![](https://www.chandravallinews.com/wp-content/uploads/2023/12/WhatsApp-Image-2023-12-02-at-6.30.26-PM.jpeg)
i
ಗ್ರಾಮೀಣ ಜನರ ಆದಾಯ ಹೆಚ್ಚಿಸಲು ಹಲವು ಕಾರ್ಯಕ್ರಮ ಆಯೋಜನೆ- ಡಾ.ಅಮಿತವ ಪರ್ಮಾಣಿಕ್…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಗ್ರಾಮೀಣ ಪ್ರದೇಶದ ಜನರು ಹಳ್ಳಿಗಳಲ್ಲಿಯೇ ತಮ್ಮ ಬುದ್ಧಿವಂತಿಕೆ ಉಪಯೋಗಿಸಿಕೊಂಡು ಹೊಸ ಉತ್ಪನ್ನಗಳ ತಯಾರಿಸಿ, ಹಣ ಗಳಿಸುವುದು ಹೇಗೆ ಎಂಬುದನ್ನು ತಿಳಿಸಲು ಭಾರತೀಯ ವಿಜ್ಞಾನ ಸಂಸ್ಥೆಯು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ರೈತರು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಬೆಂಗಳೂರಿನ ಸೊಸೈಟಿ ಫಾರ್ ಇನ್ನೋವೇಷನ್ ಅಂಡ್ ಡೆವಲಪ್ಮೆಂಟ್ನ ವಿಭಾಗೀಯ ಮುಖ್ಯಸ್ಥ ಡಾ.ಅಮಿತವ ಪರ್ಮಾಣಿಕ್ ತಿಳಿಸಿದರು.
ಚಳ್ಳಕೆರೆ ತಾಲ್ಲೂಕಿನ ಕುದಾಪುರ ಭಾರತೀಯ ವಿಜ್ಞಾನ ಸಂಸ್ಥೆಯ ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ ಶನಿವಾರ ಸೊಸೈಟಿ ಫಾರ್ ಇನ್ನೋವೇಷನ್ ಅಂಡ್ ಡೆವಲಪ್ಮೆಂಟ್, ಭಾರತೀಯ ವಿಜ್ಞಾನ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ “ರೈತರ ಕೃಷಿ ಆದಾಯ ಹೆಚ್ಚಿಸುವಲ್ಲಿ ನೈಸರ್ಗಿಕ ನಾರುಗಳಾದ ಬಾಳೆ, ಕತ್ತಾಳೆ, ಅಡಿಕೆ ಹಾಗೂ ಕುರಿ ಉಣ್ಣೆಗಳ ಮೌಲ್ಯವರ್ದನೆಯ ಪಾತ್ರ” ಕುರಿತು ಒಂದು ದಿನದ ವಿಚಾರ ಸಂಕಿರಣ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸೊಸೈಟಿ ಫಾರ್ ಇನ್ನೋವೇಷನ್ ಅಂಡ್ ಡೆವಲಪ್ಮೆಂಟ್ ವತಿಯಿಂದ ರೈತರಿಗಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ಮಾಡಲಾಗಿದೆ. ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಗ್ರಾಮೀಣ ಜನರಿಗೆ ಮಾಹಿತಿ ಹಾಗೂ ನೆರವು ನೀಡಲಾಗುತ್ತಿದೆ. ಈ ಕಾರ್ಯಕ್ರಮದ ಸದ್ಭಳಕೆ ಮಾಡಿಕೊಂಡು, ರೈತರು ಉದ್ಯಮ ಸ್ಥಾಪಿಸಬೇಕು. ಈ ನಿಟ್ಟಿನಲ್ಲಿ ರೈತರಿಗೆ ನಿರಂತರವಾಗಿ ಸಹಾಯ ಮಾಡಲಾಗುವುದು ಎಂದರು.
ಮುಂದುವರೆದ ರಾಷ್ಟ್ರಗಳಲ್ಲಿ ಸಾಕಷ್ಟು ಹಣವಿದೆ. ಹಾಗಾಗಿ ಅವರನ್ನು ಮುಂದುವರೆದ ರಾಷ್ಟ್ರಗಳು ಎಂದು ಕರೆಯುತ್ತೇವೆ. ಆದರೆ ನಮ್ಮ ಬಳಿ ಹಣ ಇಲ್ಲ. ಅವರಲ್ಲಿ ಡಾಲರ್ ಇದೆ, ನಮ್ಮಲ್ಲಿ ರೂಪಾಯಿ. ಡಾಲರ್ ಮೌಲ್ಯಕ್ಕೂ ರೂಪಾಯಿ ಮೌಲ್ಯಕ್ಕೂ ಬಹಳಷ್ಟು ಅಂತರವಿದೆ. ಹಾಗಾಗಿ ನಮ್ಮ ದೇಶ ಮುಂದುವರೆಯುತ್ತಿರುವ ದೇಶವಾಗಿದೆ. ಅಂದಮಾತ್ರಕ್ಕೆ ಬುದ್ದಿವಂತಿಕೆಯಲ್ಲಿ ನಮ್ಮ ದೇಶ ಹಿಂದುಳಿದಿಲ್ಲ, ಆದರೆ ನಾವು ನಮ್ಮ ಬುದ್ದಿವಂತಿಕೆಯನ್ನು ಸಂಪೂರ್ಣವಾಗಿ ಅಭಿವೃದ್ಧಿಗೆ ಸದ್ಬಳಕೆ ಮಾಡಿಕೊಳ್ಳುತ್ತಿಲ್ಲ. ನಗರದ ಪ್ರದೇಶಗಳಲ್ಲಿ ಹೆಚ್ಚು ಕೈಗಾರಿಕಾ ಪ್ರದೇಶಗಳು ಇರುವುದರಿಂದ ಅಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗಿರುತ್ತವೆ. ಮುಖ್ಯವಾಗಿ ಭಾರತ ಕೃಷಿ ಪ್ರಧಾನವಾದ ಹಳ್ಳಿಗಳನ್ನೊಳಗೊಂಡ ದೇಶ. ಹಾಗಾಗಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಹಣ ಬರುವುದಿಲ್ಲ ಎಂದು ನಾವು ತಿಳಿದುಕೊಂಡಿದ್ದೇವೆ. ಇದು ಬದಲಾಗಬೇಕು, ಗ್ರಾಮಗಳಲ್ಲಿಯೂ ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಂಡರೆ, ಕೃಷಿಯನ್ನು ಲಾಭದಾಯಕವನ್ನಾಗಿಸಬಹುದು. ವಿಜ್ಞಾನವನ್ನು ಕೃಷಿಯಲ್ಲಿ ಲಾಭ ಪಡೆಯಲು ಬಳಕೆ ಮಾಡಬೇಕಿದೆ, ರೈತರು ಹೆಚ್ಚಿನ ಲಾಭ ಪಡೆಯಬೇಕಿದೆ. ಹಳ್ಳಿಗಳಲ್ಲೇ ಕೃಷಿ ಉತ್ಪನ್ನಗಳನ್ನು ಬಳಸಿಕೊಂಡು ಹೆಚ್ಚಿನ ಲಾಭ, ಹಣ ಪಡೆಯುವ ಬಗ್ಗೆ ರೈತರಿಗೆ ಅರಿವು ಮೂಡಿಸುವ ಕಾರ್ಯವನ್ನು ಭಾರತೀಯ ವಿಜ್ಞಾನ ಸಂಸ್ಥೆ ಮಾಡುತ್ತಿದೆ, ಕೃಷಿಯಲ್ಲಿಯೂ ಹೆಚ್ಚಿನ ಉದ್ಯೋಗ ಸೃಜಿಸಬಹುದು ಎಂಬುದರ ಅರಿವು ಮೂಡಿಸುತ್ತಿದೆ ಎಂದರು.
ಧಾರವಾಡ ಕೃಷಿ ವಿ.ವಿ. ಪ್ರಾಧ್ಯಾಪಕಿ ಡಾ. ಸಣ್ಣ ಪಾಪಮ್ಮ ಅವರು ಮಾತನಾಡಿ, ಹವಾಮಾನ ವೈಪರಿತ್ಯಗಳು, ನಿಸರ್ಗದ ಮೇಲಿನ ಮಾನವ ನಿರ್ಮಿತ ದುಷ್ಕøತ್ಯಗಳಿಂದಾಗುತ್ತಿವೆ. ಹೀಗಾಗಿ ಮಳೆ ಹಾಗೂ ಋತುಮಾನಗಳ ಅನಿಶ್ಚಿತತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಹೀಗಾಗಿ ನೈಸರ್ಗಿಕ ಕೃಷಿಗೆ ಈಗ ರೈತರು ಆದ್ಯತೆ ನೀಡಲಾರಂಭಿಸಿದ್ದಾರೆ. ರೈತರಿಗೆ ಕೃಷಿ ಜೊತೆಗೆ ಕೃಷಿಯೇತರ ಚಟುವಟಿಕೆಗಳು ಆದಾಯದ ಮೂಲಗಳಾಗಲಿವೆ. ಬಾಳೆ, ತೆಂಗು, ಅಡಿಕೆ ಅಲ್ಲದೆ ಕುರಿ ಸಾಕಾಣಿಕೆಯಲ್ಲಿ ಕೇವಲ ಅದರ ಮೂಲ ಆದಾಯಕ್ಕೆ ಮಾತ್ರ ಆದ್ಯತೆ ನೀಡದೆ, ಅದರ ಉಪ ಉತ್ಪನ್ನಗಳನ್ನು ತಯಾರಿಸಿ, ಮೌಲ್ಯವರ್ಧನೆ ಮಾಡುವ ಮೂಲಕವೂ ಆದಾಯ ಕಂಡುಕೊಳ್ಳಬಹುದು. ಈ ನಿಟ್ಟಿನಲ್ಲಿ ರೈತರು ಒಂದು ಹೆಜ್ಜೆ ಮುಂದೆ ಬಂದಲ್ಲಿ, ಸಂಶೋಧನಾ ಸಂಸ್ಥೆಗಳು ಹತ್ತು ಹೆಜ್ಜೆ ನಿಮ್ಮ ಜೊತೆಗೂಡಿ ಸಹಾಯ ಮಾಡುತ್ತವೆ ಎಂದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಮಂಜುನಾಥ್ ಮಾತನಾಡಿ, ಹೊಸದಾಗಿ ಕೈಗಾರಿಕೆ ಪ್ರಾರಂಭಿಸುವವರಿಗೆ ಪ್ರಧಾನಮಂತ್ರಿ ಉದ್ಯೋಗ ಸೃಜನೆ ಯೋಜನೆ ಹಾಗೂ ನೂತನ ಕೈಗಾರಿಕೆ ನೀತಿ-2020-25 ಎಂಬ ರಾಜ್ಯ ಸರ್ಕಾರದ ನೀತಿ ಇದೆ. ಈ ಎರಡು ಯೋಜನೆಗಳಲ್ಲಿ ಉದ್ಯಮ ಸ್ಥಾಪಿಪಿಸಲು ಸಾಲಸೌಲಭ್ಯ ಮತ್ತು ಸಹಾಯಧನ ನೀಡಲಾಗುವುದು. ಕೈಗಾರಿಕೆ ಸ್ಥಾಪನೆಗೆ ಮುಖ್ಯವಾಗಿ ಜಾಗ ಬೇಕು. ಇಲಾಖೆಯ ಯೋಜನೆಗಳ ಸೌಲಭ್ಯಗಳ ಈ ಕುರಿತು ಮಾಹಿತಿಗಾಗಿ ಜಿಲ್ಲಾ ಕೈಗಾರಿಕಾ ಕೇಂದ್ರ ಸಂಪರ್ಕಿಸಬಹುದು ಎಂದರು.
ಚಳ್ಳಕೆರೆ ತಾಲ್ಲೂಕಿನ ಕುದಾಪುರದಲ್ಲಿ 55 ಎಕರೆ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಾಡಲಾಗಿದೆ. ಈಗಾಗಲೇ ಸುಮಾರು 28 ನಿವೇಶಗಳನ್ನು ಹಂಚಿಕೆ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಇನ್ನೂ ಎರಡು-ಮೂರು ವರ್ಷಗಳಲ್ಲಿ ಕುದಾಪುರದಲ್ಲಿ “ಇಂಡಸ್ಟ್ರೀಯಲ್ ಹಬ್” ಸೃಷ್ಠಿಯಾಗಲಿದೆ. ವಿವಿಧ ರೀತಿಯ ಕೈಗಾರಿಕೆಗಳು ಪ್ರಾರಂಭವಾಗಲಿವೆ ಎಂದರು.
ಚಿತ್ರದುರ್ಗ ಜಿಲ್ಲೆಯಲ್ಲಿ 1985ರಲ್ಲಿ ಕೆಳಗೋಟೆ ಕೈಗಾರಿಕಾ ಪ್ರದೇಶ ಪ್ರಾರಂಭವಾಯಿತು. ಆದಾದ ನಂತರ ಇಲ್ಲಿಯವರೆಗೂ ಯಾವುದೇ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಾಡಿರಲಿಲ್ಲ. ಕಳೆದ ವರ್ಷ 1150 ಎಕರೆಯಲ್ಲಿ ಹಿರಿಯೂರು ತಾಲ್ಲೂಕಿನ ಮೇಟಿಕುರ್ಕೆ ಪ್ರದೇಶದಲ್ಲಿ ಬೃಹತ್ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಾಡಲು ಈಗಾಗಲೇ ಟೆಂಡರ್ ಆಗಿದೆ. ರಾಷ್ಟ್ರೀಯ ಹೆದ್ದಾರಿ-4ರ ಸಮೀಪ ಇರುವ ಈ ಪ್ರದೇಶದಲ್ಲಿ ಸುಂದರವಾದ ಕೈಗಾರಿಕಾ ಪ್ರದೇಶ ನಿರ್ಮಾಣವಾಗಲಿದೆ ಎಂದರು.
ಪ್ರಸ್ತುತ ದಿನಗಳಲ್ಲಿ ಎಲ್ಲರಿಗೂ ಸರ್ಕಾರಿ ನೌಕರಿ ಸಿಗುವುದು ಕಷ್ಟ ಸಾಧ್ಯ. ಸ್ವಯಂ ಉದ್ಯಮದ ಮೂಲಕ ಉತ್ತಮ ಜೀವನ ರೂಪಿಸಿಕೊಳ್ಳಬಹುದು. ಆಸಕ್ತರು ಉದ್ಯಮ ಪ್ರಾರಂಭ ಮಾಡುವುದರೊಂದಿಗೆ ಆರ್ಥಿಕ ಮಟ್ಟ ಸುಧಾರಣೆ ಹಾಗೂ ದೇಶದ ಜಿ.ಡಿ.ಪಿಗೆ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸೊಸೈಟಿ ಫಾರ್ ಇನ್ನೋವೇಷನ್ ಅಂಡ್ ಡೆವಲಪ್ಮೆಂಟ್ ಕಾರ್ಯಕ್ರಮ ವ್ಯವಸ್ಥಾಪಕ ಪ್ರತಾಪ್ ಮೂರ್ತಿ, ಬೆಳಗಾವಿಯ ಉನ್ನತಿ ಕರಕುಶಲ ನಿರ್ವಾಹಕ ದಸ್ತಗೀರಸಾಬ್ ಸೇರಿದಂತೆ, ಚಳ್ಳಕೆರೆ ಭಾರತೀಯ ವಿಜ್ಞಾನ ಸಂಸ್ಥೆ, ವಿಜ್ಞಾನ ತಂತ್ರಜ್ಞಾನ ಮತ್ತು ನಾವಿನ್ಯತಾ ಕೇಂದ್ರದ ಸಿಬ್ಬಂದಿ ಹಾಗೂ ರೈತರು ಇದ್ದರು.