i
ನಿಟ್ಟೆ ವಿವಿಯಲ್ಲಿ ’ಕೇರ್ ಆಫ್ ದ ಕ್ರಿಟಿಕಲಿ ಇಲ್ ಸರ್ಜಿಕಲ್ ಪೇಶೆಂಟ್ (CCrISP) ಕೋರ್ಸ್ ಆರಂಭ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಿಟ್ಟೆ ವಿಶ್ವವಿದ್ಯಾನಿಲಯವು ಹದಿನೈದು ವರ್ಷದ ಸಾರ್ಥಕ ಸೇವಾ ಪೂರೈಕೆಯ ಸಂಭ್ರಮದಲ್ಲಿ ತನ್ನ ತುರಾಯಿಗೆ ಹೊಸದೊಂದು ಗರಿಯೇರಿಸಿಕೊಂಡಿದೆ.
ನಿಟ್ಟೆ ವಿಶ್ವವಿದ್ಯಾನಿಲಯದ ಅಂಗಸಂಸ್ಥೆ ಜಸ್ಟೀಸ್ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯು ಇಂಗ್ಲೆಂಡಿನ ದ ರಾಯಲ್ ಕಾಲೇಜ್ ಆಫ್ ಸರ್ಜನ್ಸ್ನ ಸಹಯೋಗದೊಂದಿಗೆ ಕರ್ನಾಟಕದಲ್ಲಿ ಮೊದಲಬಾರಿಗೆ ಮತ್ತು ಭಾರತದೇಶದಲ್ಲಿ ನಾಲ್ಕನೆಯದಾಗಿ ’ಕೇರ್ ಆಫ್ ದ ಕ್ರಿಟಿಕಲಿ ಇಲ್ ಸರ್ಜಿಕಲ್ ಪೇಶೆಂಟ್’ (CCrISP) ಕೋರ್ಸ್ನ್ನು ಅಕ್ಟೋಬರ್ ೨ರಂದು ಆರಂಭಿಸಿದೆ.
ರಾಯಲ್ ಕಾಲೇಜ್ ಆಫ್ ಸರ್ಜನ್ಸ್, ಇಂಗ್ಲೆಂಡಿನ ಶಸ್ತ್ರಚಿಕಿತ್ಸಾತಜ್ಞರ ಹಾಗೂ ಮಾರ್ಗದರ್ಶಕರ ತಂಡವೊಂದು ಭಾರತಕ್ಕೆ ಬಂದು ಶಸ್ತ್ರಚಿಕಿತ್ಸೆಗೊಳಪಟ್ಟ ರೋಗಿಗಳಲ್ಲಿ ಗಂಭೀರ ಅನಾರೋಗ್ಯದಲ್ಲಿರುವವರನ್ನು ಗುರುತಿಸುವಿಕೆ ಮತ್ತು ಚಿಕಿತ್ಸಾವಿಧಾನವನ್ನು – ಈ ಕೋರ್ಸ್ ಮೂಲಕ ನಿಟ್ಟೆ ವಿಶ್ವವಿದ್ಯಾನಿಲಯದ ವೈದ್ಯಬಂಧುಗಳಿಗೆ ಕಲಿಸಿಕೊಡಲಿದ್ದಾರೆ. ರಾಯಲ್ ಕಾಲೇಜ್ ಆಫ್ ಸರ್ಜನ್ಸ್, ತಂಡದಲ್ಲಿ ಶ್ರಿ ಇಯಾನ್ ಮಹೇಶ್ವರನ್, ಶ್ರೀ ಶ್ರೀನಿವಾಸನ್ ರವಿ, ಶ್ರೀ ಪ್ರಭಾಕರ್ ಧರ್ಮೇಶ್ವರನ್, ಶ್ರೀ ಅಜೋಕುರೀಕತ್ತು ಜಾನ್, ಡಾ. ತವೇಂದ್ರನ್ ಪ್ರಭಾಕರ್, ನೀಲ್ ಮೊಲೊನಿ, ಕು. ಮಿಶೆಲ್ ಪೂಲ್ ಅವರಿದ್ದಾರೆ.
ಇಂಗ್ಲೆಂಡಿನ ರಾಯಲ್ ಕಾಲೇಜ್ ಆಫ್ ಸರ್ಜನ್ಸ್ನ ಅಅಡಿISP ಕೋರ್ಸ್ ನಿರ್ದೇಶಕರಾಗಿರುವ ಶ್ರೀ ಇಯಾನ್ ಮಹೇಶ್ವರನ್ ಮುಖ್ಯ ಅತಿಥಿಗಳಾಗಿದ್ದರು. ನಿಟ್ಟೆ ವಿಶ್ವವಿದ್ಯಾನಿಲಯದ ಸಹಕುಲಾಧಿಪತಿ ಡಾ. ಶಾಂತಾರಾಮ ಶೆಟ್ಟಿ, ಕುಲಪತಿ ಡಾ. ಎಂ. ಎಸ್. ಮೂಡಿತ್ತಾಯ, ಇಂಗ್ಲೆಂಡಿನ ರಾಯಲ್ ಕಾಲೇಜ್ ಆಫ್ ಸರ್ಜನ್ಸ್ನ CCrISP ಕೋರ್ಸ್ ಸಹನಿರ್ದೇಶಕ ಶ್ರೀನಿವಾಸನ್ ರವಿ, ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ಡೀನ್ ಡಾ. ಪಿ.ಎಸ್. ಪ್ರಕಾಶ್, ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಭಗವಾನ್ ಮತ್ತು ಕೋರ್ಸ್ ಸಂಯೋಜಕ ಡಾ. ಜಿ. ಜಯಕೃಷ್ಣನ್ ವೇದಿಕೆಯಲ್ಲಿದ್ದರು.
ಪೂರ್ವಾಹ್ನ ೯.೩೦ಕ್ಕೆ ಪ್ರಾರ್ಥನೆ ಹಾಗೂ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮ ಆರಂಭವಾಯಿತು. ಡಾ. ಜಯಕೃಷ್ಣನ್ ಸ್ವಾಗತಿಸಿದರು. ನಿಟ್ಟೆ ವಿಶ್ವವಿದ್ಯಾನಿಲಯದ ಸಹಕುಲಾಧಿಪತಿ ಡಾ. ಶಾಂತಾರಾಮ ಶೆಟ್ಟಿ ಮತ್ತು ಕುಲಪತಿ ಡಾ. ಎಂ. ಎಸ್. ಮೂಡಿತ್ತಾಯರು ನಿರೂಪಿಸಿದರು. ವೇದಿಕೆಯ ಮೇಲಿದ್ದ ಗಣ್ಯರಿಗೆ ಕ್ಷೇಮಾ ಡೀನ್ ಡಾ. ಪಿ.ಎಸ್. ಪ್ರಕಾಶ್ ಗೌರವಾರ್ಪಣೆ ಮಾಡಿದರು. ಡಾ. ಕ್ಯಾರೆನ್ ಡಿಸೋಜ ವಂದಿಸಿದರು.