i
ಬ್ಯಾಂಕ್ಗಳಿಂದ ರೈತರಿಗೆ ನೋಟಿಸ್: ಸೋಮಗುದ್ದು ರಂಗಸ್ವಾಮಿ ಆಕ್ರೋಶ…
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ರಾಜ್ಯ ಸರ್ಕಾರ ಪ್ರತಿಯೊಂದು ಹಂತದಲ್ಲೂ ರೈತರ ಬದುಕಿನಲ್ಲಿ ಆಟವಾಡುತ್ತಿದೆ. ಮಳೆ, ಬೆಳೆ ಇಲ್ಲದೆ ಬರಗಾಲವೆಂದು ಸರ್ಕಾರ ಘೋಷಿಸಿದರೂ ರೈತರ ಮನೆ ಬಾಗಿಲಿಗೆ ಬ್ಯಾಂಕ್ಗಳಿಂದ ನೋಟಿಸ್ ಬರುತ್ತಿದೆ. ಸರ್ಕಾರ ರೈತರ ಪರವಾಗಿ ಕಾರ್ಯನಿರ್ವಹಿಸುತ್ತಿಲ್ಲವೆಂದು ಅನುಮಾನ ಬಲವಾಗಿದೆ ಎಂದು ಅಖಂಡ ಕರ್ನಾಟಕ ರೈತ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷ ಸೋಮಗುದ್ದುರಂಗಸ್ವಾಮಿ ಅಸಮದಾನವ ಹೊರಹಾಕಿದರು. ನಗರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದ ನಿಯಮಗಳ ಅನುಸಾರ ಇಲಾಖೆ ಈ ಕಾರ್ಯಕ್ರಮ ಆಯೋಜಿಸಿದೆ. ಇದರಿಂದ ರೈತರ ನೆನಪು ಸರ್ಕಾರಕ್ಕೆ ಇದೆ ಎಂಬುವುದು ಖಾತರಿಯಾಗಿದೆ. ಕೇವಲ ಅನಗತ್ಯ ಪ್ರಚಾರಗಳ ಬದಲು ರೈತರ ಸಮೂಹಕ್ಕೆ ನ್ಯಾಯುತವಾಗಿ ದೊರೆಯಬೇಕಾದ ಎಲ್ಲಾ ಸೌಲಭ್ಯ ನೀಡುವಲ್ಲಿ ಸರ್ಕಾರ ಮುಂದಾಗಬೇಕು ಎಂದರು. ನಿವೃತ್ತ ಪ್ರಾಂಶುಪಾಲ ಎಂ.ಕರಿಯಪ್ಪ ಮಾತನಾಡಿ, ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರೈತರು ಸೋತುಹೋಗಿದ್ದಾರೆ. ಸರ್ಕಾರದ ಇಬ್ಬಗೆ ನೀತಿ ರೈತರಲ್ಲಿ ಆತಂಕ ಮೂಡಿಸಿದೆ. ಬರಗಾಲದ ಸಂದರ್ಭದಲ್ಲೂ ಸಹ ರೈತರಿಗೆ ನೋಟಿಸ್ ನೀಡುವುದನ್ನು ನಾವು ಯಾವಕಾಲದಲ್ಲೂ ನೋಡಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಗಂಭೀರ ಚಿಂತನೆ ನಡೆಸಬೇಕು ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕೆಡಿಪಿ ಸದಸ್ಯ ಓ.ತಬಲ ರಂಗಸ್ವಾಮಿ, ರೈತ ಸಂಘ ತಾಲ್ಲೂಕು ಅಧ್ಯಕ್ಷ ಚಿಕ್ಕಣ್ಣ, ಮೂಡಲಗಿರಿಯಪ್ಪ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಕೃಷಿ ಇಲಾಖೆ ಅಧಿಕಾರಿ ತಿಪ್ಪೇಸ್ವಾಮಿ ಸ್ವಾಗತಿಸಿ, ವಂದಿಸಿದರು.