i
ಕೊಳೆತು ನಾರುತ್ತಿರುವ ಗ್ರಾಮ ಪಂಚಾಯ್ತಿ ವಿರುದ್ದ ತಮಟೆ ಹೊಡೆದು ಡಂಗುರ ಸಾರಿದ ಯುವಕರು…
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ರಾಜಘಟ್ಟ ಗ್ರಾಮಕ್ಕೆ 2000 ಸಾವಿರ ವರ್ಷಗಳ ಇತಿಹಾಸವಿದೆ, 2 ಸಾವಿರ ವರ್ಷಗಳ ಹಿಂದೆ ಬೌದ್ಧರ ನೆಲಯಾಗಿತ್ತು, ಇತಿಹಾಸ ಪ್ರಸಿದ್ಧವಾದ ರಾಜಘಟ್ಟ ಗ್ರಾಮ ಇವತ್ತು ಕೊಳಕಿನಘಟ್ಟವಾಗಿದೆ, ಗ್ರಾಮಸ್ಥರ ಆರೋಗ್ಯ ಕಾಪಾಡಬೇಕಾದ ಗ್ರಾಮ ಪಂಚಾಯಿತಿಗೆ ಸ್ವಚ್ಛತೆ ಏನೆಂಬುದೇ ಗೊತ್ತಿಲ್ಲ, ಜನರ ಆರೋಗ್ಯ ಹಾಳು ಮಾಡುತ್ತಿರುವ ಪಂಚಾಯಿತಿಗೆ ಮಹಿಳೆಯರು ಮತ್ತು ಮಕ್ಕಳು ಹಿಡಿಶಾಪ ಹಾಕುತ್ತಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ರಾಜಘಟ್ಟ ಗ್ರಾಮ ಹೋಬಳಿ ಕೇಂದ್ರ, ನಗರಕ್ಕೆ 9 ಕಿ,ಮೀ ದೂರದಲ್ಲಿರುವ ಗ್ರಾಮದಲ್ಲಿ ಸ್ವಚ್ಛತೆಯೇ ಮಾಯವಾಗಿದೆ, ಚರಂಡಿಯಲ್ಲಿ ಕೊಳೆತು ನಾರುತ್ತಿರುವ ಕಸಕಡ್ಡಿಗಳು, ರಸ್ತೆಯ ಮೇಲೆ ಹರಿದು ಬಂದಿರು ತ್ಯಾಜ್ಯ ನೀರು. ಗಬ್ಬೆದು ನಾರುತ್ತಿರುವ ಚರಂಡಿಯಿಂದ ಬರುವ ಸೊಳ್ಳೆ ಮತ್ತು ನೋಣಗಳು, ಇದು ರಾಜಘಟ್ಟ ಗ್ರಾಮದ ದುಸ್ಥಿತಿ. ಗ್ರಾಮದಲ್ಲಿ ಸ್ವಚ್ಛತೆಯನ್ನ ಕಾಪಾಡದ ಪಂಚಾಯಿತಿ ವಿರುದ್ಧ ಮಹಿಳೆಯರು ಮತ್ತು ಮಕ್ಕಳು ತಿರುಗಿ ಬಿದ್ದಿದ್ದಾರೆ, ಗ್ರಾಮದ ಸ್ವಚ್ಛತೆಗೆ ಸ್ಪಂದಿಸದ ಪಂಚಾಯತಿ ಅಭಿವೃದ್ದಿ ಅಧಿಕಾರಿ ಹಾಗೂ ಪಂಚಾಯಿತಿ ಸಿಬ್ಬಂದಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ, ಗ್ರಾಮದ ಕೊಳಕಿನ ಬಗ್ಗೆ ಧ್ವನಿ ಎತ್ತಿರುವ ಯುವಕರ ತಂಡ ತಮಟೆ ಬಾರಿಸುವ ಮೂಲಕ ಪ್ರತಿಭಟನೆ ನಡೆಸಿದರು. ತಮಟೆ ಹೊಡೆದು ಡಂಗೂರ ಸಾರುವ ಮೂಲಕ ಗ್ರಾಮಸ್ಥರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಿದರು.
ರಾಜಘಟ್ಟ ಗ್ರಾಮದಲ್ಲಿನ ಕೊಳೆತು ನಾರುತ್ತಿರುವ ಚರಂಡಿಗಳು-
ರಾಜಘಟ್ಟ ಗ್ರಾಮದ ದಲಿತ ಕಲೋನಿಗಳು ಸೇರಿದಂತೆ ಗ್ರಾಮದ ಸ್ವಚ್ಛತೆ ಕಾಣೆಯಾಗಿದೆ ಗ್ರಾಮದ ಅಭಿವೃದ್ದಿ ಕುರಿತು ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ ಧೋರಣೆಯಿಂದ ಗ್ರಾಮಸ್ಥರು ನರಳುವಂಥಗಿದೆ ಸ್ವಚ್ಛತೆ ಕುರಿತು ಪ್ರಶ್ನಿಸುವ ಗ್ರಾಮಸ್ಥರಿಗೆ ಸ್ಪಂದಿಸದ ಪಂಚಾಯಿತಿ ನಮಗೆ ಬೇಕಿಲ್ಲ ಗುರುವಾರದವರೆಗೂ ಕಾಲಾವಕಾಶ ನೀಡುತ್ತಿದ್ದು ಸಮಸ್ಯೆ ಬಗೆಹರಿಸದ ಪಕ್ಷದಲ್ಲಿ ಗ್ರಾಮದ ಮಹಿಳೆಯರು ಮಕ್ಕಳನ್ನು ಒಳಗೊಂಡಂತೆ ಸರ್ವ ಗ್ರಾಮಸ್ಥರಿಂದ ಪಂಚಾಯಿತಿಗೆ ಮುತ್ತಿಗೆ ಹಾಕಲಾಗುವುದು ಎಂದು ಸ್ಥಳೀಯರಾದ ರಾಜಘಟ್ಟ ಗಣೇಶ್ ತಿಳಿಸಿದರು.
ಗ್ರಾಮದ ಮಹಿಳೆಯರು ಮಾತನಾಡಿ ಗ್ರಾಮದ ಚರಂಡಿಗಳು ಕಸದರಾಶಿಯಿಂದ ತುಂಬಿವೆ ಕೊಳಚೆ ನೀರು ಮನೆಮುಂದೆ ನಿಂತಿದ್ದು ಆರೋಗ್ಯ ಸಮಸ್ಯೆ ಎದುರಾಗಬಹುದು ಎಂಬ ಭಯದಲ್ಲಿ ಜೀವನ ಸಾಗಿಸುವಂಥಾಗಿದೆ ಹಲವು ಗ್ರಾಮಸ್ಥರಿಗೆ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಂಡಿವೆ ನಿಂತ ನೀರಿನಿಂದ ಬರುವ ದುರ್ವಾಸನೆಯಿಂದ ಮನೆಯಲ್ಲಿ ವಾಸ ಮಾಡುವುದು ಕಷ್ಟಕರವಾಗಿದೆ ಪಂಚಾಯಿತಿ ಅಧಿಕಾರಿಗಳು ಕೂಡಲೇ ಸರಿಪಡಿಸಿ ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಗ್ರಾಮಸ್ಥರಾದ ಪ್ರಮೋದ್ ,ವೇಣು, ಸಾಗರ್, ಆನಂದ್ ,ಪ್ರವೀಣ್, ಮನೋಜ್ ,ವೆಂಕಟೇಶ್, ಭರತ್, ಮಧು, ಸಂದೀಪ್ , ವಿನಯ್ ,ಶ್ರೀನಿವಾಸ್ , ಮಣಿ, ಸಂತೋಷ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.