i
ನಗರೋತ್ಥಾನ ಯೋಜನೆ ಕಾಮಗಾರಿ ಪ್ಯಾಕೇಜ್ ಟೆಂಡರ್ ಬೇಡ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕರ್ನಾಟಕ ಕುಡಿಯುವ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ವತಿಯಿಂದ ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು ಹಾಗೂ ನಾಯಕನಹಟ್ಟಿನಲ್ಲಿ ಅಮೃತ-02 ಯೋಜನೆಯಡಿ ಕುಡಿಯುವ ನೀರಿನ ಪೈಪ್ಲೈನ್ ಅಳವಡಿಕೆ ಕಾಮಗಾರಿಗಳಿಗೆ, ನಗರವಾರು ಪ್ರತ್ಯೇಕವಾಗಿ ಟೆಂಡರ್ ಕರೆಯುವಂತೆ ಅಧಿಕಾರಿಗಳಿಗೆ ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಮೃತ ನಗರೋತ್ಥಾನ (ಮುನಿಸಿಪಾಲಿಟಿ) ಯೋಜನೆ ಹಂತ-4 ರ ಕುರಿತು ಜರುಗಿದ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈಗಾಗಲೇ ಸರ್ಕಾರದಿಂದ ಹಿರಿಯೂರು ನಗರಕ್ಕೆ ರೂ.30 ಕೋಟಿ, ಚಳ್ಳಕೆರೆ ನಗರಕ್ಕೆ ರೂ.28 ಕೋಟಿ, ಮೊಳಕಾಲ್ಮೂರು ಪಟ್ಟಣಕ್ಕೆ ರೂ.18, ನಾಯಕನಹಟ್ಟಿ ಪಟ್ಟಣಕ್ಕೆ 14 ಕೋಟಿ ಅನುದಾನ ಬಿಡುಗಡೆಯಾಗಿ, ಕರ್ನಾಟಕ ಕುಡಿಯುವ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ವತಿಯಿಂದ ಅನುಮೋದನೆ ಸಹ ನೀಡಲಾಗಿದೆ. ಆದಷ್ಟು ಬೇಗ ಟೆಂಡರ್ ಕರೆದು ಯೋಜನೆ ಅನುಷ್ಠಾನಗೊಳಿಸಬೇಕು. ಈ ಎಲ್ಲಾ ಯೋಜನೆಗಳನ್ನು ಒಟ್ಟು ಮಾಡಿ ಟೆಂಡರ್ ಕರೆಯಲು ಹೊದರೆ ರೂ.50 ಕೋಟಿಗೂ ಹೆಚ್ಚಿನ ಮೊತ್ತದ ಕಾಮಾಗರಿಯಾಗುವುದರಿಂದ ಸರ್ಕಾರ ಉನ್ನತ ಮಟ್ಟದ ಸಭೆಯ ಅನುಮೋದನೆ ಪಡೆಯಬೇಕಾಗುತ್ತದೆ. ಇದರಿಂದಾಗಿ ಕಾಮಗಾರಿ ಅನುಷ್ಠಾನವಾಗುವಲ್ಲಿ ಅನಗತ್ಯ ವಿಳಂಬವಾಗುತ್ತದೆ. ಹೊಳಲ್ಕೆರೆ ಹಾಗೂ ಹೊಸದುರ್ಗ ಪುರಸಭೆ ಸಂಬಂಧಿಸಿದ ಸಿದ್ದಪಡಿಸಿದ ವಿಸ್ತøತ ಯೋಜನಾ ವರದಿಯನ್ನು ಮಂಡಳಿಗೆ ಕಳುಹಿಸಿ ಶೀಘ್ರವೇ ಅನುಮೋದನೆ ಪಡೆಯಬೇಕು ಎಂದರು. ಈ ವಿಚಾರವಾಗಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಿಗೆ ಸಚಿವ ಡಿ.ಸುಧಾಕರ್ ಸಭೆಯ ಮಧ್ಯದಲ್ಲಿಯೇ ಕರೆ ಮಾಡಿ ಮಾತನಾಡಿದರು.
ವಿಕಚೇತನರ ಶೌಚಾಲಯ ನಿರ್ಮಾಣಕ್ಕೆ ಅನುಮೋದನೆ: ಶೇ.5 ರ ಯೋಜನೆಯಡಿ ಹಿರಿಯೂರು ನಗರದ 7 ಸರ್ಕಾರಿ ಶಾಲೆಗಳಲ್ಲಿ ವಿಕಚೇತನರಿಗಾಗಿ ವಿಶೇಷ ಶೌಚಾಲಯಗಳನ್ನು ನಿರ್ಮಿಸಲು ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಇದೇ ಯೋಜನೆಯಡಿ 63.75 ಲಕ್ಷ ಅನುದಾನದಲ್ಲಿ ನಗರ ವ್ಯಾಪ್ತಿಯ ವಿಕಲಚೇತನರಿಗೆ ತ್ರಿಚಕ್ರ ವಾಹನ ನೀಡುವ ಯೋಜನೆಗೆ ನೀಡಿದ ಅನುಮತಿಯನ್ನು ಹಿಂಪಡೆಯಲಾಯಿತು. ಇದರ ಬದಲು ಜಿಲ್ಲಾ ಖನಿಜ ಪ್ರತಿಷ್ಠಾನ ಯೋಜನೆಯಡಿ ಈಗಾಗಲೇ ಹಂಚಿಕೆಯಾಗಿರುವಂತೆ ವಿಕಲಚೇತನರಿಗೆ ತ್ರಿಚಕ್ರ ವಾಹನ ನೀಡಲು ತೀರ್ಮಾನಿಸಲಾಯಿತು.
ಮೊಳಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣ ಮಾತನಾಡಿ, ಪರಿಶಿಷ್ಟ ಜಾತಿ ಹಾಗೂ ಪಂಗಡದ ವರ್ಗಕ್ಕಾಗಿ ಮೀಸಲಿಟ್ಟ ಶೇ.24.10 ರ ಯೋಜನೆಯಡಿ ಕೈಗೊಂಡ ಎಲ್ಲಾ ಕಾಮಗಾರಿಗಳನ್ನು ಕಡ್ಡಾಯವಾಗಿ ಅನುಷ್ಠಾನಗೊಳಸಬೇಕು. ಬ್ಯಾಂಕ್ಗಳಲ್ಲಿ ಈ ಯೋಜನೆಯ ಹಣವನ್ನು ಠೇವಣಿ ಇಟ್ಟು ಬೇರೆ ಕಾರ್ಯಗಳಿಗೆ ಬಳಸುವುದು ಕಂಡುಬರುತ್ತದೆ. ಇಂತಹ ಘಟನೆಗಳು ನಡೆಯದಂತೆ ಅಧಿಕಾರಿಗಳು ಎಚ್ಚರವಹಿಸಬೇಕು. ಅಧಿಕಾರಿಗಳು ಸತ್ಯ ದೂರವಾದ ಯೋಜನೆಗಳನ್ನು ಕೈಗೆತ್ತಿಕೊಳ್ಳಬಾರದು. ಯಾವುದೇ ಅವ್ಯವಹಾರಗಳು ಜರುಗದಂತೆ ನೋಡಿಕೊಳ್ಳಬೇಕು ಎಂದರು.
ಕಳೆದ ಸರ್ಕಾರದ ಅವಧಿಯಲ್ಲಿ ವಿಶೇಷ ಪ್ರೋತ್ಸಾಹವಾಗಿ ನೀಡಲಾದ ರೂ.1 ಕೋಟಿ ಅನುದಾನಕ್ಕೆ ಕ್ರಿಯಾ ಯೋಜನೆ ತಯಾರಿಸಲಾಗಿದೆ. ಯೋಜನೆ ಅನುಷ್ಠಾನವಾಗದ ಕಾರಣ ಸರ್ಕಾರ ಈ ಅನುದಾನವನ್ನು ಹಿಂಪಡೆದುಕೊಂಡಿದೆ. ಜಿಲ್ಲಾಧಿಕಾರಿಗಳು ಈ ಕುರಿತು ಸರ್ಕಾರಕ್ಕೆ ಪತ್ರ ಬರೆದು ಅನುದಾನವನ್ನು ಮರಳಿ ತರಲು ಪ್ರಯತ್ನಿಸಬೇಕು. ಈ ಕಾರ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಎಲ್ಲಾ ಶಾಸಕರು ಸರ್ಕಾರ ಮಟ್ಟದಲ್ಲಿ ದನಿಗೂಡಿಸಬೇಕು ಎಂದರು.
ಕರ್ನಾಟಕ ಕುಡಿಯುವ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯಿಂದ ನಾಯಕಹಟ್ಟಿ ಪಟ್ಟಣದಲ್ಲಿ ಕುಡಿಯುವ ನೀರಿನ ಪೈಪ್ಲೈನ್ ಅಳವಡಿಕೆ ಕಾಮಗಾರಿ ಕೈಗೆತ್ತಿಕೊಳ್ಳುವುದರಿಂದ, ಪಟ್ಟಣದ ಪರಿಶಿಷ್ಟ ಜಾತಿಯ ಜನರು ಹೆಚ್ಚಿನ ಸಂಖ್ಯೆ ವಾಸಿಸುವ ವಾರ್ಡಗಳಲ್ಲಿ, ತುಂಗಭದ್ರ ಹಿನ್ನೀರು ಯೋಜನೆಯ ಮೂಲಕ ಕುಡಿಯುವ ನೀರು ಸರಬರಾಜು ಮಾಡಲು ನೀರು ಸರಬರಾಜು ವಿತರಣಾ ಜಾಲ ಕಲ್ಪಿಸಿ ಹೆಚ್.ಡಿ.ಪಿ.ಇ ಕೊಳವೆ ಮಾರ್ಗ ಅಳವಡಿಸಲು ಕರೆಯಲಾದ ಟೆಂಡರ್ನ್ನು ರದ್ದು ಪಡಿಸಿ, ಕಾರ್ಯಾದೇಶವನ್ನು ಹಿಂಪಡೆದು, ಇದಕ್ಕಾಗಿ ಮೀಸಲಿಟ್ಟ ರೂ. 34.99 ಲಕ್ಷವನ್ನು ಇತರೆ ಅಗತ್ಯ ಯೋಜನೆಗಳಿಗೆ ಬಳಸಿಕೊಳ್ಳುವಂತೆ ಸೂಚನೆ ನೀಡಿದರು.
ನಾಯಕನಹಟ್ಟಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೂ.10 ಕೋಟಿ ವೆಚ್ಚದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗುತ್ತಿದೆ. ಆದ್ದರಿಂದ ನಗರೋತ್ಥಾನ ಯೋಜನೆಯಡಿ ಮಳಿಗೆ ನಿರ್ಮಿಸಲು ಕೈಗೆತ್ತಿಕೊಂಡ ಯೋಜನೆಯನ್ನು ರದ್ದು ಪಡಿಸಿ, ಹಾಗೇಯೇ ಪಟ್ಟಣ ಪಂಚಾಯತಿ ಮೊದಲನೆ ಮಹಡಿ ಕಟ್ಟಡ ನಿರ್ಮಾಣ ಸೇರಿದಂತೆ ಪ್ರಾರಂಭವಾಗದ ಕಾಮಗಾರಿಗಳನ್ನು ಸ್ಥಗಿತಗೊಳಿಸಿ, ನಾಯಕನಹಟ್ಟಿಗೆ ಸಂಬಂಧಿಸಿದಂತೆ ಆಡಳಿತಾಧಿಕಾರಿಗಳಾದ ತಹಶೀಲ್ದಾರ್ ನೇತೃತ್ವದಲ್ಲಿ ಮೊತ್ತೊಮ್ಮೆ ಯೋಜನೆಗಳಿಗೆ ಕ್ರಿಯಾ ಯೋಜನೆ ತಯಾರಿಸಿ ಅನುಮೋದನೆ ಪಡೆದುಕೊಳ್ಳಬೇಕು ಎಂದರು.
ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ, ಹೊಸದುರ್ಗ ಪಟ್ಟಣದಲ್ಲಿ ಒಳಚರಂಡಿ ಜಾಲ ಅಳವಡಿಸಲು 2007 ಹಾಗೂ 2017 ರಲ್ಲಿ ಒಟ್ಟು ರೂ.24.88 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಪಟ್ಟಣದಲ್ಲಿ ಒಳಚರಂಡಿ (ಯುಜಿಡಿ) ಜಾಲವನ್ನು ಅಭಿವೃದ್ಧಿ ಪಡಿಸಲಾಗಿದೆ. ಆದರೂ ಬಹುತೇಕ ಕಡೆ, ಚಂರಡಿ ನೀರು ರಸ್ತೆ ಹಾಗೂ ಬಡಾವಣೆಗಳಲ್ಲಿ ನಿಂತು, ದುರ್ನಾತ ಬೀರುತ್ತಿದ್ದು, ನಾಗರಿಕರಿಗೆ ತೊಂದರೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪಟ್ಟಣದ ಕೆಲವೆಡೆ ಜನರು ಅಕ್ರಮವಾಗಿ ಮನೆಯ ತ್ಯಾಜ್ಯ ನೀರು ಸಂಪರ್ಕವನ್ನು ಯುಜಿಡಿ ಸಂಪರ್ಕ ಜಾಲಕ್ಕೆ ಸೇರಿಸಿರುವುದರಿಂದ, ಅಲ್ಲಲ್ಲಿ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಇಂತಹ ಅಕ್ರಮ ಸಂಪರ್ಕವನ್ನು ಗುರುತಿಸಿ, ಸರಿಪಡಿಸುವ ಕಾರ್ಯ ಮಾಡಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಸಭೆಯಲ್ಲಿ ತಿಳಿಸಿದರು.
ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಚಳ್ಳಕೆರೆ ನಗರದಲ್ಲಿ ಸದ್ಯ ಪ್ರಗತಿಯಲ್ಲಿ ಇರುವ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಅನಗತ್ಯ ಕಾಮಗಾರಿಗಳಿಗೆ ಅನುದಾನ ವಿನಯೋಗಿಸದೆ ಜನರಿಗೆ ಉಪಯೋಗವಾಗುವ ಕಾಮಗಾರಿಗಳನ್ನು ಕೈಗೊಳ್ಳಬೇಕು. ನೂತನವಾಗಿ ನಿರ್ಮಿಸಲಾಗಿರುವ ತಾಲ್ಲೂಕು ಪಂಚಾಯತಿ ಮೊದಲ ಮಹಡಿಯಲ್ಲಿ ವಿಕಲಚೇತರನ ಕಚೇರಿಗೆ ಜಾಗ ಮೀಸಲಿಡಬೇಕು. ವಿಕಲಚೇತನರ ಅನುಕೂಲಕ್ಕಾಗಿ ಕಟ್ಟದಲ್ಲಿ ಲಿಫ್ಟ್ ವ್ಯವಸ್ಥೆಯನ್ನು ನಗರೋತ್ಥಾನದ ಅನುದಾನದಲ್ಲಿ ಅಳವಡಿಸುವಂತೆ ಸೂಚನೆ ನೀಡಿದರು.
ಹೊಳಲ್ಕೆರೆ ಶಾಸಕ ಡಾ. ಎಂ.ಚಂದ್ರಪ್ಪ ಮಾತನಾಡಿ, ನಗರೋತ್ಥಾನ ಯೋಜನೆಯಡಿ ವೈಯಕ್ತಿಕ ಫಲಾನುಭವಿಗಳಿಗೆ ನೀಡುವ ಅನುದಾನವನ್ನು ಪೌರ ಕಾರ್ಮಿಕ ಮನೆಗಳ ನಿರ್ಮಾಣದ ವಂತಿಕೆಗೆ ಬಳಸಿಕೊಳ್ಳುವಂತೆ ಸಲಹೆ ನೀಡಿದರು. ಹೊಳಲ್ಕೆರೆ ಪಟ್ಟಣದಲ್ಲಿ ನೂತವಾಗಿ ನಿರ್ಮಿಸಲಾಗಿರುವ ಪುರಸಭೆ ಕಾರ್ಯಲಯದ ಪೀಠೋಪಕರಣಗಳ ಖರೀದಿಗೆ ಅನುದಾನ ಒದಗಿಸುವಂತೆ ಅಧಿಕಾರಿಗಳಿಗೆ ಹೇಳಿದರು.
ಜಿಲ್ಲಾಧಿಕಾರಿ ದಿವ್ಯಪ್ರಭು.ಜಿ.ಆರ್.ಜೆ ಮಾತನಾಡಿ ಸಾರ್ವಜನಿಕರಿಗೆ ಅಗತ್ಯ ಇರುವ ತುರ್ತು ಕಾಮಗಾರಿಗಳನ್ನು ನಗರೋತ್ಥಾನದಲ್ಲಿ ಕೈಗೆತ್ತಿಕೊಳ್ಳಬೇಕು. ಅನಗತ್ಯ ಯೋಜನೆಗಳನ್ನು ರದ್ದು ಪಡಿಸಿ, ಜನಪ್ರತಿನಿಧಿಗಳ ಅಭಿಪ್ರಾಯ ಪಡೆದು ಯೋಜನೆಗಳನ್ನು ರೂಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ನಗರೋತ್ಥಾನ ಯೋಜನೆಯಡಿ ಇನ್ನೂ ಪ್ರಾರಂಭವಾಗದಿರುವ, ಹಾಗೂ ಟೆಂಡರ್ ಕರೆಯಲು ಬಾಕಿ ಇರುವ, ಕಾರ್ಯಾದೇಶ ನೀಡಬೇಕಾಗಿರುವ ಮತ್ತು ಮುಂದುವರಿಸಬೇಕಾದ ಕಾಮಗಾರಿಗಳ ಕುರಿತು ಚರ್ಚಿಸಿ, ಸರ್ಕಾರ ಅನುಮೋದನೆಗಾಗಿ ಮಂಡಿಸಲು ತೀರ್ಮಾನಿಸಲಾಯಿತು.
ನಗರಾಭಿವೃದ್ಧಿ ಕೋಶದ ಯೋಜನ ನಿರ್ದೇಶಕ ಎನ್.ಮಹೇಂದ್ರ ಕುಮಾರ್, ಲೋಕೋಪಯೋಗಿ ಇಲಾಖೆ ಮುಖ್ಯ ಕಾರ್ಯಪಾಲಕ ಅಭಿಯಂತರ ಮಲ್ಲಿಕಾರ್ಜುನ ಸೇರಿದಂತೆ ಎಲ್ಲಾ ನಗರ ಹಾಗೂ ಪುರಸಭೆ ಆಯುಕ್ತರು, ಆಡಳಿತಾಧಿಕಾರಿಗಳು, ತಹಸಿಲ್ದಾರರು ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.