i
ಸಂಸತ್ ಸದನಕ್ಕೆ ಆಗುಂತಕರ ಪ್ರವೇಶ ಖಂಡಿಸಿ ವಿಧಾನಸಭೆ ನಿರ್ಣಯ ಅಂಗೀಕಾರ…
ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ದೇಶದ ಪ್ರಜಾಪ್ರಭುತ್ವದ ಪವಿತ್ರ ಸ್ಥಳವಾದ ದೆಹಲಿಯ ಸಂಸತ್ತಿನಲ್ಲಿ ಆಗುಂತಕ ವ್ಯಕ್ತಿಗಳು ಸದನಕ್ಕೆ ಪ್ರವೇಶಿಸಿದ್ದು, ಕಳವಳಕಾರಿಯಾಗಿದ್ದು, ಈ ಭದ್ರತಾ ವೈಫಲ್ಯ ಖಂಡಿಸಿ, ಕರ್ನಾಟಕ ವಿಧಾನಸಭೆಯಲ್ಲಿ ಸಂಜೆ ಘಟನೆ ಖಂಡಿಸಿ, ಸದನದಲ್ಲಿ ಖಂಡನಾ ನಿರ್ಣಯ ಅಂಗೀಕರಿಸಿತು.
ಕಲಾಪ ಮಧ್ಯದಲ್ಲಿ ವಿಷಯ ಪ್ರಸ್ತಾಪಿಸಿದ ಪ್ರವಾಸೋದ್ಯಮ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ, ಸಂಸತ್ತಿನಲ್ಲಿ ಅಪರಿಚಿತ, ಆಂಗುತಕರು ಪ್ರವೇಶಿಸಿ, ಭಯ ಹುಟ್ಟಿಸಿರುವುದು ತೀವ್ರ ಖಂಡನೀಯವಾದದ್ದು. ಈ ಘಟನೆಯನ್ನು ಸದನವು ಖಂಡಿಸಿ ನಿರ್ಣಯ ಕೈಗೊಳ್ಳಬೇಕೆಂದು ವಿಷಯ ಪ್ರಸ್ತಾಪಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ, ಸಂಸತ್ ಸದನ ಪ್ರವೇಶಿಸಿ ಭಯ ಹುಟ್ಟಿಸಿದ ಘಟನೆ ಅತ್ಯಂತ ಖಂಡನೀಯವಾದದ್ದು. ಇದನ್ನು ರಾಜ್ಯದ ಜನತೆಯ ಪರವಾಗಿ ಖಂಡಿಸಬೇಕು. ರಾಜ್ಯ ವಿಧಾನಮಂಡಲದ ಕಲಾಪಗಳಿಗೂ ಸುರಕ್ಷತೆಯ ದೃಷ್ಟಿಯಿಂದ ಇದು ಪಾಠವಾಗಬೇಕು. ಸದನ ಸದಸ್ಯರು ಪ್ರವೇಶ ಪತ್ರಗಳನ್ನು ನೀಡುವಾಗ ಎಚ್ಚರಿಕೆ ವಹಿಸಿ ಪೂರ್ವಾಪರ ವಿಚಾರಿಸಿ ಪರಿಚಯಸ್ಥರಿಗೆ ಮಾತ್ರ ನೀಡಬೇಕು. ತಪಾಸಣೆ ತೀವ್ರವಾಗಬೇಕು. ಭದ್ರತಾ ಲೋಪವಾಗದಂತೆ ಕಟ್ಟುನಿಟ್ಟಾಗಿ ನೋಡಿಕೊಳ್ಳಬೇಕು. ಈ ಕುರಿತು ತಮ್ಮ ಸಿಬ್ಬಂದಿಗಳಿಗೂ ಸೂಚನೆ ನೀಡಬೇಕೆಂದು ಸಭಾಧ್ಯಕ್ಷರಿಗೆ ತಿಳಿಸಿದರು.
ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಮಾತನಾಡಿ, ಘಟನೆಯನ್ನು ರಾಜ್ಯದ ಪರವಾಗಿ ಕಠಿಣವಾಗಿ ಖಂಡಿಸುತ್ತೇವೆ. ಇಂದು ಸದನಕ್ಕೆ ಅಕ್ರಮವಾಗಿ ಪ್ರವೇಶಿಸಿದ ಆಗುಂತಕರಿಗೆ ಕಠಿಣ ಕ್ರಮವಾಗಬೇಕು. ಸದನಗಳ ಪ್ರವೇಶಕ್ಕೆ ಪಾಸ್ ನೀಡುವಾಗ ಅವರ ಆಧಾರ್ ಕಾರ್ಡ್ ಪರಿಶೀಲಿಸಿ, ಸರಿಯಾದ ಪರಿಚಯ ನೋಡಿ ನೀಡಬೇಕು ಎಂದು ಹೇಳಿದರು.
ಘಟನೆಯನ್ನು ಖಂಡಿಸಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗೃಹ ಸಚಿವ ಡಾ. ಜಿ. ಪರಮೇಶ್ವರ, ವಿಪಕ್ಷ ನಾಯಕ ಆರ್. ಅಶೋಕ, ಶಾಸಕರಾದ ಸುರೇಶಕುಮಾರ್, ಅರಗ ಜ್ಞಾನೇಂದ್ರ ಸೇರಿದಂತೆ ಇತರರು ಮಾತನಾಡಿದರು.