i
ಕೋಟೆ ನಾಡಿನ ಖ್ಯಾತ ಸಂಶೋಧಕ ಹೆಚ್. ಶ್ರೀಶೈಲ ಆರಾಧ್ಯ ಇನ್ನಿಲ್ಲ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕೋಟೆ ನಾಡಿನ ಖ್ಯಾತ ಸಂಶೋಧಕ ಹೆಚ್. ಶ್ರೀಶೈಲ ಆರಾಧ್ಯ(73) ಗುರುವಾರ ನಿಧನರಾಗಿದ್ದಾರೆ.
ಮೃತರು ಪತ್ನಿ ಸೇರಿದಂತೆ ಇಬ್ಬರು ಪುತ್ರಿಯರಾದ ಎಸ್.ಎಸ್.ರೋಹಿಣಿ ಶೈಲೇಂದ್ರ, ಡಾ.ಎಸ್.ಎಸ್.ಅನುರಾಧ ಡಾ.ನಾಗರಾಜ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಜ.5 ರಂದು ಶುಕ್ರವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಚಿತ್ರದುರ್ಗದ ದೊಡ್ಡಪೇಟೆಯ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಜೋಗಿಮಟ್ಟಿ ರಸ್ತೆಯ ಹಿಂದೂ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.ಪ್ರೊ.ಹೆಚ್. ಶ್ರೀಶೈಲ ಆರಾಧ್ಯರಿಗೆ ಶ್ರದ್ಧಾಂಜಲಿ- ಶ್ರೀಶೈಲ ಆರಾಧ್ಯರಂತಹ ವಿದ್ವಾಂಸರು, ವಾಗ್ಮಿಗಳು, ಚತುರ ಸಂಭಾಷಣಕಾರರು, ಹಾಸ್ಯಗಾರರು, ಶಿಷ್ಯವರ್ಗದವರ ಅಂತಃಕರಣ ಸೂರೆಗೊಂಡ ಆಧ್ಯಾಪಕರು, ಅಪ್ರತಿಮ ತ.ರಾ.ಸು ಅಭಿಮಾನಿಗಳು, ಗುಹಾಚಿತ್ರ, ರೇಖಾಚಿತ್ರ ಸಂಶೋಧಕರು, ಅವಧೂತ ವರ್ಗದವರ ಅಸೀಮ ಅಭಿಮಾನಿಗಳು, ಸುಲಲಿತ ಹಾಸ್ಯ ಲೇಖಕರು, ಕೇಳುಗರ ಹೃದಯಕ್ಕೆ ಲಗ್ಗೆ ಇಡುವಂತಹ ಭಾಷಣಕಾರರು, ಚಿತ್ರದುರ್ಗದ ಇತಿಹಾಸದ ಗಹನವಾದ ಅಧ್ಯಯನ ಮಾಡಿದ್ದಾರೆ. ಮೃತರು ನಾಥಪಂಥದ ಆಳವಾದ ಅರಿವಿದ್ದರು, ಮಿತ್ರರಿಗೆ ಪರಮಾಪ್ತ ಮಿತ್ರರು, ರತ್ನ ಶಾಸ್ತ್ರವಿಶಾರದರು, ಖಚಿತ ಜಲಸಂಶೋಧಕರು, ಜ್ಯೋತಿಷ್ಯ ಶಾಸ್ತ್ರ ಪರಿಣತರು, ದೀನ- ದಲಿತರಿಗೆ, ದುಃಖಿಗಳಿಗೆ ಯಾರಿಗೂ ತಿಳಿಯದಂತೆ ಕೊಡುಗೈ ಹಸ್ತ ಚಾಚುತಿದ್ದವರು ಇನ್ನೆಲ್ಲಿ.! ಅಂತಹ ಅಪರೂಪದ ಬಹುಮುಖ ವ್ಯಕ್ತಿತ್ವದ ಪ್ರೊಫೆಸರ್ ಹೆಚ್. ಶ್ರೀಶೈಲ ಆರಾಧ್ಯ ಅವರ ರೂಪದಲ್ಲಿ ದೈವಾನರಾಗಿದ್ದಾರೆ. ಆ ಮಹಾನ್ ಚೇತನಕ್ಕೆ ಪರಮಾತ್ಮ ಚಿರಶಾಂತಿ ಕರುಣಿಸಲಿ ಎಂದು ಅವರ ಆಪ್ತ ವಲಯದ ಕೆ. ವೆಂಕಣ್ಣಾಚಾರ್, ಕೆ. ಆರ್.ರಹಮಾದೇವಿ, ರುದ್ರಮೂರ್ತಿ ಎಂ. ಜೆ, ಡಾ.ಪಿ.ನಾರಾಯಣರೆಡ್ಡಿ ಹಾಗೂ ಜಿ.ಆರ್. ಕೃಷ್ಣಮೂರ್ತಿ ಅವರುಗಳು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ,ಅವರ ಗುಣ ವಿಶೇಷಗಳನ್ನು ನುಡಿನಮನದ ಮೂಲಕ ಅರ್ಪಿಸಿದ್ದಾರೆ.