i
ಪ್ರಜಾ ತಾಂತ್ರಿಕ ಬಿಕ್ಕಟ್ಟುಗಳಿಗೆ ಅಂಬೇಡ್ಕರ್ ಚಿಂತನೆಗಳು ದಾರಿದೀಪ-ಅಹೋಬಳಪತಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹೊಸ ಹೊಸ ಸಾಮಾಜಿಕ ವಿಜ್ಞಾನಗಳಲ್ಲಿ ಆದಂತಹ ಸಂಶೋಧನೆ, ಚರ್ಚೆಗಳು, ವಾಗ್ವಾದಗಳು ಮತ್ತು ಭಾರತದ ಸಂದರ್ಭದಲ್ಲಿ ಉಂಟಾದ ಸಾಮಾಜಿಕ ಬಿಕ್ಕಟ್ಟುಗಳು ಪ್ರಜಾ ತಾಂತ್ರಿಕ ಬಿಕ್ಕಟ್ಟುಗಳು ಅದರ ನಿವಾರಣೆ ಮಾರ್ಗಗಳ ಏನು ಎಂದು ಹುಡುಕಲು ಹೋರಾಟದ ಅಂಬೇಡ್ಕರ್ ಅಲೋಚನೆಗಳು ದೊಡ್ಡ ದಾರಿದೀಪ ಅನಿಸಿವೆ ಎಂದು ಹಿರಿಯ ಪತ್ರಕರ್ತ ಮೇ.ನಾ. ಅಹೋಬಳಪತಿ ತಿಳಿಸಿದರು.
ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬಾಲಕರ ಪದವಿ ಪೂರ್ವ ಕಾಲೇಜು ಆಯೋಜಿಸಿದ್ದ ಅಂಬೇಡ್ಕರ್ ಓದು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ನಿರ್ಲಕ್ಷ್ಯಮಾಡಲಾಗಿದೆ ಎಂಬ ವಾದವು ಹಾಗಾಗ ನಡೆಯುತ್ತದೆ. ಅಂಬೇಡ್ಕರ್ ಇಲ್ಲದ ಯಾವ ಬದಲಾವಣೆ ತರಲು ಸಾಧ್ಯವಿಲ್ಲ ಈ ನೆಲದಲ್ಲಿ ಎಂಬ ಚರ್ಚೆಗಳು ಶೈಕ್ಷಣಿಕ, ಹೋರಾಟದ ವಲಯದಲ್ಲಿ ನಡೆಯುತ್ತಿವೆ. ಆದರೆ ಶೈಕ್ಷಣಿಕ ವಲಯದ ಅಧ್ಯಯನಗಳೇ ಹೆಚ್ಚು ತೆರೆದುಕೊಂಡವು. ಚಳವಳಿಗಳು ದೊಡ್ಡಮಟ್ಟದಲ್ಲಿ ಇದ್ದಾಗಲೂ ಅಷ್ಟೊಂದು ತಲೆ ಕೆಡಿಸಿಕೊಂಡಿಲ್ಲ. ಅಂಬೇಡ್ಕರ್ ವಿಚಾರಗಳನ್ನು ಈಗ ಹೆಚ್ಚೆಚ್ಚು ಮುನ್ನೆಲೆಗೆ ತೆಗೆದುಕೊಳ್ಳುವ ಪ್ರಯತ್ನಗಳು ನಡೆದವು. ಒಂದುವರೆ ದಶಕದಲ್ಲಂತೂ ತುಂಬಾ ಪರಿಣಾಮಕಾರಿಯಾಗಿ ನಡೆದಿವೆ ಎಂದು ಹೇಳಿದರು. ಬೇರೆ ಬೇರೆ ದೇಶಗಳಲ್ಲಿ ಯುಗ ಪ್ರವರ್ತಕರನ್ನು ನೋಡುತ್ತೇವೆ. ರಷ್ಯಾ, ಲೆನಿನ್, ಚೈನಾ, ಮಾವೋ, ಸ್ಟಾಲಿನ್ ಈ ರೀತಿ ದೊಡ್ಡ ದೊಡ್ಡ ಪ್ರವರ್ತಕರನ್ನು ನೋಡುತ್ತೇವೆ. ಭಾರತದ ಮಟ್ಟಿಗೆ ದೊಡ್ಡಪಟ್ಟಿಯೇ ಇದೆ. ಆದರೆ, ನಿಜವಾದ ಅರ್ಥದಲ್ಲಿ ಭಾರತೀಯ ಸಮಾಜದಲ್ಲಿ ಆಧುನಿಕ ಯುಗ ಪ್ರವರ್ತಕನೆಂದು ಪರಿಗಣಿಸುವುದಾದರೆ ಅದು ಅಂಬೇಡ್ಕರ್ ಮಾತ್ರ. ಎಂದು ತಿಳಿಸಿದರು. ಬ್ರಿಟಿಷ್ ಆರ್ಥಿಕತೆ ಕುರಿತು ಕೊಲಂಬಿಯ ವಿ.ವಿ.ಯಲ್ಲಿ 1916 ರಲ್ಲಿ ಪ್ರಬಂಧ ಮಂಡಿಸಿದರು. 1956ರ ತನಕ 4 ದಶಕಗಳ ಕಾಲ ಯಾರಾದರೂ ಒಬ್ಬ ವ್ಯಕ್ತಿ ಅಧ್ಯಯನ, ಸಂಘರ್ಷ, ಸಂಘಟನೆ, ಹೋರಾಟ, ಸಾಮಾಜಿಕ ಸವಾಲುಗಳೆಲ್ಲವನ್ನು ಸ್ವೀಕರಿಸಿ ಅವಿಶ್ರಾಂತ ಯೋಧನ ರೀತಿಯಲ್ಲಿ ಸಾರ್ವಜನಿಕ ಜೀವನಕ್ಕೆ ಮಹತ್ವವಾದ ಕೊಡುಗೆಯನ್ನು ಕೊಟ್ಟಿದ್ದಾರೆ. ಅಂತಹ ಒಂದು ಆಂತಃಶಕ್ತಿಯನ್ನು ನೋವಿನ, ಅನುಮಾನದ ಕುಲುಮೆಯಲ್ಲೇ ಪಡೆದುಕೊಂಡು ಪುಟಿದೆದ್ದವರು ಅಂಬೇಡ್ಕರ್. ಪಠ್ಯಪುಸ್ತಕ, ಸ್ವಾತಂತ್ರ್ಯ ಹೋರಾಟದ ಚರಿತ್ರೆಯನ್ನು ಸಮಾಜಶಾಸ್ತ್ರವನ್ನು ಓದುವಾಗ ಇಂತಹದೊಂದು ವ್ಯಕ್ತಿತ್ವ ಇತ್ತು ಎಂದು ನೊಂದಣಿಯಾಗುವುದಿಲ್ಲ. ಅದೊಂದು ಸಣ್ಣ ಕತೆಯಾಗಿ ಅಂಬೇಡ್ಕರ್ರವರ ಜೀವನಗಾಥೆ ನಮ್ಮ ನೆನಪಿನಲ್ಲಿ ಉಳಿಯುವಷ್ಟಿದೆ. ಅದು ಬದಲಾಗಬೇಕು, ಅಂಬೇಡ್ಕರ್ ಓದು ಕಾರ್ಯಕ್ರಮ ಅಂತಹ ಕೊರತೆಯನ್ನು ನೀಗಿಸುವ ಪ್ರಮುಖಪಾತ್ರ ವಹಿಸುತ್ತದೆ ಎಂದು ತಿಳಿಸಿದರು. ಅಂಬೇಡ್ಕರ್ ಬಗ್ಗೆ ತಿಳಿಯುವ ದೊಡ್ಡ ಜ್ಞಾನವಿದೆ. ಅದು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿಯಂತಲ್ಲ. ನೀವು ಆಧುನಿಕ ಸಮಾಜದಲ್ಲಿ ಪರಿಪೂರ್ಣ ವ್ಯಕ್ತಿಯಾಗಿ ಇನ್ನೊಬ್ಬರ ಪ್ರಜಾ ತಾಂತ್ರಿಕ ಇರುವಿಕೆಯನ್ನು, ಇನ್ನೊಬ್ಬರ ಪ್ರಜಾತಾಂತ್ರಿಕ ಆಗುಹೋಗುವಿಕೆಯನ್ನು, ಗೌರವಿಸಿ ಹೇಗೆ ಪ್ರಜಾತಾಂತ್ರಿಕವಾಗಿ ನಡೆದುಕೊಳ್ಳಬೇಕು ಎಂದುಕೊಂಡರೆ ನೀವು ಅಂಬೇಡ್ಕರ್ನ್ನು ಓದಿಕೊಳ್ಳಲೇಬೇಕು. ವಿದ್ಯಾರ್ಥಿಗಳಾದ ನೀವು ಮುಂದೆ ಸಮಾಜ ವಿಜ್ಞಾನಿಯಾಗಿ, ವಕೀಲರಾಗಿ, ರಾಜಕಾರಣಿಯಾಗುತ್ತಿರೋ ಗೊತ್ತಿಲ್ಲ. ನೀವು ಏನೇ ಆಗಬೇಕು, ನೀವು ಪರಿಪೂರ್ಣರಾಗಬೇಕು ಎಂದರೆ ನೀವು ಅಂಬೇಡ್ಕರ್ನ್ನು ಓದಲೇಬೇಕು. ಅಂಬೇಡ್ಕರ್ ಜ್ಞಾನದ ಗಣಿ, ಸಮಾಜದ ಚೇತನ ಎಂದು ಗ್ರಹಿಸಬೇಕು ಎಂದು ಹೇಳಿದರು. ಅಂಬೇಡ್ಕರ್ರವರು ವ್ಯಕ್ತಿ ಪೂಜೆ ಸಲ್ಲದು ಎಂದಿದ್ದಾರೆ. ಆದರೆ ಭಾರತ ಸ್ವಾತಂತ್ರ್ಯದ ನಂತರ ಕೆಲವೇ ದಿನಗಳಲ್ಲಿ ಇಂದಿರಾಗಾಂಧಿಯಂತಹ ಪ್ರಧಾನಿ ವ್ಯಕ್ತಿ ಪೂಜೆ ಶುರುವಾಯಿತು. ಅದು ತುರ್ತು ಪರಿಸ್ಥಿತಿಯಂತಹ ಅತಿರೇಕಕ್ಕೆ ಕರೆದುಕೊಂಡು ಹೋಗುವಂತಹ ಸನ್ನಿವೇಶ ನಿರ್ಮಾಣಮಾಡಿತು. ಇವತ್ತು ಕೂಡ ಅಂತಹ ವ್ಯಕ್ತಿ ಪೂಜೆಯ ಅತಿರೇಕಕ್ಕೆ ಹೋಗಿದೆ. ಪ್ರಜಾತಾಂತ್ರಿಕ ಆಶಯಗಳು, ನೆಲೆಗಳು ಅದರ ವಿಸ್ತೃತತೆ ಬದಿಗಿಟ್ಟು ಯಾರೋ ಅವತಾರ ಪುರುಷ ನಮ್ಮ ದೇಶವನ್ನು ರಕ್ಷಣೆ ಮಾಡುತ್ತಿದ್ದಾರೆ ಎಂಬ ಮಧ್ಯಯುಗಿಯ ಮೌಢ್ಯದ ಅರೆಉಳಿಗಮಾನ್ಯ ಪರಿಸ್ಥಿತಿಗೆ ನಮ್ಮನ್ನು ಕೊಂಡೊಯ್ಯುವ ಪ್ರಯತ್ನಗಳು ನಡೆಯುತ್ತಿವೆ ಎಂದು ವಿಷಾದಿಸಿದರು. ಒಂದು ದೇಶ ಜನಾಂಗೀಯ, ಭಾಷಿಕ, ಜಾತಿಯ, ಧಾರ್ಮಿಕ ಪೂರ್ವಗ್ರಹದಲ್ಲಿ ಯಾವುದೇ ದೇಶ ಭವಿಷ್ಯಕಟ್ಟಿಕೊಳ್ಳಲು ಆಗುವುದಿಲ್ಲ. ಇದನ್ನು ಅಂಬೇಡ್ಕರ್ ಪ್ರಾನ್ಸ್ನ ಮಹಾಕ್ರಾಂತಿಯ ಘೋಷಣೆಗಳಾದ ಸ್ವತಂತ್ರ್ಯ, ಸಮಾನತೆ, ಸಹೋದರತ್ವ ಅಂದರೆ 17ನೇ ಶತಮಾನದಲ್ಲಿ ನಡೆದಂತಹ ಪ್ರಾನ್ಸ್ ಕ್ರಾಂತಿಯ ಅಂತಃಸ್ಪೂರ್ತಿ ಆಶಯವನ್ನು ಎತ್ತಿ ಹಿಡಿದು ಅದನ್ನು ನಮ್ಮ ಸಂವಿಧಾನದಲ್ಲಿ ಅಳವಡಿಸಿದ್ದಾರೆ. ಸಂವಿಧಾನ ಹಸ್ತಾಂತರಿಸುವಾಗ ಉಲ್ಲೇಖಿಸುತ್ತಾರೆ. ಎಲ್ಲಾ ಪೂರ್ವಗ್ರಹಗಳಿಗೆ ಅತೀತವಾದ ಪ್ರಜಾತಾಂತ್ರಿಕ ಸಮಾಜವಾದಿ ದೇಶ ನನ್ನ ಕನಸು ಎಂಬುವುದು ಅಂಬೇಡ್ಕರ್ರವರ ಆಶಯವಾಗಿತ್ತು ಎಂದು ತಿಳಿಸಿದರು. ಉಪನ್ಯಾಸಕ ಡಾ.ಕೃಷ್ಣಪ್ಪ.ಬಿ. ಮಾತನಾಡಿ ಡಾ.ಬಿ.ಆರ್. ಅಂಬೇಡ್ಕರ್ರವರು ಆಧುನಿಕ ಭಾರತದಲ್ಲಿ ತಮ್ಮದೇ ಆದಂತಹ ಛಾಪೂವನ್ನು ಮೂಡಿಸಿದ್ದಾರೆ. ಕಬೀರ ಪಂಥ, ಬುದ್ಧನ ಚರಿತೆ ಪುಸ್ತಕ, ಜ್ಯೋತಿ ಬಾ ಪುಲೆ ಈ ಮೂರು ಅಂಶಗಳು ಅವರಿಗೆ ಪ್ರಭಾವಿತವಾಗಿದ್ದವು ಎಂದು ಹೇಳಿದರು. ಮಹಾರಾಷ್ಟçದಲ್ಲಿ ಕಬೀರ ಪಂಥ್ ಬಹಳ ಜನಪ್ರಿಯವಾಗಿತ್ತು. ಅಸಮಾನತೆಯನ್ನು ಅಳಸಿ ಸಮಾನತೆಯನ್ನು ತೋರುವುದು ಹಾಗೆ ಕಾರ್ಯಕ್ರಮವೊಂದರಲ್ಲಿ ಬುದ್ಧನ ಚರಿತ್ರೆಯ ಕೃತಿಯನ್ನು ನೀಡಿದ್ದು ಆ ಕೃತಿ ಓದಿ ಅವರಿಗೆ ಪ್ರೇರಣೆಯಾಗಿದ್ದು, ಮುಂದೆ ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿದರು. ಹಾಗೆಯೇ ಜೋತಿ ಬಾ ಪುಲೆಯವರು ಮಹಿಳೆಯರ ಸಮಾನತೆಗಾಗಿ ಶ್ರಮ ಪಡುತ್ತಿರುವುದು ಸತ್ಯಶೋಧನಾ ಚಳುವಳಿಯಿಂದ ಪ್ರೇರಣೆ ಪಡೆದರು ಎಂದು ಹೇಳಿದರು.ಅಂಬೇಡ್ಕರ್ರವರು ಇಚ್ಛಾಶಕ್ತಿಯಿಂದ ಅಭ್ಯಾಸಮಾಡಿದ್ದಾರೆ. ಹಾಗಾಗಿ ಅವರು ಎಲ್ಲರ ಮನಸ್ಸಿನಲ್ಲಿ ಉಳಿದಿದ್ದಾರೆ. ಶಿಕ್ಷಣಕ್ಕೆ ಹೆಚ್ಚು ಆಧ್ಯತೆ ನೀಡಿದ್ದರು. ಎಲ್ಲಾ ದೇಶದ ಸಂವಿಧಾನವನ್ನು ಅಧ್ಯಯನಮಾಡಿದ್ದರಿಂದ ನಮಗೆ ಅಮೂಲ್ಯವಾದ ಸಂವಿಧಾನವನ್ನು ನೀಡಲು ಸಾಧ್ಯವಾಯಿತು. ಅವರಿಗೆ ಇನ್ನು ಬರೆಯಬೇಕಿತ್ತು, ಇನ್ನು ಹೇಳಬೇಕಿತ್ತು ಎಂಬುವ ಹಸಿನದಾಹ ಅವರಲ್ಲಿತ್ತು. ನಾನು ಪಟ್ಟಂತಹ ಕಷ್ಟ ಇಂದಿನವರು ಪಡಬಾರದೆಂದು ದೂರದೃಷ್ಠಿ ಅವರಿಗಿತ್ತು. ಎಲ್ಲಾ ರೀತಿಯ ಸಮಾನತೆಯನ್ನು ನೀಡಿದ್ದಾರೆ ಎಂದು ತಿಳಿಸಿದರು. ಪ್ರಸ್ತಾವಿಕವಾಗಿ ಡಾ.ಬಿ.ಎಂ.ಗುರುನಾಥ್ ಮಾತನಾಡಿದರು. ವೇದಿಕೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪುಟ್ಟಸ್ವಾಮಿ, ಪ್ರಾಂಶುಪಾಲ ಹೆಚ್.ಪಿ.ನರಸಿಂಹಮೂರ್ತಿ, ಉಪನ್ಯಾಸಕರಾದ ಮೋಹನ್, ಚಂಪಕಲಾ, ಶ್ರೀನಿವಾಸ, ದೊಡ್ಡಪ್ಪ, ಹೇಮಂತರಾಜ್ ಉಪಸ್ಥಿತರಿದ್ದರು.