i
ಮಕ್ಕಳಲ್ಲಿನ ಮೊಬೈಲ್ ಗೀಳು ಕ್ರಿಯಾಶೀಲತೆ, ಕ್ರೀಡೆ, ಪುಸ್ತಕ ಓದು ಕಣ್ಮರೆ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹೆಚ್ಚಾಗುತ್ತಿರುವ ಮೊಬೈಲ್ ಗೀಳಿನಿಂದಾಗಿ ಮಕ್ಕಳಲ್ಲಿನ ಕ್ರಿಯಾ ಶೀಲತೆ ಕುಬ್ಜವಾಗುತ್ತಿದೆ ಎಂದು ಐಮಂಗಲ ಠಾಣಾಧಿಕಾರಿ ಈ.ಶಿವಕುಮಾರ್ ಆತಂಕ ವ್ಯಕ್ತಪಡಿಸಿದರು.
ಐಮಂಗಲ ಹೋಬಳಿ ಗೊಲ್ಲಹಳ್ಳಿ ಗ್ರಾಮದ ಜೆಟ್ ಸಿ.ಬಿ,ಎಸ್.ಇ ಶಾಲೆಯಲ್ಲಿ ಕ್ರೀಡಾ ಉತ್ಸವವನ್ನು ಉಧ್ಘಾಟಿಸಿ ಮಾತನಾಡಿದ ಅವರು, ವಿಶೇಷವಾಗಿ ಗ್ರಾಮೀಣ ಮಕ್ಕಳು ಮೊಬೈಲ್ ನೋಡುವ ಹವ್ಯಾಸದಿಂದ ದೂರ ಸರಿಯಬೇಕು ಎಂದರು.
ಮನೆಯ ಪೋಷಕರು ಸಹ ಮೊಬೈಲುಗಳನ್ನು ಅಗತ್ಯಕ್ಕಿಂತ ಹೆಚ್ಚು ಬಳಸಬಾರದು. ಮಕ್ಕಳಿಗೆ ಇದರ ಅಪಾಯದ ಬಗ್ಗೆ ಅರಿವು ಮೂಡಿಸುವ ಕೆಲಸ ತಂದೆ ತಾಯಿಗಳಿಂದಲೇ ಆರಂಭವಾಗಬೇಕು ಎಂದು ಶಿವಕುಮಾರ್ ಹೇಳಿದರು.
ಗ್ರಾಮೀಣ ಪ್ರದೇಶದಲ್ಲಿ ಮೊಬೈಲ್ ದುರ್ಬಳಕೆ ಹೆಚ್ಚಾಗುತ್ತಿರುವುದರಿಂದ ಅಪರಾಧಗಳು ಸಹ ಹೆಚ್ಚಾಗುತ್ತಿವೆ. ಅದರಲ್ಲೂ ಇಂದಿನ ಮಕ್ಕಳು ನವಸಮಾಜದಲ್ಲಿ ಹೆಚ್ಚುತ್ತಿರುವ ಅಪರಾಧಗಳಿಗೆ ತುತ್ತಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಕ್ರಿಯಾಶೀಲತೆ, ಅಧ್ಯಯನ, ಕ್ರೀಡೆ, ಪುಸ್ತಕ ಓದಿನಿಂದ ದೂರವಾಗಿ ಮೊಬೈಲ್ ಸಂಸ್ಕೃತಿಗೆ ಮಕ್ಕಳು ಮುಗಿಬೀಳುತ್ತಿರುವುದರಿಂದ ಅವರ ಭವಿಷ್ಯ ತೀವ್ರ ಅಪಾಯದಲ್ಲಿದೆ. ಇವರನ್ನು ಈ ಅಪಾಯದಿಂದ ಪಾರು ಮಾಡುವ ಜವಾಬ್ದಾರಿ ಶಿಕ್ಷಕರು ಮತ್ತು ಕಾನೂನು ಪರಿಪಾಲಕರಾದ ಪೊಲೀಸರು ಹೆಚ್ಚಿನ ಶ್ರಮ ವಹಿಸಬೇಕಿದೆ ಎಂದರು.
ಕೃತಕ ತಂತ್ರಜ್ಞಾನ ಮಕ್ಕಳನ್ನು ಭ್ರಮಾ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ ಅಷ್ಟೇ ಅಲ್ಲ, ಮುಂದಿನ ಯುವಕರನ್ನು ನಿರುದ್ಯೋಗಿಗಳನ್ನಾಗಿ ಮಾಡುತ್ತದೆ. ಎಲ್ಲ ಬೌದ್ಧಿಕ ಕೆಲಸಗಳು ಕೃತಕ ತಂತ್ರಜ್ಞಾನದ ಮೂಲಕ ನಡೆದರೆ ಮಾನವ ಶಕ್ತಿಯು ನಿರುಪಯುಕ್ತವಾಗುವ ಅಪಾಯವಿದೆ ಎಂದು ಶಿವಕುಮಾರ್ ಆತಂಕಗೊಂಡರು.
ಆಧುನಿಕ ತಂತ್ರಜ್ಞಾನದಿಂದ ಸಂಭವಿಸುವ ಅಪರಾಧಗಳಿಂದ ಶಾಲಾ ಮಕ್ಕಳನ್ನು ಪಾರು ಮಾಡಲು ಸಮಾಜದ ಎಲ್ಲಾ ವ್ಯವಸ್ಥೆಗಳು ಮುಂದಾಗಬೇಕು ಎಂದು ಅವರು ಕರೆ ನೀಡಿದರು.
ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ಬೆಳಗೆರೆ, ಕಾರ್ಯದರ್ಶಿ ಗಿರಿಜಾ, ಪ್ರಾಂಶುಪಾಲೆ ವಿಜಯಶ್ರೀ ದೇಸಾಯಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
65 ಕ್ಕೂ ಹೆಚ್ಚು ಗ್ರಾಮಗಳಿಂದ 760 ಮಕ್ಕಳು ಎರಡು ದಿನಗಳ ಈ ಕ್ರೀಡಾ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.