i
ಪಿಡಿಓ ಅಮಾನತ್ತು ಆದೇಶಕ್ಕೆ ತಡೆಯಾಜ್ಞೆ ನೀಡಿದ ಕರ್ನಾಟಕ ಆಡಳಿತ ನ್ಯಾಯ ಮಂಡಳಿ(ಕೆಎಟಿ)…
ಚಂದ್ರವಳ್ಳಿ ನ್ಯೂಸ್, ನೆಲಮಂಗಲ:
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಬೂದಿಹಾಳ್ ಗ್ರಾಮ ಪಂಚಾಯಿತಿಯಲ್ಲಿ 2017 ರಿಂದ 2019ರ ವರೆಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಡಿ.ಎಂ.ಪದ್ಮನಾಭ್ ರವರು ಈ ಸಂದರ್ಭದಲ್ಲಿ ನೂತನ ಗ್ರಾಮ ಸೌಧ ಕಟ್ಟಡವನ್ನು ಸಿಎಸ್ ಆರ್ ಅನುದಾನ ಹಾಗೂ ದಾನಿಗಳಿಂದ ಹಣ ಕ್ರೂಢೀಕರಿಸಿ ಪಂಚಾಯಿತಿ ಕಟ್ಟಡ ನಿರ್ಮಾಣ ಮಾಡಿಸಿದ್ದರು ಎನ್ನಲಾಗಿ ಕೆಲವರು ಆರೋಪಿಸಿ ಕಟ್ಟಡ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಸಕ್ಷಮ ಶಿಸ್ತು ಪ್ರಾಧಿಕಾರದಲ್ಲಿ ಪ್ರಕರಣ ದಾಖಲಿಸಿದ್ದರು.
ಇದರ ಬಗ್ಗೆ ತನಿಖೆ ನಡೆಸಿದ್ದ ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಪಿಡಿಓ ಪದ್ಮನಾಭ್ ಹೇಳಿಕೆಯನ್ನು ಪಡೆಯದೆ ದಾಖಲೆಗಳನ್ನು ಪರಿಶೀಲಿಸದೆ ಅಮಾನತ್ತು ಆದೇಶ ಮಾಡಿದ್ದರು ಎನ್ನಲಾಗಿದ್ದು ಸದರಿ ಪಿ ಡಿ ಓ ಪದ್ಮನಾಬ್ ರವರು ಅಮಾನತ್ತು ಆದೇಶವನ್ನು ಪ್ರಶ್ನಿಸಿ ಕರ್ನಾಟಕ ನ್ಯಾಯ ಮಂಡಳಿ ಯಲ್ಲಿ ( ಕೆಎಟಿ ) ಪ್ರಕರಣ ದಾಖಲಿಸಿದ್ದರು. ಅಮಾನತು ಪ್ರಕರಣವನ್ನು ಪರಿಶೀಲಿಸಿದ ನ್ಯಾಯ ಮಂಡಳಿ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೇ ನೆಲಮಂಗಲ ತಾಲೂಕಿನ ಬೂದಿಹಾಳ್ ಪಂಚಾಯತಿಯಲ್ಲಿ ಮಾದರಿ ಗ್ರಾಮ ಸೌಧವನ್ನು ಕಟ್ಟಿದ ಹೆಮ್ಮೆ ನನಗಿದೆ. ಕೆಲವರು ದುರುದ್ದೇಶದಿಂದ ನನ್ನ ಮೇಲೆ ಪಂಚಾಯಿತಿ ಕಟ್ಟಡ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಪ್ರಕರಣ ದಾಖಲಿಸಿ ನನ್ನ ತೇಜೋವದೆ ಮಾಡಿದರು. ಕೆಎಟಿ ತಡೆಯಾಜ್ಞೆ ನೀಡಿರುವುದು ಸಂತಸ ತಂದಿದೆ ಎಂದು ಕುಂದಾಣ ಗ್ರಾಮ ಪಂಚಾಯಿತಿ ಪಿಡಿಓ ಡಿ ಎಂ ಪದ್ಮನಾಭ್ ತಿಳಿಸಿದ್ದಾರೆ.