![](https://www.chandravallinews.com/wp-content/uploads/2023/12/WhatsApp-Image-2023-12-08-at-10.04.03-PM-1024x573.jpeg)
i
ವಿಜಯಪುರ ಕುಡಿಯುವ ನೀರಿನ ಕೊಳವೆ ಮಾರ್ಗ ಕಾಮಗಾರಿಗೆ ಅನುಮತಿ–ಸಚಿವ ಸುರೇಶ್…
ಚಂದ್ರವಳ್ಳಿ ನ್ಯೂಸ್, ಬೆಳಗಾವಿ ಸುವರ್ಣಸೌಧ:
ವಿಜಯಪುರ ನಗರಕ್ಕೆ ಆಲಮಟ್ಟಿ ಹಿನ್ನಿರಿನಿಂದ ನೀರು ಸರಬರಾಜು ಮಾಡುವ ಕೊಳವೆ ಮಾರ್ಗ ಬದಲಿ ಕಾಮಾಗಾರಿಗೆ ಸರ್ಕಾರದಿಂದ ಅನುಮತಿ ನೀಡಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಸುರೇಶ್.ಬಿ.ಎಸ್. ಹೇಳಿದರು.
ಶುಕ್ರವಾರ ಅಧಿವೇಶನದ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಬಸನಗೌಡ ಆರ್. ಪಾಟೀಲ್ ಯತ್ನಾಳ್ ಚುಕ್ಕೆ ಗುರುತಿನ ಪ್ರಶ್ನೆಗೆ ಅವರು ಉತ್ತರಿಸಿದರು.
ಬಾಕಿ ಉಳಿದಿರುವ ಪಿ.ಎಸ್.ಪಿ. ಕೊಳವೆ ಮಾರ್ಗವನ್ನು ಎಂ.ಎಸ್. ಪೈಪುಗಳಾಗಿ ಬದಲಾಯಿಸಲು ರೂ.32 ಕೋಟಿಗಳಿಗೆ ಸರ್ಕಾರ ಆಡಳಿತಾತ್ಮಕ ಮಂಜೂರಾತಿ ನೀಡಿತ್ತು. 2018-19ನೇ ಸಾಲಿನ ದರಪಟ್ಟಿಯಂತೆ ಯೋಜನೆ ಮಾರ್ಪಡಿಸಿ ರೂ.52 ಕೋಟಿಗೆ ಪರಿಷ್ಕೃತ ಯೋಜನೆ ಸಿದ್ದಪಡಿಸಿ ಆಡಳಿತಾತ್ಮಕ ಮಂಜೂರಾತಿ ಸರ್ಕಾರಕ್ಕೆ ಬಂದ ವರದಿಯನ್ನು ಹಣಕಾಸು ಇಲಾಖೆ ಕಳುಹಿಸಿಕೊಡಲಾಗಿತ್ತು. ಆದರೆ ಆರ್ಥಿಕ ಇಲಾಖೆ ಹೆಚ್ಚುವರಿ ಹಣವನ್ನು ಸರ್ಕಾರದಿಂದ ಭರಿಸಲು ಸಾಧ್ಯವಾಗುವುದಿಲ್ಲ. ಯೋಜನೆಗೆ ಅವಶ್ಯಕ ಇರುವ ಅನುದಾನವನ್ನು ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರ, ಸ್ಥಳೀಯ ಸಂಸ್ಥೆ, 15 ಹಣಕಾಸು ಆಯೋಗ, ನಗರ ಸ್ಥಳೀಯ ಸಂಸ್ಥೆಯ ವಾಣಿಜ್ಯ ಸಾಲ ಅಥವಾ ಅಮೃತ್ 2.0 ಯೋಜನೆಯಡಿ ಕೈಗೊಳುವಂತೆ ತಿಳಿಸಿರುತ್ತಾರೆ. ಇದರಂತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ದೆಶನ ನೀಡಲಾಗಿದೆ ಎಂದು ಅವರು ಹೇಳಿದರು.
ಈಗಾಗಲೇ ನಗರದಲ್ಲಿ 15 ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಯೋಜನೆ ವಿಳಂಭವಾದರೆ ಮುಂದಿನ ಬೇಸಿಗೆ ವೇಳೆ ದುಸ್ತರವಾಗಲಿದೆ. ನಗರದಲ್ಲಿ 24*7 ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಕೆ ಕಾಮಗಾರಿ ಮಾಡುತ್ತಿರುವ ಕಂಪನಿಗೆ ರೂ.201 ಕೋಟಿ ಗುತ್ತಿಗೆ ಹಣ ಬಿಡುಗಡೆ ಮಾಡಬೇಕಿತ್ತು. ಅದರೆ ಸರ್ಕಾರ ರೂ.133 ಕೋಟಿ ನೀಡಿದೆ. ಬಾಕಿ ಉಳಿದ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಶಾಸಕ ಬಸನಗೌಡ ಆರ್. ಪಾಟೀಲ್ ಯತ್ನಾಳ್ ಹೇಳಿದರು.
10 ರಿಂದ 15 ದಿನದಲ್ಲಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಸಚಿವ ಸುರೇಶ್.ಬಿ.ಎಸ್. ಆಶ್ವಾಸನೆ ನೀಡಿದರು.