i
ವಿಶೇಷ ತಜ್ಞರಿಂದ ವೈದ್ಯಕೀಯ ಸೇವೆ ಪಡೆಯಿರಿ- ಮಕ್ಕಳ ತಜ್ಞ ಡಾ.ತಿಮ್ಮೇಗೌಡ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಆಯುಷ್ಮಾನ್ ಭನ ಕಾರ್ಯಕ್ರಮದಡಿಯಲ್ಲಿ ಆರೋಗ್ಯ ತಪಾಸಣಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ವಿಶೇಷ ತಜ್ಞವೈದ್ಯರಿಂದ ವೈದ್ಯಕೀಯ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಹಾಗೂ ಮಕ್ಕಳ ತಜ್ಞ ಡಾ.ಜಿ.ಆರ್.ತಿಮ್ಮೇಗೌಡ ಹೇಳಿದರು.
ಚಿತ್ರದುರ್ಗ ತಾಲ್ಲೂಕಿನ ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಆಯುಷ್ಮಾನ್ ಭವ ಕಾರ್ಯಕ್ರಮದಡಿ ಆರೋಗ್ಯ ತಪಾಸಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಆಯುಷ್ಮಾನ್ ಭವ ಕಾರ್ಯಕ್ರಮದ ಆಂದೋಲನದ ಅಂಗವಾಗಿ ಆಯುಷ್ಮಾನ್ ಕಾರ್ಡ್ಗಳ ನೋಂದಣಿ ಮತ್ತು ವಿತರಣೆ ಮಾಡಲಾಗುತ್ತದೆ. ಈ ಕಾರ್ಯಕ್ರಮದಡಿಯಲ್ಲಿ ಮನೆ ಬಾಗಿಲಿಗೆ ಆಯುಷ್ಮಾನ್ ಕಾರ್ಡ್ಗಳನ್ನು ನೀಡಲಾಗುವುದು. ಅಲ್ಲದೆ ಅಸಾಂಕ್ರಾಮಿಕ ರೋಗಗಳ ಪತ್ತೆ ಹಾಗೂ ತಪಾಸಣೆ, ಕ್ಷಯ ರೋಗ, ಮಲೇರಿಯಾ ಡೆಂಗ್ಯೂ ಚಿಕನ್ ಗುನ್ಯಾ ಕೀಟ ಜನ ರೋಗಗಳು ಕುಷ್ಠರೋಗ ಹಾಗೂ ಇತರೆ ಸಾಂಕ್ರಾಮಿಕ ರೋಗಗಳ ತಪಾಸಣಾ ಶಿಬಿರ, ತಾಯಿ ಮತ್ತು ಮಕ್ಕಳ ಆರೋಗ್ಯ ಹಾಗೂ ಪೌಷ್ಠಿಕ ಆರೋಗ್ಯ ಶಿಬಿರ, ಸಿಕ್ಕಲ್ ಸೆಲ್ ಅನಿಮೀಯಾ ತಪಾಸಣೆ (ಬುಡಕಟ್ಟು ಜನಾಂಗದವರಿಗೆ) ಇತರೆ ಪ್ರದೇಶದಲ್ಲಿ ಕಣ್ಣಿನ ತಪಾಸಣೆ ಹಾಗೂ ಎಲ್ಲಾ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಜ್ಞ ವೈದ್ಯರಿಂದ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಗುವುದು ಎಂದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮಾತನಾಡಿ, ಜಿಲ್ಲೆಯಲ್ಲಿ ಆಯುಷ್ಮಾನ್ ಭವ ಯೋಜನೆಯಡಿ ಪ್ರತಿ ಮಂಗಳವಾರ 11 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 5 ತಾಲ್ಲೂಕು ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರುಗಳನ್ನು ನಿಯೋಜಿಸಿ ಆರೋಗ್ಯ ಮೇಳ ಕೈಗೊಂಡು ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಗುತ್ತಿದೆ ಎಂದರು.
ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮತ್ತು ಆರೋಗ್ಯ ಕ್ಷೇಮ ಉಪ ಕೇಂದ್ರಗಳಲ್ಲಿ ಸಾಂಕ್ರಾಮಿಕವಲ್ಲದ ರೋಗಗಳಾದ ಮಧುಮೇಹ, ರಕ್ತದ ಒತ್ತಡ, ಕ್ಯಾನ್ಸರ್ ಹೃದಯ ರೋಗ, ಇತರೆ ರೋಗಗಳ ತಪಾಸಣೆ ನಡೆಸಲಾಗುತ್ತದೆ. ಉಚಿತ ಚಿಕಿತ್ಸೆ ಮತ್ತು ನಿರ್ದೇಶನ ಮಾಡಲಾಗುತ್ತಿದೆ. ಅಲ್ಲದೆ ಸಕ್ರಿಯೆ ಕ್ಷಯ ರೋಗಪತ್ತೆ ಕುಷ್ಟರೋಗ ತಪಾಸಣೆ, ಯೋಗ ಶಿಕ್ಷಣ, ಕುಟುಂಬ ಕಲ್ಯಾಣ ಯೋಜನೆ ಅನುಷ್ಠಾನ, ಆಯುಷ್ಮಾನ್ ಭವ ಯೋಜನೆಯಲ್ಲಿ ದೊರೆಯುವ ಸೇವಾ ಸವಲತ್ತುಗಳು ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮಗಳು ಗರ್ಭಿಣಿ ತಪಾಸಣೆ ಬಾಣಂತಿ ಆರೈಕೆ ಮಕ್ಕಳಿಗೆ ಲಸಿಕೆ ಆರೋಗ್ಯ ಇಲಾಖೆಯ ಇತರೆ ಎಲ್ಲಾ ಕಾರ್ಯಕ್ರಮಗಳನ್ನು ಆರೋಗ್ಯ ತಪಾಸಣೆಯೊಂದಿಗೆ ಪರಿಚಯಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಹೆರಿಗೆ ಮತ್ತು ಸ್ತ್ರೀರೋಗ ತಜ್ಞೆ ಡಾ.ಬಿ.ಶ್ರೀಜಾ, ದಂತ ವೈದ್ಯೆ ಡಾ.ಕೆ.ಬಿಂದು, ಫಾರ್ಮಸಿ ಅಧಿಕಾರಿ ಮೋಹನ್, ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಶುಶ್ರೂಷಕಿ ಕ್ಲಾರ, ನೇತ್ರಾಧಿಕಾರಿ ಬರ್ಕತ್ ಅಲಿ, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಪ್ರಯೋಗಶಾಲಾ ತಂತ್ರಜ್ಞರು ಇದ್ದರು. ಕಾರ್ಯಕ್ರಮದಲ್ಲಿ 150 ಫಲಾನುಭವಿಗಳು ಸದುಪಯೋಗ ಪಡೆದುಕೊಂಡರು.