i
ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರುಗಳ ಅವಧಿ ಕಡಿತ!?…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತ ಸದಸ್ಯರುಗಳ ಅವಧಿ ಕಡಿತ, ಕಾಯ್ದೆಗೆ ಸೂಕ್ತ ತಿದ್ದುಪಡಿ ತರಲು ಕರ್ನಾಟಕ ರಾಜ್ಯ ನಿವೃತ್ತ ಪೌರನೌಕರರ ಮತ್ತು ಪೌರಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಎಲ್. ನಾರಾಯಣಾಚಾರ್ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.ಭಾರತದ ಮಾಜಿ ಪ್ರಧಾನಿ, ದಿವಂಗತ ರಾಜೀವ ಗಾಂಧಿಯವರು ಜಾರಿಗೆ ತಂದ ಮಹತ್ವದ ಸಂವಿಧಾನದ 74ನೇ ತಿದ್ದುಪಡಿಯನ್ನು ಜಾರಿಗೆ ತರದೇ ಇರುವುದು ವಿಪರ್ಯಾಸ. 74ನೇ ಮಹತ್ವದ ತಿದ್ದುಪಡಿ ಏನು ಹೇಳುತ್ತದೆ ಎಂದರೆಹಾಲಿ ಇರುವ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ ಅವಧಿ ಮುಕ್ತಾಯಗೊಂಡ ನಂತರ, ಚುನಾವಣೆಯನ್ನು ನಡೆಸಿ, ಹಾಲಿ ಇರುವ ಅಧ್ಯಕ್ಷರು, ನೂತನವಾಗಿ ಆಯ್ಕೆಯಾದ ಅಧ್ಯಕ್ಷರಿಗೆ ಅಧಿಕಾರವನ್ನು ಹಸ್ತಾಂತರ ಮಾಡಬೇಕು.ಕರ್ನಾಟಕ ಪೌರ ಸಭೆಗಳ ಅಧಿನಿಯಮ 1964, ಸೆಕ್ಷನ್ 18 ರಲ್ಲಿ, ಕೌನ್ಸಿಲರ್ ಗಳ ಪದಾವಧಿಯನ್ನು ನಿಗದಿಪಡಿಸಿದೆ. ಈ ನಿಯಮದಲ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ ಚುನಾಯಿತರಾದ ಕೌನ್ಸಿಲರರುಗಳ ಪದಾವಧಿಯು, ಮುನ್ಸಿಪಲ್ ಕೌನ್ಸಿಲರನು ಮೊದಲ ಸಭೆಯನ್ನು ನಡೆಸಿದ ದಿನಾಂಕದಂದು ಪ್ರಾರಂಭವಾಗತಕ್ಕದ್ದು ಎಂದು ಇರುತ್ತದೆ…
ಆದರೆ ಪ್ರತಿ ಬಾರಿಯೂ ರಾಜ್ಯ ಸರ್ಕಾರದಿಂದ ಅಧ್ಯಕ್ಷ, ಉಪಾಧ್ಯಕ್ಷರರುಗಳ ಮೀಸಲಾತಿಯು ನಿಗಧಿಯಾಗಿ ಜ್ಯಾರಿಯಾಗುವ ಅನಗತ್ಯ ವಿಳಂಬದಿಂದ ನಗರಸಭೆಗೆ ಜಿಲ್ಲಾಧಿಕಾರಿ, ಪುರಸಭೆಗಳಿಗೆ ಉಪವಿಭಾಗಾಧಿಕಾರಿ, ಪಟ್ಟಣ ಪಂಚಾಯಿತಿಗಳಿಗೆ ತಹಶೀಲ್ದಾರರುಗಳನ್ನು ಕರ್ನಾಟಕ ಪೌರಸಭೆಗಳ ಅಧಿನಿಯಮ 1964, ಸೆಕ್ಷನ್ 42ರ ಉಪ ಕಾಲಂ 5 ರಂತೆ ಅಧ್ಯಕ್ಷಾಧಿಕಾರಿಗಳನ್ನಾಗಿ ಕರ್ತವ್ಯ ನಿರ್ವಹಿಸಲು ಸರ್ಕಾರ ಅಧಿಸೂಚನೆಯನ್ನು ಹೊರಡಿಸುತ್ತಾ ಬಂದಿದೆ…ಈ ಬಾರಿಯೂ ಸಹ ಅವಧಿ ಮುಗಿದ ಸ್ಥಳೀಯ ಸಂಸ್ಥೆಗಳಿಗೆ ಅಧ್ಯಕ್ಷಾಧಿಕಾರಿಯನ್ನು ನೇಮಿಸುವ ಅಧಿಸೂಚನೆ ಹೊರಡಿಸುವ ಬದಲು ಆಡಳಿತಾಧಿಕಾರಿಗಳನ್ನಾಗಿ ನೇಮಿಸಿ ಅಧಿಸೂಚನೆ ಹೊರಡಿಸಿದ್ದು ಸರ್ಕಾರದ ತಪ್ಪು. ಈ ನಿರ್ಧಾರವನ್ನು ನಾನು ನೇರವಾಗಿ ಖಂಡಿಸುತ್ತೇನೆ. ಸರ್ಕಾರದ ಅಧಿಸೂಚನೆ ಸಂಖ್ಯೆ:- ನ.ಅ.ಇ 48 MLR2023 08-05-2023 ರಲ್ಲಿ, 64 ಸ್ಥಳೀಯ ಸಂಸ್ಥೆಗಳಿಗೂ, ದಿನಾಂಕ 25-05-2023ರಲ್ಲಿ, 36 ಸ್ಥಳೀಯ ಸಂಸ್ಥೆಗಳಿಗೂ ಆಡಳಿತಾಧಿಕಾರಿಗಳನ್ನು ನೇಮಿಸಿರುತ್ತದೆ….ಸರ್ಕಾರವು ಆಡಳಿತಾಧಿಕಾರಿಗಳ ಪದ ಬಳಕೆ ಮಾಡಿರುವುದರಿಂದ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರರುಗಳು ಇದನ್ನು ಮಾನದಂಡವನ್ನಾಗಿ ಇಟ್ಟುಕೊಂಡು, ಕೌನ್ಸಿಲ್ ಸಭೆ ಕರೆಯಲು ಬರುವಂತಿಲ್ಲ ಎಂಬ ಸ್ಪಷ್ಟ ಉತ್ತರ ನೀಡಿರುತ್ತಾರೆ. ಈ ಹಿನ್ನಲೆಯಲ್ಲಿ ಮೇಲಿನ ಅಧಿಕಾರಿಗಳಿಗೆ ಅವರದೇ ಕೆಲಸ & ಕಾರ್ಯ ಬಾರದ ಒತ್ತಡಗಳು ಇರುತ್ತವೆ.ಬಹುತೇಕ ಸ್ಥಳೀಯ ಸಂಸ್ಥೆಗಳಲ್ಲಿ ಆಡಳಿತಾಧಿಕಾರಿಗಳನ್ನು ನೇಮಿಸುವ ಸಂದರ್ಭ ಯಾವಾಗ ಉದ್ಭವಿಸುತ್ತದೆ ಎಂದರೆ, ಕೌನ್ಸಿಲರ್ ಅವಧಿ ಮುಕ್ತಾಯವಾಗಿ ನೂತನ ಕೌನ್ಸಿಲ್ ರಚನೆ ಆಗುವ ತನಕ ಸೆಕ್ಷನ್ 315 ರ ಪ್ರಕಾರ ಇರುತ್ತದೆ.ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತರಾದ ಸದಸ್ಯರರುಗಳ ಸಂಘ ಇಲ್ಲದೆ ಇರುವುದು ಸಹ ಸರ್ಕಾರಕ್ಕೆ ಅನುಕೂಲವಾಗಿರುತ್ತದೆ. ಈ ಹಿಂದೆ ರಾಣೆಬೆನ್ನೂರಿನ ನಗರಸಭೆ ಅಧ್ಯಕ್ಷರಾಗಿದ್ದ ಬಿ.ಎಂ. ಮೆಣಸಿನಕಾಯಿ ಅವರು ಆ ಸಂಘದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ, ಪ್ರಬಲವಾದ ಸಂಘಟನೆ ಇತ್ತು. ರಾಜ್ಯ ಸರ್ಕಾರವು, ಮುನ್ಸಿಪಲ್ ಕಾಯ್ದೆ ತಿದ್ದುಪಡಿ ಮಾಡುವ ಸಂದರ್ಭದಲ್ಲಿ, ಈ ಸಂಘದ ಪದಾಧಿಕಾರಿಗಳನ್ನು ಆಹ್ವಾನಿಸುತ್ತಿದ್ದರು. ಲೋಕಸಭಾ ಸದಸ್ಯರರುಗಳ, ವಿಧಾನಸಭಾ ಸದಸ್ಯರರುಗಳ ಕಾಲಾವಧಿಯನ್ನು ಒಂದೇ-ಒಂದು ದಿನ ಸಹ ಕಡಿತಗೊಳಿಸುವ ನಿಯಮ ಇರುವುದಿಲ್ಲ…ವಸ್ತು ಸ್ಥಿತಿ ಹಿನ್ನೆಲೆಯಲ್ಲಿ, ಪೌರಾಡಳಿತ ಸಚಿವರಾದ ಶ್ರೀಯುತ ರಹೀಮ್ ಖಾನ್ ರವರು ಇದನ್ನು ಗಂಭೀರವಾಗಿ ಪರಿಗಣಿಸಿ, ಸೆಕ್ಷನ್ 18ರ ನಿಯಮಕ್ಕೆ ಸೂಕ್ತ ತಿದ್ದುಪಡಿ ತಂದು, ಚುನಾಯಿತ ಕೌನ್ಸಿಲರರುಗಳ ಅವಧಿಯನ್ನು ಸಂಪೂರ್ಣವಾಗಿ ಐದು ವರ್ಷ ನಾಗರಿಕರ ಸೇವೆ ಮಾಡಲು ಅನುವು ಮಾಡಿಕೊಡಬೇಕಾಗಿ ಅತ್ಯಂತ ಕಳಕಳಿಯಿಂದ ಕರ್ನಾಟಕ ರಾಜ್ಯ ನಿವೃತ್ತ ಪೌರನೌಕರರ ಮತ್ತು ಪೌರಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಎಲ್. ನಾರಾಯಣಾಚಾರ್ಪ್ರಾರ್ಥಿಸಿದ್ದಾರೆ. ಅಲ್ಲದೇ ಪ್ರಸ್ತುತ ಇರುವ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಎಚ್ಚೆತ್ತುಕೊಂಡು ತಮ್ಮ ರಾಜ್ಯ ಮಟ್ಟದ ಸಂಘವನ್ನು ಪುನರುಜ್ಜೀವನಗೊಳಿಸಿಕೊಂಡು ಸರ್ಕಾರದಿಂದ ತಮಗಾಗುವ ಅನ್ಯಾಯವನ್ನು ಸರಿಪಡಿಸಿಕೊಳ್ಳಲು ಕರ್ನಾಟಕ ರಾಜ್ಯ ನಿವೃತ್ತ ಪೌರನೌಕರರ ಮತ್ತು ಪೌರಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಎಲ್. ನಾರಾಯಣಾಚಾರ್ಕೋರಿದ್ದಾರೆ.