
ನಿರೌಷಧ ಚಿಕಿತ್ಸಾ ಪದ್ದತಿ ಚಿತ್ರದುರ್ಗದ ಮನೆಮಾತಾಗಿದೆ– ಡಾ.ಚಂದ್ರಕಾಂತ್…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪ್ರತಿದಿನ ಯೋಗ ಮತ್ತು ಪ್ರಕೃತಿ ಚಿಕಿತ್ಸೆಗೆ 30 ರಿಂದ 40 ರೋಗಿಗಳು ಬಂದು ಆಯುಷ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನಿರೌಷಧ ಚಿಕಿತ್ಸಾ ಪದ್ದತಿಯಿಂದ ಸಂಪೂರ್ಣವಾಗಿ ಗುಣವಾಗುತ್ತಿರುವುದು ಅತೀವ ಸಂತೋಷದ ಸಂಗತಿ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ನಾಗಸಮುದ್ರ ಹೇಳಿದರು.
ಜಿಲ್ಲಾ ಆಯುಷ್ ಇಲಾಖೆ ಮತ್ತು ಜಿಲ್ಲಾ ಆಸ್ಪತ್ರೆ-ಆಯುಷ್ ವಿಭಾಗದ ವತಿಯಿಂದ ಈಚೆಗೆ ಹಮ್ಮಿಕೊಳ್ಳಲಾಗಿದ್ದ 6ನೇ ಪ್ರಕೃತಿ ಚಿಕಿತ್ಸಾ ದಿನೋತ್ಸವ ಉದ್ಘಾಟಿಸಿ ಮಾತನಾಡಿದರು.
ಆಯುಷ್ ಆಸ್ಪತ್ರೆಯ ಎಲ್ಲ ಚಿಕಿತ್ಸೆಗಳಿಗೆ ಜನರು ಸ್ಪಂದಿಸಿ ಗುಣಮಟ್ಟದ ಚಿಕಿತ್ಸೆಯನ್ನು ಪಡೆಯುವುದರ ಜೊತೆಗೆ ನಮ್ಮ ಆಯುಷ್ ಚಿಕಿತ್ಸೆಗಳು ಚಿತ್ರದುರ್ಗದ ಮನೆಮಾತಾಗುವಂತಾಗುತ್ತಿವೆ ಎಂದು ತಿಳಿಸಿದರು.
ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಚಿಕಿತ್ಸೆಯನ್ನು ಒದಗಿಸುತ್ತಿದ್ದ ಈ ಆಯುಷ್ ಆಸ್ಪತ್ರೆಯು ಈಗ 3ನೇ ಕ್ರಾಸ್, ಆದಿಶಕ್ತಿ ನಗರಕ್ಕೆ ಸ್ಥಳಾಂತರವಾಗಿದ್ದು ಅಲ್ಲಿ ನೀಡುತ್ತಿದ್ದ ಎಲ್ಲ ಚಿಕಿತ್ಸೆಗಳನ್ನು ಅಂದರೆ ಆಯುರ್ವೇದ ಚಿಕಿತ್ಸೆ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಹೋಮಿಯೋಪತಿ ಚಿಕಿತ್ಸೆ ಮತ್ತು ಯುನಾನಿ ಚಿಕಿತ್ಸೆಯನ್ನು ಇಲ್ಲಿಯೂ ನೀಡಲಾಗುತ್ತಿದೆ ಎಂದು ತಿಳಿಸಿದ ಅವರು, ಇಲ್ಲಿ ಚಿಕಿತ್ಸೆಯನ್ನು ನೀಡುತ್ತಿರುವ ಎಲ್ಲ ವೈದ್ಯ ಪದ್ದತಿಯ ವೈದ್ಯರುಗಳಿಗೂ ಮತ್ತು ಸಿಬ್ಬಂದಿಗಳಿಗೂ ಅಭಿನಂದನೆ ತಿಳಿಸಿದರು.
ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವೈದ್ಯಾಧಿಕಾರಿ ಡಾ. ಗಂಗಾಧರ ವರ್ಮ ಮಾತನಾಡಿ, ಆರೋಗ್ಯವಂತನಾದ ಮನುಷ್ಯನೇ ನಿಜವಾದ ಭಾಗ್ಯವಂತನು. ಆರೋಗ್ಯ ಭಾಗ್ಯಕ್ಕಿಂತ ಮಿಗಿಲಾದ ಭಾಗ್ಯವಿಲ್ಲವೆಂಬುದು ಅಕ್ಷರಶಃ ಸತ್ಯ. ಆರೋಗ್ಯವೆಂದರೆ ಕೇವಲ ರೋಗರಹಿತವಾಗಿರದೆ, ದೈಹಿಕವಾಗಿ, ಮಾನಸಿಕವಾಗಿ, ಆಧ್ಯಾತ್ಮಿಕವಾಗಿ, ಸಾಮಾಜಿಕವಾಗಿ ಮತ್ತು ಭಾವನಾತ್ಮಕವಾಗಿ ಸಮತೋಲನದಲ್ಲಿರುವುದು. ಈ ರೀತಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದರಲ್ಲಿ ಪ್ರಕೃತಿ ಚಿಕಿತ್ಸೆಯ ಪಾತ್ರ ಅತಿ ಮಹತ್ವದಾಗಿದೆ ಎಂದರು.
ಪ್ರಕೃತಿ ಚಿಕಿತ್ಸೆ, ನಿಸರ್ಗ ಚಿಕಿತ್ಸೆ, ನಿಸರ್ಗೋಪಚಾರ, ನ್ಯಾಚುರೋಪತಿ, ನೇಚರ್ ಕ್ಯೂರ್ ಹೀಗೆ ಹಲವು ನಾಮಗಳಿಂದ ಕರೆಯಲ್ಪಡುವ ಈ ಚಿಕಿತ್ಸೆಯು ಒಂದು ವೈಜ್ಞಾನಿಕ ಚಿಕಿತ್ಸಾ ಪದ್ಧತಿಯಾಗಿದ್ದು ಇದು ಕೇವಲ ರೋಗವನ್ನು ಮಾತ್ರ ದೂರ ಮಾಡುವುದಲ್ಲದೆ, ಮನುಷ್ಯನ ಜೀವನ ಶೈಲಿಯನ್ನು ಸರಿಮಾಡಿ, ದೇಹದ ರೋಗ ನಿರೋಧಕ ಶಕ್ತಿ ಹಾಗೂ ಚೈತನ್ಯ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ದೇಹದ ವಿಸರ್ಜನಾಂಗಗಳನ್ನು ಉತ್ತೇಜನಗೊಳಿಸಿ ದೇಹದ ಕಶ್ಮಲಗಳನ್ನು ಹೊರಹಾಕಿ ಮಾನವನ ಆರೋಗ್ಯವನ್ನು ನೈಸರ್ಗಿಕವಾಗಿ ವೃದ್ಧಿಗೊಳಿಸುತ್ತದೆ ಎಂದು ತಿಳಿಸಿದರು.
ಡಾ. ರೆಹಮಾನ್ ಮಾತನಾಡಿ, ಆಯುಷ್ ಎಂದರೆ ಆಯುರ್ವೇದ, ಯೋಗ ಮತ್ತು ಪ್ರಕೃತಿಚಿಕಿತ್ಸೆ, ಯುನಾನಿ, ಸಿದ್ದ, ಸೋವಾರಿಗ್ಪ ಮತ್ತು ಹೋಮಿಯೋಪತಿ ಎಂದು ವಿವರಣೆಯನ್ನು ನೀಡಿದರು.
ಡಾ. ದೇವೇಂದ್ರಪ್ಪ ಮಾತನಾಡಿ, ಇಲ್ಲಿ ಪಂಚಕರ್ಮ ಚಿಕಿತ್ಸೆಗಳು ಸಂಪೂರ್ಣವಾಗಿ ಉಚಿತವಾಗಿದ್ದು ಸಾರ್ವಜನಿಕರು ಇದರ ಉಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ವೈದ್ಯಾಧಿಕಾರಿಗಳಾದ ಡಾ. ಜಗದೀಶ್, ಡಾ. ಉದಯ ಭಾಸ್ಕರ್, ಡಾ. ದೇವರಾಜ್, ಆಸ್ಪತ್ರೆಯ ಸುಧಾ, ಶ್ರೀನಿವಾಸ್, ಶಿವಮ್ಮ, ರಂಜಿತ, ಶಾಂತಮ್ಮ, ಕಾವ್ಯ, ಗೌಸಿಯಾ ಮತ್ತು ಆಸ್ಪತ್ರೆಯ ಸಾಧಕರು, ರೋಗಿಗಳು ಮತ್ತು ಸಾರ್ವಜನಿಕರು ಇದ್ದರು.