i
ಅಭಯಲಕ್ಷ್ಮಿ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ಪ್ರಶಸ್ತಿಗಳಲ್ಲೊಂದಾದ ಅಭಯ ಲಕ್ಷ್ಮಿ ದತ್ತಿ ಪ್ರಶಸ್ತಿ ಸಮಾರಂಭವನ್ನು ಡಿಸೆಂಬರ್ 18 ಸೋಮವಾರದಂದು ಬೆಳಿಗ್ಗೆ 11 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಏರ್ಪಡಿಸಲಾಗಿದೆ.
ಶ್ರೀಮತಿ ಪಿ.ಜಯಲಕ್ಷ್ಮಿಯವರು ಕನ್ನಡ ಸಾಹಿತ್ಯ ಪರಿಷತ್ತಿನ ಮೇಲಿನ ಅಭಿಮಾನದಿಂದ ತಮ್ಮ ಪತಿ ದಿ.ಎಸ್.ಎ.ಅಭಯ ಕುಮಾರ್ ಅವರ ಹೆಸರಿನಲ್ಲಿ ಈ ದತ್ತಿಯನ್ನು ಸ್ಥಾಪಿಸಿದ್ದು, ಸಾಹಿತ್ಯ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಇಬ್ಬರು ಗಣ್ಯರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
2023ನೆಯ ಸಾಲಿನ ಪ್ರಶಸ್ತಿಗೆ ಪೆಥಲಾಜಿಯ ಪ್ರಾಧ್ಯಾಪಕರಾಗಿದ್ದರೂ ಸುದೀರ್ಘ ಕಾಲ ವೈದ್ಯಕೀಯ ವೃತ್ತಿಯಲ್ಲಿದ್ದರು. ಹವ್ಯಾಸಿ ರಂಗ ಭೂಮಿ ತಜ್ಞರಾಗಿ, ಕಾಲೇಜು ರಂಗಭೂಮಿಯನ್ನು ಬೆಳೆಸಿದವರಾಗಿ ಗಣನೀಯ ಸೇವೆಯನ್ನು ಸಲ್ಲಿಸಿದ ಡಾ.ಎಚ್.ಎ.ಪಾಶ್ರ್ವನಾಥ ಮತ್ತು ಕರ್ನಾಟಕದ ವಿವಿಧ ಸಚಿವಾಲಯಗಳ ಪ್ರಮುಖ ಹುದ್ದೆಯಲ್ಲಿ ಸೇವೆ ಸಲ್ಲಿಸಿದ ಕಾದಂಬರಿ, ನಗೆ ಬರಹ, ಕಥೆ, ವಿಚಾರ ಚಿಂತನೆ, ವ್ಯಕ್ತಿ ಚಿತ್ರಣ, ಅಂಕಣ ಬರಹ, ಕವಿತೆ ಹೀಗೆ ಹಲವು ಕ್ಷೇತ್ರಗಳಲ್ಲಿ ಗಣನೀಯ ಸೇವೆಯನ್ನು ಸಲ್ಲಿಸಿದ ಶ್ರೀಮತಿ ಪ್ರೇಮಾ ಭಟ್ ಅವರಿಗೆ ನೀಡಲಾಗುತ್ತಿದೆ.
ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಶ್ರಾಂತ ನಿರ್ದೇಶಕರಾದ ಡಾ.ಕೆ.ಪಿ.ಪುತ್ತೂರಾಯರು ಪ್ರಶಸ್ತಿ ಪ್ರದಾನ ಮಾಡಲಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ದತ್ತಿ ದಾನಿಗಳಾದ ಶ್ರೀಮತಿ ಪಿ.ಜಯಲಕ್ಷ್ಮಿ ಅಭಯ ಕುಮಾರ್ ಉಪಸ್ಥಿತರಿರಲಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.