i
ರನ್ನ ಸಕ್ಕರೆ ಕಾರ್ಖಾನೆ ಪುನಶ್ಚೇತನ, ವಾಣಿ ಸಕ್ಕರೆ ಕಾರ್ಖಾನೆ ಪುನಶ್ಚೇತನ ಯಾವಾಗ?…
ವರದಿ- ಹೆಚ್.ಸಿ.ಗಿರೀಶ್, ಹರಿಯಬ್ಬೆಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಯಲು ಸೀಮೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿರುವ ವಾಣಿ ವಿಲಾಸ ಸಕ್ಕರೆ ಕಾರ್ಖಾರೆ ಪುನಶ್ಚೇತನ ಯಾವಾಗ ಎನ್ನುವ ಪ್ರಶ್ನೆ ಉದ್ಭವವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ವಿವಿ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಮುಂದಾಗುತ್ತಾರೋ ಇಲ್ಲ ಮಾರಾಟಕ್ಕೆ ಯತ್ನಿಸುತ್ತಾರೋ ಕಾದು ನೋಡಬೇಕಿದೆ.
ಏಕೆಂದರೆ ಡ್ಯಾಂ 88 ವರ್ಷಗಳ ನಂತರ 2022ರ ಜುಲೈ 2 ರಂದು ಭರ್ತಿಯಾಗಿ ಕೋಡಿ ಹರಿದಿತ್ತು. ಅಂದಿನಿಂದಲೂ ರೈತರು, ರೈತಪರ ಸಂಘಟನೆಗಳು ವಾಣಿ ಸಕ್ಕರೆ ಕಾರ್ಖಾನೆ ಪುನಶ್ಚೇತನ ಮಾಡುವಂತೆ ಜನಪ್ರತಿನಿಧಿಗಳಲ್ಲಿ ಒತ್ತಡ ತರುತ್ತಿದ್ದಾರೆ.
ಎತ್ತು ಎರೆಗೆ ಎಳೆದರೆ ಕೋಣ ನೀರಿಗೆ ಎಳೆಯಿತು ಎನ್ನುವಂತ ಪರಿಸ್ಥಿತಿ ಹಿರಿಯೂರು ವಾಣಿ ವಿಲಾಸ ಸಕ್ಕರೆ ಕಾರ್ಖಾನೆಗೆ ಹೊಲಿಕೆ ಆಗಲಿದೆ. ರೋಗಗ್ರಸ್ತ ಕಾರ್ಖಾನೆ ಮುಚ್ಚುವ ಹುನ್ನಾರ ಮಾಡದೆ ಬದ್ಧತೆಯಿಂದ ಕಾರ್ಖಾನೆ ಆರಂಭಿಸಬೇಕಾಗಿದೆ.
ವಾಣಿ ವಿಲಾಸ ಸಕ್ಕರೆ ಕಾರ್ಖಾರನೆಯ ಇತಿಹಾಸವನ್ನು ಒಮ್ಮೆ ಅವಲೋಕನ ಮಾಡಿ ನೋಡಬೇಕಿದೆ. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದ ಸರ್ಕಾರವಿದ್ದಾಗ ಹಿರಿಯೂರಿನಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆದ್ದು ಶಾಸಕ ಮತ್ತು ಸಚಿವರು ಅಧಿಕಾರ ನಡೆಸಿದಾಗಲೆಲ್ಲಾ ಹಿರಿಯೂರಿನ ವಾಣಿ ವಿಲಾಸ ಸಕ್ಕರೆ ಕಾರ್ಖಾನೆ ಮಾರಾಟ ಯತ್ನ ನಡೆದಿದೆ. ಹಿರಿಯೂರು ವಿಧಾನಸಭಾ ಕ್ಷೇತ್ರದ ಇತಿಹಾಸ ಮತ್ತು ಸಕ್ಕರೆ ಕಾರ್ಖಾನೆಯ ಇತಿಹಾಸದ ಪುಟಗಳನ್ನು ಕೆದಕಿ ನೋಡಿದರೆ ಈ ಸಂಗತಿ ಬೆಳಕಿಗೆ ಬರುತ್ತದೆ. ಆರಂಭದಲ್ಲಿ ಕಾರ್ಖಾನೆ ಪಕ್ಷತೀತವಾಗಿ 1971-1972 ಅವಧಿಯಲ್ಲಿ ಕಾರ್ಖಾನೆ ಆರಂಭವಾಗಿತ್ತು. 1982ರಲ್ಲಿ ಬರ ಆವರಿಸಿ, ವಾಣಿ ವಿಲಾಸ ಸಾಗರದಲ್ಲಿ ನೀರಿನ ಅಲಭ್ಯತೆ, ಆಡಳಿತ ಮಂಡಳಿಯ ವೈಫಲ್ಯ ಮತ್ತಿತರ ಕಾರಣಗಳಿಂದ ಕಾರ್ಖಾನೆ ಸ್ಥಗಿತಗೊಂಡಿತು. ವೀರೇಂದ್ರಪಾಟೀಲ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಿರಿಯೂರು ಕ್ಷೇತ್ರದಲ್ಲಿ ಗೆದ್ದಿದ್ದ ಕೆ.ಎಚ್.ರಂಗನಾಥ್ ಸಚಿವರಾಗಿದ್ದರು. ಆದರೆ ಪುನಶ್ಚೇತನಕ್ಕೆ ಅಷ್ಟಾಗಿ ಒತ್ತು ನೀಡಲಿಲ್ಲ. 1994ರಲ್ಲಿ ರಾಜ್ಯದ ಚುಕ್ಕಾಣಿ ಹಿಡಿದಿದ್ದ ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿಯಾಗಿದ್ದರು. ಆಗ ಹಿರಿಯೂರಿನಲ್ಲಿ ಜೆಡಿಎಸ್ ನ ಡಿ. ಮಂಜುನಾಥ್ ಸಚಿವರಾಗಿದ್ದುಕೊಂಡು ಕಾರ್ಖಾನೆ ಪುನರಾರಂಭ ಮಾಡಿಸಿದರು. ಮತ್ತೆ 2002ರಲ್ಲಿ ಸ್ಥಗಿತಗೊಂಡಿತು. ಆಗ ಎಸ್. ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದರು. ಅವರ ಸಂಪುಟದಲ್ಲಿ ಕೆ.ಎಚ್. ರಂಗನಾಥ್ ಮಂತ್ರಿಯೂ ಆಗಿದ್ದರು. ಆ ಸಮಯದಲ್ಲಿ ಕಾರ್ಖಾನೆ ಸಂಪೂರ್ಣ ಸ್ಥಗಿತಗೊಂಡು ಪುನಶ್ತೇನದ ಚೆಂಡು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರ ಅಂಗಳದಲ್ಲಿದೆ. ಕಾರ್ಖಾನೆ ಪುನಶ್ಚೇತನಕ್ಕೆ ಎಲ್ಲ ರೀತಿಯ ಪೂರಕ ಅಂಶಗಳಿವೆ. ಜನಪ್ರತಿನಿಧಿಗಳು ರಾಜಕೀಯ ಇಚ್ಛಾಶಕ್ತಿ ಮೆರೆದು ಕಾರ್ಖಾನೆ ಆರಂಭಿಸಬೇಕಿದೆ ಅಷ್ಟೇ.
ಏಕೆಂದರೆ ಸ್ವತಃ ಮುಖ್ಯಮಂತ್ರಿಗಳ ಅವರು ಮುಧೋಳ ತಾಲ್ಲೂಕಿನ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ 2023- 24 ನೇ ಸಾಲಿಗೆ ಕಬ್ಬು ಅರೆಯುವ ಕಾರ್ಯವನ್ನು ಲೀಸ್ ಮೂಲಕ ಪುನರಾರಂಭಿಸುವ ಕುರಿತು ನಡೆದ ಸಭೆಯಲ್ಲಿ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಪುನಶ್ಚೇತನಗೊಳಿಸಲು ಅಲ್ಪಾವಧಿ ಟೆಂಡರ್ ಕರೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಕಬ್ಬು ಅರೆಯುವ ಕಾರ್ಯ ಪ್ರಾರಂಭ ವಾಗಬೇಕು. ಪುನಶ್ಚೇತನದಿಂದ ರೈತರಿಗೂ ಅನುಕೂಲ ವಾಗಬೇಕು. ಅಲ್ಪಮಟ್ಟದ ಹೂಡಿಕೆಗೆ ಸಿದ್ದವಿರುವ ಸಂಸ್ಥೆಗಳು ಟೆಂಡರ್ ನಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದು ತಿಳಿಸಿದ್ದಾರೆ. ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ ಪ್ರಧಾನ ಕಾರ್ಯದರ್ಶಿ ಪ್ರಭಾವತಿ ಹಿರೇಮಠ್, ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್ , ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಆಯುಕ್ತ ರವಿಕುಮಾರ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಕಾರ್ಯದರ್ಶಿ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.