i
ಕೋಟೆನಾಡಿನ ಜಿಲ್ಲಾ ಬಿಜೆಪಿ ಸಾರಥಿ ಯಾರು?, ಹನುಮಂತೇಗೌಡ, ಸುರೇಶ್, ಸಂಪತ್ ಕುಮಾರ್?…
ವರದಿ-ಹೆಚ್.ಸಿ.ಗಿರೀಶ್, ಹರಿಯಬ್ಬೆ.
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಅನಿರೀಕ್ಷಿತ ಬೆಳವಣಿಗೆಯೊಂದಿಗೆ ಬಿ.ವೈ.ವಿಜಯೇಂದ್ರ ಅವರನ್ನು ಬಿಜೆಪಿ ಹೈಕಮಾಂಡ್ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ಒಂದು ಕಡೆಯಾದರೆ ಅದೇ ರೀತಿಯ ಅನಿರೀಕ್ಷಿತ ಬೆಳವಣಿಗೆಗಳು ಜಿಲ್ಲಾ ಬಿಜೆಪಿ ಘಟಕಗಳಲ್ಲಿ ನಡೆಯುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅಧಿಕಾರ ವಹಿಸಿಕೊಂಡು ಹಿರಿ ಕಿರಿಯರನ್ನು ಭೇಟಿ ಮಾಡುತ್ತಲೇ ರಾಜ್ಯ ಬಿಜೆಪಿ ಘಟಕ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳ ಬಿಜೆಪಿ ಘಟಕಗಳನ್ನು ವಿಸರ್ಜಿಸಿ ನೂತನ ಸಾರಥಿ ನೇಮಕ ಮಾಡಲಾಗುತ್ತದೆ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಚಿತ್ರದುರ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ತೆರೆ ಮರೆಯಲ್ಲಿ ಬಿರುಸಿನ ಪೈಪೋಟಿ ನಡೆಯುತ್ತಿದೆ.
ರಾಜ್ಯಾಧ್ಯಕ್ಷರ ಆಯ್ಕೆ ಮಾದರಿಯಲ್ಲೇ ಕೋಟೆ ನಾಡಿಗೆ ಬಿಜೆಪಿ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಲು ಪಕ್ಷದಲ್ಲಿ ಗಂಭೀರ ಚಿಂತನೆ ನಡೆದಿದೆ ಎನ್ನಲಾಗಿದೆ.
ಚಿತ್ರದುರ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿದ್ದ ಕೆ.ಎಸ್.ನವೀನ್ ಅವಧಿಯಲ್ಲಿ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳ ಪೈಕಿ 5ರಲ್ಲಿ ಗೆದ್ದಿತ್ತು. 2019ರಲ್ಲಿ ಎಂಪಿ ಸ್ಥಾನ, ಎರಡು ವಿಧಾನ ಪರಿಷತ್ ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿತ್ತು. ಜಿಲ್ಲೆಯಲ್ಲಿ ಈಗ ಬಿಜೆಪಿ ಸಂಪೂರ್ಣ ನೆಲಕಚ್ಚಿದೆ. ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಎಂ.ಚಂದ್ರಪ್ಪ ಹೊರೆತು ಪಡಿಸಿದರೆ ಉಳಿದ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದು ಬಲಿಷ್ಠವಾಗಿದೆ. ಈ ಐದು ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಹಾಲಿ ಸರ್ಕಾರವನ್ನು ಎದುರಿಸುವ ಶಕ್ತಿ, ಉತ್ಸಾಹ ಇರುವಂತ ಯುವ ನಾಯಕನಿಗೆ ಪಟ್ಟ ಕಟ್ಟಬೇಕು ಎನ್ನುವುದು ಕಾರ್ಯಕರ್ತರ ಮನದಾಸೆಯಾಗಿದೆ.
ಚಿತ್ರದುರ್ಗ ಜಿಲ್ಲೆಯ ಮಟ್ಟಿಗೆ ಹೇಳುವುದಾದರೆ ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ರಾಜ್ಯ ಕಾರ್ಯದರ್ಶಿ ಕೆ.ಎಸ್.ನವೀನ್, ಶಾಸಕ ಎಂ.ಚಂದ್ರಪ್ಪ, ಸಂಸದ ಹಾಗೂ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಇವರುಗಳ ಅಭಿಪ್ರಾಯ ಸಂಗ್ರಹ ಮಾಡಿ ನೂತನ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ, ಲೋಕಸಭಾ ಚುನಾವಣೆ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳನ್ನು ಗೆಲ್ಲುವ ದೃಷ್ಠಿ ಇಟ್ಟುಕೊಂಡು ಎಲ್ಲರ ಅಭಿಪ್ರಾಯದೊಂದಿಗೆ ಯೋಗ್ಯ, ಪ್ರಭಾವಿ, ಅತ್ಯಂತ ಸಾಮರ್ಥ್ಯ ಇರುವ ಯುವ ನಾಯಕನಿಗೆ ಜಿಲ್ಲಾ ಬಿಜೆಪಿ ಪಟ್ಟ ಕಟ್ಟುವುದು ಬಹುತೇಕ ನಿಶ್ಚಿತವಾಗಿದೆ.
ಹಾಗೇ ನೋಡಿದರೆ ಚಿತ್ರದುರ್ಗ ಜಿಲ್ಲಾ ಬಿಜೆಪಿ ಹುದ್ದೆಯ ಮೇಲೆ ಕಣ್ಣಿಟ್ಟಿರುವವರ ಪಟ್ಟಿ ದೊಡ್ಡದಾಗಿಯೇ ಬೆಳೆಯುತ್ತದೆ. ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರ ಕಟ್ಟಾ ಬೆಂಬಲಿಗರಾದ ಚಿತ್ರದುರ್ಗ ನಗರ ಪ್ರಾಧಿಕಾರದ ಮಾಜಿ ಅಧ್ಯಕ್ಷ ಜಿ.ಟಿ.ಸುರೇಶ್ ಸಿದ್ದಾಪುರ, ತಿಪ್ಪಾರೆಡ್ಡಿ, ಚಂದ್ರಪ್ಪ ಸೇರಿದಂತೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಆರ್ ಎಸ್ಎಸ್ ಮುಖಂಡರುಗಳ ಬೆಂಬಲ ಇರುವ ಬಿ.ಸಿ.ಹನುಮಂತೇಗೌಡ, ಶಾಸಕ ಎಂ.ಚಂದ್ರಪ್ಪ ಇವರ ಬೆಂಬಲ ಇರುವ ವಕೀಲ ಮಲ್ಲಿಕಾರ್ಜುನ್, ಒಬಿಸಿ ಮೋರ್ಚಾ ಅಧ್ಯಕ್ಷ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಹಾಲಿ ಉಪಾಧ್ಯಕ್ಷ ಸಂಪತ್ ಕುಮಾರ್, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ವೆಂಕಟೇಶ್ ಯಾದವ್, ಮೊಳಕಾಲ್ಮುರು ಮಂಡಲ ಅಧ್ಯಕ್ಷ ಡಾ.ಮಂಜುನಾಥ್ ಇವರುಗಳ ಹೆಸರು ಬಲವಾಗಿ ಕೇಳಿ ಬರುತ್ತಿದೆ. ಜಿಎಂ ಸಿದ್ದೇಶ್ ಪುತ್ರ ಅನಿತ್ ಅವರ ಹೆಸರು ಕೇಳಿ ಬರುತ್ತಿದ್ದರೂ ಅವರು ದಾವಣಗೆರೆ ಕ್ಷೇತ್ರಕ್ಕೆ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ, ಈ ಹಿಂದೆ ಚಿತ್ರದುರ್ಗ ವಿಧಾನಸಭಾ ಕ್ಷೇತ್ರಕ್ಕೂ ಆಕಾಂಕ್ಷಿಯಾಗಿದ್ದರು. ಹೀಗಾಗಿ ಎರಡು ಜಿಲ್ಲೆಯಲ್ಲೂ ರಾಜಕೀಯವಾಗಿ ಬೆಳೆಯಲು ಎರಡು ದೋಣಿ ಮೇಲೆ ಪ್ರಯಾಣ ಮಾಡುತ್ತಿರುವುದರಿಂದ ಎರಡು ಜಿಲ್ಲೆಗಳಲ್ಲಿ ಅವರಿಗೆ ಹಿನ್ನಡೆಯಾಗುವ ಸಾಧ್ಯತೆಯೇ ಹೆಚ್ಚು ಎನ್ನಲಾಗಿದೆ.
ಬಿ.ಸಿ.ಹನುಮಂತೇಗೌಡ-
ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕುಂಚಿಟಿಗ, ಕುಂಚಿಟಿಗ ಲಿಂಗಾಯಿತ, ಕುಂಚಿಟಿಗ ಒಕ್ಕಲಿಗ ಸೇರಿ ಒಟ್ಟು 2.50 ಲಕ್ಷಕ್ಕೂ ಅಧಿಕ ಮತಗಳನ್ನು ಹೊಂದಿರುವ ಕುಂಚಿಟಿಗ ಸಮಾಜವನ್ನು ಪ್ರತಿನಿಧಿಸುತ್ತಿರುವ ಬಿ.ಸಿ.ಹನುಮಂತೇಗೌಡರಿಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನ ಕೊಟ್ಟರೆ ಹೇಗೆ, ಅವರಿಂದ ಹೆಚ್ಚಿನ ಮತಗಳನ್ನು ದ್ರುವೀಕರಣ ಮಾಡಲು ಸಾಧ್ಯವೇ, 12 ವರ್ಷಗಳಿಂದ ನಿರಂತರವಾಗಿ ಎಬಿವಿಪಿ ಮತ್ತು ಪಕ್ಷ ಸಂಘಟನೆ ಮಾಡಿರುವ ಅವರು 10 ವರ್ಷಗಳ ಕಾಲ ರಾಜ್ಯ ಮಟ್ಟದಲ್ಲಿ ಎಬಿವಿಪಿಯ ರಾಜ್ಯ ಕಾರ್ಯದರ್ಶಿ, ಜಿಲ್ಲಾ ಪ್ರಮುಖ್, ಶಿರಾ ವಿಧಾನಸಭಾ ಕ್ಷೇತ್ರದ ಉಸ್ತುವಾರಿಯಾಗಿ ಉತ್ತಮ ಕೆಲಸ ನಿರ್ವಹಿಸಿದ, ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಶೂನ್ಯ ಮಟ್ಟದಲ್ಲಿದ್ದ ಬಿಜೆಪಿಯನ್ನು ದೊಡ್ಡ ಮಟ್ಟದಲ್ಲಿ ಸಂಘಟಿಸಿದ ಕೀರ್ತಿ ಹನುಮಂತೇಗೌಡರಿಗೆ ಸಲ್ಲುತ್ತದೆ.
ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ವಿದ್ಯಾರ್ಥಿ ಜೀವನದಿಂದ ಇಲ್ಲಿಯ ತನಕ ನೂರಾರು ಹೋರಾಟ ಕಟ್ಟಿರುವ ಬಿಇ. ಎಂಟೆಕ್ ಉನ್ನತ ಶಿಕ್ಷಣ ಪಡೆದು ಶಿಕ್ಷಣ ಪ್ರೇಮಿಯಾಗಿಯು ಗೌಡರು ಹೊರಹೊಮ್ಮಿದ್ದಾರೆ.
ಪಕ್ಷ ಸಂಘಟನೆಯಲ್ಲಿ ವಿಜಯೇಂದ್ರ ಅವರೊಟ್ಟಿಗೆ ಸಕ್ರಿಯಾವಾಗಿ ಭಾಗಿಯಾಗಿ ಪಕ್ಷವನ್ನು ಸಂಘಟಿಸುವ ಕಾರ್ಯ ಮಾಡಲು ಹನುಮಂತೇಗೌಡರೇ ಸೂಕ್ತ ಎನ್ನುವ ಭಾವನೆ ಕಾರ್ಯಕರ್ತರಲ್ಲಿ ಇದ್ದಂತೆ ಕಾಣುತ್ತಿದೆ.
ರಾಜ್ಯ ಮತ್ತು ರಾಷ್ಟ್ರ ಮಟ್ಟದ ಆರ್ಎಸ್ಎಸ್ ಪ್ರಮುಖರ ಸಂಪರ್ಕದಲ್ಲಿದ್ದು ಅವರ ಬೆಂಬಲ ಪಡೆದಿರುವ, ತಿಪ್ಪಾರೆಡ್ಡಿ, ಚಂದ್ರಪ್ಪ ಸೇರಿದಂತೆ ಜಿಲ್ಲೆಯ ಎಲ್ಲ ನಾಯಕರ ಸ್ನೇಹ, ಸಂಪರ್ಕದಲ್ಲಿರುವ, ನಿರಂತರ ಪರಿಶ್ರಮ, ಹಗಲು ರಾತ್ರಿ ಎನ್ನದೇ ನಿರಂತರವಾಗಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡುವ, ಕಾರ್ಯಕರ್ತರ ವಿಶ್ವಾಸ ಹೊಂದಿ ನಿಕಟ ಸಂಬಂಧ ಹೊಂದಿರುವ ಹನುಮಂತೇಗೌಡ ಪಕ್ಷ ದೊಡ್ಡ ಶಕ್ತಿಯಾಗ ಬಲ್ಲರು ಎನ್ನುವ ಮಾತುಗಳು ಬಿಜೆಪಿ ವಲಯದಲ್ಲೇ ಕೇಳಿ ಬರುತ್ತಿದೆ. ಚಿತ್ರದುರ್ಗ ಜಿಲ್ಲೆಯನ್ನು ಇಂಚಿಂಚು ಅರ್ಥ ಮಾಡಿಕೊಂಡಿರುವ ಬಿ.ಸಿ.ಹನುಮಂತೇಗೌಡ ಎಬಿವಿಪಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಹಲವು ಹೋರಾಟಗಳನ್ನು ಕಟ್ಟುವ ಮೂಲಕ ಯುವಕರ ಮನದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಈಗಾಗಲೇ ಚಿತ್ರದುರ್ಗ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ ಹನುಮಂತೇಗೌಡ ಸಾಕಷ್ಟು ಹೆಸರು ಮಾಡಿದ್ದಲ್ಲದೆ ಪಕ್ಷವನ್ನು ತಳ ಮಟ್ಟದಿಂದ ಕಟ್ಟುವ ಕಾರ್ಯ ಮಾಡಿ ತೋರಿಸಿದ್ದಾರೆ.
ಹನುಮಂತೇಗೌಡರಲ್ಲಿರುವ ನಾಯಕತ್ವದ ಗುಣಗಳು ಎಲ್ಲರಿಗೂ ಇಷ್ಟ ಆಗಲಿದೆ. ಅಲ್ಲದೆ ಅವರೊಬ್ಬ ಅತ್ಯುತ್ತಮ ಸಂಘಟನಾ ಚತುರ, ಚುನಾವಣೆ ಎದುರಿಸಬಲ್ಲ ಛಾತಿ, ಸವಾಲುಗಳನ್ನು ಎದುರಿಸುವ ಧೈರ್ಯ, ಯುವಕರ ಕಣ್ಮಣಿ ಹಾಗೂ ಪಕ್ಷವನ್ನು ಮುನ್ನಡೆಸಲು ತನು ಮನ ಧನ ಅರ್ಪಿಸಲು ಹಿಂದೆ ಮುಂದೆ ನೋಡದ ವ್ಯಕ್ತಿತ್ವ ಗೌಡರಲ್ಲಿದೆ. ರಾಜ್ಯಾಧ್ಯಕ್ಷ ವಿಜಯೇಂದ್ರ ಅವರೊಟ್ಟಿಗೆ ಕೈಜೋಡಿಸಿ ದುಡಿಯುವ ಪ್ರಭಾವಿ ಯುವ ನಾಯಕ ಹನುಮಂತೇಗೌಡ ಎಂದರೆ ತಪ್ಪಾಗದು.ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯ ಸರ್ಕಾರದ ಶಕ್ತಿ ಇದೆ. ಜೊತೆಗೆ ಅಹಿಂದ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ. ಸಂಘಟನಾ ಚತುರ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದು ಇವರನ್ನು ಎದುರಿಸಿ ಪಕ್ಷವನ್ನು ವಿಜಯೇಂದ್ರ ಅವರೊಟ್ಟಿಗೆ ಸೇರಿ ಪಕ್ಷ ಸಂಘಟಿಸುವ ಜವಾಬ್ಧಾರಿಗಳಿಗೆ ಹೆಗಲು ಕೊಡುವಂತ ಯುವ ನಾಯಕ ಹನುಮಂತೇಗೌಡರಾಗಬಹುದು.
ಮುಂಬರುವ ಲೋಕಸಭಾ ಚುನಾವಣೆ, ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ, ಜಿಪಂ, ತಾಪಂ ಚುನಾವಣೆಗಳನ್ನು ನಿಬಾಯಿಸುವ ಸವಾಲ್ ಇರುವುದರಿಂದ ಮುನ್ನುಗ್ಗುವ ಯುವ ನಾಯಕನಿಗೆ ಆಯ್ಕೆ ಮಾಡುವುದು ನಿಶ್ಚಿತ.
ಬಿಜೆಪಿ ಪಕ್ಷಕ್ಕೆ ಹಿಂದಿನ ಖದರ್ ಇಲ್ಲ, ಹಲವು ಮುಖಂಡರು ಈಗಾಗಲೇ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಹೋಗಿದ್ದಾರೆ. 2018-2023ರಲ್ಲಿ ಬಿಜೆಪಿ ಸರ್ಕಾರ ಇತ್ತು. 2024ರ ಚುನಾವಣೆಯಲ್ಲಿ ಅಂತಹ ಯಾವುದೇ ಶಕ್ತಿ ಇಲ್ಲ. ಒಬ್ಬೊಬ್ಬರಾಗಿ ಪಕ್ಷವನ್ನು ಬಿಟ್ಟು ಹೋಗುತ್ತಿದ್ದಾರೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಯುವ ನಾಯಕ ಹನುಮಂತೇಗೌಡರಿಗೆ ಪಕ್ಷ ಅಳೆದು ತೂಗಿ ಅಧ್ಯಕ್ಷ ಸ್ಥಾನ ನೀಡಿದ್ದೇ ಆದರೆ ಗತಕಾಲದ ವೈಭವ ಕೋಟೆನಾಡಿನಲ್ಲಿ ಮತ್ತೆ ಮರುಕಳಿಸಲಿದೆ ಎನ್ನುವ ಭಾವನೆ ಬಿಜೆಪಿಯ ಬಹಳಷ್ಟು ಕಾರ್ಯಕರ್ತರು, ಮುಖಂಡರಲ್ಲಿ ಇದ್ದಂತೆ ಕಾಣುತ್ತಿರುವುದರಿಂದ ಚಿತ್ರದುರ್ಗ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಹನುಮಂತೇಗೌಡ ಅನಿವಾರ್ಯ ಆಗಬಹುದು ಎನ್ನುವ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿವೆ.