i
ಸ್ಟ್ರೋಕ್ ಆದ ತಕ್ಷಣ ಆಸ್ಪತ್ರೆಗೆ ದಾಖಲಾಗಿ-ಮಾಜಿ ಸಿಎಂ ಕುಮಾರಸ್ವಾಮಿ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಲಘುವಾಗಿ ಸ್ಟ್ರೋಕ್ ನಿಂದಾಗಿ ಬೆಂಗಳೂರಿನ ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಸಂಪೂರ್ಣ ಗುಣಮುಖರಾಗಿದ್ದು ಅಫೋಲೋ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡಿ, ನನಗೆ ಆ ದೇವರು ಮೂರನೇ ಸಲ ಪುನರ್ಜನ್ಮ ನೀಡಿದ್ದಾನೆ. ಒಂದು ಸಲ ಬೈಪಾಸ್ ಸರ್ಜರಿ, ಇನ್ನೊಂದು ಸಲ ಲಘು ಸ್ಟ್ರೋಕ್ ಮತ್ತು ಈಗ ಮತ್ತೇ ಸ್ಟ್ರೋಕ್ ಆಗಿದ್ದು ಈ ಮೂರು ಸಂದರ್ಭದಲ್ಲೂ ದೇವರು ಮತ್ತು ವೈದ್ಯ ದೇವರುಗಳು ನನಗೆ ಮರು ಜನ್ಮ ನೀಡಿದ್ದಾರೆಂದು ಹೇಳಿದರು.
ನನಗೆ ಕಳೆದ 4 ದಿನಗಳಿಂದೆ ಲಘುವಾಗಿ ಸ್ಟ್ರೋಕ್ ಆಗಿದ್ದು ಕೂಡಲೇ ಆಸ್ಪತ್ರೆಗೆ ಬಂದಿದ್ದರಿಂದ ಕ್ಷೇಮವಾಗಿದ್ದೇನೆ. ಬಡವ ಇರಲಿ, ಶ್ರೀಮಂತ ಇರಲಿ ಸ್ಟ್ರೋಕ್ ಆದ ತಕ್ಷಣ ಅಂದರೆ ಮೂರು ಗಂಟೆಯೊಳಗೆ ಆಸ್ಪತ್ರೆಗೆ ದಾಖಲಾದರೆ ಸ್ಟ್ರೋಕ್ ಗೆ ಸೂಕ್ತ ಚಿಕಿತ್ಸೆ ನೀಡಿದರೆ ಗುಣಮುಖರಾಗಬಹುದು. ಒಂದು ವೇಳೆ ಮಧ್ಯ ರಾತ್ರಿಯೇ ನಾನು ಆಸ್ಪತ್ರೆಗೆ ಬಾರದಿದ್ದರೆ ಶಾಶ್ವತವಾಗಿ ನಾನು ಹಾಸಿಗೆ ಮೇಲೆ ಇರಬೇಕಿತ್ತು. ಅಲ್ಲದೆ ಎಲ್ಲ ಕಾರ್ಯಗಳಿಗೂ ಬೇರೆಯವರನ್ನು ಆಶ್ರಯಿಸಬೇಕಿತ್ತು ಎಂದು ಕುಮಾರಸ್ವಾಮಿ ತಿಳಿಸಿದರು.
ವೈದ್ಯ ಡಾ.ಚಿನ್ಮಯ್ ನಾಗೇಶ್ ಮಾತನಾಡಿ, ಸ್ಟ್ರೋಕ್ ಆದ ತಕ್ಷಣ ಅಂದರೆ ಮೂರು ಗಂಟೆಯ ಈ ಗೋಲ್ಡನ್ ಅವರ್ ಅತ್ಯಂತ ಮುಖ್ಯ. ಈ ಸಮಯದೊಳಗೆ ಸೂಕ್ತ ಚಿಕಿತ್ಸೆ ನೀಡಿದ್ದರಿಂದ ಕುಮಾರಸ್ವಾಮಿ ಅವರ ಆರೋಗ್ಯದಲ್ಲಿ ಶೀಘ್ರ ಚೇತರಿಕೆ ಆಗಿದೆ ಎಂದು ತಿಳಿಸಿದರು.
ಡಾ.ಸತೀಶ್ ಚಂದ್ರ, ಡಾ.ಕುಲಕರ್ಣಿ ಸೇರಿದಂತೆ ಹಲವು ವೈದ್ಯರು ಸುದ್ದಿಗೋಷ್ಠಿಯಲ್ಲಿದ್ದರು.