i
ಸಂಸತ್ ಭವನಕ್ಕೆ ನುಗ್ಗಿ ಆತಂಕ ಸೃಷ್ಠಿಸಿದ ಕಿಡಿಗೇಡಿಗಳು…
ಚಂದ್ರವಳ್ಳಿ ನ್ಯೂಸ್, ನವದಹೆಲಿ:
ದೇಶದ ಶಕ್ತಿ ಕೇಂದ್ರವಾಗಿರುವ ನವದೆಹಲಿಯ ಸಂಸತ್ ಭವನದಲ್ಲಿ ಲೋಕಸಭಾ ಕಲಾಪ ನಡೆಯುತ್ತಿದ್ದ ವೇಳೆಯಲ್ಲೇ ಇಬ್ಬರು ಅಪರಿಚಿತರು ಲೋಕಸಭೆಯ ಗ್ಯಾಲರಿಯಿಂದ ಸಂಸದರು ಕುಳಿತುಕೊಳ್ಳುವ ಸ್ಥಳಕ್ಕೆ ನೆಗೆದು ಕುರ್ಚಿಯಿಂದ ಕುರ್ಚಿಗೆ ಎಗರುತ್ತಾ ಬಣ್ಣಗಳ ಹೊಗೆ ಬರುವ ವಸ್ತುಗಳನ್ನ ಸಿಡಿಸಿ ಆತಂಕ ಸೃಷ್ಠಿಸಿರುವ ಘಟನೆ ಬುಧವಾರ ನಡೆದಿದೆ.
ಅಪರಿಚಿತಕಿಡಿಗೇಡಿಗಳು ಲೋಕಸಭೆಯಲ್ಲಿ ಜಿಗಿಯುತ್ತಾ ಪುಂಡಾಟ ಎಸಗಿದ್ದಲ್ಲದೆ, ಹಳದಿ ಬಣ್ಣದ ಹೊಗೆಯನ್ನು ಕೂಡ ಸಿಡಿಸಿದ್ದಾರೆ. ಇದರಿಂದ ಬೆದರಿದ ಸಂಸದರು ಸಂಸತ್ಭವನದಿಂದ ಹೊರಗೆ ಓಡಿ ಹೋಗಿದ್ದಾರೆ. ಸಂಸತ್ ಒಳಗೆ ಇಬ್ಬರು, ಸಂಸತ್ಹೊರಗೆ ಓರ್ವ ಯುವಕ ಹಾಗೂ ಓರ್ವ ಯುವತಿ ಈ ಕೃತ್ಯ ಎಸಗಿದ್ದು ಎಲ್ಲರನ್ನೂ ಪೊಲೀಸರು ಬಂಧಿಸಿದ್ದಾರೆ.ಬಂಧಿತರ ಪೈಕಿ ಒಬ್ಬ ಮನೋರಂಜನ್ (35) ಎಂದು ಗುರುತಿಸಲಾಗಿದ್ದು ಈತ ಮೈಸೂರಿನ ಎಂಜಿನಿಯರ್ ಎಂದು ತಿಳಿದುಬಂದಿದೆ. ಸಾಗರ್ ಶರ್ಮಾ ಮತ್ತು ಅಮೋಲ್ ಶಿಂಧೆ (25) ಎಂಬಿಬ್ಬರು ಸದನದ ಒಳಗೆ ರಾದ್ಧಾಂತ ಸೃಷ್ಟಿಸಿದರೆ, ಹೊರಗೆ ಕೂಡ ಬಣ್ಣದ ಸ್ಪ್ರೇ ಸಿಡಿಸಿದ ನೀಲಂ ಕೌರ್ (42) ಎಂಬ ಮಹಿಳೆ ಘೋಷಣೆಗಳನ್ನು ಕೂಗಿದ್ದಾಳೆ. ಆಕೆಯ ಜತೆಯಲ್ಲಿ ಇನ್ನೊಬ್ಬ ವ್ಯಕ್ತಿಯನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಸಂಸತ್ಮೇಲೆ ಡಿಸೆಂಬರ್ 13, 2001ರಂದು ದಾಳಿ ನಡೆದಿತ್ತು. ಈ ಘಟನೆ ನಡೆದು 22 ವರ್ಷಾಚರಣೆ ನಡೆದ ದಿನವೇ ಈ ಘಟನೆ ನಡೆದಿರೋದು ಸಂಸತ್ನ ಭದ್ರತೆ ಕುರಿತಾಗಿ ಹಲವು ಪ್ರಶ್ನೆಗಳು ಏಳುವಂತೆ ಮಾಡಿದೆ.ಹುತಾತ್ಮರಿಗೆ ಶ್ರದ್ಧಾಂಜಲಿ-
ದೇಶದ ಶಕ್ತಿ ಕೇಂದ್ರ ಸಂಸತ್ ಭವನದ ಮೇಲೆ ಪಾಕಿಸ್ತಾನ ಬೆಂಬಲಿತ ಉಗ್ರರು ಕಳೆದ 22 ವರ್ಷಗಳಿಂದೆ ಭಯಾನಕ ದಾಳಿ ನಡೆಸಿದ್ದರು. 2023ರ ಡಿಸೆಂಬರ್-13ಕ್ಕೆ ಸರಿಯಾಗಿ 22 ವರ್ಷಗಳು ಕಳೆದಿವೆ. ಹೀಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಹಲವು ಗಣ್ಯರು ಅಂದಿನ ದಾಳಿಯಲ್ಲಿ ಹುತಾತ್ಮರಾದವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.ಸಂಸತ್ ಭವನದ ಆವರಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಇತರ ನಾಯಕರು ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಬಳಿಕ 1 ನಿಮಿಷ ಮೌನಾಚರಣೆ ಮಾಡಿದರು.ಇದೇ ವೇಳೆ ಪ್ರಧಾನಿ ಮೋದಿ ಅವರು ರಾಜ್ಯಸಭಾ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಜಗದೀಪ್ ಧಂಖರ್ ಅವರೊಂದಿಗೆ ಹುತಾತ್ಮ ಯೋಧರ ಕುಟುಂಬ ಸದಸ್ಯರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದರು.2001, ಡಿಸೆಂಬರ್ 13ರಂದು ಸಂಸತ್ತಿನ ಎರಡೂ ಕಲಾಪ ಮುಕ್ತಾಯವಾಗಿ 40 ನಿಮಿಷಗಳ ಬಳಿಕ ಸಂಸತ್ ಭವನದ ಮೇಲೆ ಪಾಕ್ ಬೆಂಬಲಿತ ಲಷ್ಕರ್-ಎ-ತೋಯ್ಬಾ ಹಾಗೂ ಜೈಷ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಉಗ್ರರು ದಾಳಿ ನಡೆಸಿದ್ದರು.ಅಂದು ಕಾರಿನಲ್ಲಿ ಆಗಮಿಸಿ ಸಂಸತ್ ಭವನ ಪ್ರವೇಶಿಸಿದ್ದ ಉಗ್ರರು, ಏಕಾಏಕಿ ಸಂಸತ್ ಆವರಣದಲ್ಲಿ ಗುಂಡಿನ ಮಳೆಗರೆಯಲಾರಂಭಿಸಿದರು. ಈ ದಾಳಿಯನ್ನು ಅತ್ಯಂತ ದಿಟ್ಟತನದಿಂದ ಎದುರಿಸಿದ ಭದ್ರತಾ ಸಿಬ್ಬಂದಿ, ಭಯೋತ್ಪಾದಕರ ದಾಳಿಯನ್ನು ವಿಫಲಗೊಳಿಸಿ ತಮ್ಮ ಪ್ರಾಣವನ್ನು ಅರ್ಪಿಸಿದರು.ಈ ದಾಳಿಯಲ್ಲಿ ದೆಹಲಿಯ ಏಳು ಪೊಲೀಸರು, ಇಬ್ಬರು ಸಂಸತ್ ಭದ್ರತಾ ಸಿಬ್ಬಂದಿ ಹಾಗೂ ಓರ್ವ ಕಾರ್ಮಿಕರು ಹುತಾತ್ಮರಾದರು. ಅಲ್ಲದೇ ದಾಳಿ ಎಸಗಿದ ಐವರೂ ಭಯೋತ್ಪಾದಕರನ್ನು ಸಂಸತ್ ಹೊರಾಂಗಣದಲ್ಲಿ ಹತ್ಯೆ ಮಾಡಲಾಗಿತ್ತು ಎನ್ನುವುದನ್ನು ಸ್ಮರಿಸಬಹುದಾಗಿದೆ.
22 ವರ್ಷಗಳ ನಂತರ ಅದೇ ದಿನ… ಸಂಸತ್ಭವನದ ಮೇಲೆ 2001ರಲ್ಲಿ ಉಗ್ರರು ದಾಳಿ ನಡೆಸಿ 22 ವರ್ಷ ಕಳೆದ ಈ ದಿನವೇ ಈ ಘಟನೆ ನಡೆದಿರುವುದು ಅಚ್ಚರಿ ಮೂಡಿಸಿದೆ. ಸಂಸತ್ನಲ್ಲಿ ಭದ್ರತಾ ಲೋಪ ಆಗಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಸಂಸದರು ಭದ್ರತಾ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ನಡೆದ ಸಮಯದಲ್ಲೇ ಬಿಜೆಪಿ ಸಂಸದ ರಾಜೇಂದ್ರ ಅಗರ್ವಾಲ್ ಅವರು ಸ್ಪೀಕರ್ ಅವರ ಪೀಠದಲ್ಲಿ ಅಲಂಕೃತರಾಗಿ ಕಲಾಪವನ್ನು ನಿರ್ವಹಿಸುತ್ತಿದ್ದರು. ಈ ಘಟನೆ ಕುರಿತು ಮಾಹಿತಿ ನೀಡಿದ ಅಗರ್ವಾಲ್, ಮೊದಲಿಗೆ ಯುವಕ ಗ್ಯಾಲರಿಯಿಂದ ಕೆಳಗೆ ನೆಗೆದಾಗ ಆತ ಆಕಸ್ಮಿಕವಾಗಿ ಕೆಳಗೆ ಬಿದ್ದಿರಬಹುದು ಎಂದು ಭಾವಿಸಿದೆವು. ಆದರೆ, ಎರಡನೇ ವ್ಯಕ್ತಿಯೂ ಗ್ಯಾಲರಿಯಿಂದ ಕೆಳಗೆ ಬಂದರು. ಅಪರಿಚಿತರು ತಮ್ಮ ಶೂನಿಂದ ಒಂದಷ್ಟು ವಸ್ತುಗಳನ್ನು ಹೊರಗೆ ತೆಗೆದರು. ಅದರಿಂದ ಹಳದಿ ಬಣ್ಣದ ಹೊಗೆ ಹೊರ ಬಂತು ಎಂದು ಮಾಹಿತಿ ಕುರಿತು ವಿವರಿಸಿದ್ದಾರೆ.
ಇಬ್ಬರು ಯುವಕರ ಪುಂಡಾಟಕ್ಕೆ ಸಂಸತ್ ಭವನದಲ್ಲಿ ಎಲ್ಲ ಸಂಸದರು ಎಚ್ಚರಗೊಂಡೆವು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೂ ಕೂಡಾ ಆಗ ತಾನೇ ಸದನಕ್ಕೆ ಆಗಮಿಸುತ್ತಿದ್ದರು. ಈ ವೇಳೆಯಲ್ಲೇ ನಡೆದ ಈ ಘಟನೆ ಖಂಡಿತವಾಗಿಯೂ ಭದ್ರತಾ ಲೋಪ ಎಂದು ಅವರು ಹೇಳಿದ್ದಾರೆ.
ಶಿವಸೇನೆ ಉದ್ಧವ್ ಠಾಕ್ರೆ ಬಣದ ಸಂಸದ ಅರವಿಂದ್ ಸಾವಂತ್ ಅವರು ದಾಳಿಯ ಘಟನೆ ಕುರಿತಾಗಿ ಆಘಾತ ವ್ಯಕ್ತಪಡಿಸಿ ಘಟನೆ ನಡೆದ ವೇಳೆ ನಾನು ಲೋಕಸಭೆಯಲ್ಲಿದ್ದೆ ಎಂದು ಹೇಳಿಸಿದ ಅರವಿಂದ್ ಸಾವಂತ್, ಈ ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ ಎಂದು ಮಾಹಿತಿ ನೀಡಿದರು.
ಅಪರಿಚಿತ ಕಿಡಿಗೇಡಿಗಳು ಸಂಪತ್ ಪ್ರವೇಶಿಸಿದ ವೇಳೆ ಇಬ್ಬರು ಕೇಂದ್ರ ಸಚಿವರು ಲೋಕಸಭೆಯಲ್ಲಿದ್ದರು. ಅಪರಿಚಿತ ಯುವಕರು ಗ್ಯಾಲರಿಯಿಂದ ನೆಗೆದರು. ಆದರೆ ಆ ಸೀಟ್ಗಳು ಖಾಲಿ ಇದ್ದವು. ಹೀಗಾಗಿ, ಯಾರಿಗೂ ಅಪಾಯ ಆಗಿಲ್ಲ. ಅಷ್ಟರಲ್ಲೇ ಭದ್ರತಾ ಸಿಬ್ಬಂದಿ ದುಷ್ಕರ್ಮಿಗಳನ್ನು ಹಿಡಿದರು ಎಂದು ಸಾವಂತ್ ಮಾಧ್ಯಮಗಳೊಂದಿಗೆ ಮಾತನಾಡಿ ವಿವರಿಸಿದ್ದಾರೆ.
ಟಿಎಂಸಿ ಸಂಸದ ಸುದೀಪ್ ಬಂಡೋಪಾಧ್ಯಾಯ ಅವರು ಮಾತನಾಡಿ ಇಬ್ಬರು ಯುವಕರು ನಡೆಸಿರುವ ಪುಂಡಾಟ ಭಯಾನಕ ಅನುಭವ ಎಂದಿದ್ದಾರೆ. ದುಷ್ಕರ್ಮಿಗಳ ಟಾರ್ಗೆಟ್ ಏನು ಅನ್ನೋದು ಯಾರಿಗೂ ಗೊತ್ತಿರಲಿಲ್ಲ. ನಾವು ಆ ಕೂಡಲೇ ಲೋಕಸಭೆಯಿಂದ ಹೊರಗೆ ಬಂದೆವು. ಆದರೆ ಇದು ಖಂಡಿತವಾಗಿಯೂ ಭದ್ರತಾ ವೈಫಲ್ಯ ಎಂದು ಬಂಡೋಪಾಧ್ಯಾಯ ಅವರು ತಿಳಿಸಿದ್ದಾರೆ.