i
ಗ್ರಾಮೀಣ ಮಟ್ಟದ ಸರ್ವಾಂಗೀಣ ಮಾನಸಿಕ ಆರೋಗ್ಯದ ಕಾರ್ಯಕ್ರಮ ಎರಡು ತಾಲೂಕುಗಳಲ್ಲಿ ಜಾರಿ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಹಾಗೂ ಆಶ್ರಯ ಹಸ್ತ ಟ್ರಸ್ಟ್ ಸಂಸ್ಥೆಯ ನಡುವಿನ ಒಪ್ಪಂದದ ಮೂಲಕ, ಇನ್ನಿತರ ಪ್ರಮುಖ ಸಂಸ್ಥೆಗಳ ಸಹಭಾಗಿತ್ವದಲ್ಲಿ ‘ನಮನ್’ ಹೆಸರಿನ ಗ್ರಾಮೀಣ ಮಟ್ಟದ ಸವಾರ್ಂಗೀಣ ಮಾನಸಿಕ ಆರೋಗ್ಯದ ಕಾರ್ಯಕ್ರಮವನ್ನು ದೇಶವ್ಯಾಪಿ ಕಾರ್ಯಗತಗೊಳಿಸುವ ಉದ್ದೇಶದಿಂದ, ಮೊದಲು ಪ್ರಾಯೋಗಿಕವಾಗಿ ಭಾರತ ದೇಶದ ಎರಡು ತಾಲ್ಲೂಕುಗಳಲ್ಲಿ ಜಾರಿಗೆ ತರಲಾಗುತ್ತದೆ.
ಈ ಕಾರ್ಯಕ್ರಮದ ರಾಷ್ಟ್ರಮಟ್ಟದ ಚಾಲನೆಯನ್ನು ಡಿಸೆಂಬರ್ 18, 2023, ಸೋಮವಾರದಂದು ಬೆಳಗ್ಗೆ 11:30ಕ್ಕೆ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯ ಕನ್ವೆನ್ಷನ್ ಸೆಂಟರ್ನಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮವು ಮೂರು ವರ್ಷಗಳಲ್ಲಿ ಸಂಪೂರ್ಣಗೊಳ್ಳಲಿದ್ದು ಇದರ ರೂಪುರೇಷಯನ್ನು ಬೆಂಗಳೂರಿನ ನಿಮ್ಹಾನ್ಸ್ ಸಂಸ್ಥೆ ಸಿದ್ದಪಡಿಸಲಿದೆ.
ಆಲ್ ಇಂಡಿಯಾ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ರಿಷಿಕೇಶ್ ಈ ಕಾರ್ಯಕ್ರಮದಲ್ಲಿ ಉಪ ಕೇಂದ್ರವಾಗಿ ಉತ್ತರಖಂಡದಲ್ಲಿ ಈ ಕಾರ್ಯಕ್ರಮವನ್ನು ಜಾರಿಗೊಳಿಸುವಲ್ಲಿ ನೆರವಾಗಲಿದೆ. ನಿಮ್ಹಾನ್ಸ್ ಬೆಂಗಳೂರು ಹಾಗೂ ಏಮ್ಸ್ ರಿಷಿಕೇಶ್ ಕರ್ನಾಟಕ ಹಾಗೂ ಉತ್ತರಾಖಂಡ ರಾಜ್ಯಗಳ ಆರೋಗ್ಯ ಇಲಾಖೆಗಳೊಂದಿಗೆ ಸಮರ್ಪಕ ಸಹಯೋಗವನ್ನು ರೂಪಿಸಲಿದ್ದು, ಆಶ್ರಯ ಹಸ್ತ ಟ್ರಸ್ಟ್ ಕಾರ್ಯಕ್ರಮಕ್ಕೆ ಆರ್ಥಿಕ ನೆರವನ್ನು ಒದಗಿಸುತ್ತಿದೆ.
ಕಾರ್ಯಕ್ರಮವು ತಾಲ್ಲೂಕು ಮಟ್ಟದಲ್ಲಿ ಸರ್ವಾಂಗೀಣ ಮಾನಸಿಕ ಆರೋಗ್ಯವನ್ನು ಒದಗಿಸುವ ಉದ್ದೇಶವನ್ನು ಹೊಂದಿದ್ದು, ಮಾನಸಿಕ ಆರೋಗ್ಯ ಸಮಸ್ಯೆಗಳ ಕುರಿತು ಮಾಹಿತಿ, ನಿರ್ಮೂಲನೆ ಮತ್ತು ಚಿಕಿತ್ಸೆ ಹಾಗೂ ಮಾನಸಿಕ ರೋಗಿಗಳ ಪುನರ್ವಸತಿಯನ್ನು ಒದಗಿಸುವ ಧ್ಯೇಯವನ್ನು ಹೊತ್ತಿದೆ. ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ಕರ್ನಾಟಕದ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನಲ್ಲಿ ಹಾಗೂ ಉತ್ತರಖಂಡದ ಪಿತೋರಘರ್ ಜಿಲ್ಲೆ ಯಮುನ್ಸಿಯಾರಿ ತಾಲ್ಲೂಕಿನಲ್ಲಿ ನಡೆಸಲಾಗುತ್ತಿದ್ದು, ಜನನದಿಂದ ಮರಣದವರೆಗೆ ಎಲ್ಲ ವಯೋಮಾನದವರ ಮಾನಸಿಕ ಆರೋಗ್ಯ ಉತ್ತೇಜನವನ್ನು ಗಮನದಲ್ಲಿರಿಸಿಕೊಂಡು ಕಾರ್ಯಕ್ರಮವನ್ನು ರೂಪುಗೊಳಿಸಲಾಗಿದೆ.
ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಅನಿಲ್ಕುಮಾರ್ ಟಿ.ಕೆ., ಇಲಾಖೆಯ ಆಯುಕ್ತರಾದ ಡಿ.ರಣದೀಪ್, ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದ ವ್ಯವಸ್ಥಾಪಕ ನಿರ್ದೇಶಕರಾದ ನವೀನ್ ಭಟ್. ವೈ, ಇಲಾಖೆಯ ನಿರ್ದೇಶಕರಾದ ಡಾ. ಪುಷ್ಪಲತ ಹಾಗೂ ಉಪನಿರ್ದೇಶಕರು – ಮಾನಸಿಕ ಆರೋಗ್ಯ ಡಾ. ರಜನಿ ಪಾರ್ಥಸಾರಥಿ ಅವರು ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ನಿಮ್ಹಾನ್ಸ್ ಸಂಸ್ಥೆಯ ನಿರ್ದೇಶಕರಾದ ಡಾ. ಪ್ರತಿಮಾಮೂರ್ತಿ, ಕುಲಸಚಿವರಾದ ಡಾ. ಬಿ.ಎ. ಶಂಕರ ನಾರಾಯಣ ರಾವ್, ಬಿಹೇವಿಯರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಡಾ. ಪ್ರಭಾ ಎಸ್. ಚಂದ್ರ, ವೈದ್ಯಕೀಯ ಅಧೀಕ್ಷಕರಾದ ಡಾ. ಮುರುಳಿಧರನ್ ಕೇಶವನ್, ಮನೋವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ವೈ.ಸಿ. ಜನಾರ್ಧನ ರೆಡ್ಡಿ ಉಪಸ್ಥಿತರಿದ್ದರು.
ಆಶ್ರಯ ಹಸ್ತ ಟ್ರಸ್ಟ್ ವತಿಯಿಂದ ವ್ಯವಸ್ಥಾಪಕ ಟ್ರಸ್ಟಿ ಹಾಗೂ ಇನ್ಫೋಸಿಸ್ ಸಂಸ್ಥೆಯ ಸಹಸ್ಥಾಪಕರಾದ ಕೆ.ದಿನೇಶ್ ಹಾಗೂ ಟ್ರಸ್ಟಿ ಶ್ರೀಮತಿ ಆಶಾ ದಿನೇಶ್ ಪಾಲ್ಗೊಂಡಿದ್ದರು ಹಾಗೂ ಕಾರ್ಯಕ್ರಮದ ಎಲ್ಲ ಮೇಲ್ವಿಚಾರಕರು ಹಾಗೂ ಸಹಮೇಲ್ವಿಚಾರಕರು ಭಾಗವಹಿಸಿದ್ದರು.
ಹಾಸನ ಜಿಲ್ಲೆಯ ಪರವಾಗಿ ಜಿಲ್ಲಾಧಿಕಾರಿ ಸಿ. ಸತ್ಯಭಾಮ, ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ ಬಿ.ಆರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅನಿಲ್, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ. ನಾಗೇಶ್ ಆರಾಧ್ಯ ಹಾಗೂ ಬೇಲೂರು ತಾಲ್ಲೂಕಿನಿಂದ ತಹಶೀಲ್ದಾರ್ ಮಮತಾ.ಎಂ ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ವಿಜಯ್ ಭಾಗವಹಿಸಿದ್ದರು.
ಉತ್ತರಖಂಡ ರಾಜ್ಯ ಸರ್ಕಾರದ ವತಿಯಿಂದ ಆರೋಗ್ಯ ಇಲಾಖೆಯ ಮಹಾ ನಿರ್ದೇಶಕ ಡಾ. ವಿನೀತಾ ಶಾ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಭಾಗೀರತಿ ಜಂಗ್ಪಂಗಿ, ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರದ ಉಪನಿರ್ದೇಶಕ ಡಾ. ಮಾಯಾಂಕ್, ಪೀತೊರಘರ್ ಜಿಲ್ಲೆಯ ವತಿಯಿಂದ, ಜಿಲ್ಲಾ ಕ್ಷಯರೋಗ ಅಧಿಕಾರಿ ಡಾ. ಕುಂದನ್ ಕುಮಾರ್, ಮಾನಸಿಕ ಆರೋಗ್ಯ ವಿಭಾಗದ ನೋಡಲ್ ಅಧಿಕಾರಿ ಡಾ. ಲಲಿತ್ ಭಟ್ ಭಾಗವಹಿಸಿದ್ದರು. ಏಮ್ಸ್ ರಿಷಿಕೇಶನ್ನ ಪ್ರತಿನಿಧಿಗಳಾಗಿ, ಸಂಸ್ಥೆಯ ನಿರ್ದೇಶಕ ಡಾ. ಮೀನುಸಿಂಗ್, ಮನೋ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ಅನಿನ್ಯದಾಸ್, ಡಾ. ವಿಕ್ರಂ ಸೇರಿದಂತೆ ಇತರೆ ಪ್ರಾಧ್ಯಾಪಕರುಗಳು ಭಾಗಿಯಾಗಿದ್ದರು.
ಆಶ್ರಯ ಹಸ್ತ ಟ್ರಸ್ಟ್ ಸಂಸ್ಥೆಯನ್ನು ಮೇ 2000ನೇ ಇಸವಿಯಲ್ಲಿ ನಿವೃತ್ತ ಮೇಜರ್ ಎಸ್. ನಂಜುಂಡಯ್ಯ ತಮ್ಮ ಕುಟುಂಬಸ್ಥರು ಹಾಗೂ ಇನ್ಫೋಸಿಸ್ ಸಹಸ್ಥಾಪಕ ಕೆ. ದಿನೇಶ್ ಹಾಗೂ ಆಶಾ ದಿನೇಶ್ ಅವರೊಂದಿಗೆ ಸ್ಥಾಪಿಸಿದರು. ನಂತರದಲ್ಲಿ ಆಶಾ ದಿನೇಶ್ ದಂಪತಿಗಳ ಪುತ್ರಿಯರಾದ ದಿವ್ಯ ದಿನೇಶ್ ಹಾಗೂ ದೀಕ್ಷಾ ದಿನೇಶ್ ಟ್ರಸ್ಟಿಗಳಾಗಿ ಸೇರಿದರು. ಪ್ರಾರಂಭದಿಂದಲೂ ಆಶ್ರಯ ಹಸ್ತ ಟ್ರಸ್ಟ್ ಸರ್ವರಿಗೂ ಸಮಾನ ಶಿಕ್ಷಣ ಹಾಗೂ ಆರೋಗ್ಯ ಆರೈಕೆಯನ್ನು ನೀಡುವುದರತ್ತ ಗಮನಹರಿಸುತ್ತಿದೆ.
ಕಾಲ ಕಳೆದಂತೆ ಮಾನಸಿಕ ಆರೋಗ್ಯ ಹಾಗೂ ಪ್ರಾಣಿಪಕ್ಷಿಗಳ ಸಂರಕ್ಷಣೆಯಲ್ಲಿ ತೊಡಗಿರುವ ಅನುದಾನ ವಂಚಿತವಾದ ಅನೇಕ ಎನ್ಜಿಒಗಳಿಗೆ ತಮ್ಮ ಸಹಾಯ ಹಸ್ತವನ್ನು ಚಾಚುತ್ತಾ ಬಂದಿದೆ. ಪ್ರಸ್ತುತ ಈ ಸಂಸ್ಥೆಯು ಆರೋಗ್ಯ, ವಿದ್ಯಾಭ್ಯಾಸ, ಜೀವನೋಪಾಯ, ಪಶು ಪ್ರಾಣಿ ಸಂರಕ್ಷಣೆ, ಪರಿಸರ ಸಂರಕ್ಷಣೆ ಹಾಗೂ ವಿಪತ್ತು ನಿರ್ವಹಣೆಯಂತಹ ಅನೇಕ ಆಯಾಮಗಳಲ್ಲಿ ದೇಶದ 26 ಜಿಲ್ಲೆಗಳಲ್ಲಿ, 45ಕ್ಕೂ ಹೆಚ್ಚು ಒಡಂಬಡಿಕೆಗಳ ಮೂಲಕ ಕಾರ್ಯನಿರ್ವಹಿಸುತ್ತದೆ. ನೂತನ ಕಾರ್ಯಕ್ರಮಗಳಿಗೆ ನೆರವಾಗುವುದರ ಮೂಲಕ ಸಂಸ್ಥೆಯು ಸಮಾನತೆ ವಿಕಸನ ಹಾಗೂ ಸೇವೆಯನ್ನು ಸಮಾಜದ ಅವಕಾಶ ವಂಚಿತ ವರ್ಗಗಳಿಗೆ ನೀಡುತ್ತಾ ಬಂದಿದೆ.