i
ಜಿಪಂ, ತಾಪಂ ಚುನಾವಣೆಗೆ ಸಿದ್ಧರಾಗಿ, 28 ಎಂಪಿ ಸ್ಥಾನ ಗೆಲ್ಲಲು ಹೋರಾಡಿ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಬಿಜೆಪಿ ಕಚೇರಿಯಲ್ಲಿ ಬುಧವಾರ ನೂತನ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಪದಗ್ರಹಣ ನಡೆಯಿತು. ಪಕ್ಷದ ರಾಜ್ಯ ಘಟಕದ ಕಾರ್ಯಾಲಯದಲ್ಲಿ ಬೆಳಿಗ್ಗೆ ಪಕ್ಷದ ಬಾವುಟವನ್ನು ಹಸ್ತಾಂತರ ಮಾಡುವ ಮೂಲಕ ನಳಿನ್ ಕುಮಾರ್ ಕಟೀಲ್ ಅವರು ವಿಜಯೇಂದ್ರ ಅವರಿಗೆ ಅಧ್ಯಕ್ಷ ಸ್ಥಾನದ ಹೊಣೆಗಾರಿಕೆ ವರ್ಗಾಯಿಸಿದರು. ಈ ಸಂದರ್ಭದಲ್ಲಿ ಹೊಸ ಹುರುಪು,ಉತ್ಸಾಹ ಮನೆ ಮಾಡಿತ್ತು. ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಕಾರ್ಯಕರ್ತರ ಉತ್ಸಾಹ ಮುಗಿಲು ಮುಟ್ಟಿತ್ತು.
ಪಕ್ಷದ ಹಿರಿಯರಾದ ಬಿ.ಎಸ್.ಯಡಿಯೂರಪ್ಪ, ಬಸವರಾಜಬೊಮ್ಮಾಯಿ ಡಿ.ಎಚ್.ಶಂಕರಮೂರ್ತಿ, ರಾಮಚಂದ್ರಗೌಡ, ಕೆ.ಎಸ್.ಈಶ್ವರಪ್ಪ, ಗೋವಿಂದಕಾರಜೋಳ ಸಮ್ಮುಖದಲ್ಲಿ ಅಧಿಕಾರ ಹಸ್ತಾಂತರ ನಡೆಯಿತು.ವಿ.ಸೋಮಣ್ಣ, ಬಸನಗೌಡ ಪಾಟೀಲ ಯತ್ನಾಳ,ಸಿ.ಟಿ.ರವಿ, ಶೋಭಾಕರಂದ್ಲಾಜೆ ಅವರ ಗೈರು ಎದ್ದು ಕಾಣುತ್ತಿತ್ತು. ಉಳಿದಂತೆ ಬಿಜೆಪಿ ಪಕ್ಷದ ಎಲ್ಲ ಪ್ರಮುಖ ನಾಯಕರು, ಶಾಸಕರು, ಸಂಸದರು ಹಾಜರಿದ್ದು, ನೂತನ ಅಧ್ಯಕ್ಷರಿಗೆ ಶುಭ ಕೋರಿದರು.ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಪಂಚರಾಜ್ಯಗಳ ಚುನಾವಣೆ ಬಳಿಕ ಬೆಂಗಳೂರು ಅರಮನೆ ಮೈದಾನದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರನ್ನು ಸೇರಿಸಿ ಬೃಹತ್ ಕಾರ್ಯಕ್ರಮ ಆಯೋಜಿಸಲಾಗುವುದು. ಅಮಿತ್ ಶಾ ಮತ್ತು ಜೆ.ಪಿ.ನಡ್ಡಾ ಅವರನ್ನು ಆಹ್ವಾನಿಸಲಾಗುವುದು ಎಂದು ತಿಳಿಸಿದರು.ಅಧಿಕಾರ ಸ್ವೀಕಾರದ ಬಳಿಕ ಮಾತನಾಡಿದ ವಿಜಯೇಂದ್ರ, ಮುಂಬರುವ ಲೋಕಸಭಾ ಚುನಾಣವೆ ಅಗ್ನಿಪರೀಕ್ಷೆಯಾಗಿದ್ದು, 28 ಕ್ಕೆ 28 ಕ್ಷೇತ್ರಗಳನ್ನೂ ಗೆದ್ದು, ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವುದು ನಮ್ಮೆಲ್ಲರ ಗುರಿ. ಇದಕ್ಕಾಗಿ ಎಲ್ಲರೂ ಒಗ್ಗೂಡಿಯೇ ಕೆಲಸ ಮಾಡುವ ಸಂಕಲ್ಪ ಮಾಡುತ್ತೇವೆ ಎಂದರು.ಕಳೆದ ಲೋಕಸಭಾ ಚುನಾವಣೆ ವೇಳೆ ಅಂದಿನ ಪಕ್ಷದ ಅಧ್ಯಕ್ಷರಾಗಿದ್ದ ಯಡಿಯೂರಪ್ಪ ಅವರು 20 ಕ್ಕೂ ಹೆಚ್ಚು ಲೋಕಸಭಾ ಸ್ಥಾನಗಳನ್ನು ಗೆಲ್ಲುವುದಾಗಿ ಹೇಳಿದಾಗ ಹಲವರು ಹಾಸ್ಯ ಮಾಡಿದ್ದರು. ಒಗ್ಗಟ್ಟಿನಿಂದ ಹೋರಾಟ ನಡೆಸಿ 25 ಸ್ಥಾನಗಳನ್ನು ಪಕ್ಷ ಗೆದ್ದುಕೊಂಡಿತ್ತು. ದೇಶಕ್ಕಾಗಿ 1 ದಿನವೂ ರಜೆ ತೆಗೆದುಕೊಳ್ಳದೇ ಹಗಲಿರುಳೆನ್ನದೇ ಕೆಲಸ ಮಾಡುವ, ದೇಶವನ್ನು ಅಗ್ರಪಂಕ್ತಿ ರಾಷ್ಟ್ರಗಳ ಸಾಲಿಗೆ ತಂದು ನಿಲ್ಲಿಸುವ ಮೋದಿಯವರ ಕನಸು ನನಸು ಮಾಡಲು ನಾವೆಲ್ಲ ಹಗಲಿರುಳೆನ್ನೇ ಶ್ರಮಿಸಬೇಕಾಗಿದೆ ಎಂದು ಅವರು ಹೇಳಿದರು.ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮಗೆ ಹಿನ್ನಡೆ ಆಗಿದೆ. ಆ ಸೋಲಿ ಕಹಿಯನ್ನು ಮೆಟ್ಟಿ ಮುನ್ನಡೆಯಬೇಕು. ಅಧ್ಯಕ್ಷ ಸ್ಥಾನದ ಮಹತ್ವ ಮತ್ತು ಗೌರವ ಏನು ಎಂಬುದು ಗೊತ್ತಿದೆ. ದಶಕಗಳ ಕಾಲ ಕಾರ್ಯಕರ್ತರ ಬೆವರು ಮತ್ತು ಶ್ರಮದಿಂದ ಈ ಮಟ್ಟಕ್ಕೆ ಬೆಳೆದಿದೆ. ಹೀಗಾಗಿ ಕಾರ್ಯಕರ್ತರು ಮತ್ತು ಪಕ್ಷದ ಮುಖಂಡರು ತಲೆ ತಗ್ಗಿಸುವ ಕೆಲಸ ಮಾಡುವುದಿಲ್ಲ. ಪ್ರಾಮಾಣಿಕವಾಗಿ ದುಡಿಯುತ್ತೇನೆ ಎಂದು ವಿಜಯೇಂದ್ರ ಭರವಸೆ ನೀಡಿದರು.
ಪಕ್ಷದ ಎಲ್ಲ ಹಿರಿಯರ ಸಲಹೆ ಸೂಚನೆಗಳನ್ನು ಪಡೆದುಕೊಂಡೇ ಮುನ್ನಡೆಯುತ್ತೇನೆ. ಹಗಲು ರಾತ್ರಿ ಎನ್ನದೇ ಕಾಲಿಗೆ ಚಕ್ರಕಟ್ಟಿಕೊಂಡಂತೆ ರಾಜ್ಯ ವ್ಯಾಪಿ ಪ್ರವಾಸ ಮಾಡಿ, ಬಡವರು, ರೈತರು ಮತ್ತು ಕೂಲಿ ಕಾರ್ಮಿಕರ ಪರ ಕೆಲಸ ಮಾಡುತ್ತೇನೆ ಎಂದರು.
ನಮ್ಮ ಸರ್ಕಾರ ಇದ್ದಾಗ ಕಾಂಗ್ರೆಸ್ ಪಕ್ಷದವರು ಶೇ 40 ಕಮಿಷನ್ ಸರ್ಕಾರ ಎಂದು ಟೀಕಿಸಿದರು. ಜನ ಅದನ್ನು ನಂಬಿದರು. ಆದರೆ ಅವರು ಹೇಳಿದ್ದು ಈಗ ಸತ್ಯ ಆಗಿದೆ. ಈಗ ಶೇ 40 ಕಮಿಷನ್ ಸರ್ಕಾರ ಜಾರಿಯಲ್ಲಿದೆ. ಹಗಲು ದರೋಡೆಯಲ್ಲಿ ತೊಡಗಿದೆ. ವ್ಯಾಪಾಸ್ಥರು, ಉದ್ಯಮಿಗಳನ್ನು ಕೇಳಿ ನೋಡಿ, ಈ ಸರ್ಕಾರದ ಬಗ್ಗೆ ಎಲ್ಲ ಬಿಚ್ಚಿಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.ರಾಜ್ಯದಲ್ಲಿ ಭೀಕರ ಬರಗಾಲ ಇದೆ. ಆದರೆ ಒಬ್ಬನೇ ಒಬ್ಬ ಸಚಿವ ಗ್ರಾಮಗಳಿಗೆ ಹೋಗಿಲ್ಲ. ರೈತರ ಸಮಸ್ಯೆ ಕೇಳುವ ಪ್ರಯತ್ನ ಮಾಡಿಲ್ಲ. ಅಧಿಕಾರದ ದರ್ಪದಿಂದ ಮೆರೆಯುತ್ತಿದ್ದಾರೆ. ಇವರ ಉದ್ಧಟತನಕ್ಕೆ ಉತ್ತರ ನೀಡಬೇಕಲ್ಲ? ಲೋಕಸಭಾ ಚುನಾವಣೆಯಲ್ಲಿ ಅವರಿಗೆ ತಕ್ಕ ಉತ್ತರ ನೀಡಬೇಕು ಒಗ್ಗಟ್ಟಾಗಿ ಕಾಂಗ್ರೆಸ್ ಪಕ್ಷವನ್ನು ಮಣಿಸಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕರ್ತರ ಚುನಾವಣೆಯಾದ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಲಕ್ಷಾಂತರ ಕಾರ್ಯಕರ್ತರು ಶಾಸಕರು ಮತ್ತು ಸಂಸದರಿಗಾಗಿ ಕೆಲಸ ಮಾಡುತ್ತಾರೆ. ಅವರ ಚುನಾವಣೆಗೆ ಶಾಸಕರು ಮತ್ತು ಸಂಸದರು ಶ್ರಮಿಸಬೇಕು ಎಂದು ಹೇಳಿದರು.ಚುನಾವಣೆ ಗೆಲ್ಲುವ ತನಕ ಎಲ್ಲ ಜನರ ಬಗ್ಗೆ ಮಾತನಾಡುವವರು ಗೆದ್ದ ಬಳಿಕ ಲಿಂಗಾಯತ, ಒಕ್ಕಲಿಗ ನಾಯಕ ಎಂದು ಹೇಳಿಕೊಳ್ಳುವುದನ್ನು ಬಿಡಬೇಕು. ಎಲ್ಲ ಸಮುದಾಯಗಳ ಕಾರ್ಯಕರ್ತ ಎನ್ನುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ವಿಜಯೇಂದ್ರ ಸಲಹೆ ನೀಡಿದರು.ಕರ್ನಾಟಕವು ಬಿಜೆಪಿಯ ದಕ್ಷಿಣ ಭಾರತದ ಭದ್ರಕೋಟೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ ಜಯಭೇರಿ ಬಾರಿಸಬೇಕು. ಆಪರೇಷನ್ ಕಮಲ ಮಾಡಬೇಕಿಲ್ಲ. ಆ ಪಕ್ಷದಲ್ಲಿರುವ ಒಳಜಗಳ, ಕಚ್ಚಾಟದಿಂದ ಕುಸಿದುಹೋಗಲಿದೆ. ಅವರ ಶಾಸಕರಿಗೇ ಒಂದು ರೂಪಾಯಿ ಸಿಗುತ್ತಿಲ್ಲ. ಹೀಗಾಗಿ ಅವರ ರಸ್ತೆಯಲ್ಲಿ ತಲೆ ಎತ್ತಿಕೊಂಡು ಹೋಗುವ ಸ್ಥಿತಿಯಲ್ಲಿ ಇಲ್ಲ. ಜನರಿಗೆ ಮುಖ ತೋರಿಸಲೂ ಸಾಧ್ಯವಾಗುತ್ತಿಲ್ಲ. ಏನೂ ಅಭಿವೃದ್ಧಿ ಕೆಲಸ ಮಾಡದ ಇವರಿಗೆ ಜನ ಪಾಠ ಕಲಿಸುತ್ತಾರೆ ಎಂದರು.