i
ಮಿನಿ ಸರಕು ಸಾಗಣೆ ವಾಹನಗಳ ಮೇಲೆ ಅವೈಜ್ಞಾನಿಕ ತೆರಿಗೆ ವಿರುದ್ಧ ಪ್ರತಿಭಟನೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮಿನಿ ಸರಕು ಸಾಗಣೆ ವಾಹನಗಳ ಮೇಲೆ ಅವೈಜ್ಞಾನಿಕವಾಗಿ ರಾಜ್ಯ ಸರ್ಕಾರ ತೆರಿಗೆ ಏರಿಕೆ ಮಾಡಿರುವುದರ ವಿರುದ್ಧ ಚಿತ್ರದುರ್ಗ ಜಿಲ್ಲಾ ಮಿನಿ ಲಾರಿ ಮಾಲೀಕರ ಸಂಘದ ನೇತೃತ್ವದಲ್ಲಿ ನೂರಾರು ಮಾಲೀಕರು, ಚಾಲಕರು ಪ್ರಾದೇಶಿಕ ಸಾರಿಗೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.
ಆಯ್ದ ಸಣ್ಣ ಪ್ರಮಾಣದ ಶ್ರೇಣಿಯ ಸರಕು ಸಾಗಣೆ ವಾಹನ(ಮಿನಿ ಲಾರಿ) ಹಾಗೂ 10 ಲಕ್ಷ ರೂ.ನಿಂದ 15 ಲಕ್ಷ ರೂ. ಮಿತಿಯೊಳಗಿನ ಕ್ಯಾಬ್ಗಳಿಗೆ ಜೀವಿತಾವಧಿ ಮೋಟಾರು ವಾಹನ ತೆರಿಗೆ ವಿಧಿಸುವ ಹಾಗೂ ಶಾಲಾ- ಕಾಲೇಜು ಬಸ್ಗಳ ಮೋಟಾರು ವಾಹನ ತೆರಿಗೆ ಹೆಚ್ಚಿಸುವ ಸಂಬಂಧದ ವಿಧೇಯಕ ಮಂಡನೆಯಿಂದಾಗಿ ಮಿನಿ ಲಾರಿ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ತೂಕದ ಆಧಾರದ ಮೇಲೆ ಸರಕು ಸಾಗಣೆ ವಾಹನಗಳನ್ನು ಮೂರು ಹೆಚ್ಚುವರಿ ವರ್ಗೀಕರಣ ಮಾಡಿ ಅದಕ್ಕೂ ಜೀವಿತಾವಧಿ ಮೋಟಾರು ವಾಹನ ತೆರಿಗೆ ವಿಧಿಸಿದ್ದು ಇದರಿಂದ ಮಿನಿ ಲಾರಿ ಮಾಲೀಕರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.
5.5 ಟನ್ನಿಂದ 7.5 ಟನ್ವರೆಗೆ, 7.5 ರಿಂದ 9.5 ಟನ್ವರೆಗೆ ಹಾಗೂ 9.5 ರಿಂದ 12 ಟನ್ವರೆಗಿನ ತೂಕದ ವಾಹನಗಳಿಗೂ ರಾಜ್ಯ ಸರ್ಕಾರ ಅವೈಜ್ಞಾನಿಕವಾಗಿ ಜೀವಿತಾವಧಿ ತೆರಿಗೆ ಪಾವತಿಸಲು ಆದೇಶಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಸರಕು ಸಾಗಣೆ ವಾಹನಗಳಿಗೆ ಬಾಡಿಗೆ ದೊರೆಯುವುದೇ ಕಷ್ಟವಾಗಿದೆ. ಸಾಲದಕ್ಕೆ ನಿತ್ಯ ಏರಿಕೆಯಾಗುತ್ತಿರುವ ಇಂಧನ ದರಗಳಿಂದಾಗಿ ಮಿನಿ ಲಾರಿ ಮಾಲೀಕರು ಇನ್ನಿಲ್ಲದ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಸಕಾಲದಲ್ಲಿ ಬಾಡಿಗೆ ದೊರೆಯುವುದಿಲ್ಲ, ಬ್ಯಾಂಕ್ ಗಳು ಸೇರಿದಂತೆ ಖಾಸಗಿ ಹಣಕಾಸು ಸಂಸ್ಥೆಗಳಿಂದ ಪಡೆದಿರುವ ಸಾಲ, ಸಾಲಕ್ಕೆ ಬಡ್ಡಿ ಕಟ್ಟಲಾಗದೆ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಇದರ ಜೊತೆಯಲ್ಲಿ ಬಳಕೆ ವರ್ಷ ಆಧರಿಸಿ ನಿರ್ದಿಷ್ಟ ಜೀವಿತಾವಧಿ ಶುಲ್ಕ ಮತ್ತು ಸಣ್ಣ ಪ್ರಮಾಣದ ಶ್ರೇಣಿಯ ಸರಕು ಸಾಗಣೆ ವಾಹನಗಳಿಗೆ ಜೀವಿತಾವಧಿ ಮೋಟಾರು ವಾಹನ ತೆರಿಗೆ ವಿಧಿಸಿ ಏರಿಕೆ ಮಾಡಿರುವುದು ಅತ್ಯಂತ ಅವೈಜ್ಞಾನಿಕ ಕ್ರಮವಾಗಿದ್ದು ಕೂಡಲೇ ಮಿನಿ ಲಾರಿಗಳ ಮೇಲೆ ವಿಧಿಸಿರುವ ಎಲ್ಲ ರೀತಿಯ ತೆರಿಗೆಗಳನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹ ಮಾಡಿದರು.
ರೈತರ ಉತ್ಪನ್ನಗಳಾದ ಈರುಳ್ಳಿ, ತರಕಾರಿ, ಹಣ್ಣು ಮುಂತಾದ ರೈತರ ಉತ್ಪನ್ನಗಳನ್ನು ಬಹುತೇಕ ಮಿನಿ ಲಾರಿಗಳ ಮೂಲಕ ಸಾಗಾಟ ಮಾಡಲಾಗುತ್ತಿದೆ. ರೈತರಿಗೆ ಯಾವುದೇ ರೀತಿಯ ತೊಂದರೆ ಆಗದಂತಹ ಬಾಡಿಗೆ ಪಡೆದು ಸೇವೆ ಕೊಡುತ್ತಿದ್ದೇವೆ. ಪರಿಸ್ಥಿತಿ ಈಗಿದ್ದರೂ ಅನಗತ್ಯವಾಗಿ ತೆರಿಗೆ ಹೆಚ್ಚಿಸಲಾಗಿದೆ. ಇನ್ನೂ ಹೆದ್ದಾರಿಯಲ್ಲಿರುವ ಟೋಲ್ ಗಳಲ್ಲೂ ನಿರಂತರ ಶೋಷಣೆಗೆ ಮಿನಿ ಲಾರಿ ಮಾಲೀಕರು ಒಳಗಾಗುತ್ತಿದ್ದಾರೆ. ಟೋಲ್ ಸಂಗ್ರಹ ಮತ್ತು ತೆರಿಗೆಯಲ್ಲಿ ಮಿನಿ ಲಾರಿಗಳಿಗೆ ರಿಯಾಯಿತಿ ನೀಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಇತ್ತೀಚೆಗೆ ಮುಖ್ಯಮಂತ್ರಿಗಳನ್ನು ಮಿನಿ ಲಾರಿ ಮಾಲೀಕರು ಭೇಟಿ ಮಾಡಿ ಸಮಸ್ಯೆಗಳನ್ನು ಹೇಳಿಕೊಳ್ಳಲಾಗಿತ್ತು. ಮುಖ್ಯಮಂತ್ರಿಗಳು ಎರಡು ದಿನಗಳಲ್ಲಿ ಸಮಸ್ಯೆಗೆ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದ್ದರು. ಆದರೂ ಯಾವುದೇ ಪರಿಹಾರ ಮುಖ್ಯಮಂತ್ರಿಗಳಿಂದಲೂ ಸಿಕ್ಕಿಲ್ಲ, ಹಾಗಾಗಿ ಸರ್ಕಾರ ಅವೈಜ್ಞಾನಿಕವಾಗಿ ಹೆಚ್ಚಿಸಿರುವ ಯಾವುದೇ ತೆರಿಗೆಗಳನ್ನು ಮಿನಿ ಲಾರಿಗಳ ಮಾಲೀಕರು ಕಟ್ಟದೇ ಬಹಿಷ್ಕರಿಸುತ್ತೇವೆ. ಇನ್ನೂ ಮೀರಿದರೆ ಎಲ್ಲ ವಾಹನಗಳನ್ನು ಪ್ರಾದೇಶಿಕ ಸಾರಿಗೆ ಇಲಾಖೆಯವರು ಇಟ್ಟುಕೊಂಡು ನಿರ್ವಹಣೆ ಮಾಡಲಿ, ನಮ್ಮಿಂದ ಅನಗತ್ಯವಾಗಿ ಏರಿಕೆಯಾಗಿರುವ ತೆರಿಗೆ ಕಟ್ಟಲು ಸಾಧ್ಯವಿಲ್ಲ ಎಂದು ನೋವು ತೋಡಿಕೊಂಡರು.
ಜಿಲ್ಲಾ ಮಟ್ಟದ ಅಧಿಕಾರಿಗಳೇ ಮಿನಿ ಲಾರಿ ಮಾಲೀಕರ ತೆರಿಗೆ ಸಮಸ್ಯೆ ಮತ್ತು ಕುಂದುಕೊರತೆಗಳನ್ನು ನಿವಾರಣೆ ಮಾಡುವಂತೆ ಚಿತ್ರದುರ್ಗ ಜಿಲ್ಲಾ ಮಿನಿ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಬಿ.ಪ್ರಭು, ಕಾರ್ಯದರ್ಶಿ ಕೆ.ನಾಗರಾಜ್, ಖಂಡೇನಹಳ್ಳಿ ಪಾಳ್ಯ ರಘು, ಪಟ್ಲಿ ಮಂಜುನಾಥ್, ಖಂಡೇನಹಳ್ಳಿ ಆರ್.ನಾಗರಾಜ್, ಜುಂಜುರಗುಂಟೆ ಶಿವಮೂರ್ತಿ, ಸಿ.ನಾಗರಾಜ್, ರಂಗಸ್ವಾಮಿ ಸೇರಿದಂತೆ ಮತ್ತಿತರ ಮಿನಿ ಲಾರಿ ಮಾಲೀಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.