i
ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಇನ್ನಿಲ್ಲ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕನ್ನಡ ಸಿನಿಮಾ ರಂಗದ ಅತ್ಯಂತ ಹಿರಿಯ ನಟಿ ಲೀಲಾವತಿ(85) ಅವರು ವಯೋಸಹಜ ಕಾಯಿಲೆಯಿಂದ ಶುಕ್ರವಾರ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಅವರ ಆರೋಗ್ಯದಲ್ಲಿ ಮತ್ತೆ ಸಮಸ್ಯೆ ಕಾಣಿಸಿಕೊಂಡಿದ್ದರ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಎರಡು ದಿನಗಳಿಂದೆ ಲೀಲಾವತಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿತ್ತು. ಇಂದು ಮಧ್ಯಾಹ್ನ ದಿಢೀರ್ ಲೋ ಬಿಪಿ ಸಮಸ್ಯೆ ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಲೀಲಾವತಿ ನಿಧನರಾಗಿದ್ದಾರೆ. ತಾಯಿ ಲೀಲಾವತಿ ಅವರಿಗಾಗಿಯೇ ಪ್ರತಿಕ್ಷಣ ಬದುಕಿದ್ದ ಪುತ್ರ ವಿನೋದ್ ರಾಜ್ ತಾಯಿ ಕಳೆದುಕೊಂಡು ಈಗ ಅನಾಥರಾಗಿದ್ದಾರೆ.
ಖ್ಯಾತ ನಟಿ ಲೀಲಾವತಿ ಅವರ ಆರೋಗ್ಯದಲ್ಲಿ ಏರುಪೇರು ಆಗಿದ್ದರಿಂದ ಕನ್ನಡ ಚಿತ್ರರಂಗದ ಬಹುತೇಕ ನಟ, ನಟಿಯವರು ಲೀಲಾವತಿ ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರಲ್ಲದೆ ಆಸ್ಪತ್ರೆಯ ಖರ್ಚು ವೆಚ್ಚ ಭರಿಸುವ ಭರವಸೆ ನೀಡಿದ್ದರು.
ಕನ್ನಡ ಚಿತ್ರದುರ್ಗದ ನಟರಾದ ಡಾ.ರಾಜ್ ಪುತ್ರ ನಟ ಶಿವರಾಜ್ ಕುಮಾರ್, ಅರ್ಜುನ್ ಸರ್ಜಾ, ನಟ ದರ್ಶನ್, ದೊಡ್ಡಣ, ಶ್ರುತಿ, ಸುಧಾರಾಣಿ, ಮಾಳವಿಕಾ ಅವಿನಾಶ್ ಸೇರಿದಂತೆ ಚಿತ್ರರಂಗದ ಗಣ್ಯರು ನೆಲಮಂಗಲದಲ್ಲಿರುವ ಲೀಲಾವತಿ ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಅಷ್ಟೇ ಅಲ್ಲ ಪ್ರಾಣಿ ಪಕ್ಷಿಗಳ ಮೇಲೆ ಅಪಾರ ಪ್ರೀತಿ ಇಟ್ಟುಕೊಂಡಿದ್ದ ಲೀಲಾವತಿ ಅವರ ಕನಸಿನ ಪಶುವೈದ್ಯಕೀಯ ಆಸ್ಪತ್ರೆಯನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇತ್ತೀಚೆಗೆ ಉದ್ಘಾಟಿಸಿದ್ದರು.ಲೀಲಾವತಿ ನಡೆದು ಬಂದ ದಾರಿ-ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ 1937 ರಲ್ಲಿ ಜನಿಸಿದ ಲೀಲಾವತಿ ಅವರು, ಬಾಲ್ಯದಲ್ಲೇ ನಾಟಕ ಹಾಗೂ ರಂಗಭೂಮಿಯಲ್ಲಿ ಆಸಕ್ತಿ ತೋರಿ ಸುಬ್ಬಯ್ಯ ನಾಯ್ಡು ಅವರ ಸಂಸ್ಥೆಯಲ್ಲಿ ರಂಗಭೂಮಿ ಕಲಾವಿದೆಯಾಗಿ ಹಲವಾರು ನಾಟಕದಲ್ಲಿ ನಟಿಸಿದ್ದರು. ಸುಬ್ಬಯ್ಯ ನಾಯ್ಡು ಅವರ ‘ಭಕ್ತ ಪ್ರಹ್ಲಾದ’ದಲ್ಲಿ ಕೂಡ ಲೀಲಾವತಿ ಅವರು ಅಭಿನಯಿಸಿದರು.ಲೀಲಾ ಕಿರಣ್ ಆಗಿ ಜನಿಸಿದ ಅವರು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಬಳಿಕ ಲೀಲಾವತಿಯಾಗಿ ಗುರುತಿಸಿಕೊಂಡ ಕನ್ನಡಿಗರ ನೆಚ್ಚಿನ ಲೀಲಮ್ಮ ಕನ್ನಡ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ನಟಿಸಿದ್ದಾರೆ. 50 ವರ್ಷದ ವೃತ್ತಿ ಜೀವನದಲ್ಲಿ ಸುಮಾರು 600ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡವೊಂದರಲ್ಲೇ 400ಕ್ಕೂ ಅಧಿಕ ಸಿನಿಮಾಗಳಲ್ಲಿ ಅಮೋಘ ಅಭಿನಯ ನೀಡುವ ಮೂಲಕ ಕರ್ನಾಟಕದ ಮನೆ ಮಾತಾಗಿದ್ದರು. ಪ್ರಮುಖ ಸಿನಿಮಾಗಳು:1949 ರಲ್ಲಿ ಶಂಕರ್ ಸಿಂಗ್ ನಿರ್ಮಾಣ ಮಾಡಿದ ನಾಗಕನ್ನಿಕೆ ಸಿನಿಮಾದಲ್ಲಿ ಸಖಿ ಎನ್ನುವ ಪಾತ್ರ ಮಾಡುವ ಮೂಲಕ ಚಂದನವನಕ್ಕೆ ಪ್ರವೇಶಿಸಿದರು. 1958 ರಲ್ಲಿ ಬಂದ ಮಾಂಗಲ್ಯ ಯೋಗ ಸಿನಿಮಾದಲ್ಲಿ ಮೊದಲು ನಾಯಕಿಯಾಗಿ ಲೀಲಾವತಿ ಅವರು ಕಾಣಿಸಿಕೊಂಡರು.ಭಕ್ತ ಕುಂಬಾರ, ಮನ ಮೆಚ್ಚಿದ ಮಡದಿ, ಸಂತ ತುಕಾರಾಂ, ಕಣ್ತೆರೆದು ನೋಡು, ಕೈವಾರ ಮಹಾತ್ಮೆ, ಗಾಳಿ ಗೋಪುರ, ಕನ್ಯಾರತ್ನ, ಕುಲವಧು, ವೀರ ಕೇಸರಿ, ರಾಣಿ ಹೊನ್ನಮ್ಮ, ಸಂತ ತುಕಾರಾಂ, ಕೈವಾರ ಮಹಾತ್ಮೆ, ಭಕ್ತ ಪ್ರಹ್ಲಾದ, ಮಾಂಗಲ್ಯ ಯೋಗ, ರಾಜ ಮಲಯ ಸಿಂಹ, ಅಬ್ಬಾ ಆ ಹುಡುಗಿ, ಧರ್ಮ ವಿಜಯ, ದಶವತಾರ, ರಣಧೀರ ಕಂಠೀರವ, ಕರುಣೆಯೇ ಕುಟುಂಬದ ಕಣ್ಣು, ಭೂದಾನ, ನಂದಾ ದೀಪಾ, ಪಟ್ಟಿನಥರ್ (ತಮಿಳು), ರಾಣಿ ಚೆನ್ನಮ್ಮ, ರತ್ನ ಮಂಜರಿ, ಸುಮತಾಂಗಿ (ತಮಿಳು, ವಲರ್ ಪಿರಾಯಿ (ತಮಿಳು), ವಿಧಿ ವಿಲಾಸ, ಕುಲವಧು, ಕನ್ಯಾರತ್ನ, ಕಲಿತರೂ ಹೆಣ್ಣೇ, ಬೇವು ಬೆಲ್ಲ, ಜೀವನ ತರಂಗ, ಮಲ್ಲಿ ಮದುವೆ, ಮನ ಮೆಚ್ಚಿದ ಮಡದಿ, ಸಂತ ತುಕರಾಮ, ವಾಲ್ಮಿಕಿ, ವೀರ ಕೇಸರಿ, ಮರ್ಮಯೋಗಿ (ತೆಲುಗು), ಶಿವರಾತ್ರಿ ಮಹಾತ್ಮೆ, ತುಂಬಿದ ಕೊಡ, ಚಂದ್ರಹಾಸ, ಇದೇ ಮಹಾಸುದಿನ, ಮದುವೆ ಮಾಡಿ ನೋಡು ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.ಡಾ.ರಾಜ್ ಕುಮಾರ್,, ಅನಂತ್ ನಾಗ್, ಶಂಕರ್ ನಾಗ್ ,ವಿಷ್ಣುವರ್ಧನ್, ಅಂಬರೀಷ್, ಪ್ರಭಾಕರ್ ಸೇರಿದಂತೆ ಕನ್ನಡದ ಪ್ರಮುಖ ಕಲಾವಿದರೊಂದಿಗೆ ಅವರು ನಟಿಸಿದ್ದರು.
ಹಲವು ಕನ್ನಡ ಚಿತ್ರಗಳ ಯಶಸ್ಸಿನ ನಂತರ ರಾಜ್ ಕುಮಾರ್ ಮತ್ತು ಲೀಲಾವತಿ ಅವರ ಜೋಡಿ ಇನ್ನಷ್ಟು ಜನಪ್ರಿಯವಾಯಿತು. ʼರಣಧೀರ ಕಂಠೀರವʼ ಸಿನಿಮಾದಲ್ಲಿ ಡಾ.ರಾಜ್ ಕುಮಾರ್ ಅವರೊಂದಿಗೆ ನಾಯಕಿಯಾಗಿ ಮೊದಲ ಬಾರಿ ಕಾಣಿಸಿಕೊಂಡರು. ಈ ಸಿನಿಮಾದ ಮೂಲಕ ರಾಜ್ ಕುಮಾರ್ – ಲೀಲಾವತಿ ಜೋಡಿ ಜನಪ್ರಿಯವಾಯಿತು.ಪ್ರಶಸ್ತಿಗಳು-ಮದುವೆ ಮಾಡಿನೋಡು ಮತ್ತು ಸಂತ ತುಕಾರಾಮ್ ಸಿನಿಮಾಗಳಲ್ಲಿನ ಅಭಿನಯಕ್ಕಾಗಿ ಅವರಿಗೆ ಎರಡು ರಾಷ್ಟ್ರ ಪ್ರಶಸ್ತಿಗಳು ಸಿಕ್ಕಿವೆ. ತುಂಬಿದ ಕೊಡ, ಮಹಾತ್ಯಾಗ, ಭಕ್ತ ಕುಂಬಾರ, ಸಿಪಾಯಿ ರಾಮು, ಗೆಜ್ಜೆ ಪೂಜೆ ಸಿನಿಮಾಗಳಲ್ಲಿನ ಅವರ ನಟನೆಗೆ ರಾಜ್ಯ ಪ್ರಶಸ್ತಿಗಳು ಸಂದಿವೆ. ಕನ್ನಡದ ಕಂದ ಚಿತ್ರಕ್ಕೆ ಫಿಲ್ಮ್ ಫೇರ್ ಪ್ರಶಸ್ತಿ ಕೂಡ ಸಿಕ್ಕಿತ್ತು. ಜೀವಮಾನ ಸಾಧನೆಗಾಗಿ ಲೀಲಾವತಿ ಅವರು 1999 -2000 ರ ಸಾಲಿನ ಡಾ. ರಾಜ್ಕುಮಾರ್ ಪ್ರಶಸ್ತಿ ಪಡೆದರು. 2008ರಲ್ಲಿ ತುಮಕೂರು ವಿಶ್ವವಿದ್ಯಾಲಯದಿಂದ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗಿತ್ತು.ಲೀಲಾವತಿ ಅವರು ಕೇವಲ ಯಶಸ್ವಿ ನಟಿ ಮಾತ್ರವಲ್ಲದೆ, ಅಷ್ಟಲಕ್ಷ್ಮೀ ಕಂಬೈನ್ಸ್,ಲೀಲಾವತಿ ಕಂಬೈನ್ಸ್‘ ಸಂಸ್ಥೆಗಳ ಮೂಲಕ 5 ಸಿನಿಮಾಗಳನ್ನು ಅವರು ಚಿತ್ರರಂಗಕ್ಕೆ ಅರ್ಪಿಸಿದ್ದರು.ಲೀಲಾವತಿ ಅವರ ಮಗ ವಿನೋದ್ ರಾಜ್ ಕನ್ನಡ ಚಿತ್ರರಂಗದ ಖ್ಯಾತ ನಟರಾಗಿದ್ದಾರೆ. ತಾಯಿ-ಮಗ ಇಬ್ಬರೂ ತೋಟಗಾರಿಕೆ ಮತ್ತು ಕೃಷಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ತೋಡಗಿಸಿಕೊಂಡು ನೆಲಮಂಗಲ ಸಮೀಪ ನೆಲೆಸಿದ್ದರು. ಸಾರ್ವಜನಿಕರ ದರ್ಶನ-
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಜ್ಯೂನಿಯರ್ ಕಾಲೇಜು ಎದುರಿನ ಅಂಬೇಡ್ಕರ್ ಮೈದಾನದಲ್ಲಿ ನಾಳೆ ಮಧ್ಯಾಹ್ನದವರೆಗೂ ಸಾರ್ವಜನಿಕರ ದರ್ಶನಕ್ಕೆ ಸಿದ್ದತೆ ಮಾಡಲಾಗುತ್ತಿದೆ.
ಗಣ್ಯರ ಕಂಬನಿ-ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರ ಅಗಲಿಕೆಯ ಸುದ್ದಿ ನೋವುಂಟುಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿದ್ದಾರೆ. ಕಳೆದ ವಾರವಷ್ಟೇ ಅವರು ಅನಾರೋಗ್ಯಕ್ಕೀಡಾದ ವಿಚಾರ ತಿಳಿದು ಅವರ ಮನೆಗೆ ಭೇಟಿನೀಡಿ ಆರೋಗ್ಯ ವಿಚಾರಿಸಿ ಪುತ್ರ ವಿನೋದ್ ರಾಜ್ ಅವರೊಂದಿಗೆ ಮಾತನಾಡಿದ್ದೆ. ಹಲವು ದಶಕಗಳ ಕಾಲ ತಮ್ಮ ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ಲೀಲಾವತಿ ಅವರು ಗುಣಮುಖರಾಗಿ ಇನ್ನಷ್ಟು ಕಾಲ ನಮ್ಮ ನಡುವೆ ಇರುತ್ತಾರೆಂಬ ನನ್ನ ನಂಬಿಕೆ ಹುಸಿಯಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬ ವರ್ಗಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ಸಿಗಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಾರ್ಥಿಸಿದ್ದಾರೆ. ಕನ್ನಡ ಚಿತ್ರರಂಗದ ಶ್ರೇಷ್ಠ ನಟಿಯರಲ್ಲಿ ಒಬ್ಬರು, ಬಹುಭಾಷಾ ಕಲಾವಿದರಾದ ಲೀಲಾವತಿ ಅವರ ನಿಧನದ ವಾರ್ತೆ ಕೇಳಿ ಬಹಳ ನೋವುಂಟಾಯಿತು ಎಂದು ಜೆಡಿಎಸ್ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಕಂಬನಿ ಮಿಡಿದ್ದಾರೆ.
ಲೀಲಾವತಿ ಅವರು ನಾಯಕಿಯಾಗಿ ಮಾತ್ರವಲ್ಲದೆ, ಪೋಷಕ ಪಾತ್ರಗಳಿಗೂ ಜೀವ ತುಂಬಿ ಬೆಳ್ಳಿತೆರೆಯ ಮೇಲೆ ಅವುಗಳ ಹೆಜ್ಜೆಗುರುತುಗಳು ಮೂಡುವಂತೆ ಮಾಡಿದವರು ಅವರು. ಅಮ್ಮ, ಅಕ್ಕ, ಅತ್ತೆ ಸೇರಿ ಅನೇಕ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿ ನಟಿಸುತ್ತಿದ್ದರು ಎಂದು ಅವರು ಸ್ಮರಿಸಿದ್ದಾರೆ.ಭಕ್ತ ಕುಂಬಾರ, ವೀರ ಕೇಸರಿ, ಭಾಗ್ಯದೇವತೆ, ಸೋತು ಗೆದ್ದವಳು, ನಂದಾದೀಪ, ವಿಧಿ ವಿಲಾಸ, ಸಂತ ತುಕಾರಾಂ, ರಣಧೀರ ಕಂಠೀರವ ಸೇರಿ ಅವರು ನಟಿಸಿದ್ದ ಅನೇಕ ಚಿತ್ರಗಳು ಕನ್ನಡಿಗರ ಮನೆ ಮನಗಳನ್ನು ತುಂಬಿರುತ್ತವೆ.ಲೀಲಾವತಿ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಪುತ್ರ ವಿನೋದ್ ರಾಜ್ ಅವರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಕುಮಾರಸ್ವಾಮಿ ಅವರು ದೇವರಲ್ಲಿ ಪ್ರಾರ್ಥಿಸಿದ್ದಾರೆ.
ಹಿರಿಯ ನಟಿ ಲೀಲಾವತಿಯವರು ದೈವಾಧೀನರಾದ ಸುದ್ಧಿ ತಿಳಿದು ಮನಸ್ಸು ಭಾರವಾಗಿದೆ. 600ಕ್ಕೂ ಅಧಿಕ ಸಿನೆಮಾಗಳಲ್ಲಿ ನಾಯಕಿಯಾಗಿ, ಪೋಷಕ ನಟಿಯಾಗಿ ನಟಿಸಿ ಕನ್ನಡಿಗರ ಮನಸ್ಸಿನಲ್ಲಿ ಅಮರರಾಗಿದ್ದಾರೆ.ದೇವರು ಇವರ ಆತ್ಮಕ್ಕೆ ಸದ್ಗತಿ ನೀಡಲಿ, ಪುತ್ರ ವಿನೋದ್ ರಾಜ್, ಅವರ ಅಭಿಮಾನಿಗಳಲ್ಲಿ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಪ್ರಾರ್ಥಿಸಿದ್ದಾರೆ. ಕನ್ನಡ ಚಿತ್ರರಂಗದ ಕಲಾ ಸರಸ್ವತಿ ಎಂದೇ ಖ್ಯಾತರಾಗಿದ್ದ ಹಿರಿಯ ನಟಿ ಲೀಲಾವತಿ ನಿಧನರಾಗಿರುವ ಸುದ್ದಿ ಕೇಳಿ ಮುನಸ್ಸಿಗೆ ದುಖವಾಯಿತು. ಅವರ ಅಗಲಿಕೆಯಿಂದ ಕನ್ನಡ ನಾಡು ಹಾಗೂ ಕಲಾರಂಗ ಒಬ್ಬ ಮನೆಯ ಹಿರಿಯರನ್ನು ಕಳೆದುಕೊಂಡು ಬಡವಾದಂತಾಗಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಂಬನಿ ಮಿಡಿದ್ದಾರೆ.ಕನ್ನಡ ಚಿತ್ರರಂಗದ ಮೇರು ನಟರಾದ ಡಾ. ರಾಜಕುಮಾರ್ ಸೇರಿದಂತೆ ಎಲ್ಲ ದಿಗ್ಗಜ ನಟರೊಂದಿಗೆ ವಿಭಿನ್ನ ಪಾತ್ರಗಳನ್ನು ಮಾಡಿ ಎಲ್ಲರ ಮನೆ ಮಾತಾಗಿದ್ದರು. ಅವರ ಪುತ್ರ ವಿನೋದ್ ರಾಜ್ ಅವರಿಗೆ ತಾಯಿಯ ಅಗಲಿಕೆಯ ದುಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ಕರುಣಿಸಲಿ ಎಂದು ಬೊಮ್ಮಾಯಿ ಅವರು ಪ್ರಾರ್ಥಿಸಿದ್ದಾರೆ.