್ಲಿ ಬಿತ್ತನೆ ಮಾಡಲಾಗಿದ್ದ ಶೇಂಗಾ ಫಸಲನ್ನು ತುಳಿದು ಹಾನಿ ಮಾಡಿರುವುದರಿಂದ ರೈತ ಸಿದ್ದಪ್ಪನವರಿಗೆ ಸಾಕಷ್ಟು ಹಾನಿಯಾಗಿದೆ. ಜಿಲ್ಲಾಧಿಕಾರಿ ದಿವ್ಯಪ್ರಭು ಬೆಳೆ ಹಾನಿಯ ವರದಿ ಕೇಳಿದ್ದು ಬಂದ ಕೂಡಲೇ ಡಿಆರ್ಡಿಒ ಅಧಿಕಾರಿಗಳಿಗೆ ಬೆಳೆ ಹಾನಿ ವರದಿ ರವಾನೆ ಮಾಡಿ ಕಾನೂನಿನ ಅಡಿಯಲ್ಲಿ ಬರಬಹುದಾದ ಬೆಳೆ ಹಾನಿ ಪರಿಹಾರ ದೊರಕಿಸಿಕೊಡುವ ಸಾಧ್ಯತೆ ಇದೆ.