i
ರೈತರಿಗೆ ಶೀಘ್ರ ಬೆಳೆವಿಮೆ ಪರಿಹಾರ: ಚಲುವರಾಯಸ್ವಾಮಿ…
ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ 2023ರ ಮುಂಗಾರು ಹಂಗಾಮಿನ ಬೆಳೆ ಕಟಾವು ಪ್ರಯೋಗಗಳು ಅಂತಿಮ ಹಂತದಲ್ಲಿದ್ದು, ಬೆಳೆ ಕಟಾವು ಪ್ರಯೋಗಗಳ ಅಂತಿಮ ಇಳುವರಿ ಆಧಾರದ ಮೇಲೆ ಇಳುವರಿ ಕೊರತೆಗಣುಗುಣವಾಗಿ ಬೆಳೆ ವಿಮೆ ಪರಿಹಾರ ಲೆಕ್ಕಚಾರ ಮಾಡಿ ವಿಮಾ ಸಂಸ್ಥೆಯವರಿಂದ ಕಾಲಮಿತಿಯಲ್ಲಿ ಇತ್ಯರ್ಥಪಡಿಸಲು ಕ್ರಮ ಜರುಗಿಸಲಾಗುತ್ತಿದೆ ಎಂದು ಕೃಷಿ ಸಚಿವರಾದ ಚೆಲುವರಾಯಸ್ವಾಮಿ ತಿಳಿಸಿದರು.
ಶಾಸಕರಾದ ಶರಣು ಸಲಗರ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ 2023ರ ಮುಂಗಾರು ಹಂಗಾಮಿನಲ್ಲಿ ವಿವಿಧ ಬೆಳೆಗಳಿಗೆ ರೈತರು ನೋಂದಣಿ ಮಾಡಿಕೊಂಡಿರುತ್ತಾರೆ. ನಿರ್ಧಿಷ್ಟ ಪ್ರಕೃತಿ ವಿಕೋಪದಡಿ ಬೆಳೆ ನಷ್ಟ ಉಂಟಾದ ಕುರಿತು ಅನುಷ್ಠಾನ ವಿಮಾ ಸಂಸ್ಥೆಗೆ ಮಾಹಿತಿ ನೀಡಲಾಗಿದೆ. ಈ ಮಾಹಿತಿ ಕುರಿತು ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಪರಿಷ್ಕೃತ ಮಾರ್ಗಸೂಚಿಯನ್ವಯ ಜಿಲ್ಲಾಮಟ್ಟದ ಜಂಟಿ ಸಮಿತಿಯು ಜಂಟಿ ಸಮೀಕ್ಷೆಯನ್ನು ಕೈಗೊಂಡು ಸಮೀಕ್ಷೆಯ ವರದಿಯನ್ವಯ ಬೆಳೆ ವಿಮೆ ಪರಿಹಾರ ಮೊತ್ತವನ್ನು ಇತ್ಯರ್ಥಪಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿರುತ್ತದೆ.
ಬಸವಕಲ್ಯಾಣ ಮತಕ್ಷೇತ್ರದಲ್ಲಿ ಸೋಯಾ ಅವರೇ ಮಳೆಯಾಶ್ರೀತ ಬೆಳೆಗಳನ್ನು ಅಧೀಸೂಚಿಸಲಾಗಿದೆ. ಸೋಯಾ ಅವರೆ ಬೆಳೆಗೆ 24,240 ರೈತರು ಮತ್ತು ತೊಗರಿ ಬೆಳೆಗೆ 23,386 ರೈತರು ನೋಂದಾಣಿ ಮಾಡಿರುತ್ತಾರೆ. ಸೆಪ್ಟೆಂಬರ್ ಮತ್ತಿ ಅಕ್ಟೋಬರ್ 2023ರ ಮಾಹೆಯಲ್ಲಿ ಬಿದ್ದಂತಹ ಹೆಚ್ಚಿನ ಮಳೆಯಿಂದ ಬಸವಕಲ್ಯಾಣ ಮತಕ್ಷೇತ್ರದಲ್ಲಿ ಸೋಯಾ ಅವರೇ ಬೆಳೆಗೆ ಒಟ್ಟು 1556 ರೈತರಿಂದ ಮತ್ತು ತೊಗರಿ ಬೆಳೆಗೆ 1249 ರೈತರಿಂದ ಸ್ಥಳ ನಿರ್ಧಿಷ್ಟ ಪ್ರಕೃತಿ ವಿಕೋಪದಡಿ ಬೆಳೆನಷ್ಟ ಉಂಟಾದ ಕುರಿತು ಅನುಷ್ಠಾನ ವಿಮಾ ಸಂಸ್ಥೆಗೆ ಮಾಹಿತಿ ನೀಡಲಾಗಿದೆ ಎಂದು ಸಚಿವರು ಶಾಸಕರ ಪ್ರಶ್ನೆಗೆ ಉತ್ತರಿಸಿದರು.
ಬಸವಕಲ್ಯಾಣ ಮತಕ್ಷೇತ್ರದಲ್ಲಿ ಮಳೆ ಕೊರತೆಯಿಂದ ಸೋಯಾ ಅವರೆ ತೊಗರಿ ಬೆಳೆ ಹಾಳಾಗಿದ್ದು ರೈತರ ವಿಮಾ ಖಾತೆಗೆ ಬೆಳೆ ವಿಮೆ ಹಣ ಜಮೆಯಾಗುವಲ್ಲಿ ವಿಳಂಬವಾಗುತ್ತಿದ್ದು ವಿವರ ನೀಡುವಂತೆ ಶಾಸಕರ ಕೇಳಿದ ಪ್ರಶ್ನೆಗೆ ಸಚಿವರು ಪ್ರತಿಕ್ರಿಯಿಸಿದ್ದಾರೆ.