i
ಸಭೆಯಲ್ಲಿ ಸದ್ದು ಮಾಡಿದ ಬೆಳೆ ವಿಮೆ ಅವ್ಯವಹಾರ, ನೀರು ಮೇವು, ಗೋಶಾಲೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲೆಯಾದ್ಯಂತ ತೀವ್ರ ಬರ ಪರಿಸ್ಥಿತಿ ಇದೆ. ಕುಡಿವ ನೀರು, ಜಾನುವಾರುಗಳಿಗೆ ಮೇವು, ಜನರಿಗೆ ಉದ್ಯೋಗ, ರೈತರಿಗೆ ಬೆಳೆ ವಿಮೆ ಪರಿಹಾರ ನೀಡಲು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಸೇರಿದಂತೆ ಬಹುತೇಕ ಶಾಸಕರುಗಳು ತಾಕೀತು ಮಾಡಿದರು.ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬರ ನಿರ್ವಹಣೆ ಸಭೆಯಲ್ಲಿ ಅವರು ಪಾಲ್ಗೊಂಡು ಮಾತನಾಡಿದರು. ಬರ ನಿರ್ವಹಣೆಗಾಗಿ ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆ ಅಧಿಕಾರಿಗಳು, ಎಲ್ಲ ಗ್ರಾಮ ಪಂಚಾಯಿತಿಗಳ ಪಿಡಿಒ, ತಾಪಂ ಇಒಗಳಿಗೆ ಹೊಣೆಗಾರಿಕೆ ನೀಡಿ ಸಮರ್ಪಕವಾಗಿ ಬರ ನಿರ್ವಹಣೆ ಮಾಡಬೇಕು. ಜಿಲ್ಲೆಯ 200ಕ್ಕೂ ಹಳ್ಳಿಗಳಲ್ಲಿ ಕುಡಿವ ನೀರಿನ ಸಮಸ್ಯೆ ತಲೆ ಎತ್ತಿ ಉಲ್ಬಣವಾಗುವ ಲಕ್ಷಣ ಕಾಣುತ್ತಿದೆ. ಜಾನುವಾರುಗಳಿಗೆ ಮೇವಿನ ಕೊರತೆ ಇದೆ. ಕೃಷಿ ಕೂಲಿ ಕಾರ್ಮಿಕರು ಕೆಲಸವಿಲ್ಲದೇ ಸಂಕಟ ಅನುಭವಿಸುವಂತಾಗಬಾರದು. ಇಂತಹ ಸನ್ನಿವೇಶದಲ್ಲಿ ಯಾವ ಹಳ್ಳಿಗಳಲ್ಲಿ ಸಮಸ್ಯೆಯಿದೆ ಎನ್ನುವುದನ್ನು ಮನಗಂಡು ಕೈಗೊಳ್ಳಬೇಕಾದ ಕ್ರಮಗಳು ಬಗ್ಗೆ ಚರ್ಚಿಸಿ ಪರಿಹಾರಕ್ಕೆ ಮುಂದಾಗಬೇಕು ಎಂದು ತಿಳಿಸಿದರು.ಬರಗಾಲದಲ್ಲಿ ಜನರು ತೊಂದರೆಗೆ ಸಿಲುಕಿಕೊಳ್ಳದಂತೆ ಮುಖ್ಯವಾಗಿ ಕುಡಿವ ನೀರು ಹಾಗೂ ನರೇಗಾ ಅನುಷ್ಠಾನದಲ್ಲಿ ಹೆಚ್ಚಿನ ಗಮನ ಹರಿಸಬೇಕು ಎಂದು ಸೂಚಿಸಿದರು.ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡಿ ಯಾವ ಹಳ್ಳಿಗಳಲ್ಲಿ ಕುಡಿವ ನೀರಿನ ಸಮಸ್ಯೆ ಸೇರಿದಂತೆ ಮತ್ತಿತರ ಸಮಸ್ಯೆಗಳು ಗಂಭೀರವಾಗಿದೆ ಎನ್ನುವುದನ್ನು ಪಟ್ಟಿ ಮಾಡಿ ಅಂತಹ ಗ್ರಾಮಗಳನ್ನು ಗುರುತಿಸಿ ಕ್ರಮ ಕೈಗೊಳ್ಳಬೇಕು. ಬೆಳೆ ವಿಮೆ ವಿತರಣೆಯಲ್ಲಿ ಆಗಿರುವ ಲೋಪಕ್ಕೆ ಕಾನೂನಾತ್ಮಕ ಕ್ರಮ ಜರುಗಿಸಬೇಕು. ಕಂದಾಯ ಇಲಾಖೆಯಿಂದ ನೀಡುವ ಬರ ಪರಿಹಾರ ವಿತರಣೆಯಲ್ಲಿ ಆಗಿರುವ ಅವ್ಯವಹಾರ ಕುರಿತು ಕಠಿಣ ಕ್ರಮ ಜರುಗಿಸಲು ಜಿಲ್ಲಾಧಿಕಾರಿಗಳಿಗೆ ಸುಧಾಕರ್ ಸೂಚನೆ ನೀಡಿದರು.
ಕಂದಾಯ ಇಲಾಖೆ ವಿಎಗಳು, ತಹಶೀಲ್ದಾರ್ ಅವರು ಮಾಡಿರುವ 1.62 ಕೋಟಿ ರೂ.ಗಳನ್ನು ತಪ್ಪಿತಸ್ಥರಿಂದ ವಸೂಲಿ ಮಾಡಬೇಕು. ಕದ್ದ ಮಾಲನ್ನು ಕಳ್ಳರಿಂದ ವಸೂಲಿ ಮಾಡಿಕೊಂಡು ಪೊಲೀಸರು ಕಳ್ಳನನ್ನು ಬಿಟ್ಟು ಕಳುಹಿಸುವುದಿಲ್ಲ, ಹಾಗೇ ತಪ್ಪು ಮಾಡಿರುವಂತ ಅಧಿಕಾರಿಗಳಿಗೆ ಶಿಕ್ಷೆ ಆಗಲೇ ಬೇಕು ಎಂದು ಶಾಸಕ ಟಿ.ರಘುಮೂರ್ತಿ ತಾಕೀತು ಮಾಡಿದರು.
ಮುಂದುವರೆದು ಮಾತನಾಡಿದ ರಘುಮೂರ್ತಿ, ತಾಲೂಕು ಸೇರಿದಂತೆ ಜಿಲ್ಲೆಯ ಇತರೆ ತಾಲೂಕುಗಳಲ್ಲೂ ಸಾಕಷ್ಟು ಮೇವಿನ ಕೊರತೆ ಇದೆ. ಅಧಿಕಾರಿಗಳು ಸಭೆಗೆ ತಪ್ಪು ಮಾಹಿತಿ ನೀಡಿದ್ದು ಸರಿಯಲ್ಲ. ನಾವು ಅಧಿವೇಶನದಲ್ಲಿ ಪ್ರಶ್ನೆ ಮಾಡಿದರೂ ಅಧಿಕಾರಿಗಳು ನೀಡಿರುವ ವರದಿ ಹೇಳಿ ಪರಿಸ್ಥಿತಿ ಉಲ್ಬಣವಾಗಿಲ್ಲ ಎಂದು ತಿಳಿಸುತ್ತಾರೆ. ಸಭೆಗೆ ಮತ್ತು ಸರ್ಕಾರಕ್ಕೆ ಯಾವುದೇ ಕಾರಣಕ್ಕೂ ತಪ್ಪು ಮಾಹಿತಿ ನೀಡಬೇಡಿ, ಮೂರು ದಿನದಲ್ಲಿ ನೈಜ ವರದಿಯನ್ನು ನೀಡಬೇಕು, ಜಿಲ್ಲಾಧಿಕಾರಿಗಳನ್ನು ಆ ವರದಿಯನ್ನು ಸರ್ಕಾರಕ್ಕೆ ಕಳುಹಿಸಿ ಕೂಡಲೇ ಗೋಶಾಲೆಗಳನ್ನು ತೆರೆಯಬೇಕು ಎಂದು ಆಗ್ರಹ ಮಾಡಿದರು. ಈ ವಿಷಯಕ್ಕೆ ಶಾಸಕ ಚಂದ್ರಪ್ಪ ಧ್ವನಿಗೂಡಿಸಿದರು.
ವಿಮಾ ಕಂಪನಿಯವರು ಒಳ ಒಪ್ಪಂದ ಮಾಡಿಕೊಂಡು ಹಣ ಕಟ್ಟಿರುವ ರೈತರಿಗೆ ಬೆಳೆ ವಿಮೆ ಪರಿಹಾರ ನೀಡದೇ ಸಾಕಷ್ಟು ಅವ್ಯವಹಾರ ಮಾಡಿದ್ದಾರೆ. 1048 ರೈತರು ವಿಮಾ ಕಂತು ಕಟ್ಟಿದ್ದಾರೆ. ವಿಮಾ ಕಂತು ಕಟ್ಟಿದ ರೈತರಿಗೆ ಪರಿಹಾರ ಬಂದಿಲ್ಲ, ಬೆಳೆ ಹಾಕಿಲ್ಲ, ಮುಳ್ಳು ಜಾಲಿ ಗಿಡ ಇರುವಂತ ರೈತರಿಗೆ ಬೆಳೆ ವಿಮೆ ಬಂದಿದ್ದು ಆ ಭಾಗದ ಎಲ್ಲ ರೈತರಿಗೆ ಕೂಡಲೇ ಬೆಳೆ ವಿಮೆ ಪರಿಹಾರ ವಿತರಣೆ ಮಾಡಬೇಕು ಎಂದು ಕೃಷಿ ಜಂಟಿ ನಿರ್ದೇಶಕ ಮಂಜುನಾಥ್ ಅವರಿಗೆ ಸೂಚನೆ ನೀಡಿದರು.ತಳಕು ಮತ್ತಿತರ ಕಡೆಗಳಲ್ಲಿ ವಿಎಗಳು ಮಾಡಿರುವ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿದೆ. ಆದರೆ ಆರೋಪಿತರು ತಡೆಯಾಜ್ಞೆ ತಂದಿದ್ದಾರೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಸಭೆಗೆ ಮಾಹಿತಿ ನೀಡುತ್ತಿದ್ದಂತೆ ಮತ್ತೊಷ್ಟು ಕೆಂಡವಾದ ಶಾಸಕ ರಘುಮೂರ್ತಿ ಅವರು, ಏಪ್ರಿಲ್ ನಲ್ಲಿ ಪ್ರಕರಣ ನಡೆದಿದೆ. 5 ತಿಂಗಳ ಕಾಲ ನೀವು ತಡೆಯಾಜ್ಞೆ ತೆರವುಗೊಳಿಸಿಲ್ಲ ಏಕೆ, ಕೂಡಲೇ ತಡೆಯಾಜ್ಞೆ ತೆರವುಗೊಳಿಸುವಂತೆ ಡಿಸಿ ಅವರಿಗೆ ರಘುಮೂರ್ತಿ ತಾಕೀತು ಮಾಡಿದರು. ಇದಕ್ಕೆ ಶಾಸಕ ಎನ್.ವೈ.ಗೋಪಾಲಕೃಷ್ಣ ಧ್ವನಿಗೂಡಿಸಿ ವಾರದಲ್ಲಿ ತಡೆಯಾಜ್ಞೆ ತೆರವುಗೊಳಿಸಬಹುದು, ಕೂಡಲೇ ಆ ಕೆಲಸ ಮಾಡಿ ಎಂದು ಹೇಳಿದರು.
6 ತಾಲೂಕಿಗೂ ನೀನೇ ಇಒ ಆಗಿಬಿಡು-
ಕುಡಿವ ನೀರಿನ ಸಮಸ್ಯೆ ಚರ್ಚೆ ನಡೆಯುತ್ತಿದ್ದಾಗ ಚಿತ್ರದುರ್ಗ ಇಒ ಹನುಮಂತಪ್ಪ ಹಿರಿಯೂರು ತಾಲೂಕಿಗೂ ಇಒ ಆಗಿದ್ದಾರೆಂಬುದನ್ನು ಅರಿತ ಶಾಸಕ ರಘುಮೂರ್ತಿ ಕೆಂಡಮಂಡಲರಾಗಿ ಉಳಿದ ನಾಲ್ಕು ತಾಲೂಕಿಗೂ ನೀನೇ ಇಒ ಆಗಿಬಿಡು ಅಲ್ಲಿಗೆ ಸರಿ ಹೋಗುತ್ತೇ ಎಂದು ಗರಂ ಆದರು. ಮಧ್ಯ ಪ್ರವೇಶ ಮಾಡಿದ ಹಿರಿಯೂರು ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್ ಅವರು, ಹಿರಿಯೂರಿನ ಹನುಮಂತಪ್ಪ ಪ್ರಭಾರಿ ಆಗಿದ್ದಾರಷ್ಟೇ ಎಂದು ಸಮರ್ಥಿಸಿಕೊಂಡರು.