i
ಮದಕರಿಪುರದಲ್ಲಿ ಸಾಂಕ್ರಾಮಿಕ ರೋಗಗಳಿಗೆ ತಡೆಗೆ ಅಗತ್ಯ ಕ್ರಮ-ಮಂಜುನಾಥ್…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಶುದ್ಧವಾದ ಕುಡಿಯುವ ನೀರು ಪೂರೈಸುವುದರಿಂದ ಹಲವಾರು ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದು. ಈ ನಿಟ್ಟಿನಲ್ಲಿ ಗ್ರಾಮ ನೀರು ಸರಬರಾಜು ಮತ್ತು ನೈರ್ಮಲ್ಯ ಸಮಿತಿ ಸದಸ್ಯರು ತಿಂಗಳಿಗೆ ಒಮ್ಮೆಯಾದರೂ ನೀರು ನೈರ್ಮಲ್ಯ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಬೇಕು ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜನಾಥ್ ಸಲಹೆ ನೀಡಿದರು.
ಚಿತ್ರದುರ್ಗ ತಾಲ್ಲೂಕಿನ ಮದಕರಿಪುರ ಗ್ರಾಮದ ಲಂಬಾಣಿಹಟ್ಟಿ ಎದುರು ನೀರು ನೈರ್ಮಲ್ಯ ಆರೋಗ್ಯ ಪರಿಸರ ಸ್ವಚ್ಛತೆ ಕುರಿತು ಗುಂಪು ಸಭೆಯಲ್ಲಿ ಅವರು ಮಾತನಾಡಿದರು.
ತಮ್ಮ ತಮ್ಮ ವಾರ್ಡ್ಗಳಲ್ಲಿ ಇರುವಂತಹ ಪರಿಸರ ಸ್ವಚ್ಛತೆ ಮತ್ತು ನೀರು ನೈರ್ಮಲ್ಯದ ಬಗ್ಗೆ ಸಭೆಯಲ್ಲಿ ಚರ್ಚಿಸಬೇಕು. ಅಗತ್ಯ ಕ್ರಮಕೈಗೊಳ್ಳಲು ಕ್ರಿಯಾಯೋಜನೆ ರೂಪಿಸುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸಲಹೆ ಸೂಚನೆ ಕೊಡಬೇಕು. ಈ ರೀತಿ ಮಾಡುವುದರಿಂದ ತುರ್ತು ಆರೋಗ್ಯ ಸಮಸ್ಯೆಗಳನ್ನು ಬೇಗನೆ ನಿರ್ವಹಣೆ ಮಾಡಬಹುದು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗರಾಜ್ ಮಾತನಾಡಿ, ಗ್ರಾಮ ನೀರು ಸರಬರಾಜು ಮತ್ತು ನೈರ್ಮಲ್ಯಯ ಸಮಿತಿ ಉದ್ದೇಶ, ಜವಾಬ್ದಾರಿ ಹಾಗೂ ಕಾರ್ಯವಿಧಾನಗಳ ಬಗ್ಗೆ ತಿಳಿಸಿದ ಅವರು, ತಮ್ಮ ನಿವೇಶನಗಳಲ್ಲಿ ತ್ಯಾಜ್ಯ ವಿಲೇವಾರಿ, ಕೊಳಚೆ, ನೀರು ನಿಲ್ಲಲು ಅವಕಾಶ ನೀಡುವ ಮಾಲೀಕನಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವುದು, ಖಾಲಿ ನಿವೇಶನದಲ್ಲಿ ಹೇರಳವಾಗಿ ಬೆಳೆದಿರುವ ಕಲೆ ಗಿಡಗಳನ್ನು ಸ್ವಚ್ಛಗೊಳಿಸುವಂತೆ ಮಾಲೀಕನಿಗೆ ತಿಳಿಸುವುದು.
ಜಲಮೂಲ ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಡಲು ಗ್ರಾಮ ಪಂಚಾಯಿತಿ ಬೆಂಬಲ ನೀಡುವುದು. ಕಾಲಕಾಲಕ್ಕೆ ಕುಡಿಯುವ ನೀರಿನ ಮೂಲಗಳಿಗೆ ಕ್ಲೋರಿನೇಷನ್ ಮಾಡಿಸುವುದು ಮುಖ್ಯ ಜವಾಬ್ದಾರಿ ಆಗಿರುತ್ತದೆ ಎಂದರು.
ಆರೋಗ್ಯ ನಿರೀಕ್ಷಣಾಧಿಕಾರಿ ರಂಗಾರೆಡ್ಡಿ ಮಾತನಾಡಿ, ಘನ ತ್ಯಾಜ್ಯ ವಸ್ತುಗಳ ವಿಲೇವಾರಿ ಕೈಗಳ ಶುಚಿತ್ವ, ಶೌಚಾಲಯಗಳ ಬಳಕೆ, ಕೈ ತೊಳೆಯುವ ವಿಧಾನದ ಬಗ್ಗೆ ಆಹಾರ ಸುರಕ್ಷತೆಯ ಬಗ್ಗೆ ತಿಳಿಸಿದರು.
ಸಭೆಯಲ್ಲಿ ಮದಕರಿಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಓ.ಬಸವರಾಜ್, ಸದಸ್ಯರಾದ ನವೀನ್, ಸಂಜಯ ನಾಯಕ್, ರಘು, ಸ್ವಾಸ್ಯ ಸಂಸ್ಥೆಯ ಮೂರ್ತಪ್ಪ, ಆಹಾರ ನಿರೀಕ್ಷಕರಾದ ಉಮಾದೇವಿ, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಪಿ.ಬಿ.ಪವಿತ್ರ, ಆಶಾ ಕಾರ್ಯಕರ್ತೆಯರಾದ ಮಂಜುಳಾ, ಜ್ಯೋತಿಬಾಯಿ ಹಾಗೂ ಗ್ರಾಮಸ್ಥರು ಇದ್ದರು.