i
ಆಯುಷ್ ಸೇವಾ ಗ್ರಾಮ ಉದ್ಘಾಟಿಸಿದ ಶಾಸಕ ಬಿ.ಜಿ.ಗೋವಿಂದಪ್ಪ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹೊಸದುರ್ಗ ತಾಲ್ಲೂಕಿನ ಆಲದಹಳ್ಳಿ ಎಕೆ ಕಾಲೋನಿಯಲ್ಲಿ ಆಯುಷ್ ಇಲಾಖೆಯ ಆಯುಷ್ ಸೇವಾ ಗ್ರಾಮ ಎಂಬ ವಿನೂತನ ಕಾರ್ಯಕ್ರಮವನ್ನು ಬುಧವಾರ ಶಾಸಕ ಬಿ.ಜಿ.ಗೋವಿಂದಪ್ಪ ಉದ್ಘಾಟಿಸಿದರು.
ನಂತರ ಮಾತನಾಡಿದ ಶಾಸಕ ಬಿ.ಜಿ.ಗೋವಿಂದಪ್ಪ, ಎಲ್ಲಾ ಭಾಗ್ಯಗಳಿಗಿಂತಲೂ ಆರೋಗ್ಯ ಭಾಗ್ಯಶ್ರೇಷ್ಟವಾಗಿದೆ. ಹಿಂದುಳಿದ ವರ್ಗದವರು ವಾಸಿಸುವ ಗ್ರಾಮಗಳಲ್ಲಿ ಆರೋಗ್ಯ ಸೇವೆ ಸಿಗಲಿ ಎಂಬ ಕಾರಣದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ನಿಯಮಿತವಾಗಿ ವೈದ್ಯರು ಆಯುಷ್ ಸೇವಾ ಗ್ರಾಮಕ್ಕೆ ಆಗಮಿಸಿ ಆರೋಗ್ಯ ತಪಾಸಣೆ ನಡೆಸಲಿದ್ದಾರೆ. ಎಲ್ಲರೂ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ನಾಗಸಮುದ್ರ ಮಾತನಾಡಿ, ಆಯುಷ್ ವೈದ್ಯ ಪದ್ಧತಿ ಒಂದು ಸುರಕ್ಷಿತ ವೈದ್ಯಪದ್ಧತಿಯಾಗಿದ್ದು, ಎಲ್ಲಾ ಖಾಯಿಲೆಗಳಿಗೆ ಈ ಪದ್ಧತಿಯಲ್ಲಿ ಚಿಕಿತ್ಸೆ ಲಭ್ಯವಿದೆ. ಆಯುಷ್ ಸೇವಾ ಗ್ರಾಮ ಕಾರ್ಯಕ್ರಮದಡಿಯಲ್ಲಿ ಚಿಕಿತ್ಸೆಯೊಂದಿಗೆ ಆರೋಗ್ಯ ಸುಧಾರಣೆ ಅವಶ್ಯಕ ಇರುವ ನೈರ್ಮಲ್ಯ, ಮನೆಮದ್ದು, ಪಥ್ಯ ಇವುಗಳ ಬಗ್ಗೆ ನಮ್ಮ ವೈದ್ಯರು ತಿಳಿಹೇಳಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಂಗುವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶ್ವರಪ್ಪ, ಸದಸ್ಯರಾದ ತ್ರಿವೇಣಿ ಹರೀಶ್, ಟಿ.ಬಸಪ್ಪ, ರಾಮಪ್ಪ, ಉಷಾ ಹಾಗೂ ವೈದ್ಯಾಧಿಕಾರಿಗಳಾದ ಡಾ.ನದಾಫ್, ಡಾ.ಮಹೇಶ್, ಡಾ.ಶಿವಕುಮಾರ್, ಡಾ.ಮಂಜುಳಾ, ಡಾ.ಶಾಂತಲಾ ಸೇರಿದಂತೆ ಆಯುಷ್ ವೈದ್ಯಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಸಂಚಾರಿ ಚಿಕಿತ್ಸಾ ಘಟಕದ ಸಿಬ್ಬಂದಿ ಇದ್ದರು.