i
ದಸರಾ ಅಂಬಾರಿ ಹೊತ್ತ ಅರ್ಜನ್ ಸ್ಮರಣಾರ್ಥ ಅರ್ಜುನ್ ಕಪ್…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ದುರ್ಗಾ ಇಲೆವೆನ್ ಕ್ರಿಕೆಟರ್ಸ್ ವತಿಯಿಂದ ಸತತವಾಗಿ 8 ಬಾರಿ ದಸರಾ ಅಂಬಾರಿ ಹೊತ್ತ ಆನೆ ಅರ್ಜನ್ ಸ್ಮರಣಾರ್ಥ ಅರ್ಜುನ್ ಕಪ್-2023 ಅನ್ನು ಡಿ.20 ರಿಂದ 24 ರವರೆಗೆ ರಾಜ್ಯ ಮಟ್ಟದ ಟೆನಿಸ್ ಬಾಲ್ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ ಎಂದು ನಗರಸಭಾ ಮಾಜಿ ಅಧ್ಯಕ್ಷ ಹಾಗೂ ಕ್ರಿಕೆಟ್ ಪಂದ್ಯಾವಳಿ ಆಯೋಜಕ ಬಿ.ಕಾಂತರಾಜ್ ತಿಳಿಸಿದರು.ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಾನವ ಸ್ಮರಣಾರ್ಥ ಕ್ರಿಕೆಟ್ ಪಂದ್ಯಾವಳಿ ಆಯೋಜಿಸುವುದು ಸಾಮಾನ್ಯ ಆದರೆ ನಾವುಗಳು ಪ್ರಾಣಿಗಳ ಸ್ಮರಣಾರ್ಥ ಕ್ರಿಕೆಟ್ ಪಂದ್ಯಾವಳಿ ಆಯೋಜಿಸುತ್ತಿರುವುದು ರಾಜ್ಯದಲ್ಲಿಯೇ ಪ್ರಥಮ ಎಂದು ತಿಳಿಸಿದರು.
ಚೆನೈ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಈಗಾಗಲೇ 35 ತಂಡಗಳು ತಮ್ಮ ಹೆಸರು ನೊಂದಾಯಿಸಿಕೊಂಡಿವೆ. ಪ್ರತಿ ಪಂದ್ಯಾದಲ್ಲೂ ಉತ್ತಮ ಬ್ಯಾಟ್ಸ್ ಮನ್, ಉತ್ತಮ ಬೌಲರ್ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಿದರು.ಅಂಬಾರ ಹೊತ್ತ ಮೃತ ಆನೆ ಅರ್ಜುನ ಮಾತ್ರವಲ್ಲದೆ ಬಲರಾಮ ಮತ್ತು ದ್ರೋಣ ಹೆಸರಿನ ಆನೆಗಳ ಹೆಸರಿನಿಲ್ಲೂ ಕಪ್ ನೀಡಲಾಗುತ್ತದೆ . ಡಿ.20ರ ಬುಧವಾರ ಸಂಜೆ 6 ಗಂಟೆಗೆ ಶಾಸಕ ಕೆ.ಸಿ.ವಿರೇಂದ್ರ ಪಪ್ಪಿರವರು ಪಂದ್ಯಾವಳಿಗೆ ಚಾಲನೆ ನೀಡಲಿದ್ದಾರೆ. ಅರ್ಜುನ ಆನೆಯ ಮಾವುತರಾದ ರಾಜ ಮತ್ತು ವಿನುರವರನ್ನು ಕರೆಯಿಸಿ ಗೌರವಿಸಲಾಗುವುದು ಇದ್ದಲ್ಲದೆ ನಮ್ಮ ಕೈಲಾದ ಸಹಾಯ ಮಾಡಲಾಗುವುದು. ಡಿ.23 ರಂದು ಧರ್ಮೆಂದ್ರ ಕುಮಾರ್ ರವರಿಂದ ಆನೆಗಳ ಬಗ್ಗೆ ಚಿತ್ರದುರ್ಗದ ಜನತೆಗೆ ಮಾಹಿತಿ ನೀಡಲಿದ್ದಾರೆ. ಡಿ.24 ರಂದು ಸಮಾರೋಪ ಸಮಾರಂಭದಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಶಾಸಕರು ಭಾಗವಹಿಸಲಿದ್ದಾರೆ ಅಂದು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ವೇದಿಕೆಯಲ್ಲಿ ಸನ್ಮಾನಿಸಲಾಗುವುದೆಂದು ಕಾಂತರಾಜ್ ತಿಳಿಸಿದರು.ಪಂದ್ಯಾವಳಿಯಲ್ಲಿ ಗೆದ್ದ ಪ್ರಥಮ ತಂಡಕ್ಕೆ ಅರ್ಜುನ ಟ್ರೋಫಿ ಮತ್ತು 2 ಲಕ್ಷ ರೂ, ದ್ವಿತೀಯ ಸ್ಥಾನಕ್ಕೆ ಬಲರಾಮ ಟ್ರೋಫಿ ಮತ್ತು 1 ಲಕ್ಷ ರೂ ಹಾಗೂ ತೃತೀಯ ಸ್ಥಾನಗಳಿಸಿದ ತಂಡಕ್ಕೆ ದ್ರೋಣ ಟ್ರೋಫಿ 50 ಸಾವಿರ ಬಹುಮಾನ ನೀಡಲಾಗುವುದು. ಪಂದ್ಯಾವಳಿ ವೀಕ್ಷಿಸಲು ಆಗಮಿಸುವ ಕ್ರೀಡಾ ಪ್ರೇಮಿಗಳಿಗೆ ಉತ್ತಮ ಆಸನದ ವ್ಯವಸ್ಥೆ ಮಾಡಲಾಗಿದೆ ಎಂದರು.
ಗೋಷ್ಟಿಯಲ್ಲಿ ಉದ್ಯಮಿಗಳಾದ ಸುರೇಶ್ ಬಾಬು, ಗೋಪಾಲಸ್ವಾಮಿ ನಾಯಕ, ವೀರಶೈವ ಮುಖಂಡ ಪರಮೇಶ್, ಸಿದ್ದೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.