i
ರಾಜಕೀಯ ತಿರುವು ಪಡೆಯುತ್ತಿರುವ ಇಂಡಿಯಾ-ಭಾರತ ಒಂದಷ್ಟು ಅಭಿಪ್ರಾಯ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಇಂಡಿಯಾ – ಭಾರತ ಒಂದಷ್ಟು ಅಭಿಪ್ರಾಯ………ಇಂಡಿಯಾ ಮತ್ತು ಭಾರತ ಎಂಬ ಹೆಸರುಗಳು ಮಾರಾಟದ ಸರಕುಗಳಲ್ಲ, ರಾಜಕೀಯದ ದಾಳಗಳಲ್ಲ, ಹುಚ್ಚು ಪ್ರತಿಕ್ರಿಯೆಗಳ ಭಾವನಾತ್ಮಕ ಪದಗಳಲ್ಲ. ಅದು ಇತಿಹಾಸದ ಅಧಿಕೃತ ಹೆಸರುಗಳು ಮತ್ತು ನಮ್ಮದೇ ದೇಶದ ಎರಡು ವಿಭಿನ್ನ ಹೆಸರುಗಳು ಅಷ್ಟೇ. ಎರಡಕ್ಕೂ ಗೌರವ ಮತ್ತು ಘನತೆಯಿದೆ…….ಒಂದು ವೇಳೆ ಯಾವುದೋ ಕಾರಣದಿಂದ ಇಂಡಿಯಾ ಹೆಸರು ಬದಲಾಯಿಸಿ ಭಾರತ ಎಂದು ಮಾಡುವುದಾದರೆ ಅದು ಬಹುಮತ ಸರ್ಕಾರದ ವಿವೇಚನೆಗೆ ಸೇರಿದ್ದು. ಹಾಗೆಂದು ಇಡೀ ದೇಶ ಯಾವುದೋ ಒಂದು ಪಕ್ಷದ ಸಂಘದ ಪ್ರದೇಶದ ಆಸ್ತಿಯಲ್ಲ. ಸಂಪೂರ್ಣ ಸಂಸದೀಯ ಪ್ರಜಾಪ್ರಭುತ್ವದ ಗಣರಾಜ್ಯಗಳ ಒಕ್ಕೂಟ. ಆ ಜವಾಬ್ದಾರಿಯಿಂದ ತೀರ್ಮಾನ ಕೈಗೊಳ್ಳಬೇಕು. ಕೇವಲ ಒಂದು ರಾತ್ರಿಯಲ್ಲಿ ಲೆಟರ್ ಹೆಡ್ ಬದಲಾಯಿಸುವ ಏಕಮುಖ ನಿರ್ಧಾರ ಒಳ್ಳೆಯದಲ್ಲ ಅಷ್ಟೇ…….ದೇಶದ ಹೆಸರನ್ನು ಬದಲಾಯಿಸುವುದೇ ಆದರೆ ದಯವಿಟ್ಟು ಸರ್ವ ಸಮ್ಮತ ಅಭಿಪ್ರಾಯ ರೂಪಿಸಲು ಪ್ರಯತ್ನಿಸುವುದು ಮೊದಲ ಆಯ್ಕೆ. ಒಂದು ವೇಳೆ ಸಾಧ್ಯವಾಗದಿದ್ದರೆ ಸಂಸತ್ತಿನ ಅಧಿವೇಶನ ಕರೆದು ಬಹುಮತದಿಂದ ಸಂವಿಧಾನಾತ್ಮಕವಾಗಿ ಬದಲಾವಣೆಗೆ ಪ್ರಯತ್ನಿಸುವುದು ಎರಡನೇ ಆಯ್ಕೆ. ಅದರಲ್ಲೂ ಸಾಧ್ಯವಾಗದಿದ್ದಲ್ಲಿ ಕೆಲವೇ ತಿಂಗಳುಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಪಕ್ಷದ ಪ್ರಣಾಳಿಕೆಯಲ್ಲಿ ಇದನ್ನು ಸೇರಿಸಿ ಜನರ ವಿಶ್ವಾಸ ಮತ ಕೇಳುವುದು. ಆಗ ಬಹುಮತ ಪಡೆದ ಸರ್ಕಾರ ಹೆಸರು ಬದಲಾವಣೆ ಮಾಡಬಹುದು. ಬಹುಶಃ ಭಾರತ ಎಂದು ಬದಲಾವಣೆ ಮಾಡಲು ಯಾರದೂ ತಕರಾರು ಅಷ್ಟಾಗಿ ಇರುವುದಿಲ್ಲ……ಆದರೆ ಭಾವನಾತ್ಮಕವಾಗಿ ಜನರನ್ನು ಸೆಳೆಯಲು ಒಂದು ಮೈತ್ರಿಕೂಟ ಇಂಡಿಯಾ ಎಂದು ಹೆಸರಿಡುವುದು, ಅದನ್ನು ವಿರೋಧಿಸಲು ಮತ್ತೊಂದು ಬಣ ಭಾರತ ಎಂದು ಹೆಸರಿಡುವುದು ಮತದಾರರನ್ನು ಸೆಳೆಯುವ ಕುತಂತ್ರ ಎಂದು ಕರೆಯಬಹುದಲ್ಲವೇ. ಕೇವಲ ದೇಶದ ಹೆಸರಿನಿಂದ ಮತದಾರರನ್ನು ಮರುಳು ಮಾಡಬಹುದೇ, ಮತದಾರರು ಅಷ್ಟೊಂದು ಪೆದ್ದರೇ…..ವಿಷಾದನೀಯ ಸಂಗತಿಯೆಂದರೆ, ರಾಜಕಾರಣಿಗಳು ಬೇಕಂತಲೇ ಅವರ ಸ್ವಾರ್ಥಕ್ಕಾಗಿ ನಿಗದಿ ಪಡಿಸುವ ವಿಷಯದ ಮೇಲೆ ಚರ್ಚೆ ಮಾಡಲು ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳು ಪೈಪೋಟಿ ನಡೆಸಿ ಅದು ಚರ್ಚೆಗಿಂತ ಪರ ವಿರೋಧಗಳ ವಕೀಲಿಕೆಯೇ ಹೆಚ್ಚಾಗಿ ದೇಶದ ಹಿತಾಸಕ್ತಿ ಹಿನ್ನೆಲೆಗೆ ಸರಿಯುತ್ತಿದೆ……ವ್ಯಕ್ತಿ ಮತ್ತು ಪ್ರದೇಶದ ಹೆಸರುಗಳು ವ್ಯಾಕರಣದ ಪ್ರಕಾರ ” ನಾಮಪದ ” ( Noun ) ವಾಗುತ್ತದೆ. ಅದು ಅದೇ ಹೆಸರಿನಲ್ಲಿ ಸ್ಥಿರವಾಗುತ್ತದೆ. ಯಾವುದೇ ಭಾಷೆಯಲ್ಲಿ ಅದನ್ನು ಉಚ್ಚರಿಸಿದರು ಅದರ ಹೆಸರು ಮೂಲ ಭಾಷೆಯ ಹೆಸರೇ ಆಗಿರಬೇಕು. ಅದನ್ನು ಇತರ ಭಾಷೆಗೆ ತರ್ಜುಮೆ ಮಾಡಿ ಮಾತನಾಡುವುದು ತಪ್ಪಾಗುತ್ತದೆ. ಇಂಗ್ಲೀಷಿನಲ್ಲಿ ಇಂಡಿಯಾ ಮತ್ತು ಭಾರತೀಯ ಭಾಷೆಗಳಲ್ಲಿ ಭಾರತ ಎಂದು ಕರೆಯುವುದು ವ್ಯಾಕರಣ ಭಾಷೆಯಲ್ಲಿ ತಪ್ಪು. ಇಂಡಿಯಾ ಮತ್ತು ಭಾರತ ಒಂದೇ ದೇಶದ ಎರಡು ಬೇರೆ ಹೆಸರುಗಳು…….ಯುರೋಪಿಯನ್ ದೇಶಗಳ ಕೆಲವು ಸಾಹಸ ಪ್ರಿಯ ನಾವಿಕರು ವಿಶ್ವ ಪರ್ಯಟನೆ ಮತ್ತು ಹೊಸ ಭೂ ಪ್ರದೇಶಗಳ ಅನ್ವೇಷಣೆಗಾಗಿ ಸಮುದ್ರ ಮಾರ್ಗಗಳಲ್ಲಿ ದೀರ್ಘಕಾಲ ಸಂಚರಿಸುತ್ತಿದ್ದರು. ಆಗ ಇಟಲಿಯ ಕೊಲಂಬಸ್ ಎಂಬಾತನಿಗೆ ಬಹುಶಃ ಈ ರೀತಿಯ ಸಾಹಸದಲ್ಲಿ ದೊರೆತ ಮಾಹಿತಿಯ ಭೂಪಟದ ಪ್ರಕಾರ ಈಗ ನಾವಿರುವ ಅಖಂಡ ಭೂ ಭಾಗವನ್ನು ಇಂಡಸ್ ಲ್ಯಾಂಡ್ ಅಥವಾ ಸಿಂಧೂ ನದಿ ನಾಗರಿಕತೆಯ ಪ್ರದೇಶ ಇಂಡಿಯಾ ಎಂದು ಕರೆದಿರಬೇಕು. ಆ ಕಾರಣದಿಂದಾಗಿಯೇ ಆತ ದಾರಿ ತಪ್ಪಿ ಮತ್ತೊಂದು ದಿಕ್ಕಿನತ್ತ ಸಂಚರಿಸಿ ಆಗ ಕಂಡ ಭೂ ಭಾಗವನ್ನೇ ಇಂಡಿಯಾ ಎಂದು ಭಾವಿಸಿದನು. ವಾಸ್ತವದಲ್ಲಿ ಅದು ಇಂಡಿಯಾ ಆಗಿರಲಿಲ್ಲ. ಮುಂದೆ ಅದನ್ನು ವೆಸ್ಟ್ ಇಂಡೀಸ್ ಎಂದು ಕರೆಯಲಾಯಿತು…..ಮುಂದೆ ಪೋರ್ಚುಗೀಸ್ ನಾವಿಕ ವಾಸ್ಗೋಡಿಗಾಮ ಕೊಲಂಬಸ್ ದಾರಿಯನ್ನೇ ಸರಿಯಾದ ದಿಕ್ಕಿನಲ್ಲಿ ಸಂಚರಿಸಿ ಅದೇ ಭೂಪಟದ ಇಂಡಿಯಾದ ಕೇರಳದ ಕಲ್ಲಿಕೋಟೆ ಬಂದರು ಪ್ರವೇಶಿಸಿ ಭಾರತಕ್ಕೆ ಸಮುದ್ರ ಮಾರ್ಗ ಕಂಡುಹಿಡಿದನು…..ಆದರೆ ಇಲ್ಲಿ ಸ್ಥಳೀಯ ಮೂಲ ನಿವಾಸಿಗಳು ಈ ಸಿಂದೂ ನದಿತೀರದ ನಾಗರಿಕತೆಯನ್ನು ಪೌರಾಣಿಕ ಗ್ರಂಥಗಳ ಆಧಾರದ ಮೇಲೆ ಭರತ, ಭರತ ವರ್ಷ, ಭರತ ಖಂಡ, ಭಾರತ ಎಂದು ಕರೆಯುತ್ತಿದ್ದರು. ಜಂಬೂ ದ್ವೀಪ ಎಂದು ಕರೆಯಲಾಗುತ್ತಿತ್ತು…….
ಈ ದೃಷ್ಟಿಯಿಂದ ನೋಡುವುದಾದರೆ ಈ ಹೆಸರುಗಳು ಒಂದು ವಿವಾದವೇ ಅಲ್ಲ. ಎರಡೂ ಉಳಿಸಿಕೊಳ್ಳಬಹುದು ಅಥವಾ ಒಂದನ್ನು ನಿಗದಿಪಡಿಸಬಹುದು ಅಥವಾ ತಟಸ್ಥ ಇರಬಹುದು. ಅದರಲ್ಲಿ ಅಂತಹ ದೊಡ್ಡ ವ್ಯತ್ಯಾಸ ಏನೂ ಇಲ್ಲ. ಕೇವಲ ರಾಜಕೀಯ ಕಾರಣಗಳಿಗಾಗಿ ಅನವಶ್ಯಕವಾಗಿ ವಿವಾದ ಹುಟ್ಟುಹಾಕಲಾಗಿದೆ. ನಾವು ಸಹ ಸೈದ್ದಾಂತಿಕ ಮತ್ತು ಪಕ್ಷಗಳ ಆಧಾರದ ಮೇಲೆ ದ್ವೇಷ ಅಸೂಯೆ ತಿಕ್ಕಲುತನದಿಂದ ಪ್ರತಿಕ್ರಿಯಿಸುತ್ತಿದ್ದೇವೆ…….ಇದು ನನಗಿರುವ ಮಾಹಿತಿ. ಸಂಪೂರ್ಣ ಸತ್ಯ ಎಂದು ಹೇಳಲು ಸಹ ನನಗೆ ಹಿಂಜರಿಕೆ ಇದೆ. ಇದಕ್ಕಿಂತ ಹೆಚ್ಚು ಖಚಿತ ಐತಿಹಾಸಿಕ ಮಾಹಿತಿ ಇದ್ದಲ್ಲಿ ದಯವಿಟ್ಟು ಹಂಚಿಕೊಳ್ಳಬಹುದು. ಆದರೆ ಅದು ಅಧಿಕೃತ ಇತಿಹಾಸವಾಗಿರಬೇಕಷ್ಟೇ. ಯಾರದೋ ಯಾವುದೋ ಸಾಹಿತ್ಯದ ಕೃತಿ ಅಥವಾ ಪ್ರವಾಸ ಕಥನ ಅಥವಾ ಪೌರಾಣಿಕ ಕಾಲ್ಪನಿಕ ಬರಹವಾಗಿರಬಾರದು………..ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,ಮನಸ್ಸುಗಳ ಅಂತರಂಗದ ಚಳವಳಿ,ಲೇಖನ-ವಿವೇಕಾನಂದ ಎಚ್ ಕೆ,9844013068……..