i
ಸಮುದಾಯಗಳಿಗೆ ಮಂಕುಬೂದಿ ಎರಚುವ ಸಿದ್ದರಾಮಯ್ಯನವರ ಷಡ್ಯಂತ್ರ ಜಗಜ್ಜಾಹೀರಾಗಿದೆ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜಕೀಯ ಲಾಭಕ್ಕೆ ತಕ್ಕಂತೆ ಟೇಬಲ್ ಮೇಲೆ ವರದಿ ಸಿದ್ದಪಡಿಸಿ, ಸಮುದಾಯಗಳಿಗೆ ಮಂಕುಬೂದಿ ಎರಚುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಷಡ್ಯಂತ್ರ ಜಗಜ್ಜಾಹೀರಾಗಿದೆ. ಸಮುದಾಯಗಳ ನಡುವೆ ಭಿನ್ನಮತ ಸೃಷ್ಟಿಸಿ ಡೋಲಾಯಮನ ಪರಿಸ್ಥಿತಿ ನಿರ್ಮಿಸಿ ಚುನಾವಣೆ ಗೆಲ್ಲುವ ಕೀಳುಮಟ್ಟ ನಿಮ್ಮದು ಎಂದು ರಾಜ್ಯ ಜೆಡಿಎಸ್ ಘಟಕ ಆರೋಪಿಸಿದೆ.
ಜೆಡಿಎಸ್ ತನ್ನ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿ, ಒಡೆದು ಆಳುವ ಬ್ರಿಟಿಷರ ಬುದ್ದಿ ಇನ್ನೂ ನಿಮ್ಮ ತಲೆಯಲ್ಲಿ ಬದುಕಿದಂತಿದೆ. ಅವೈಜ್ಞಾನಿಕ ವರದಿ ಸ್ವೀಕಾರದ ಹಿಂದಿನ ರಾಜಕೀಯ ಲೆಕ್ಕಾಚಾರವೇನು ಸ್ವಾಮಿ? ಎಂದು ಜೆಡಿಎಸ್ ಪ್ರಶ್ನಿಸಿದೆ. ‘ಜಾತಿಗಣತಿ ಅವೈಜ್ಞಾನಿಕ‘, ಎಂದು ನಿಮ್ಮ ಸಂಪುಟದ ನಾಯಕರೆ ತಿರಸ್ಕರಿಸಿದರು ‘ವರದಿ ಸ್ವೀಕಾರಕ್ಕೆ ಬದ್ದ‘ ಎನ್ನುತ್ತಿರುವ ಸಿದ್ದರಾಮಯ್ಯ ಸರ್ವಾಧಿಕಾರಿ ಎಂಬ ಮನೋಭಾವದಲ್ಲಿರಬೇಕು. ಅವೈಜ್ಞಾನಿಕ ವರದಿ ಮುಂದಿಟ್ಟುಕೊಂಡು ಚುನಾವಣೆ ಗೆಲ್ಲುವ ಹಪಾಹಪಿತನ ನಿಮ್ಮಲ್ಲಿ ಶುರುವಾಗಿದೆ. ಸಮುದಾಯಗಳನ್ನು ಜೋಡಿಸುವ ಕೆಲಸ ಮಾಡಿ, ಒಡೆಯಬೇಡಿ ಎಂದು ಜೆಡಿಎಸ್ ಕಿವಿ ಮಾತು ಹೇಳಿದೆ.